Advertisement

ಸುರಕ್ಷತಾ ಕ್ರಮದೊಂದಿಗೆ ಉದ್ಯೋಗ ಖಾತ್ರಿಗೆ ಚಾಲನೆ

05:10 PM Apr 28, 2020 | Suhan S |

ನರಗುಂದ: ತಾಲೂಕಿನಲ್ಲಿ ಕೃಷಿ ಇಲಾಖೆ ವತಿಯಿಂದ ವಿವಿಧ ಗ್ರಾಮ ಪಂಚಾಯತ್‌ ಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೃಷಿ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ವಿಧಿಸಿದ್ದ ನಿರ್ಬಂಧವನ್ನು ಉದ್ಯೋಗ ಖಾತ್ರಿ ಯೋಜನೆಗೆ ವಿನಾಯಿತಿ ನೀಡಿದ್ದರಿಂದ ಕೆಲಸ ಪ್ರಾರಂಭಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಅವರು ತಿಳಿಸಿದ್ದಾರೆ.

Advertisement

ನರೇಗಾ ಕಾಮಗಾರಿ ಕೈಗೊಳ್ಳಲು ರೈತರು, ಕೂಲಿ ಕಾರ್ಮಿಕರು ಮುಂದೆ ಬರುತ್ತಿದ್ದು ಬಹುತೇಕ ಪಂಚಾಯತ್‌ಗಳಲ್ಲಿ ಕೆಲಸ ಪುನರಾರಂಭವಾಗಿದೆ. 2019-20ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡು ಕಾಮಗಾರಿ ಅನುಷ್ಠಾನವಾಗದೇ ಇರುವ ಜಮೀನಿನ ರೈತರು ಕೃಷಿ ಕಾಮಗಾರಿ ಮಾಡಿಕೊಳ್ಳಲು ಅವಕಾಶವಿದೆ. ಹೊಸದಾಗಿ ಕಾಮಗಾರಿ ಸೇರಿಸಬಯಸುವ ರೈತರು ಗ್ರಾಮ ಪಂಚಾಯತ್‌ ಅಧಿಕಾರಿಗಳನ್ನಾಗಲಿ, ಕೃಷಿ ಇಲಾಖೆಯನ್ನಾಗಲಿ ಸಂಪರ್ಕಿಸಿ ಸೂಕ್ತ ದಾಖಲೆಗಳನ್ನು ನೀಡಿದರೆ ಅರ್ಹ ಫಲಾನುಭವಿಗಳ ಹೆಸರನ್ನು ಪ್ರಸ್ತುತ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರಿಸಬಹುದಾಗಿದೆ. ಜಮೀನಿನಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಒಳಗಟ್ಟಿ, ಎರೆಹುಳು ತೊಟ್ಟಿ ನಿರ್ಮಾಣ ಮಾಡಲು ರೈತರು ಮುಂದೆ ಬರಬೇಕೆಂದು ಕೋರಿಕೊಳ್ಳಲಾಗಿದೆ. ಸದರಿ ಯೋಜನೆ ಮಾರ್ಗಸೂಚಿ, ನಿಯಮಾವಳಿ ಪ್ರಕಾರ ಮಾತ್ರ ಕಾಮಗಾರಿ ನಿರ್ಮಿಸಿಕೊಳ್ಳಲು ವಿನಂತಿಸಲಾಗಿದೆ.

ಸುರಕ್ಷತಾ ಕ್ರಮ: ಸದ್ಯ ಕೋವಿಡ್‌-19  ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಪೂರೈಸಲು ಸೂಚಿಸಲಾಗಿದೆ. ಕಾಮಗಾರಿ ಸಂದರ್ಭದಲ್ಲಿ 4, 5 ಕೂಲಿ ಕಾರ್ಮಿಕರಿಂದ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಪ್ರತ್ಯೇಕವಾಗಿದ್ದುಕೊಂಡು ಕೆಲಸ ಮಾಡಲು ತಿಳಿಸಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಬರುವುದು ಕಡ್ಡಾಯವಾಗಿದೆ. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಯಶಸ್ವಿ ಅನುಷ್ಠಾನಕ್ಕೆ ರೈತರು, ಕೂಲಿ ಕಾರ್ಮಿಕರ ಸಹಕಾರ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಅಥವಾ ಗ್ರಾಮ ಪಂಚಾಯತ್‌ ಸಂಪರ್ಕಿಸಲು ಸೂಚನೆ ನೀಡಲಾಗಿದೆ ಎಂದು ಚನ್ನಪ್ಪ ಅಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next