Advertisement

ಮನೆ ಮಗಳು ನಂದಾದೀಪ

10:14 AM Jan 25, 2020 | mahesh |

ಇಂದು ರಾಷ್ಟ್ರೀಯ ಬಾಲಕಿಯರ ದಿನ. ಬದುಕು ಕೊಡುವ, ಬದುಕನ್ನು ಕಟ್ಟಲು ನೆರವಾಗುವ ಹೆಣ್ಣುಮಕ್ಕಳು ಬೇಡವೆನ್ನುವ ಮನೋಭಾವ ಬೆಳೆಯದಂತೆ ಮನೆಯ ಗಂಡುಮಗುವಿಗೆ ತಿಳಿಹೇಳುವುದು ಇಂದಿನ ತುರ್ತು ಅಲ್ಲವೆ?

Advertisement

ಮಹಾರಾಷ್ಟ್ರದ ಪುಟ್ಟ ಹಳ್ಳಿಯಲ್ಲಿ ಸಿಂಧೂ ಹುಟ್ಟಿದಾಗ ಮನೆಯವರೆಲ್ಲ ರಿಗೂ ಸಿಟ್ಟು ಬಂದಿತ್ತು. ಬೇಡದ ಆ ಹೆಣ್ಣುಮಗುವನ್ನು ಮನೆಯವರು “ಚಿಂದಿ’ ಎಂದೇ ಕರೆಯುತ್ತಿದ್ದರು. ಅಮ್ಮನಿಗಂತೂ ಮಗಳನ್ನು ಕಂಡರೆ ಕೆಂಡಾಮಂಡಲ ಸಿಟ್ಟು ಬರುತ್ತಿತ್ತು. ಹೆಣ್ಣು ಹುಟ್ಟಿದ್ದಕ್ಕೆ ಅಪ್ಪನಿಗೆ ಬೇಸರವಿದ್ದರೂ, ಕರುಳು ಕೇಳಬೇಕಲ್ಲವೆ? ಆಗೀಗ ಆ ಮಗುವಿನೊಡನೆ ನಾಲ್ಕು ಚೆಂದದ ಮಾತನಾಡುತ್ತಿದ್ದ. ಹೆಂಡತಿಯ ಬೈಗುಳ ಲೆಕ್ಕಿಸದೆ ಆಕೆಯನ್ನು ಶಾಲೆಗೂ ಕಳುಹಿಸಿದ.

ವಾರ್ಧಾ ಜಿಲ್ಲೆಯ ಪಿಂಪ್ರಿ ಮೇಘೆ ಎಂಬಲ್ಲಿ ಹುಟ್ಟಿದ ಸಿಂಧೂವಿನ ಅಪ್ಪನ ಹೆಸರು ಅಭಿಮಾನ್‌ ಜಿ. ಸಾಥೆ. 1948ರ ನವೆಂಬರ್‌ 14ರಂದು ಆಕೆ ಹುಟ್ಟಿದ್ದು. ಆ ದಿನವೇ ಅಪಶಕುನದ ದಿನವೆಂದು ಮನೆಯವರು ಬಗೆದರು. 4ನೇ ಕ್ಲಾಸ್‌ ಓದಿದ ಮಗಳ ವಯಸ್ಸು 10 ಆಗುತ್ತಿದ್ದಂತೆಯೇ ಶ್ರೀಹರಿ ಸಪಕಾಳ್‌ ಎಂಬ 30 ವರ್ಷದ ಹುಡುಗನಿಗೆ ಮದುವೆ ಶಾಸ್ತ್ರ ಮಾಡಿಕೊಟ್ಟುಬಿಟ್ಟರು. ಅವನ ಮನೆಯೋ ಕಾಡಿನಲ್ಲಿ. ಅಲ್ಲಿ ಮೂರು ಮಕ್ಕಳನ್ನು ಹೆತ್ತು ನಾಲ್ಕನೆಯದ್ದನ್ನು ಹೆಡೆಯುವ ಮುನ್ನವೇ ಆಕೆಯನ್ನು ಮನೆಯಿಂದ ಹೊರದಬ್ಬಲಾಯಿತು. ಭಿಕ್ಷೆ ಬೇಡುತ್ತ, ಯಾವುದೋ ಹnational girls dayಟ್ಟಿಯಲ್ಲಿ ಮಗುವನ್ನು ಹೆತ್ತು ದಯನೀಯ ಬಾಳುವೆ ಮಾಡುತ್ತಿದ್ದವಳಿಗೆ ಜೊತೆಯಾದದ್ದು ಭಿಕ್ಷೆ ಬೇಡುವ ಅನಾಥರು. ತನ್ನ ಸುತ್ತ ಎಷ್ಟೊಂದು ಮಂದಿ ಅನಾಥರಿದ್ದಾರೆ ಎಂಬುದನ್ನು ಕಂಡು ಆಕೆಗೆ ತನ್ನ ಬಾಳಿನ ದಾರಿ ಹೊಳೆಯಿತು. ಅನಾಥರಿಗಾಗಿಯೇ ಆಕೆ ಮತ್ತೆ ಭಿಕ್ಷೆ ಬೇಡಿದಳು. ಅನಾಥಾಲಯ ಕಟ್ಟಿಸಿದಳು.

ಇಂದು ಸಿಂಧುತಾಯಿ ಸಪಕಾಳ್‌ ಅವರ ನೆರವಿನಿಂದ 1,400 ಮಂದಿ ಅನಾಥರು ಬದುಕು ಕಂಡುಕೊಂಡಿದ್ದಾರೆ. ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಬೇಡದ ಹೆಣ್ಣುಮಗುವೊಂದು ಸಮಾಜಕ್ಕೆ ದೀಪವಾಗಿ ಬೆಳಗಿದ ಕಥೆಯಿದು.

ಹೆಣ್ಣು ಮಗುವಿನ ದಿನ
ಹೆಣ್ಣುಮಗು ಬೇಡ ಎನ್ನುವ ಮನಸ್ಥಿತಿಯನ್ನು ಹೋಗಲಾಡಿಸುವ ಸಲುವಾಗಿಯೇ ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2008ರಲ್ಲಿ ಜನವರಿ 24ನೆಯ ತಾರೀಕನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಎಂದು ಘೋಷಿಸಿದೆ.

Advertisement

ಹೆಣ್ಣು ಮಗುವನ್ನು ಉಳಿಸುವ, ಹೆಣ್ಣು ಮಕ್ಕಳ ಅಧಿಕಾರ, ಆರೋಗ್ಯ, ವಿದ್ಯಾಭ್ಯಾಸ, ಪೋಷಣೆ ಮತ್ತು ಪೋಷಕಾಂಶದ ಬಗ್ಗೆ ಅರಿವು ಮೂಡಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಇದೇ ಉದ್ದೇಶದಿಂದ ದೇಶದುದ್ದಕ್ಕೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಆರೋಗ್ಯ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಇದರ ಅಭಿಯಾನದ ಧ್ಯೇಯ. ಈ ಯೋಜನೆಯು ಹೆಣ್ಣುಮಕ್ಕಳು ಎದುರಿಸುತ್ತಿರುವ ತಾರತಮ್ಯ, ಅಸಮಾನತೆ, ಶೋಷಣೆ ಮತ್ತು ಗಂಡು-ಹೆಣ್ಣಿನ ಅನುಪಾತದ ಬಗ್ಗೆ ಜನರಿಗೆ ತಿಳಿಹೇಳುವ ಪ್ರಯತ್ನವನ್ನೂ ಮಾಡುತ್ತಿದೆ.

ಬಾಲಕಿಯರ ಮೇಲಿನ ದೌರ್ಜನ್ಯ ಭ್ರೂಣಾವಸ್ಥೆಯಲ್ಲೇ ಶುರುವಾಗುತ್ತದೆ, ಭ್ರೂಣ ಪರೀಕ್ಷೆ ಮಾಡಿ ಹೆಣ್ಣಾಗಿದ್ದರೆ ಹೊಸಕಿ ಹಾಕುವ ಕಾರ್ಯ ಮೌನವಾಗಿ ನಡೆಯುತ್ತಿದೆ. ಹೀಗೆ ಕ್ರೂರವಾಗಿದ್ದ ಕಾರಣಕ್ಕೆ ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಅನುಪಾತದಲ್ಲಿ ಮಹಿಳೆಯರ ಸಂಖ್ಯೆ ತೀವ್ರವಾಗಿ ಕುಸಿದಿದೆ.

ತ್ಯಾಗವಲ್ಲ, ಬದುಕು ಬೇಕು
ಬಾಲಕಿಯರ ಮೇಲಿನ ದೌರ್ಜನ್ಯ ಅವಿದ್ಯಾವಂತರ ವರ್ಗದಲ್ಲಿ ಮಾತ್ರ ಜಾಸ್ತಿ ಎನ್ನುವಂತಿಲ್ಲ. ವಿದ್ಯಾವಂತರಲ್ಲೂ ಈ ಮನಸ್ಥಿತಿ ಇದೆ. ಇನ್ನು ಗಂಡುಮಕ್ಕಳ ಏಳಿಗೆಗಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಸ್ವಾತಂತ್ರ್ಯ, ಹಣಕಾಸು ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಗಿ ಬಂದ ಸಂದರ್ಭಗಳೂ ಅನೇಕ. ನಮ್ಮ ದೇಶದ ಸಂಸ್ಕೃತಿ ವಿಶ್ವದಲ್ಲೇ ಅತ್ಯಂತ ಪುರಾತನವಾದ ಸಂಸ್ಕೃತಿಗಳಲ್ಲೊಂದು, ಹೆಣ್ಣನ್ನು ದೇವತೆಯಾಗಿಯೂ ಪೂಜಿಸುವ ದೇಶ. ಹಾಗಂತ ಇಂದಿನ ವಾಸ್ತವ ಅಷ್ಟೊಂದು ಚೆನ್ನಾಗಿಯೇನೂ ಇಲ್ಲ. ಅನಾಚಾರ-ಅತ್ಯಾಚಾರದ ಸುದ್ದಿಗಳು ಮಾಧ್ಯಮಗಳ ದಿನನಿತ್ಯದ ಸುದ್ದಿಯಾಗಿ ಬಿಟ್ಟಿವೆ. ಹೆಣ್ಣುಮಕ್ಕಳ ಕುರಿತು ತಾರತಮ್ಯ ಮಾಡುವ ಇಂಥ ಕಪ್ಪುಚುಕ್ಕೆಗಳನ್ನು ಅಳಿಸುವಲ್ಲಿ ಮಹಿಳೆಯರ ಜವಾಬ್ದಾರಿ ಇಲ್ಲದಿಲ್ಲ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ಕುಟಂಬದವರು ಮಹಿಳೆಗೆ ಗೌರವ ಕೊಡುವುದನ್ನು ಮಕ್ಕಳಿಗೆ ಕಲಿಸಬೇಕು. ಅದರಲ್ಲಿಯೂ ಹೆಣ್ಣುಮಕ್ಕಳೊಡನೆ ಹೇಗೆ ವರ್ತಿಸಬೇಕು ಎಂಬುದನ್ನು ಮನೆಯ ಗಂಡುಮಕ್ಕಳಿಗೆ ಹೇಳಿಕೊಡಲು ಅಮ್ಮಂದಿರು ಹಿಂಜರಿಯಬಾರದು. ಯಾವ ಕಾರಣಕ್ಕೂ ಹೆಣ್ಣುಮಕ್ಕಳಿಗೆ ಸಿಗಬೇಕಾದ ವಿದ್ಯಾಭ್ಯಾಸವನ್ನು ನಿಲ್ಲಿಸಬಾರದು. ಬಾಲಕಿಯರು ಎದುರಿಸುತ್ತಿರುವ ತೊಂದರೆಗಳನ್ನು ದೂರಮಾಡಲು ಬದಲಾಗಬೇಕಾಗಿರುವುದು ಸಮಾಜದ ಜನರ ಮನಸ್ಸು ಮತ್ತು ವ್ಯವಸ್ಥೆ.

ಗೀತಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next