Advertisement

ರಾಷ್ಟ್ರೀಯ ಹೆದ್ದಾರಿ ಅಧ್ವಾನ: ವಾಹನ ಸವಾರರೇ ಎಚ್ಚರ !

12:11 AM Jun 15, 2019 | Sriram |

ಕುಂದಾಪುರ: ಮುಂಗಾರು ನಿಧಾನಕ್ಕೆ ಬಿರುಸು ಪಡೆಯುತ್ತಿದ್ದಂತೆ, ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಅಧ್ವಾನ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

Advertisement

ಹಲವೆಡೆಗಳಲ್ಲಿ ಹೆದ್ದಾರಿ ಬದಿ ಹಾಕಿದ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ವಾಹನ ಸವಾರರು ರಸ್ತೆಯಿಂದ ಕೆಳಕ್ಕೆ ಇಳಿಸುವಾಗ ಎಚ್ಚರ ವಹಿಸಬೇಕಾಗಿದೆ.

ಕುಂದಾಪುರದಿಂದ ತಲ್ಲೂರು, ತ್ರಾಸಿಯವರೆಗಿನ ಹೆದ್ದಾರಿ ಕಾಮಗಾರಿ ವೇಳೆ ರಸ್ತೆ ಬದಿ ಅನೇಕ ಕಡೆಗಳಲ್ಲಿ ಮಣ್ಣು ಹಾಕಲಾಗಿದೆ.

ಆದರೆ ಅದೆಲ್ಲ ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಕೆಲವೆಡೆಗಳಲ್ಲಿ ಮಣ್ಣೆಲ್ಲ ಹೋಗಿ ದೊಡ್ಡ ಹೊಂಡಗಳೇ ಸೃಷ್ಟಿಯಾಗಿವೆ.

ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಹೆದ್ದಾರಿ ಬದಿಯುದ್ದಕ್ಕೂ ಹಾಕಲಾದ ಮಣ್ಣು ಅಲ್ಲಲ್ಲಿ ಮಳೆ ನೀರಲ್ಲಿ ಹೋಗಿ, ಸಣ್ಣ – ಸಣ್ಣ ಕಾಲುವೆಗಳಂತಾಗಿವೆ. ಕನ್ನಡಕುದ್ರು ಕ್ರಾಸ್‌ ಬಳಿ ಡಿವೈಡರ್‌ಗೆಹಾಕಲಾದ ಮಣ್ಣು ರಸ್ತೆಗೆ ಕೊಚ್ಚಿಕೊಂಡು ಬಂದಿದೆ. ಹೆಮ್ಮಾಡಿ ಪೇಟೆಗಿಂತ ಸ್ವಲ್ಪ ಹಿಂದೆ ರಸ್ತೆ ಬದಿ ಹಾಕಲಾದ ಮಣ್ಣು ಕೊಚ್ಚಿಕೊಂಡು ಹೋಗಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಅಪ್ಪಿ – ತಪ್ಪಿ ಇಲ್ಲಿ ವಾಹನ ಸವಾರರು ಗೊತ್ತಿಲ್ಲದೆ ರಸ್ತೆಯಿಂದ ಕೆಳಕ್ಕೆ ಇಳಿಸಿದರೆ ಮತ್ತೆ ಮೇಲೆ ಬರುವುದು ಕಷ್ಟ. ವಾಹನ ಅಲ್ಲೇ ಹೂತು ಹೋಗುವುದರ ಜತೆಗೆ ಬೀಳುವ ಅಪಾಯವೂ ಇದೆ.

Advertisement

ಜಾಗೃತೆಯಿಂದ ಚಲಾಯಿಸಿ
ತಲ್ಲೂರಿನಿಂದ ಹೆಮ್ಮಾಡಿ, ಅರಾಟೆ, ಮುಳ್ಳಿಕಟ್ಟೆ ಕ್ರಾಸ್‌ವರೆಗೆ ಈಗ ಒಂದೇ ಮಾರ್ಗದಲ್ಲಿ ಎರಡೂ ಕಡೆಗಳಿಂದಲೂ ಸಂಚರಿಸಬೇಕಾಗಿರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗಿದೆ. ಹೆದ್ದಾರಿಯ ಅನೇಕ ಕಡೆಗಳಲ್ಲಿ ಹಾಕಿದ ಮಣ್ಣೇ ಇರುವುದರಿಂದ ಮತ್ತು ಮಣ್ಣು ಕೊಚ್ಚಿ ಹೋಗಿ ನಿರ್ಮಾಣವಾಗಿರುವುದರಿಂದ ಹೆಚ್ಚು ಜಾಗ್ರತೆ ಬೇಕಾಗಿದೆ.

ವಾಹನ ಸವಾರರೇ ಎಚ್ಚರ ವಹಿಸಿ

ಹೆದ್ದಾರಿಯಲ್ಲಿ ಈಗಾಗಲೇ ಮುಳ್ಳಿಕಟ್ಟೆಯಿಂದ ಬೈಂದೂರುವರೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಕೆಲವು ದಿನಗಳಲ್ಲಿಯೇ ತಲ್ಲೂರಿನಿಂದಲೇ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದು ಮಳೆಗಾಲವಾದ್ದರಿಂದ ಕೆಲವೆಡೆ ಅಪೂರ್ಣ ಕಾಮಗಾರಿ ಆಗಿರುವುದರಿಂದ ವಾಹನ ಸವಾರರು ಆದಷ್ಟು ಎಚ್ಚರ ವಹಿಸಬೇಕು. ವೇಗ ಕಡಿಮೆಯಿರಲಿ. ನಿಧಾನವಾಗಿ ಒಂದು ವಾಹನದ ಹಿಂದೆ ಚಲಿಸಿ, ಅನಗತ್ಯ ಓವರ್‌ ಟೇಕ್‌ ಸಾಧ್ಯವಾದಷ್ಟು ಕಡಿಮೆ ಮಾಡಿ.
– ಬಿ.ಪಿ. ದಿನೇಶ್‌ ಕುಮಾರ್‌,ಕುಂದಾಪುರ ಡಿವೈಎಸ್‌ಪಿ

ತುರ್ತಾಗಿ ದುರಸ್ತಿ

ಅನೇಕ ಕಡೆಗಳಲ್ಲಿ ಇನ್ನು ಕೂಡ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಕೆಲವೊಂದು ಕಡೆ ಸಮಸ್ಯೆಯಾಗಿದೆ. ಅದಕ್ಕೆ ತುರ್ತಾಗಿ ಸ್ಪಂದಿಸಲಾಗುತ್ತಿದೆ. ರಸ್ತೆ ಬದಿ ಮಣ್ಣು ಕೊಚ್ಚಿಕೊಂಡು ಹೋದ ಕಡೆಗಳಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿ, ಮಣ್ಣು ಕುಸಿಯದಂತೆ ಜಲ್ಲಿ ಹಾಕಲಾಗುವುದು.
– ಯೋಗೇಂದ್ರಪ್ಪ,ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್‌
Advertisement

Udayavani is now on Telegram. Click here to join our channel and stay updated with the latest news.

Next