Advertisement

National Award: ದೈವ, ದೈವ ನರ್ತಕರು, ಜನರಿಗೆ ರಾಷ್ಟ್ರಪ್ರಶಸ್ತಿ ಅರ್ಪಣೆ: ರಿಷಬ್‌ ಶೆಟ್ಟಿ

10:22 PM Oct 09, 2024 | Team Udayavani |

ಮಂಗಳೂರು: ದೈವಕ್ಕೆ, ದೈವ ನರ್ತಕರಿಗೆ ಹಾಗೂ ಪ್ರೋತ್ಸಾಹಿಸಿದ ಜನರಿಗೆ ಈ ಸಿನಿಮಾ ಪ್ರಶಸ್ತಿಯನ್ನು ಅರ್ಪಿಸುವೆ… ‘ಕಾಂತಾರ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪಡೆದ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಇದು.

Advertisement

ಹೊಸದಿಲ್ಲಿಯಲ್ಲಿ 70ನೇ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ಮರಳಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂತಾರ ಈ ಭಾಗದಲ್ಲಿ ಮಾಡಿದ ಸಿನಿಮಾ, ದೈವದ ಬಗ್ಗೆ ಹಾಗೂ ದೈವ ನರ್ತಕರ ಬಗ್ಗೆ ಹೇಳುವ ಸಿನಿಮಾ ಆಗಿರುವುದರಿಂದ ಆ ಸಮುದಾಯಕ್ಕೆ ಸಿಗಬೇಕಾಗಿರುವ ಪ್ರಶಸ್ತಿ. ದೈವದ ಆಶೀರ್ವಾದ ಇಲ್ಲದಿದ್ದರೆ ಇಲ್ಲಿಯವರೆಗೆ ಬರುವುದು ಸಾಧ್ಯವಾಗುತ್ತಿರಲಿಲ್ಲ ಎಂದರು.

ರಾಷ್ಟ್ರೀಯ ಪ್ರಶಸ್ತಿ ಬರುವುದಾಗಿ ಅಂದುಕೊಂಡಿರಲಿಲ್ಲ. ಸಿನಿಮಾ ಜನರಿಗೆ ಇಷ್ಟವಾಗಲಿ ಎಂದು ಇಡೀ ತಂಡವಾಗಿ ಕೆಲಸ ಮಾಡಿದ್ದೇವೆ. ಜನರಿಗೆ ಇಷ್ಟವಾಗಿದ್ದೇ ನಮಗೆ ದೊಡ್ಡ ಪ್ರಶಸ್ತಿ. ಅದು ಜ್ಯೂರಿಗಳಿಗೂ ಇಷ್ಟವಾಗಿ, ಚಿತ್ರ ಪ್ರಶಸ್ತಿ ಹಂತಕ್ಕೆ ತಲುಪಿದ್ದು, ತಂಡವಾಗಿ ಕೆಲಸ ಮಾಡಿ ಇನ್ನಷ್ಟು ಉತ್ತಮ ಸಿನಿಮಾ ಮಾಡುವುದಕ್ಕೆ ಪ್ರೇರಣೆಯಾಗಲಿದೆ ಎಂದರು.

ಶ್ರದ್ಧೆಯಿಂದ ಚಿತ್ರ ನಿರ್ಮಿಸಿದ್ದೇನೆ: 
ಕಾಂತಾರ -2 ಚಿತ್ರ ಶೂಟಿಂಗ್ ನಡೆಯುತ್ತಿದ್ದು, ಅತಿ ಶೀಘ್ರದಲ್ಲೇ ನಿರ್ಮಾಪಕರು ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟಿಸಲಿದ್ದಾರೆ ಎಂದರು. ದೈವಾರಾಧನೆಯ ಚಿತ್ರದ ವಸ್ತುವಾಗಿ ಬಳಸುವುದಕ್ಕೆ ಎದುರಾಗಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆಯೂ ದೈವಾರಾಧನೆ ವಸ್ತುವಾಗಿರುವ ಚಿತ್ರಗಳು ಬಂದಿವೆ. ತುಳು ಸಿನಿಮಾಗಳಿಗೆ ಪ್ರಶಸ್ತಿ ಕೂಡ ಸಿಕ್ಕಿದೆ. ಕಾಂತಾರ ಜನಪ್ರಿಯತೆ ಪಡೆದಾಗ ದೈವಾರಾದನೆ ಅಪಹಾಸ್ಯ ಮಾಡುವ ರೀತಿಯ ಪ್ರಸಂಗಗಳು ವೇದಿಕೆಗಳಲ್ಲಿ ನಡೆದಾಗ ನನಗೂ ಬೇಸರವಾಗಿದೆ, ನಾನೂ ದೈವಾರಾಧನೆ ಮಾಡುವವನಾಗಿ ಶ್ರದ್ಧೆಯಿಂದ ಚಿತ್ರ ನಿರ್ಮಿಸಿದ್ದೇನೆ, ಅದನ್ನು ಚಿತ್ರದ ರೀತಿಯಲ್ಲಿ ನೋಡಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next