Advertisement

ದೇಶದಲ್ಲೇ ವಿದೇಶಿ ವ್ಯಾಸಂಗ ; ಟಾಪ್‌ 100 ವಿವಿಗಳಿಗೆ ಶಾಖೆ ತೆರೆಯಲು ಸರಕಾರದ ಅವಕಾಶ

03:26 AM Jul 30, 2020 | Hari Prasad |

ಹೊಸದಿಲ್ಲಿ: ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಾದ ಕೇಂಬ್ರಿಡ್ಜ್, ಹಾರ್ವರ್ಡ್‌ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವುದು ಬಹುತೇಕ ಭಾರತೀಯ ವಿದ್ಯಾರ್ಥಿಗಳ ಕನಸು.

Advertisement

ಆದರೆ, ಪ್ರತಿಭೆಯಿದ್ದರೂ ಹಲವಾರು ವಿದ್ಯಾರ್ಥಿಗಳ ಪಾಲಿಗೆ ಅದು ಅಂದುಕೊಂಡಷ್ಟು ಸುಲಭವಲ್ಲ, ಬಲು ದುಬಾರಿ.

ಹಾಗಾಗಿ, ವಿದೇಶದಲ್ಲಿ ಶಿಕ್ಷಣ ಎಂಬುದು ಮಧ್ಯಮ ಹಾಗೂ ಅದಕ್ಕಿಂತ ಕೆಳವರ್ಗಗಳ ಮಕ್ಕಳಿಗೆ ಗಗನ ಕುಸುಮವೇ ಆಗಿತ್ತು.

ಆದರೆ, ಬುಧವಾರ ಪ್ರಕಟವಾದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಅಂತ ಕನಸುಗಳನ್ನು ಅಲ್ಪ ವೆಚ್ಚದಲ್ಲೇ ನನಸಾಗಿಸಲು ಶ್ರೀಕಾರ ಹಾಕಿದೆ.

ವಿಶ್ವದ ಟಾಪ್‌ 100 ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆದು ಭಾರತೀಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

Advertisement

ಅದಕ್ಕೆ ಪೂರಕವಾಗಿ, ಆ ವಿವಿಗಳಿಗೆ, ಭಾರತದಲ್ಲಿ ತಮ್ಮ ಶಾಖೆಗಳು ಅಥವಾ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಆಡಳಿತಾತ್ಮಕ ವಿಚಾರಗಳಲ್ಲಿ ವಿನಾಯಿತಿ ನೀಡಲಾಗಿದೆ.

ಎ-ಐ ವಿಧಾನದಲ್ಲಿ ಪ್ರಗತಿ ಪರಿಶೀಲನೆ: ಆಯಾ ಶೈಕ್ಷಣಿಕ ತರಗತಿಗಳಲ್ಲಿ ನೀಡಲಾಗುವ ರಿಪೋರ್ಟ್‌ ಕಾರ್ಡ್‌ ಇನ್ನು ಕೃತಕ ಬುದ್ಧಿಮತ್ತೆ ಆಧಾರದಡಿ ರೂಪುಗೊಳ್ಳಲಿವೆ. ವಿದ್ಯಾರ್ಥಿಯ ಆಯಾ ತರಗತಿಗಳ ಪ್ರಗತಿಯನ್ನು ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಅದನ್ನು ಅವಲೋಕಿಸಲು ಅವಕಾಶವಿರಲಿದೆ.

ಪದವಿಗೆ ‘ಮಲ್ಟಿಪಲ್‌ ಎಕ್ಸಿಟ್‌’: ಹೊಸ ಶಿಕ್ಷಣ ನೀತಿಯನ್ವಯ, ಪದವಿ ಕೋರ್ಸ್‌ಗಳ ಅವಧಿ ಇನ್ನು 3 ಅಥವಾ 4 ವರ್ಷ ಆಗಿರಲಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಮಲ್ಟಿಪಲ್‌ ಎಕ್ಸಿಟ್‌ ಎಂಬ ಹೊಸ ಅನುಕೂಲ ಕಲ್ಪಿಸಲಾಗಿದೆ. ಪದವಿಯ ಮೊದಲ ವರ್ಷದ ಅಧ್ಯಯನದ ನಂತರ ಆ ವಿದ್ಯಾರ್ಥಿ ಶಿಕ್ಷಣ ತೊರೆದರೆ, ಆತನಿಗೆ ಆವರೆಗಿನ ಅಧ್ಯಯನದ ಪ್ರಮಾಣ ಪತ್ರ ನೀಡಲಾಗುತ್ತದೆ.

ಎರಡು ವರ್ಷಗಳ ನಂತರ ಪದವಿಯನ್ನು ತೊರೆದೆರ ಅವನಿಗೆ ಡಿಪ್ಲೊಮಾ ಪ್ರಮಾಣ ಪತ್ರ ನೀಡಲಾಗುತ್ತದೆ. ಮೂರು ವರ್ಷ ಪೂರ್ಣಗೊಳಿಸಿದರೆ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ. ನಾಲ್ಕು ವರ್ಷಗಳ ಮಲ್ಟಿ ಡಿಸಿಪ್ಲೀನ್‌ ಪದವಿಗಳ ವಿಚಾರಕ್ಕೆ ಬರುವುದಾದರೆ, ಕೋರ್ಸ್‌ನ ಅಂತ್ಯದಲ್ಲಿ ವಿದ್ಯಾರ್ಥಿಯು ಸಣ್ಣದಾಗಿ ಸಂಶೋಧನೆಯೊಂದನ್ನು ಕೈಗೊಂಡು (ಪ್ರಾಜೆಕ್ಟ್) ಅದರ ವರದಿಯನ್ನು ಸಲ್ಲಿಸಿದ ಅನಂತರವೇ ಪದವಿ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ.

ಬಹು ಬೋಧನಾ ಸಂಸ್ಥೆಗಳ ಸ್ಥಾಪನೆ: 2040ರ ಹೊತ್ತಿಗೆ ದೇಶದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಬಹು ವಿಷಯ ಬೋಧನಾ ಶಿಕ್ಷಣ ಸಂಸ್ಥೆಗಳಾಗಿ ರೂಪುಗೊಳ್ಳಲಿವೆ. ಜೊತೆಗೆ, ಆ ಹೊತ್ತಿಗೆ, ಇಂಥ ಸಂಸ್ಥೆಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಲಾಗಿದೆ. ಅಂದರೆ, ಅತಿ ಹೆಚ್ಚು ಯುವಜನರಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.

ಜೀವನ ಕಲೆ ಬೋಧನೆಗೆ ಒತ್ತು: ಮಕ್ಕಳಿಗೆ ಶೈಕ್ಷಣಿಕ ವಿಷಯಗಳ ಬೋಧನೆಗೆ ಜೀವನವನ್ನು ಸಮರ್ಥವಾಗಿ ಎದುರಿಸುವ ಕೌಶಲಗಳ ಬೋಧನೆಯೂ ಜಾರಿಗೊಳ್ಳಲಿದೆ. ಪ್ರತಿ ವರ್ಷವೂ ಇಂಥ ವಿಷಯಗಳ ಬೋಧನೆ ಇರಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ.

ಎಂಫಿಲ್‌ ರದ್ದು: ಸ್ನಾತಕೋತ್ತರ ಪದವಿಯ ನಂತರ ಇದ್ದ ಎಂ.ಫಿಲ್‌ ಪದವಿಯನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಸಂಶೋಧನಾ ಕ್ಷೇತ್ರದಲ್ಲಿ ತೊಡಗಲು ಬಯಸುವವರಿಗೆ ಪದವಿ ಅವಧಿ 4 ವರ್ಷದ್ದಾಗಿರಲಿದ್ದು, ಉದ್ಯೋಗದಲ್ಲಿ ತೊಡಗಿಸಿಕೊಳ್ಳುವವರಿಗೆ ಪದವಿ 3 ವರ್ಷದ್ದಾಗಿರುತ್ತದೆ ಎಂದು ಹೊಸ ಶಿಕ್ಷಣ ನೀತಿಯಲ್ಲಿ ಪ್ರಸ್ತಾವಿಸಲಾಗಿದೆ.

ಮಂಡಳಿ ಪರೀಕ್ಷಾ ಕ್ರಮ ಬದಲಾವಣೆ
ರಾಷ್ಟ್ರೀಯ ಮಟ್ಟದಲ್ಲಿ ಜರುಗುವ ಮಂಡಳಿ ಮಟ್ಟದ ಪರೀಕ್ಷಾ ವಿಧಾನಗಳಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ. ಉದಾಹರಣೆಗೆ, ಸಿಬಿಎಸ್‌ಇ ಅಡಿಯಲ್ಲಿ ಬರುವ ಎಲ್ಲ ಕೋರ್ಸ್‌ಗಳಿನ್ನು ಎರಡು ಭಾಷೆಗಳಲ್ಲಿರಲಿದೆ. ಐಎಸ್‌ಎಲ್‌ಗೆ ಉತ್ತೇಜನ: 2020ರ ಶಿಕ್ಷಣ ಕಾಯ್ದೆಯಲ್ಲಿ ಭಾರತೀಯ ಸಂಜ್ಞಾ ಭಾಷೆಗೆ ಹೆಚ್ಚಿನ ಉತ್ತೇಜನ ಸಿಕ್ಕಿದೆ. ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್ ಓಪನ್‌ ಸ್ಕೂಲಿಂಗ್‌ ಸಂಸ್ಥೆ ವತಿಯಿಂದ ಭಾರತೀಯ ಸಂಜ್ಞಾ ಭಾಷಾ ಕಲಿಕೆಗೆ ಸೂಕ್ತವಾದ ರೂಪುರೇಷೆಗಳನ್ನು ಜಾರಿಗೊಳಿಸಲಿದೆ.

ಯುಜಿಸಿ, ಎಐಸಿಟಿಇ ಸಂಸ್ಥೆಗಳಿಗೆ ಗುಡ್‌ಬೈ
ಉನ್ನತ ಶಿಕ್ಷಣ ವಲಯದ ಮೇಲುಸ್ತುವಾರಿ ಇನ್ನು ಒಂದೇ ಸಂಸ್ಥೆಯಡಿ ನಿರ್ವಹಿಸಲ್ಪಡುತ್ತದೆ. ಅದಕ್ಕಾಗಿ, ಭಾರತೀಯ ಉನ್ನತ ಶಿಕ್ಷಣ ಪ್ರಾಧಿಕಾರ (ಎಚ್‌ಇಸಿಐ) ಎಂಬ ಹೊಸ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಇನ್ನು, ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್‌ (ಎಐಸಿಟಿಇ) ಸಂಸ್ಥೆಗಳ ಬದಲಿಗೆ ಇದೊಂದೇ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ಈ ಸಂಸ್ಥೆಯ ಅಡಿಯಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಕೌನ್ಸಿಲ್‌, ರಾಷ್ಟ್ರೀಯ ಅಕ್ರೆಡಿಷನ್‌ ಕೌನ್ಸಿಲ್‌ (ನ್ಯಾಕ್‌), ಉನ್ನತ ಶಿಕ್ಷಣ ಅನುದಾನ ಕೌನ್ಸಿಲ್‌ (ಎಚ್‌ಇಜಿಸಿ) ಹಾಗೂ ಸಾಮಾನ್ಯ ಶಿಕ್ಷಣ ಕೌನ್ಸಿಲ್‌ (ಜಿಇಸಿ) ಕಾರ್ಯ ನಿರ್ವಹಿಸಲಿವೆ.

ಇನ್ನು, ವೃತ್ತಿಪರ ಕೌನ್ಸಿಲ್‌ಗ‌ಳಾದ ಇಂಡಿಯನ್‌ ಕೌನ್ಸಿಲ್‌ ಫಾರ್‌ ಅಗ್ರಿಕಲ್ಚರಲ್‌ ರಿಸರ್ಚ್‌ (ಸಿಐಎಆರ್‌), ವೆಟರ್ನರಿ ಕೌನ್ಸಿಲ್‌ ಆಫ್ ಇಂಡಿಯಾ (ವಿಸಿಐ), ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಶನ್‌ (ಎನ್‌ಸಿಟಿಇ), ಕೌನ್ಸಿಲ್‌ ಆಫ್ ಆರ್ಕಿಟೆಕ್ಚರ್‌ (ಸಿಒಎ), ನ್ಯಾಷನಲ್‌ ಕೌನ್ಸಿಲ್‌ ಫಾರ್‌ ವೊಕೇಷನಲ್‌ ಎಜುಕೇಷನ್‌ ಆ್ಯಂಡ್‌ ಟ್ರೈನಿಂಗ್‌ (ಎನ್‌ಸಿವಿಇಟಿ) ಹಾಗೂ ಇನ್ನಿತರ ಮಂಡಳಿಗಳು, ಕೌನ್ಸಿಲ್‌ಗ‌ಳು ಇನ್ನು, ಪ್ರೊಫೆಷನಲ್‌ ಸ್ಟಾಂಡರ್ಡ್‌ ಸೆಟ್ಟಿಂಗ್‌ ಬಾಡೀಸ್‌ (ಪಿಎಸ್‌ಎಸ್‌ಬಿ) ಆಗಿ ಕಾರ್ಯನಿರ್ವಹಿಸಲಿವೆ.

ಪ್ರಾಥಮಿಕ ಶಿಕ್ಷಣದಲ್ಲಿ ಗಣನೀಯ ಬದಲಾವಣೆ ಮಾಡಿರುವುದು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹು ವಿಷಯ ಬೋಧನಾ ಸಂಸ್ಥೆಗಳನ್ನಾಗಿಸಲು ಪ್ರಯತ್ನಿಸಿರುವುದು, ವಿದ್ಯಾರ್ಥಿಗಳ ಸಾಧನೆಯನ್ನು ಅಕಾಡೆಮಿಕ್‌ ಬ್ಯಾಂಕ್‌ ಆಫ್ ಕ್ರೆಡಿಟ್‌ (ಎಬಿಸಿ) ಮೂಲಕ ಅಳೆಯುವುದು ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯುತ್ತಮ ಸುಧಾರಣೆ ತರಲಿದೆ.
– ನರೇಂದ್ರ ಮೋದಿ, ಪ್ರಧಾನ ಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next