Advertisement

ಗ್ರಾಹಕರ ಹಕ್ಕುಗಳ ರಕ್ಷಣೆಗಿದೆ ಪ್ರಬಲ ಕಾನೂನು ಅಸ್ತ್ರ

12:46 AM Dec 24, 2021 | Team Udayavani |

ಕೇಂದ್ರ ಸರಕಾರ 1986ರಲ್ಲಿ ಒಂದು ಕಾನೂನನ್ನು ಜಾರಿಗೆ ತಂದು, ಗ್ರಾಹಕರಿಗೆ ಕಾನೂನಿನ ರಕ್ಷಣೆ ಒದಗಿಸಿತು. ಆದರೆ ಈ ಬಗ್ಗೆ ಜನರಲ್ಲಿ ಸಮರ್ಪಕ ಅರಿವು ಮೂಡದ್ದರಿಂದ ಮತ್ತು ತಮಗಾಗುತ್ತಿರುವ ಅನ್ಯಾಯವನ್ನು ಕನಿಷ್ಠ ಪ್ರಶ್ನಿಸಲೂ ಗ್ರಾಹಕರು ಹಿಂದೇಟು ಹಾಕಿದ್ದರಿಂದಾಗಿ ಇದು ಯಶ ಕಾಣಲಿಲ್ಲ. ಇದರಿಂದಾಗಿ ಸಹಜವಾಗಿ ಗ್ರಾಹಕರ ಸಮಸ್ಯೆಗಳು, ಅವರ ಪರದಾಟ, ಪೇಚಾಟ, ಅನ್ಯಾಯಗಳು ಹೆಚ್ಚುತ್ತಲೇ ಹೋದವು. ಈ ಹಿನ್ನೆಲೆಯಲ್ಲಿ ಸರಕಾರ 2019ರಲ್ಲಿ ಸಂಪೂರ್ಣ ಗ್ರಾಹಕ ಸ್ನೇಹಿ ಹೊಸ ಗ್ರಾಹಕ ರಕ್ಷಣ ಕಾನೂನು ಅನ್ನು ಜಾರಿಗೆ ತಂದಿತು.

Advertisement

ಗ್ರಾಹಕರಿಗೆ ಖರ್ಚಿನ ಹೊರೆ ಬೀಳದಂತೆ ಕಾನೂನಿನ ರಚನೆಯಾಗಿದೆ. ಎಷ್ಟೇ ಮೊತ್ತವಿರಲಿ, ಕೋರ್ಟ್‌ ಶುಲ್ಕ ಇಲ್ಲ. ಅಷ್ಟೇಕೆ, ವಕೀಲರನ್ನು ನೇಮಿಸುವ ಅಗತ್ಯವೂ ಇಲ್ಲ. ಗ್ರಾಹಕರು ತಮ್ಮ ನ್ಯಾಯಸಮ್ಮತ ನಿಲುವನ್ನು ಎಲ್ಲಿ ತಮಗೆ ಅನ್ಯಾಯವಾಗಿದೆ ಎಂಬ ವಿಷಯವನ್ನು ಅವರದೇ ರೀತಿಯಲ್ಲಿ ಮಾತಿನಲ್ಲಿ, ನ್ಯಾಯಾಲಯಕ್ಕೆ ತಿಳಿಸಬಹುದು. ಈ ಕಾನೂನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿದೆ. ಸರಳ ಸಮಸ್ಯೆಯಾದರೆ 90 ದಿನಗಳ ಒಳಗೆ, ಟೆಸ್ಟಿಂಗ್‌ ಬೇಕಾಗಿದ್ದರೆ 4 ತಿಂಗಳ ಒಳಗೆ ತೀರ್ಮಾನ ಮಾಡಬೇಕೆಂದು ಕಾನೂನು ಸ್ಪಷ್ಟಪಡಿಸಿದೆ. ಮುಂದು ವರಿಕೆಯ ಬೇಡಿಕೆ ಬಂದಲ್ಲಿ, ಕೊಟ್ಟಲ್ಲಿ, ಲಿಖೀತ ಕಾರಣ ಬರೆಯಬೇಕು. ಅಲ್ಲದೆ ಸಂತ್ರಸ್ತ ಗ್ರಾಹಕರಿಗೆ ದಿನದ ಖರ್ಚು ಪ್ರತಿವಾದಿ ಭರಿಸಬೇಕು. ಇಂತಹ ವಿಳಂಬ ಕೂಡ 3-4 ಸಲಕ್ಕಿಂತ ಅಧಿಕವಾಗಬಾರದು. ಪ್ರತಿವಾದಿ ಮೇಲ್ಮನವಿ ಸಲ್ಲಿಸಿ, ಪೂರ್ತಿ ವ್ಯಾಜ್ಯದ ಅಂತಿಮ ಘಟ್ಟವನ್ನು ವಿಳಂಬಿಸಬಹುದಾಗಿತ್ತು. ಹೊಸ ಕಾನೂನು ಇದನ್ನು ಕಷ್ಟವಾಗಿಸಿದೆ. ನೋಟಿಸ್‌ ತಲುಪಿಲ್ಲ ಎಂಬ ಸಬೂಬನ್ನು ಹೇಳಲು ಪ್ರತಿವಾದಿಗೆ ಇಲ್ಲಿ ಅವಕಾಶ ಇಲ್ಲ. ಏನೇ ಕಾರಣಗಳಿಂದ ನೋಟಿಸ್‌ ವಾಸಸು ಬಂದರೂ ಅದನ್ನು ಡೆಲಿವರಿ ಮಾಡಲಾಗಿದೆ ಎಂದೇ ಪರಿಗಣಿಸಲಾಗುತ್ತದೆ.

ಹೊಸ ಕಾನೂನಿನಲ್ಲಿ ಗ್ರಾಹಕ ಶಬ್ದದ ಭೌಗೋಳಿಕ ವ್ಯಾಪ್ತಿ ಮತ್ತು ಆರ್ಥಿಕ ವ್ಯಾಪ್ತಿ ಶಬ್ದಗಳ ಅರ್ಥವನ್ನು ವಿಸ್ತರಿಸಲಾಗಿದೆ. ಇದರಿಂದಾಗಿ ಕಾನೂನಿನ ಹೊರ ಗುಳಿಯಬೇಕಾಗಿದ್ದ ದೊಡ್ಡ ಸಂಖ್ಯೆಯ ದೂರುಗಳು ಈಗ ಕಾನೂನಿನ ಪರಿಧಿಯೊಳಗೆ ಬರುತ್ತವೆ. ವ್ಯಕ್ತಿ ಎಂಬುದರ ಅರ್ಥ ವಿವರಣೆ ವಿಸ್ತಾರವಾಗಿ ಗ್ರಾಹಕರ ಪರವಾಗಿದೆ. ಕಾನೂನಿನಲ್ಲಿ ಗ್ರಾಹಕರಿಗಿರುವ ಹಕ್ಕುಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೆ ಇ-ಕಾಮರ್ಸ್‌ ಎಂದರೆ ಆನ್‌ಲೈನ್‌, ಡಿಜಿಟಲ್‌, ಎಟಿಎಂ ಇತ್ಯಾದಿ ಎಲ್ಲ ತಾಂತ್ರಿಕ ಜನ್ಯ ಉತ್ಪತ್ತಿಗಳಲ್ಲಿನ ವಸ್ತು/ಸೇವೆ, ಹಕ್ಕಿನಲ್ಲಿ ಕೂಡಿದೆ.
ಜಾಹೀರಾತು: ಸುಳ್ಳು, ದಾರಿ ತಪ್ಪಿಸುವ ಪ್ರಚೋದಿಸುವ ಸತ್ಯ ಮರೆ ಮಾಡಿದ, ಸುಳ್ಳÛನ್ನು ಸತ್ಯದಂತೆ ಹೇಳುವ ಜಾಹೀರಾತುಗಳಿಗೆ ಕಠಿನ ನಿರ್ಬಂಧ ವಿಧಿಸಲಾಗಿದೆ. ಜಾಹೀರಾತನ್ನು ನಂಬಿದ ಗ್ರಾಹಕ ಮೋಸಕ್ಕೊಳಗಾದರೆ 2 ವರ್ಷಗಳ ಜೈಲು ಶಿಕ್ಷೆ ಅಥವಾ ರೂ. 10 ಲ. ರೂ. ದಂಡ ವಿಧಿಸಬಹುದಾಗಿದೆ. ಪುನರಪಿ ಇಂಥ ತಪ್ಪು ಮಾಡಿದರೆ ಶಿಕ್ಷೆಯ ಪ್ರಮಾಣ 5 ವರ್ಷ, ದಂಡ 50 ಲ. ರೂ. ತನಕ ಹೋಗಬಹುದು.

ಇದನ್ನೂ ಓದಿ:ರಾಜ್ಯದಲ್ಲಿಂದು 299 ಕೋವಿಡ್‌ ಪಾಸಿಟಿವ್‌ ಪತ್ತೆ: 2 ಸಾವು

ಕಲಬೆರಕೆ‰: ಕಲಬೆರಕೆ ಪ್ರಕರಣ ಗಳು ದೃಢಪಟ್ಟಲ್ಲಿ ಈ ವೇಳೆ ಯಾರಿಗೂ ಹಾನಿ ಆಗದೇ ಇದ್ದಲ್ಲಿ 6 ತಿಂಗಳು ಜೈಲು ಮತ್ತು 1 ಲ. ರೂ. ದಂಡ ಹಾಗೂ ಭಾಗಶಃ ಹಾನಿ, ಜೀವಹಾನಿ ಮತ್ತಿತರ ತೊಂದರೆಗಳಾಗಿದ್ದಲ್ಲಿ ಶಿಕ್ಷೆ/ದಂಡದ ಪ್ರಮಾಣ ತುಂಬಾ ಜಾಸ್ತಿ. ಅಜೀವ ಶಿಕ್ಷೆ ಕೂಡಾ ಆಗಬಹುದು.

Advertisement

ವಸ್ತುವಿನ ಜವಾಬ್ದಾರಿ: ವಸ್ತುವಿನ ಉತ್ಪಾದನೆಯಲ್ಲಿ ದೋಷವಿದ್ದು ಗ್ರಾಹಕರಿಗೆ ಹಾನಿ ಆದರೆ ಅಂಥವರು ಉತ್ಪಾದನೆಯನ್ನು ನಿಲ್ಲಿಸಿ, ಮಾರಾಟವಾದ ವಸ್ತು ಗಳನ್ನು ಮರಳಿ ತರಿಸುವ ಅಧಿಕಾರ ಕಾನೂನಿನಲ್ಲಿದೆ. ನಿರ್ಬಂಧಿತ ವ್ಯವಹಾರ ದರದಲ್ಲಿ ಹೆಚ್ಚಳ, ಷರತ್ತು ಬದ್ಧ ಪೂರೈಕೆ, ವಿಳಂಬ ಇವನ್ನು ಪ್ರಶ್ನಿಸುವ ಹಕ್ಕು ಗ್ರಾಹಕರಿಗಿದೆ.

ಕರಾರುಗಳು: ದೊಡ್ಡ ಮೊತ್ತದ ಠೇವಣಿ ಕೇಳು ವುದು, ತೀವ್ರ ರೀತಿಯ ದಂಡ, ಬೇಗ ಪಾವತಿಗೆ ಅಡ್ಡಿ ಮುಂತಾದ ಕರಾರುಗಳು ಅಸಿಂಧು, ಅನ್ಯಾಯ.

ಹೊಸ ಕಾನೂನಿನ ಇತರ ವೈಶಿಷ್ಟ್ಯಗಳು: ಹೊಸ ಕಾನೂನು, ಗ್ರಾಹಕ ರಕ್ಷಣೆಯಲ್ಲಿ ಪರಿಪೂರ್ಣತೆ ತರಲು ಒಂದು ಸಾಂವಿಧಾನಿಕ ಸಂಸ್ಥೆ ಸ್ಥಾಪಿಸಿದೆ. ಗ್ರಾಹಕ ರಕ್ಷಣ ಪರಿಷತ್ತು-ಎಲ್ಲ ಹಂತದ ಆಯೋಗಗಳ ಮೇಲೆ ಈ ಪರಿಷತ್ತಿಗೆ ನಿಯಂತ್ರಣ, ಅಭಿವೃದ್ಧಿ ಯೋಜನೆ, ಸಾರ್ವಜನಿಕ ಹಿತದೃಷ್ಟಿಯಿಂದ ಸ್ವಯಂ ದೂರು ಪಡೆಯುವ ಹಕ್ಕು, ಅಸಹಜ ವ್ಯವಹಾರ ನಿಲ್ಲಿಸುವ ಅಧಿಕಾರ, ತಪ್ಪು ಜಾಹೀರಾತು ನಿಲ್ಲಿಸುವ ಅಧಿಕಾರ, ನಡಾವಳಿಗಳನ್ನು ಪುನರ್ವಿಮರ್ಶೆ ನಡೆಸುವ ಅಧಿಕಾರ, ಸರಕಾರದೊಡನೆ ಸಂಪರ್ಕ ಮತ್ತಿತರ ಮಹತ್ವದ ಅಧಿಕಾರಗಳನ್ನು ಪರಿಷತ್ತು ಹೊಂದಿದೆ. ಇದರ ತೀರ್ಮಾನ ಪಾಲಿಸದಿದ್ದಲ್ಲಿ 6 ತಿಂಗಳ ಜೈಲು ಶಿಕ್ಷೆ ಅಥವಾ 25 ಲ. ರೂ. ದಂಡ ಕಟ್ಟಬೇಕಾಗುತ್ತದೆ.

ಮಧ್ಯಸ್ಥಿಕೆ ನಡೆಸಿ ಪರಸ್ಪರ ಒಪ್ಪಿಗೆಯಿಂದ ಇತ್ಯರ್ಥಕ್ಕೆ ಬರುವ ಅವಕಾಶವನ್ನೂ ಈ ಕಾನೂನು ಸೃಜಿಸಿದೆ. ಸಣ್ಣ ಪುಟ್ಟ ತಗಾದೆಗಳನ್ನು ಮಧ್ಯಸ್ಥಿಕೆಯಿಂದಲೇ ನಿರ್ಣಯಿಸಿ ನ್ಯಾಯಾಲಯದ ಮತ್ತು ಗ್ರಾಹಕರ ಸಮಯ, ಹಣ ಉಳಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಇಂಥ ಸಂದರ್ಭದಲ್ಲಿ ಮೇಲ್ಮನವಿಗೆ ಅವಕಾಶ ಇಲ್ಲ.

ಗ್ರಾಹಕರ ಅನುಕೂಲತೆಗಾಗಿ ಕೋರ್ಟ್‌ನ ಬೆಂಚುಗಳನ್ನು ಇತರ ಜಾಗಗಳಿಗೆ ಬದಲಿಸಬಹುದು. ವೀಡಿಯೋ ಕಾನ್ಫರೆನ್ಸ್‌ ಮೂಲಕ ವಾದಿಸಬಹುದು. ಗ್ರಾಹಕರಿಗೆ ಅನುಕೂಲವಾಗುವಂತಿದ್ದರೆ ಒಂದು ನ್ಯಾಯಾಲಯದ ಕೇಸ್‌ ಅನ್ನು ಇನ್ನೊಂದು ನ್ಯಾಯಾ ಲಯಕ್ಕೆ ವರ್ಗಾಯಿಸಬಹುದು. ಗ್ರಾಹಕರ ದೂರಿಗೆ ಧನವಂತ, ಶಕ್ತಿವಂತ, ಪ್ರತಿವಾದಿ ನ್ಯಾಯಾಲಯದಲ್ಲಿ ಹಾಜರಾಗದಿದ್ದಲ್ಲಿ, ವಕೀಲರನ್ನು ನೇಮಿಸದಿದ್ದಲ್ಲಿ ಅವರ ಅನುಪಸ್ಥಿತಿಯಲ್ಲಿಯೇ ತೀರ್ಪು ಕೊಡುವ ಅಧಿಕಾರ ಕಾನೂನಿಗಿದೆ. ವಿಷಯಗಳ ಗುಣ ಪ್ರಮಾಣಗಳ ಮೇಲೆ ತೀರ್ಪು ಬರುತ್ತದೆ.

ಹೊಸ ಕಾನೂನು ಗ್ರಾಹಕ ರಕ್ಷಣ ಕಾನೂನು 2019ಕ್ಕೆ ಹಲ್ಲೂ ಇದೆ, ಕಚ್ಚಲೂ ಅವಕಾಶವಿದೆ. ಒಂದೆರಡು ಸಲ ಕಚ್ಚಿ ತನ್ನ ಗಟ್ಟಿಗತನವನ್ನು ತೋರಿಸಿದರೆ ಇದು ಗ್ರಾಹಕರಿಗೆ ಮೋಸ ಮತ್ತು ಅನ್ಯಾಯ ಎಸಗುವ ಕೃತ್ಯಗಳಲ್ಲಿ ತೊಡಗಿಕೊಂಡಿರುವವರ ಪಾಲಿಗೆ ಅಪಾಯ ಸೂಚಕವಾಗಬಹುದು. ಗ್ರಾಹಕರಿಗಾಗುತ್ತಿ ರುವ ಅನ್ಯಾಯಗಳಿಗೆ ಸ್ವಲ್ಪ ತಡೆಬೀಳಬಹುದು. ಮಾರ್ಗದರ್ಶನಕ್ಕಾಗಿ ಗ್ರಾಹಕರ ವೇದಿಕೆಗಳು ಸೇವೆಸಲ್ಲಿಸುತ್ತಿವೆ. ಅಲ್ಲದೆ ಸರಕಾರ ಶಾಲಾ ಗ್ರಾಹಕ ಕ್ಲಬ್‌ಗಳನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಗ್ರಾಹಕ ಜಾಗೃತಿಯ ಶಿಕ್ಷಣ ಒದಗಿಸುವ ಹೊಣೆಗಾರಿಕೆ ಹೊತ್ತಿದೆ. ಎಳವೆಯಲ್ಲಿಯೇ ವಿದ್ಯಾರ್ಥಿಗಳನ್ನು ಶಕ್ತಿವಂತ ಗ್ರಾಹಕರನ್ನಾಗಿ ಪರಿವರ್ತಿಸುವ ಈ ಯೋಜನೆ, ಭವಿಷ್ಯತ್ತಿಗೆ ದೀಪವಾಗಲಿದೆ.

-ಎ. ಪಿ. ಕೊಡಂಚ,ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next