Advertisement

ಕೇಂದ್ರಕ್ಕೆ ಹೊಣೆ ಹಸ್ತಾಂತರ: ರಾಷ್ಟ್ರಗೀತೆ ಕಡ್ಡಾಯವಲ್ಲ

02:14 PM Jan 10, 2018 | |

ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಮತ್ತು ಸುಪ್ರೀಂ ಕೋರ್ಟ್‌ಯು ಟರ್ನ್ ತೆಗೆದುಕೊಂಡಿರುವುದು ಆಶ್ಚರ್ಯವುಂಟು ಮಾಡಿದೆ. ಇದೇ ಸುಪ್ರೀಂ ಕೋರ್ಟ್‌ 2016ರಲ್ಲಿ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಿತ್ತು. ಆಗ ಕೇಂದ್ರ ಸರಕಾರವೂ ಅದನ್ನು ಸಮರ್ಥಿಸಿತ್ತು. ಸಿನೆಮಾ ಮಂದಿರ ಎಲ್ಲ ಜಾತಿ, ಮತ, ಧರ್ಮದವರು ಮಾತ್ರವಲ್ಲದೆ ಅಕ್ಷರಸ್ಥರು, ಅನಕ್ಷರಸ್ಥರು, ಬಡವರು, ಶ್ರೀಮಂತರು ಸೇರಿದಂತೆ ಸಮಾಜದ ಎಲ್ಲ ವರ್ಗದವರು ಒಟ್ಟಾಗುವ ಸ್ಥಳ. ಇಂತಹ ಸ್ಥಳದಲ್ಲಿ ರಾಷ್ಟ್ರಗೀತೆ ನುಡಿಸಿದರೆ ಜನರಲ್ಲಿ ರಾಷ್ಟ್ರಭಕ್ತಿ ಉದ್ದೀಪನಗೊಳ್ಳುತ್ತದೆ. ದೇಶಪ್ರೇಮ ಮೂಡಿಸಲು ಈ ಕ್ರಮ ಅಗತ್ಯ ಎಂಬರ್ಥದಲ್ಲಿ ಅಂದು ಕೇಂದ್ರ ಹೇಳಿತ್ತು.ಮತ್ತೆ ಅದೇ ಕೇಂದ್ರ ಸರಕಾರ ಕಡ್ಡಾಯ ಆದೇಶವನ್ನು ಹಿಂದೆಗೆದುಕೊಳ್ಳಬೇಕೆಂದು ಕೇಳಿತು, ಇದಕ್ಕೆ ಸ್ಪಂದಿಸಿದ ಸುಪ್ರೀಂ ಕೋರ್ಟ್‌ ಕೂಡ ತನ್ನ ಹಿಂದಿನ ಆದೇಶವನ್ನು ಮಾರ್ಪಾಡು ಮಾಡಿದ್ದು, ರಾಷ್ಟ್ರಗೀತೆ ಹಾಡುವುದು ಕಡ್ಡಾಯವೇನೂ ಅಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೆ, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು 12 ಮಂದಿ ಸದಸ್ಯರ ಅಂತರ್‌ ಸಚಿವಾಲಯ ಸಮಿತಿಗೆ ಒಪ್ಪಿಸುವ ಮೂಲಕ ನ್ಯಾಯಾಲಯವು, ಈ ವಿವಾದವನ್ನು ಬಗೆಹರಿಸುವ ಹೊಣೆಯನ್ನು ಸರ್ಕಾರದ ಹೆಗಲಿಗೇರಿಸಿದೆ.  

Advertisement

ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯ ಗೊಳಿಸಿದ ಆದೇಶಕ್ಕೆ ಆರಂಭದಲ್ಲೇ ಭಾರೀ ವಿರೋಧ ಎದುರಾಗಿತ್ತು. ಸಿನೆಮಾ ಮಂದಿರಕ್ಕೆ ಹೋಗುವುದು ಮನರಂಜನೆಗಾಗಿಯೇ ಹೊರತು ಕಲಿಯುವುದಕ್ಕಾಗಿ ಅಲ್ಲ. ಇಲ್ಲಿ ರಾಷ್ಟ್ರಭಕ್ತಿಯನ್ನು ಬಲವಂತವಾಗಿ ಏಕೆ ಹೇರಬೇಕೆಂಬ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಸನ್ನಿ ಲಿಯೋನ್‌ ಚಿತ್ರ ಅಥವಾ ಕ್ಯಾ ಕೂಲ್‌ ಹೈ ಹಮ್‌, ಗ್ರ್ಯಾಂಡ್‌ ಮಸ್ತಿಯಂತಹ ಸೆಕ್ಸ್‌ ಕಾಮಿಡಿ ಚಿತ್ರಗಳನ್ನು ನೋಡುವ ಮೊದಲು ರಾಷ್ಟ್ರಗೀತೆ ನುಡಿಸುವುದು ಮತ್ತು ಒಳಗಿದ್ದವರೆಲ್ಲ ಅದಕ್ಕೆ ಭಕ್ತಿಯಿಂದ ಎದ್ದು ನಿಲ್ಲುವುದು ಲೇವಡಿಗೂ ಒಳಗಾಗಿತ್ತು. ಅಂತೆಯೇ ಈ ಆದೇಶದಿಂದಾಗಿ ಹಲವು ಅನಪೇಕ್ಷಿತ ಘಟನೆಗಳು ಕೂಡಾ ಸಂಭವಿಸಿವೆ. ದೇಶಪ್ರೇಮವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದೇವೆ ಎಂದು ಭಾವಿಸಿರುವ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳು ರಾಷ್ಟ್ರಗೀತೆಯಾಗುವಾಗ ಎದ್ದು ನಿಲ್ಲದವರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳು ವರದಿಯಾಗಿವೆ. ಗುವಾಹಟಿಯಲ್ಲಿ ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಪಾಕಿಸ್ತಾನಿ ಎಂದು ನಿಂದಿಸಿದ್ದು ವಿವಾದಕ್ಕೊಳಗಾಗಿತ್ತು. ಕೇರಳದಲ್ಲಿ ನಡೆದ ಚಿತ್ರೋತ್ಸವದಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲದ ಆರು ಮಂದಿಯ ವಿರುದ್ಧ ಕೇಸ್‌ ದಾಖಲಾಗಿತ್ತು. ಚೆನ್ನೈನ ಚಿತ್ರ ಮಂದಿರವೊಂದರಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಪೊಲೀಸರು ಬರಬೇಕಾಯಿತು. 

ಮುಂಬಯಿಯ ಚಿತ್ರ ಮಂದಿರದಲ್ಲೂ ಈ ಮಾದರಿಯ ಘಟನೆಯೊಂದು ಸಂಭವಿಸಿತ್ತು. ಹೀಗೆ ಭಾರೀ ವಿವಾದಕ್ಕೊಳಗಾಗಿದ್ದ ಆದೇಶಕ್ಕೆ ಕಳೆದ ಅಕ್ಟೋಬರ್‌ನಲ್ಲಿ ತಿದ್ದುಪಡಿ ಮಾಡಿದ ಸುಪ್ರೀಂ ಕೋರ್ಟ್‌ ರಾಷ್ಟ್ರಗೀತೆಯ ವೇಳೆ ಎದ್ದು ನಿಲ್ಲುವುದು ಕಡ್ಡಾಯ ಅಲ್ಲ ಎಂದು ಹೇಳಿತು. ಈ ಸಂದರ್ಭದಲ್ಲಿ ಸರಕಾರವನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ರಾಷ್ಟ್ರಭಕ್ತಿಯನ್ನು ಲಾಂಛನದಂತೆ ಭುಜದ ಮೇಲೆ ಧರಿಸಿಕೊಳ್ಳಬೇಕೆ ಎಂದು ಪ್ರಶ್ನಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಗೊಂದಲ ಇತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.  ಸಂವಿಧಾನದ 51ಎ ಪರಿಚ್ಛೇದದಲ್ಲಿ ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಗೆ ಪ್ರತಿಯೊಬ್ಬರು ಗೌರವ ನೀಡಬೇಕೆಂದು ಹೇಳಲಾಗಿದೆ. ಹಾಗೆಂದು ಕಡ್ಡಾಯಗೊಳಿಸಿಲ್ಲ. ಸುಪ್ರೀಂ ಕೋರ್ಟ್‌ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸುವ ಮೂಲಕ ಸಂವಿಧಾನಕ್ಕೆ ವಿರುದ್ಧವಾದ ತೀರ್ಪು ನೀಡಿದೆ ಎನ್ನುವುದು ಕಾನೂನು ತಜ್ಞರು ವಾದ. ನಿಜವಾಗಿ ನೋಡಿದರೆ ಸುಪ್ರೀಂ ಕೋರ್ಟಾಗಲಿ ಅಥವಾ ಸರಕಾರವಾಗಲಿ ಇಂತಹ ವಿಚಾರಗಳನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸುವುದೇ ಸರಿಯಲ್ಲ. ಜನರಲ್ಲಿ ದೇಶಭಕ್ತಿ ತುಂಬಲು ರಾಷ್ಟ್ರಗೀತೆಯೇ ಬೇಕು ಎನ್ನುವುದು ವಿತಂಡವಾದ. ಅದರಲ್ಲೂ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಿದರೆ ದೇಶಪ್ರೇಮ ಉಕ್ಕುತ್ತದೆ ಎಂದಾದರೆ ನಾಳೆ ಬಾರ್‌, ಹೊಟೇಲುಗಳಲ್ಲೂ ರಾಷ್ಟ್ರಗೀತೆ ನುಡಿಸಬೇಕೆಂದು ಯಾರಾದರೂ ಆಗ್ರಹಿಸುವ ಸಾಧ್ಯತೆಯೂ ಇರುತ್ತದೆ. ರಾಷ್ಟ್ರಗೀತೆ ಎಲ್ಲಿ, ಯಾವ ಸಂದರ್ಭದಲ್ಲಿ ನುಡಿಸಬೇಕೆಂಬ ಔಚಿತ್ಯವೂ ಇರಬೇಕು. ಎಲ್ಲೆಂದರಲ್ಲಿ ರಾಷ್ಟ್ರಗೀತೆಯನ್ನು ನುಡಿಸುವುದರಿಂದ ಅದರ ಮೇಲಿರುವ ಗೌರವ ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚು. ಇಷ್ಟಕ್ಕೂ ಸರಕಾರಕ್ಕೆ ಮತ್ತು ನ್ಯಾಯಾಲಯಗಳಿಗೆ ಇಂತಹ ಪ್ರಕರಣಗಳಿಗೆ ಸಮಯ ಮತ್ತು ಸಂಪನ್ಮೂಲ ವ್ಯರ್ಥಗೊಳಿಸುವುದೊಂದೇ ಕೆಲಸವೇ?  ದೇಶದಲ್ಲಿ ಲಕ್ಷಗಟ್ಟಲೆ ವ್ಯಾಜ್ಯಗಳು ಇತ್ಯರ್ಥವಾಗಲು ಕಾಯುತ್ತಿರುವಾಗ ನ್ಯಾಯಾಲಯ ಯಾವ ರೀತಿಯಲ್ಲೂ ಪ್ರಯೋಜನಕ್ಕೆ ಬಾರದ ಈ ಮಾದರಿಯ ಪಿಐಎಲ್‌ಗ‌ಳಿಗೆ ಇಷ್ಟೊಂದು ಮಹತ್ವ ನೀಡುವುದು ಏಕೆಂದು ಅರ್ಥವಾಗುವುದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next