Advertisement

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

01:40 PM May 10, 2024 | Team Udayavani |

ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮೂವರನ್ನು ಖುಲಾಸೆಗೊಳಿಸಿ ಘಟನೆ ನಡೆದು ಸುಮಾರು ಹನ್ನೊಂದು ವರ್ಷಗಳ ಬಳಿಕ ಪುಣೆಯ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ.

Advertisement

ತೀರ್ಪು ವಿಧಿಸಿದ ನ್ಯಾಯಾಲಯ ಆರೋಪಿಗಳಾದ ಸಚಿನ್ ಅಂದುರೆ, ಶರದ್ ಕಳಸ್ಕರ್ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ ಅಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ವೀರೇಂದ್ರಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಾಲೇಕರ್ ಸೇರಿ ಮೂವರನ್ನು ಖುಲಾಸೆಗೊಳಿಸಿದೆ.

ಮಹಾರಾಷ್ಟ್ರ ಅಂಧಶ್ರಾದ್ಧ ನಿರ್ಮೂಲನ ಸಮಿತಿ (ಎಂಎಎನ್‌ಎಸ್) ಸಂಸ್ಥಾಪಕ ದಾಭೋಲ್ಕರ್ ಅವರನ್ನು 2013 ರಲ್ಲಿ ಪುಣೆಯಲ್ಲಿ ಬೆಳಗಿನ ಜಾವ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.

ಸುಮಾರು ಮೂರು ವರ್ಷಗಳ ಕಾಲ ನಡೆದ ವಿಚಾರಣೆಯ ನಂತರ ಸೆಷನ್ಸ್ ನ್ಯಾಯಾಧೀಶ ಪಿಪಿ ಜಾಧವ್ ಇಂದು ತೀರ್ಪು ಪ್ರಕಟಿಸಿದರು. ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಪುಣೆ ಪೊಲೀಸರು ನಡೆಸಿದ್ದರು. ಆದರೆ, 2014ರಲ್ಲಿ ಬಾಂಬೆ ಹೈಕೋರ್ಟ್ ಆದೇಶದ ಬಳಿಕ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. 2016ರ ಜೂನ್‌ನಲ್ಲಿ ಅದು ಹಿಂದೂ ಬಲ ಪಂಥೀಯ ಸಂಘಟನೆ ಸನಾತನ ಸಂಸ್ಥೆ ಜೊತೆ ನಂಟು ಹೊಂದಿರುವ ಇಎನ್‌ಟಿ ಸರ್ಜನ್ ಡಾ ವೀರೇಂದ್ರಸಿಂಹ ತವಾಡೆಯನ್ನು ಬಂಧಿಸಿತ್ತು.

ತವಾಡೆ ಕೊಲೆಯ ಮಾಸ್ಟರ್ ಮೈಂಡ್ ಎಂದು ಪ್ರಾಸಿಕ್ಯೂಷನ್ ಹೇಳಿಕೊಂಡಿತ್ತು. ದಾಭೋಲ್ಕರ್ ಅವರು ಮಹಾರಾಷ್ಟ್ರ ಅಂಧಶ್ರಾದ್ಧ ನಿರ್ಮೂಲನ ಸಮಿತಿ (ಮೂಢನಂಬಿಕೆ ನಿರ್ಮೂಲನೆ ಸಮಿತಿ, ಮಹಾರಾಷ್ಟ್ರ) ಎಂಬ ಸಂಘಟನೆಯನ್ನು ನಡೆಸುತ್ತಿದ್ದರು. ಸನಾತನ ಸಂಸ್ಥೆಯು ಈ ಸಂಘಟನೆಯ ಕೆಲಸಕ್ಕೆ ವಿರುದ್ಧವಾಗಿದೆ ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿತ್ತು.

Advertisement

ಸಿಬಿಐ ತನ್ನ ಚಾರ್ಜ್ ಶೀಟ್‌ನಲ್ಲಿ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅನ್ನು ಶೂಟರ್‌ಗಳೆಂದು ಹೆಸರಿಸಿದೆ. ನಂತರ, ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ಬಂಧಿಸಿದರು. ನಂತರ ಸಂಸ್ಥೆಯು ವಕೀಲರಾದ ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ಬಂಧಿಸಿತು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120 ಬಿ (ಪಿತೂರಿ), 302 (ಕೊಲೆ), ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಯುಎಪಿಎ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಾಭೋಲ್ಕರ್ ಅವರ ಹತ್ಯೆಯ ನಂತರ, ಮುಂದಿನ ನಾಲ್ಕು ವರ್ಷಗಳಲ್ಲಿ ಗೋವಿಂದ್ ಪನ್ಸಾರೆ (ಕೊಲ್ಹಾಪುರ, ಫೆಬ್ರವರಿ 2015), ಕನ್ನಡ ವಿದ್ವಾಂಸ ಮತ್ತು ಬರಹಗಾರ ಎಂ ಎಂ ಕಲ್ಬುರ್ಗಿ (ಧಾರವಾಡ, ಆಗಸ್ಟ್ 2015) ಮತ್ತು ಪತ್ರಕರ್ತೆ ಗೌರಿ ಲಂಕೇಶ್ (ಬೆಂಗಳೂರು, ಸೆಪ್ಟೆಂಬರ್ 2017) ಅವರನ್ನು ಹತ್ಯೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next