Advertisement

ಮೋದಿ,ದೀದಿ ಫೋನಿ ವಾರ್‌!

02:07 AM May 07, 2019 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಫೋನಿ ಚಂಡಮಾರುತದ ಪ್ರಭಾವ ಕಡಿಮೆ ಇದ್ದರೂ, ಅದರ ಮೇಲಿನ ರಾಜಕೀಯ ಪ್ರಭಾವ ತೀವ್ರವಾಗಿಯೇ ಮುಂದುವರಿದಿದೆ. ಚಂಡಮಾರುತ ಅಪ್ಪಳಿಸಿದಾಗ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆ ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ಸಭೆ ನಡೆಸಲು ನಾನು ಪ್ರಯತ್ನಿಸಿದೆ. ಆದರೆ ಮಮತಾ ಸ್ಪಂದಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರೆ, ಅದಕ್ಕೆ ತಿರುಗೇಟು ನೀಡಿದ ಮಮತಾ, ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆಯಲು ರಾಜ್ಯಕ್ಕೆ ಬಂದು ನಾಟಕ ಮಾಡುತ್ತಾರೆ. ಅವರ ಅನುಕಂಪ ರಾಜ್ಯಕ್ಕೆ ಅಗತ್ಯವಿಲ್ಲ ಎಂದಿದ್ದಾರೆ.

Advertisement

ಟಮ್ಲುಕ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಮಮತಾ ಜೊತೆ ಮಾತನಾಡಲು ಯತ್ನಿಸಿದೆ. ಆದರೆ ಆಕೆ ಸೊಕ್ಕಿನಿಂದ, ನನ್ನೊಂದಿಗೆ ಮಾತನಾಡಲಿಲ್ಲ. ವಾಪಸ್‌ ಕರೆ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದೆ. ನನಗೆ ಪಶ್ಚಿಮ ಬಂಗಾಳದ ಬಗ್ಗೆ ಚಿಂತೆಯಾಗಿತ್ತು. ಹೀಗಾಗಿ ಪುನಃ ಕರೆ ಮಾಡಿದೆ. ಆಗಲೂ ಮಮತಾ ನಿರಾಕರಿಸಿದರು ಎಂದಿದ್ದಾರೆ. ಚಂಡಮಾರುತದ ವಿಚಾರದಲ್ಲೂ ದೀದಿ ರಾಜಕೀಯ ಮಾಡುತ್ತಿದ್ದಾರೆ. ಪ.ಬಂಗಾಳಕ್ಕೆ ಚಂಡಮಾರುತ ಮಾಡಿದ ಹಾನಿಯ ಬಗ್ಗೆ ಅರಿವಿದೆ. ಹೀಗಾಗಿ ಎಲ್ಲ ರಕ್ಷಣಾ ತಂಡಗಳೂ ಸಕ್ರಿಯವಾಗಿವೆ. ಜನರ ಬಗ್ಗೆ ಮಮತಾ ಕಾಳಜಿ ವಹಿಸುವುದು ಇಷ್ಟೇ. ಮಮತಾ ಅವರ ಈ ವರ್ತನೆಯೇ ಪಶ್ಚಿಮ ಬಂಗಾಳವು ಅಭಿವೃದ್ಧಿಯಲ್ಲಿ ಹಿಂದೆ ಬೀಳುವಂತೆ ಮಾಡಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಮತಾ, ರಾಜಕೀಯ ರ್ಯಾಲಿ ನಡೆಸುವ ವೇಳೆಯೇ ಯಾಕೆ ಸಭೆ ನಡೆಸಬೇಕು? ಇವೆಲ್ಲವೂ ಪ್ರಚಾರ ಹಾಗೂ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡುವ ನಾಟಕ ಎಂದಿದ್ದಾರೆ. ಸಿಎಂ ಇಲ್ಲದೇ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳ ಸಭೆಯನ್ನು ಹೇಗೆ ಕರೆಯುತ್ತೀರಿ? ನೀವು ಅವಧಿ ಮುಗಿದ ಪ್ರಧಾನಿ. ನಿಮ್ಮ ಅನುಕಂಪ ನಮಗೆ ಬೇಕಿಲ್ಲ. ಕಾಲೈಕುಂಡಕ್ಕೆ ಪ್ರಧಾನಿ ಬಂದಾಗ ಸಭೆಗೆ ಕರೆಯಲಾಗಿತ್ತು. ನಾವೇನು ಪ್ರಧಾನಿಯ ಆಳುಗಳೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next