Advertisement

ಬಿಸಿಲೂರಿನ ಕುರಿಗಾಹಿ ಬಾಳಿಗೆ ಪ್ರಭೆಯಾದ “ರತ್ನ’!

10:14 AM Jan 10, 2018 | Team Udayavani |

ರಾಯಚೂರು: ಅದು 1991ನೇ ಇಸವಿ. ಈಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿನ ರಾಯಚೂರು ಜಿಲ್ಲಾಧಿಕಾರಿ. ದಾರಿಯಲ್ಲಿ ಹೋಗುವಾಗ ಕಣ್ಣಿಗೆ ಬಿದ್ದ ಕುರಿಗಾಹಿಯ ಬದುಕನ್ನೇ ಬದಲಿಸಿದ ಪ್ರಸಂಗವಿದು. ಹೌದು, ಅಂದು ತಾಲೂಕಿನ ಇಡಪನೂರಿನಲ್ಲಿ ಗೋಲಿಬಾರ್‌ ನಡೆದಿತ್ತು. ಜಿಲ್ಲಾಧಿಕಾರಿ ರತ್ನಪ್ರಭಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾರಿನಲ್ಲಿ ತೆರಳುವಾಗ ನರಸಪ್ಪ ಎನ್ನುವ ಬಾಲಕ ಶಾಲೆಗೆ ತೆರಳದೆ ಕುರಿ  ಕಾಯುತ್ತಿದ್ದ. ಅದನ್ನು ಗಮನಿಸಿದ ಅವರು, ಕಾರು ನಿಲ್ಲಿಸಿ ಬಾಲಕನನ್ನು ವಿಚಾರಣೆ ಮಾಡಿದರು. ಬಡತನದ ಹಿನ್ನೆಲೆಯಲ್ಲಿ ಶಾಲೆಗೆ ಹೋಗುತ್ತಿಲ್ಲ ಎಂದು ಬಾಲಕ ತಿಳಿಸಿದ್ದ. ಆದರೆ, ಆ ಬಾಲಕನನ್ನು ಸಮೀಪದ ಶಾಲೆಗೆ ಸೇರಿಸಿ ಮುಖ್ಯಶಿಕ್ಷಕ ಜನಾರ್ದನ ಅವರಿಗೆ ಸೂಕ್ತ ನಿರ್ದೇಶನ ನೀಡಿದ್ದರು. ಅಂದು ರತ್ನಪ್ರಭಾ ಅವರು ಮಾಡಿದ ಸಹಾಯ ಇಂದು ನರಸಪ್ಪನ ಬದುಕನ್ನೇ ಬದಲಿಸಿದೆ. ಬಾಲಕ ನರಸಪ್ಪ ಇಂದು ರಾಜ್ಯ ಗುಪ್ತಚರ ಪೊಲೀಸ್‌ ಇಲಾಖೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Advertisement

ತನಗೆ ಸಹಾಯ ಮಾಡಿದ ಜಿಲ್ಲಾಧಿಕಾರಿ ಈಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿರುವುದಕ್ಕೆ ಸಂತಸಗೊಂಡಿರುವ ನರಸಪ್ಪ, ಖುದ್ದು ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಕುಶಲೋಪರಿ ವಿಚಾರಿಸಿದ್ದಲ್ಲದೇ, ತಮಗೆ ಮಾಡಿದ ಸಹಾಯವನ್ನು ನೆನಪಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.  ಅದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿಎಸ್‌ ರತ್ನಪ್ರಭಾ ಅವರು, “ತಾವು ಮಾಡಿದ ಚಿಕ್ಕ ಸಹಾಯ ಒಬ್ಬ ವ್ಯಕ್ತಿಯ ಜೀವನ ಬದಲಿಸಿದೆ. 27 ವರ್ಷದ ಹಿಂದೆ ಮಾಡಿದ ಚಿಕ್ಕ ಕಾರ್ಯ ದೊಡ್ಡ ಫಲಿತಾಂಶ ನೀಡಿದೆ. ಅದು ತಮಗೆ ಸಾಕಷ್ಟು ಆನಂದ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ಅಂದು ಶಾಲೆಗೆ ಸೇರಿದ ನರಸಪ್ಪ ನಂತರ ರಾಯಚೂರಿನಲ್ಲಿ ಉನ್ನತ ವ್ಯಾಸಂಗ ಮಾಡಿದರು. 2006ರಲ್ಲಿ ಎಂಎ ಓದುವಾಗ ಪೊಲೀಸ್‌ ಇಲಾಖೆಯಲ್ಲಿ ಪೇದೆ ಹುದ್ದೆ ಸಿಕ್ಕಿತು. ಈಗ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ರತ್ನಪ್ರಭಾ ಕಾರ್ಯ ಮೆಚ್ಚಿದ ಪ್ರಧಾನಿ
ಬೆಂಗಳೂರು: ಸಿಎಸ್‌ ರತ್ನಪ್ರಭಾ ಅವರ ಕಾರ್ಯವನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ರತ್ನಪ್ರಭಾ ಅವರು, ತಾವು ರಾಯಚೂರು ಡೀಸಿಯಾಗಿದ್ದಾಗ ಕಾರಿನಲ್ಲಿ ಹೋಗುವಾಗ ಕುರಿ ಮೇಯಿಸುತ್ತಿದ್ದ ಬಾಲಕನನ್ನು ನೋಡಿ ಅವನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೆ. ಆತ ಈಗ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ನನ್ನ ಮುಂದೆ ಬಂದು ನಿಂತು ಅವನೇ ತನ್ನ ಪರಿಚಯ ಹೇಳಿ ಕೊಂಡಿದ್ದಾನೆ. ಇದು ನನಗೆ ಅತ್ಯಂತ ಸಂತೋಷದ ಕ್ಷಣ ಎಂದು ಟ್ವೀಟ್‌
ಮಾಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ನೀತಿ ಆಯೋಗ ಆಯೋಜಿಸಿದ್ದ ಹೊಸ ಜಿಲ್ಲಾಧಿಕಾರಿಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ ಮುಖ್ಯ 
ಕಾರ್ಯದರ್ಶಿ ರತ್ನಪ್ರಭಾ ಅವರ ಟ್ವೀಟ್‌ ಬಗ್ಗೆ ಮಾತನಾಡಿದ್ದಾರೆ. 27 ವರ್ಷಗಳ ಹಿಂದೆ ಒಬ್ಬ ಮಹಿಳಾ ಅಧಿಕಾರಿ ಜಿಲ್ಲಾಧಿಕಾರಿಯಾಗಿದ್ದಾಗ ಕುರಿ
ಕಾಯುವ ಹುಡುಗನನ್ನು ಶಾಲೆಗೆ ಸೇರಿಸಿದ್ದರು. ಈಗ ಆತ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದಾನೆ. ಆ ಮಹಿಳಾ ಅಧಿಕಾರಿ ಈಗ ಹಿರಿಯ ಅಧಿಕಾರಿ 
ಯಾಗಿದ್ದು, ಅವರ ಹೆಸರು ನನಗೆ ನೆನಪಿಗೆ ಬರುತ್ತಿಲ್ಲ. ಕಾನ್‌ಸ್ಟೆಬಲ್‌ ಅವರ ಎದುರಿಗೆ ಬಂದು ತನ್ನನ್ನು ಶಾಲೆಗೆ ಸೇರಿಸಿದ್ದ ಕಥೆ ಹೇಳಿ
ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದಕ್ಕಿಂತ ಸೌಭಾಗ್ಯದ ಕ್ಷಣ ಇನ್ನೇನಿದೆ ಎಂದು ರತ್ನಪ್ರಭಾ ಅವರ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾರಂಭದಲ್ಲಿ ಅವರ ಶ್ಲಾಘನೀಯ
ಕಾರ್ಯದ ಉದಾಹರಣೆ ನೀಡಿ, ಸಣ್ಣ ಪುಟ್ಟ ಕೆಲಸ ಮಾಡಲು ನಮಗೆ ಸಾಕಷ್ಟು ಅವಕಾಶ ದೊರೆಯುತ್ತದೆ. ದೇಶದಲ್ಲಿ ಎಷ್ಟೇ ಕೆಟ್ಟ ಘಟನೆಗಳು ನಡೆದರೂ, ನಮಗೆ ಕೆಲಸ ಮಾಡಲು ಅವಕಾಶ ದೊರೆತಾಗ ನಮ್ಮ ಕೆಲಸ ನಾವು ಮಾಡಿದರೆ, ಅದಕ್ಕಿಂತ ದೊಡ್ಡ ಜನಸೇವೆ ಯಾವುದೂ ಇಲ್ಲ. ನಮ್ಮೆಲ್ಲರಿಗೂ ಅಂತಹ ಸೇವೆ ಮಾಡುವ ಅವಕಾಶ ದೊರೆತಿದೆ. ನವ ಭಾರತ ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದೆ. ನಿಮ್ಮೆಲ್ಲರ ಸಹಕಾರದೊಂದಿದೆ ಅದು ಸಾಕಾರಗೊಳ್ಳಬೇಕಿದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next