Advertisement

ಬಿಜೆಪಿಯಲ್ಲಿಯೂ ಅಪಸ್ವರ ;ರಾಣೆ ಮುಂದಿನ ರಾಜಕೀಯ ನಡೆ?

01:13 PM Sep 23, 2017 | Team Udayavani |

ಮುಂಬಯಿ: ನಾರಾಯಣ ರಾಣೆ ಅವರು ನಿರೀಕ್ಷೆ ಯಂತೆಯೇ  ಕೊನೆಗೂ ಕಾಂಗ್ರೆಸ್‌ನ್ನು  ತೊರೆದಿರುವರಾದರೂ ಅವರ ಮುಂದಿನ ರಾಜಕೀಯ ನಡೆ  ಏನು? ಎಂಬುದು ಇನ್ನೂ  ನಿಗೂಢವಾಗಿಯೇ  ಉಳಿದಿದೆ. ರಾಣೆ ಅವರು ಬಿಜೆಪಿ ಸೇರ್ಪಡೆಯಾಗಲಿರುವುದು  ಬಹುತೇಕ ಖಚಿತ ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಬಿಜೆಪಿಯಲ್ಲಿಯೇ  ಅಪಸ್ವರ  ಕೇಳಿಬಂದಿದ್ದರೆ  ಸ್ವತಃ  ರಾಣೆ  ಅವರೂ ಈ  ಬಗ್ಗೆ  ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ  ಎನ್ನಲಾಗಿದೆ. ಬಿಜೆಪಿ ಸೇರ್ಪಡೆ, ಹೊಸ ಪಕ್ಷದ  ರಚನೆಯ ಆಯ್ಕೆಯನ್ನು ಅವರು ಇನ್ನೂ  ಮುಕ್ತವಾಗಿರಿಸಿಕೊಂಡಿದ್ದಾರೆ. 

Advertisement

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷಗಳಿರುವುದರಿಂದ ಅಷ್ಟರೊಳಗಾಗಿ  ನಾರಾಯಣ ರಾಣೆ ಅವರು ರಾಜ್ಯದಲ್ಲಿ ತನ್ನ ಪ್ರಭುತ್ವವನ್ನು ಮರಳಿ ಸ್ಥಾಪಿಸಬೇಕಿದ್ದು ಈ ದಿಸೆಯಲ್ಲಿ  ಈಗಿನಿಂದಲೇ ಕಾರ್ಯೋನ್ಮುಖರಾಗಲು ತೀರ್ಮಾನಿಸಿದ್ದಾರೆ.  

ಶಿವಸೇನೆಯಲ್ಲಿ ಪ್ರಬಲ ನಾಯಕ ರಾಗಿ ಮುಖ್ಯಮಂತ್ರಿ ಗಾದಿವರೆಗೂ ಏರಿದ್ದ  ರಾಣೆ ಪಕ್ಷದ ವರಿಷ್ಠ  ಉದ್ಧವ್‌ ಠಾಕ್ರೆ  ಅವರೊಂದಿಗಿನ  ಭಿನ್ನ ಮತದ  ಕಾರಣದಿಂದಾಗಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದರು. ಇದಾದ  ಬಳಿಕ  ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆ ಯಾಗಿದ್ದರು. ರಾಜ್ಯದ  ಅದರಲ್ಲೂ  ಕೊಂಕಣ ಪ್ರದೇಶದಲ್ಲಿ  ಪ್ರಬಲ ನಾಯಕರಾಗಿದ್ದ  ನಾರಾಯಣ ರಾಣೆ ತಮ್ಮ  ಸ್ವಸಾಮರ್ಥ್ಯದಿಂದಲೇ  ಶಿವಸೇನೆಗೆ  ಸಡ್ಡು  ಹೊಡೆಯುವಲ್ಲಿ  ಸಫ‌ಲರಾಗಿದ್ದರು. ಆದರೆ  2014ರ  ಚುನಾವಣೆಯಲ್ಲಿ  ತಮ್ಮ  ಸ್ವಕ್ಷೇತ್ರವಾದ  ಕುಡಾಲ್‌ನಲ್ಲಿ  ಸೋಲು ಕಂಡಿದ್ದರೆ ಆ ಬಳಿಕ 2015ರಲ್ಲಿ  ಮುಂಬಯಿನಲ್ಲಿಯೂ ಪರಾಭವಗೊಂಡಿದ್ದರು. ಇವೆಲ್ಲದರ ಹೊರತಾಗಿಯೂ  ಕಾಂಗ್ರೆಸ್‌  ಅವರನ್ನು ವಿಧಾನ ಪರಿಷತ್‌ಗೆ  ಆಯ್ಕೆ ಮಾಡಿತ್ತು. ಆದರೆ ರಾಜ್ಯ ಕಾಂಗ್ರೆಸ್‌  ಘಟಕದ ಅಧ್ಯಕ್ಷ  ಹುದ್ದೆಯ  ಪ್ರಬಲ ಆಕಾಂಕ್ಷಿಯಾಗಿದ್ದ  ನಾರಾಯಣ  ರಾಣೆ ಬಹಿರಂಗವಾಗಿ  ಹಾಲಿ ಅಧ್ಯಕ್ಷ  ಅಶೋಕ್‌ ಚವಾಣ್‌  ಮತ್ತು ಇನ್ನಿತರ  ನಾಯಕರ  ವಿರುದ್ಧ  ವಾಗ್ಧಾಳಿ ನಡೆಸುತ್ತಲೇ ಬಂದಿದ್ದರು. ಕಳೆದ  ಐದಾರು ತಿಂಗಳುಗಳಿಂದ ರಾಣೆ  ಅವರು  ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹರಡುತ್ತಲೇ ಬಂದಿದ್ದರೂ ರಾಣೆ  ಮಾತ್ರ  ಈ ವಿಚಾರದಲ್ಲಿ  ಮೌನಕ್ಕೆ  ಶರಣಾಗಿದ್ದರು.  

ಕೆಲವು ತಿಂಗಳ ಹಿಂದೆ ನಾರಾಯಣ ರಾಣೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್‌ ಶಾ ಅವರನ್ನು ಮತ್ತು ಗಣೇಶೋತ್ಸವದ  ಸಂದರ್ಭದಲ್ಲಿ  ಮುಖ್ಯಮಂತ್ರಿ  ದೇವೇಂದ್ರ ಫ‌ಡ್ನವೀಸ್‌ ಅವರು ರಾಣೆ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ  ಬೆಳವಣಿಗೆಗಳು ರಾಣೆ ಅವರ  ಬಿಜೆಪಿ ಸೇರ್ಪಡೆ ವದಂತಿಯನ್ನು ಮತ್ತಷ್ಟು ಪುಷ್ಟೀಕರಿಸಿತ್ತು.  

ರಾಜ್ಯ ಪ್ರವಾಸ
ಕೊನೆಗೂ ರಾಣೆ ಅವರು ಗುರುವಾರದಂದು ಪತ್ರಿಕಾಗೋಷ್ಠಿ  ಕರೆದು  ಕಾಂಗ್ರೆಸ್‌ನ್ನು ತೊರೆಯುವ  ನಿರ್ಧಾರವನ್ನು  ಪ್ರಕಟಿಸಿದರು. ಇದೇ ಸಂದರ್ಭದಲ್ಲಿ  ರಾಜ್ಯಾದ್ಯಂತ ಪ್ರವಾಸ  ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದು ರಾಣೆ ಅವರ ಮುಂದಿನ ನಡೆಯ ಬಗೆಗೆ  ಸಹಜವಾಗಿಯೇ  ಕುತೂಹಲ  ಮೂಡುವಂತೆ ಮಾಡಿದೆ.  

Advertisement

ಕಾಂಗ್ರೆಸ್‌ ವಿರುದ್ಧ  ಬಹಿರಂಗ ಸಮರ
ಪತ್ರಿಕಾಗೋಷ್ಠಿಯಲ್ಲಿ   ಕಾಂಗ್ರೆಸ್‌  ನಾಯಕರ ವಿರುದ್ಧ  ಹರಿಹಾಯ್ದ ಅವರು ನನ್ನ ನೈಜ ಶಕ್ತಿ  ಏನು ಎಂಬುದನ್ನು  ಕಾಂಗ್ರೆಸ್‌ಗೆ ತೋರಿಸುವುದಾಗಿ ಹೇಳುವ ಮೂಲಕ  ಪಕ್ಷದ  ನಾಯಕರ ವಿರುದ್ಧ  ಬಹಿರಂಗ  ಸಮರದ ಅಖಾಡಕ್ಕೆ ಧುಮುಕಿದ್ದಾರೆ. ರಾಜ್ಯದಲ್ಲಿ  ಕಾಂಗ್ರೆಸ್‌ನ ಹೀನಾಯ ಪರಿಸ್ಥಿತಿಗೆ  ಅಶೋಕ್‌ ಚವಾಣ್‌ ಅವರೇ ಕಾರಣ ಎಂದು  ದೂರಿದ  ಅವರು  2019ರ ಚುನಾವಣೆಗೂ  ಮುನ್ನ  ಕಾಂಗ್ರೆಸ್‌  ಮತ್ತು ಶಿವಸೇನೆ ರಾಜ್ಯದಲ್ಲಿ ನಿರ್ನಾಮವಾಗಲಿದೆ ಎಂದು ಭವಿಷ್ಯ  ನುಡಿದರು.  

ಬಿಜೆಪಿಯಲ್ಲಿಯೂ ಅಪಸ್ವರ
ರಾಣೆ ಅವರನ್ನು ಪಕ್ಷಕ್ಕೆ  ಸೇರ್ಪಡೆ ಗೊಳಿಸಿಕೊಳ್ಳುವ  ಮೂಲಕ  ಕಾಂಗ್ರೆಸ್‌ ಮತ್ತು ಶಿವಸೇನೆ  ಪಾಳಯದಿಂದ ಒಂದಷ್ಟು ಶಾಸಕರನ್ನು ಸೆಳೆದು ಸರಕಾರವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ  ಇರಾದೆ  ಬಿಜೆಪಿಯದ್ದಾದರೂ  ಪಕ್ಷದಲ್ಲಿ ಒಂದು  ಬಣ  ರಾಣೆ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದೆ.  ಅಲ್ಲದೆ ನಾರಾಯಣ ರಾಣೆ ಅವರು ಬಿಜೆಪಿ ಮುಂದಿಟ್ಟಿರುವ ಬೇಡಿಕೆಗಳ ಬಗೆಗೂ ಪಕ್ಷದಲ್ಲಿ   ಮಾತ್ರವಲ್ಲದೇ ಸ್ವತಃ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರಿಗೇ ಸಮಾಧಾನ ಇಲ್ಲ  ಎನ್ನಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next