Advertisement

ಇದ್ದೂ ಇಲ್ಲದಂತಿರುವ ನರಿಮೊಗರು ರೈಲು ನಿಲ್ದಾಣ; ಪ್ರಯಾಣಿಕರ ಕೊರತೆ

08:04 PM Oct 06, 2021 | Team Udayavani |

ಸವಣೂರು: ಪುತ್ತೂರು ತಾಲೂಕು ಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ನರಿಮೊಗರು ರೈಲು ನಿಲ್ದಾಣವು ಸಿಗ್ನಲ್‌ ವ್ಯವಸ್ಥೆ ಸಹಿತ ಪೂರ್ಣಕಾಲಿಕ ಸ್ಟೇಷನ್‌ ಮಾಸ್ಟರ್‌ ಇರುವ ನಿಲ್ದಾಣವಾದರೂ ಇಲ್ಲಿ ಪ್ರಯಾಣಿಕರ ಸ್ಪಂದನೆ ಮಾತ್ರ ಇಲ್ಲ.

Advertisement

ಈ ರೈಲು ನಿಲ್ದಾಣದಲ್ಲಿ ಮಂಗಳೂರು- ಸುಬ್ರಹ್ಮಣ್ಯ ಲೋಕಲ್‌ ರೈಲಿಗೆ ಮಾತ್ರ ನಿಲುಗಡೆ ಇತ್ತು. ಈಗ ಆ ರೈಲು ಸಂಚಾರ ನಿಲ್ಲಿಸಿದ್ದರಿಂದ ಅದೂ ಇಲ್ಲದಾಗಿದೆ. ದೂರ ಪ್ರಯಾಣದ ಪ್ರಯಾಣಿಕ ರೈಲುಗಳು ಇಲ್ಲಿ ನಿಲುಗಡೆಗೊಳ್ಳುತ್ತಿಲ್ಲ. ಈ ನಿಲ್ದಾಣಕ್ಕೆ ನರಿಮೊಗರು ಹೆಸರಿದ್ದರೂ ಇದು ಇರುವುದು ಸರ್ವೆಯಲ್ಲಿ.

ಮಂಗಳೂರು-ಹಾಸನ ರೈಲು ಮಾರ್ಗ ನಿರ್ಮಾಣ ಸಂದರ್ಭ ಮೀಟರ್‌ಗೇಜ್ ಹಳಿ ಇತ್ತು. 1974ರಲ್ಲಿ ಮಂಗಳೂರು- ಸುಬ್ರಹ್ಮಣ್ಯ ಲೋಕಲ್‌ ರೈಲು ಓಡಾಟ ಆರಂಭವಾಯಿತು. ಆ ಕಾಲದಲ್ಲಿ ಕಲ್ಲಿದ್ದಲು ಬಳಸಿ ಚಾಲನೆ ಮಾಡುವ ರೈಲು ಎಂಜಿನ್‌ ಬಳಕೆಯಲ್ಲಿತ್ತು. ಈ ಎಂಜಿನ್‌ಗಳಿಗೆ ಅಲ್ಲಲ್ಲಿ ನೀರು ತುಂಬಿಸುವ ವ್ಯವಸ್ಥೆ ಬೇಕಾಗಿತ್ತು. ಈ ಕಾರಣದಿಂದ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯ ರೈಲು ನಿಲ್ದಾಣ ನಡುವೆ ಎಂಜಿನ್‌ಗಳಿಗೆ ನೀರು ತುಂಬಿಸುವ ಅಗತ್ಯಕ್ಕಾಗಿ ನರಿಮೊಗರಿನಲ್ಲಿ ರೈಲು ನಿಲ್ದಾಣ ಮತ್ತು ನೀರು ತುಂಬಿಸುವ ವ್ಯವಸ್ಥೆ ಆರಂಭಿಸಲಾಗಿತ್ತು. ರೈಲು ನೀರು ತುಂಬಿಸಿಕೊಳ್ಳಲು ಇಲ್ಲಿ ನಿಲುಗಡೆಯಾಗುತ್ತಿದ್ದ ಕಾರಣ ಪೂರ್ಣ ಪ್ರಮಾಣದ ರೈಲು ನಿಲ್ದಾಣವನ್ನಾಗಿ ಮಾಡಲಾಗಿದೆ.

ಎಲ್ಲ ರೈಲುಗಳಿಗೆ ನಿಲುಗಡೆ
ಮೀಟರ್‌ಗೇಜ್ ಹಳಿಗಳಲ್ಲಿ ರೈಲು ಬಂಡಿ ಓಡುತ್ತಿದ್ದ ಸಂದರ್ಭ ನರಿಮೊಗರು ರೈಲು ನಿಲ್ದಾಣದಲ್ಲಿ ಲೋಕಲ್‌ ರೈಲು ಬಂಡಿಗಳ ಸಹಿತ ಎಲ್ಲ ರೈಲು ಬಂಡಿಗಳಿಗೆ ನಿಲುಗಡೆ ನೀಡಲಾಗುತ್ತಿತ್ತು. ಮೀಟರ್‌ಗೇಜ್ ಹಳಿ ಗಳಲ್ಲಿ 1984ರ ಬಳಿಕ ಡೀಸೆಲ್‌ ಎಂಜಿನ್‌ಗಳು ಓಡಾಟ ಆರಂಭವಾದ ಬಳಿಕವೂ ನರಿಮೊಗರು ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೆ ನಿಲುಗಡೆ ನೀಡಲಾಗುತ್ತಿತ್ತು. ಮೀಟರ್‌ ಗೇಜ್‌ ಹಳಿಗಳನ್ನು ಬ್ರಾಡ್‌ಗೇಜ್ ಗೆ ಪರಿವರ್ತನೆ ಮಾಡುವ ಸಂದರ್ಭ ನರಿಮೊಗರು ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಲಾಗಿತ್ತು.

ಬ್ರಾಡ್‌ಗೇಜ್ ಹಳಿಗಳ ಮೇಲೆ ರೈಲುಗಳ ಓಡಾಟ ಆರಂಭವಾದ ಬಳಿಕ ದೂರ ಪ್ರಯಾಣದ ರೈಲುಗಳಿಗೆ ನರಿಮೊಗರು ನಿಲ್ದಾಣದಲ್ಲಿ ನಿಲುಗಡೆ ರದ್ದುಪಡಿಸಲಾಯಿತು.

Advertisement

ಇದನ್ನೂ ಓದಿ:ದಾಂಡೇಲಿ ನಗರದಲ್ಲಿ ಇದ್ದು ಇಲ್ಲದಂತಾದ ಸಿಸಿ ಕ್ಯಾಮೆರಾ

ಕ್ರಾಸಿಂಗ್‌ ನಿಲ್ದಾಣ
ಸ್ಟೇಷನ್‌ ಮಾಸ್ಟರ್‌ ಇರುವ ಪೂರ್ಣಪ್ರಮಾಣದ ರೈಲು ನಿಲ್ದಾಣವಾದ ಕಾರಣ ನರಿಮೊಗರು ರೈಲು ನಿಲ್ದಾಣವನ್ನು ಗೂಡ್ಸ್‌ ರೈಲುಗಳ ಕ್ರಾಸಿಂಗ್‌ ನಿಲ್ದಾಣವನ್ನಾಗಿ ಬಳಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ರೈಲು ನಿಲ್ದಾಣದಲ್ಲಿ ದೂರಪ್ರಯಾಣದ ರೈಲುಗಳಿಗೆ ನಿಲುಗಡೆ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ರೈಲ್ವೇ ಇಲಾಖೆ ಈಗಾಗಲೇ ಬಂದಿದೆ.

ಕಾರಣ ಏನು?
ನರಿಮೊಗರು ರೈಲು ನಿಲ್ದಾಣದಿಂದ ದೂರ ಪ್ರಯಾಣದ ರೈಲುಗಳಿಗೆ ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆಯ ಕೊರತೆ, ರೈಲು ನಿಲ್ದಾಣದ ಆದಾಯದ ಕೊರತೆಯ ಕಾರಣ ನೀಡಿ ನಿಲುಗಡೆ ಸ್ಥಗಿತವಾಯಿತು. ಮಂಗಳೂರು-ಸುಬ್ರಹ್ಮಣ್ಯ ಲೋಕಲ್‌ ರೈಲು ಇದ್ದಾಗ ನರಿಮೊಗರು ರೈಲು ನಿಲ್ದಾಣದಲ್ಲಿ ನಿಲುಗಡೆ ಇದ್ದರೂ ಪ್ರತಿನಿತ್ಯ ಇಲ್ಲಿಂದ ರೈಲು ಹತ್ತುವ ಪ್ರಯಾಣಿಕರ ಸಂಖ್ಯೆ 10ನ್ನು ಮೀರುತ್ತಿರಲಿಲ್ಲ. ಕೋವಿಡ್‌ ಕಾರಣದಿಂದ 2020 ಮಾರ್ಚ್‌ ಬಳಿಕ ಮಂಗಳೂರು-ಸುಬ್ರಹ್ಮಣ್ಯ ಲೋಕಲ್‌ ರೈಲು ಸಂಚಾರವೇ ನಿಂತಿದೆ. ಈ ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸ್ಪಂದನೆ ಇಲ್ಲ ಎಂಬ ವರದಿ ಇಲಾಖೆಯ ಕೈ ಸೇರಿದೆ ಎನ್ನಲಾಗಿದೆ.

ಸಂಸದರ ಜತೆ ಚರ್ಚೆ
ನರಿಮೊಗರು ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್‌ ರೈಲು ನಿಲ್ಲುವುದರ ಜತೆಗೆ ಸಾರ್ವಜನಿಕರಿಗೆ ಪೂರಕವಾಗಿ ಏನು ಮಾಡಬಹುದೆಂದು ಸಂಸದರ ಜತೆ ಚರ್ಚಿಸಲಾಗುವುದು.
-ಸಂಜೀವ ಮಠಂದೂರು,
ಶಾಸಕ ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next