Advertisement

ಕರ್ನಾಟಕಕ್ಕೆ ಕನ್ನಡ ಶಾಲೆಗಳು ಆತ್ಮವಿದ್ದಂತೆ: ಸ್ವಾಮೀಜಿ

04:39 PM Nov 26, 2018 | Team Udayavani |

ನರಗುಂದ: ಕರ್ನಾಟಕ್ಕೆ ಕನ್ನಡ ಶಾಲೆಗಳು ಆತ್ಮವಿದ್ದಂತೆ. ಆದರೆ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಹೀಗಾಗಿ ನಿತ್ಯ ಆತಂಕ ಎದುರಿಸುತ್ತಿರುವ ಹಳ್ಳಿಗಳ ಕನ್ನಡ ಶಾಲೆಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು  ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಭೈರನಹಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಣೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಗಳ ಸಬಲೀಕರಣ ಪ್ರಯತ್ನ ಇಂದು ಗೌನವಾಗುತ್ತಿದೆ ಎಂದರು.

ಆರು ವರ್ಷಗಳ ಹಿಂದೆ ಸರ್ವೋಚ್ಛ ನ್ಯಾಯಾಲಯವು ಪಾಲಕರ ಅಭಿಪ್ರಾಯ ಮೇರೆಗೆ ಮಕ್ಕಳಿಗೆ ಮಾಧ್ಯಮ ಶಿಕ್ಷಣ ಸಿಗಬೇಕು ಎಂದು ತೀರ್ಪು ನೀಡಿದ್ದು ಕನ್ನಡಿಗರ ಪಾಲಿಗೆ ಕೊಡಲಿ ಪೆಟ್ಟಾಗಿ ಪರಿವರ್ತನೆಗೊಂಡಿತು. ಇದು ದಕ್ಷಿಣ ಭಾರತದ ಹಲವಾರು ರಾಜ್ಯಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾಷಾ ಮಾಧ್ಯಮ ಯಾರ ಮೇಲೂ ಹೊರೆ ಕೂಡಿಸಲಾಗದ ಸ್ಥಿತಿಗೆ ಒರಗಿಕೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾಷಾ ಮಾಧ್ಯಮ ನೀತಿಯನ್ನು ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಬೇಕು. ಇದರಿಂದಾಗಿ ಆಯಾ ರಾಜ್ಯದಲ್ಲಿ ಮಾತೃಭಾಷೆ ಮೂಲಕವೇ ಶಿಕ್ಷಣ ಪಡೆಯುವ ಕಾರ್ಯ ಸಾಗುವಂತಾಗುತ್ತದೆ ಎಂದು ಶಾಂತಲಿಂಗ ಸ್ವಾಮಿಗಳು ಆಗ್ರಹಿಸಿದರು.

ಶಿಕ್ಷಣವೆಂಬ ತೇರು: ಶಿಕ್ಷಣವೆಂಬ ತೇರಿಗೆ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಪೋಷಕರು ನಾಲ್ಕು ಚಕ್ರಗಳಿದ್ದಂತೆ. ಎಲ್ಲ ಚಕ್ರಗಳು ಸಮನಾಗಿ ತನ್ನ ಪ್ರಯತ್ನ ನಡೆಸಿದಾಗ ತೇರು ಸುಗಮವಾಗಿ ಸಾಗಲು ಸಾಧ್ಯ. ಶಿಕ್ಷಣ ಇಲಾಖೆ ಪ್ರಗತಿಗೆ ಸಮುದಾಯದ ಸಹಕಾರ ಕೂಡ ದೊಡ್ಡದಾಗಿದೆ ಎಂದರು. ಮುಖ್ಯಶಿಕ್ಷಕಿ ವಿನೋದಾ ತಾರಕೇರಾ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ, ವಿಜಯ ಸದಲಗಿ ಮಾತನಾಡಿದರು. ಶಾಲೆಗೆ ದೇಣಿಗೆ ನೀಡಿದ ರುದ್ರಪ್ಪ ಐನಾಪೂರ, ರಾಘವೇಂದ್ರ ಬಡಿಗೇರ ಅವರನ್ನು ಶಾಲೆ ವತಿಯಿಂದ ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ ನರಸಾಪುರ ಸನ್ಮಾನಿಸಿದರು. 

Advertisement

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್‌ ಮತ್ತು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ ನರಸಾಪುರ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ನಿರ್ಮಲಾ ಗಂಗಣ್ಣವರ, ಮಲ್ಲಿಕಾರ್ಜುನ ಐನಾಪೂರ, ಧರ್ಮರಾಜಪ್ಪ ತೆಗ್ಗಿನಮನಿ, ಶಿವನಪ್ಪ ಮೊರಬದ, ವಿರುಪಾಕ್ಷಪ್ಪ ನರಸಾಪುರ, ಮೈಲಾರ ಹಾದಿಮನಿ, ಭೀಮಪ್ಪ ಐನಾಪೂರ, ಗ್ರಾಪಂ ಸದಸ್ಯ ಈರಪ್ಪ ಐನಾಪೂರ, ಹನಮಂತ ಸಂಗಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next