Advertisement

ಕಪ್ಪುಚುಕ್ಕೆಯಿಲ್ಲದ ಮೋದಿ ಆಡಳಿತ : ಶೋಭಾ ಕರಂದ್ಲಾಜೆ

03:29 PM Jun 06, 2018 | Team Udayavani |

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ ಜಗತ್ತಿನಲ್ಲೇ ಭಾರತಕ್ಕೆ ಗೌರವ ತಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಎನ್‌ಡಿಎ ಸರಕಾರವು ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ನಾಲ್ಕೂವರೆ ವರ್ಷಗಳಲ್ಲಿ ಈಡೇರಿಸಿದೆ. ಜತೆಗೆ ಯುಪಿಎ ಅವಧಿಯಲ್ಲಿ ಮಾಡಿದ ವಿದೇಶಿ ಸಾಲಗಳನ್ನು ಮರು ಪಾವತಿಸುವ ಮಟ್ಟಕ್ಕೆ ದೇಶವನ್ನು ಆರ್ಥಿಕವಾಗಿ ಸುಸಜ್ಜಿತಗೊಳಿಸಿದೆ. ಪ್ರಸ್ತುತ ಭಾರತಕ್ಕೆ ಅಮೆರಿಕ, ರಷ್ಯಾ, ಯೂರೋಪ್‌ ಮೊದಲಾದ ದೇಶಗಳಲ್ಲಿ ಕೆಂಪು ಹಾಸಿನ ಸ್ವಾಗತ ಸಿಗುತ್ತಿದೆ.

ಭಯೋತ್ಪಾದನೆ ದೃಷ್ಟಿಯಿಂದ ಪಾಕಿಸ್ಥಾನವನ್ನು ದೂರವಿಡುವತ್ತ ವಿವಿಧ ದೇಶಗಳು ಕ್ರಿಯಾಶೀಲವಾಗಿವೆ. ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ಭಾರತ ಇರಬೇಕು ಎಂಬ ಚರ್ಚೆ ನಡೆದಿದೆ ಎಂದರು.
ಪ್ರಸ್ತುತ ದೇಶದ ಜಿಡಿಪಿ ಪ್ರಮಾಣ ಏರಿಕೆಯಾಗಿದೆ. ಅಪನಗದೀಕರಣದಿಂದ ಅಕ್ರಮ ಹಣ ಪತ್ತೆಯಾಗಿದ್ದು, ಕಾಶ್ಮೀರದಲ್ಲಿ ಹಿಂಸಾಚಾರವೂ ನಿಂತಿದೆ. ಜತೆಗೆ ಡ್ರಗ್ಸ್‌ ಮಾಫಿಯಾ, ಶಸ್ತ್ರಾಸ್ತ್ರ ಪೂರೈಕೆ, ಮಾನವ ಕಳ್ಳ ಸಾಗಾಣಿಕೆಯೂ ನಿಂತಿದೆ. ಜಿಎಸ್‌ಟಿ ಜಾರಿಯಿಂದ ಆರಂಭದಲ್ಲಿ ತೊಂದರೆಯಾದರೂ ಪ್ರಸ್ತುತ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ವಿವರಿಸಿದರು.

ಹೃದಯದ ಸ್ಟಂಟ್‌ ಅಳವಡಿಕೆ ಸೇರಿದಂತೆ ಹಲವು ಆರೋಗ್ಯ ಸೇವೆಗಳಿಗೆ ಶೇ. 50 ಬೆಲೆ ಕಡಿತ, 497 ಡಯಾಲಿಸಿಸ್‌ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಮೂರೂವರೆ ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತವಾಗಿದ್ದು, 7.80 ಕೋಟಿ ಶೌಚಾಲಯ ನಿರ್ಮಾಣವಾಗಿದೆ. 4 ಕೋಟಿ ಮನೆಗಳಿಗೆ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲ ಒದಗಿಸಲಾಗಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಿಂದ ಪೆಟ್ರೋಲ್‌ ಬೆಲೆ ಏರಿಕೆಯಾಗಿದ್ದು, ರಾಜ್ಯ ಸರಕಾರ ತೆರಿಗೆ ಕಡಿಮೆ ಮಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. 

Advertisement

ಗಂಗಾ ಶುದ್ಧೀಕರಣ ದೊಡ್ಡ ಯೋಜನೆಯಾಗಿದ್ದು, ಪ್ರಗತಿಯಲ್ಲಿದೆ. ಕಪ್ಪು ಹಣ ಬೇರೆ ದೇಶದಲ್ಲಿದ್ದು, ಅದನ್ನು ಹೊರ ತರುವ ಪ್ರಯತ್ನವೂ ನಡೆಯುತ್ತಿದೆ ಎಂದರು.

ಪ್ರಮುಖರಾದ ಪ್ರತಾಪ್‌ಸಿಂಹ ನಾಯಕ್‌, ಬೃಜೇಶ್‌ ಚೌಟ, ನಿತಿನ್‌ ಕುಮಾರ್‌, ಉದಯಕುಮಾರ್‌ ಶೆಟ್ಟಿ, ಕಿಶೋರ್‌ ರೈ, ಸಂಧ್ಯಾ ವೆಂಕಟೇಶ್‌, ಸಂಜಯ ಪ್ರಭು, ಪ್ರಭಾಮಾಲಿನಿ, ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಅಮಾಯಕರ ಬಂಧನ ಖಂಡಿಸಿ ಇಂದು ಪ್ರತಿಭಟನೆ
ಪೆರ್ಡೂರು ದನ ಸಾಗಾಟ ಪ್ರಕರಣದಲ್ಲಿ ಹಸನಬ್ಬ ಅವರ ಸಾವು ಯಾವ ರೀತಿಯಲ್ಲಿ ಸಂಭವಿಸಿದೆ ಎಂಬುದು ಪೊಲೀಸ್‌ ತನಿಖೆಯಿಂದಲೇ ಬಯಲಾಗಬೇಕು. ಆದರೆ ಪ್ರಸ್ತುತ ಪೊಲೀಸರು ಬಿಜೆಪಿ ಹಾಗೂ ಸಂಘ ಪರಿವಾರದ ಅಮಾಯಕ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಇದನ್ನು ವಿರೋಧಿಸಿ ಇಂದು (ಜೂ. 6) ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದರು.

ಬಿಜೆಪಿ-ಪರಿವಾರದ ಕಾರ್ಯಕರ್ತರು ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮ ದನ ಸಾಗಣೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರೇ ಆರೋಪಿಯನ್ನು ಬಂಧಿಸಿದ್ದರು. ಆದರೆ ಹಸನಬ್ಬ ಅವರು ಪೊಲೀಸ್‌ ವಾಹನದಲ್ಲಿ ಸುಮಾರು ದೂರ ಸಂಚರಿಸಿದ ಬಳಿಕ ಮೃತಪಟ್ಟಿದ್ದಾರೆ. ಹೀಗಾಗಿ ಅವರ ಸಾವಿನ ವಿಚಾರ ಪೊಲೀಸರೇ ತಿಳಿಸಬೇಕು ಎಂದರು.

ರಾಜ್ಯ ಸರಕಾರದ ಕುಮ್ಮಕ್ಕಿನಿಂದ ಪೊಲೀಸರು ಪ್ರಸ್ತುತ ಅಮಾಯಕರನ್ನು ಬಂಧಿಸುತ್ತಿದ್ದಾರೆ.  ಜತೆಗೆ ಹಿಂದೆ ಇಲ್ಲಿನ ಠಾಣೆಯಲ್ಲಿದ್ದು  ಹಲವು ಆರೋಪಗಳನ್ನು ಹೊತ್ತಿರುವ ಎಸ್‌ಐ ರಫೀಕ್‌ ಅವರನ್ನೇ ಮತ್ತೆ ನೇಮಿಸಿರುವುದು ಸರಿಯಲ್ಲ  ಎಂದು ಖಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next