Advertisement

ಶ್ರೀಕಂಠೇಶ್ವರ ದೊಡ್ಡ ಜಾತ್ರೆಗೆ ನಂಜನಗೂಡು ಸಜ್ಜು

07:15 AM Mar 19, 2019 | |

ನಂಜನಗೂಡು: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪಂಚ ಮಹಾ ರಥೋತ್ಸವಕ್ಕೆ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಒಂದೇ ದಿನ ಐದು ರಥಗಳನ್ನು ಎಳೆಯುವುದರಿಂದ ಇದು ದೊಡ್ಡ ಜಾತ್ರೆ ಎಂದೇ ಖ್ಯಾತಿ ಪಡೆದಿದೆ.

Advertisement

ಮಂಗಳವಾರ ಬೆಳಗ್ಗೆ 6.40 ರಿಂದ 7.00 ರೊಳಗೆ ಸಲ್ಲುವ ಶುಭ  ಮೀನ ಲಗ್ನದಲ್ಲಿ ಪಂಚ ಮಹಾರಥೋತ್ಸವ ನಡೆಯಲಿದ್ದು, ದೇವಸ್ಥಾನದ ಸುತ್ತ ಸೇರಿದಂತೆ ರಥಬೀದಿಯುದ್ದಕ್ಕೂ ನೀರು ಸಿಂಪಡಿಸಿ ಐದೂ ರಥಗಳಿಗೆ ಅಲಂಕಾರಿಕ  ಬಂಟಿಂಗ್ಸ್‌ ಕಟ್ಟಿ  ಬಾಳೆ ಕಂಬ, ಮಾವು ಹಸಿರು ತೋರಣಗಳಿಂದ ಸಿಂಗರಿಸಲಾಗಿದೆ.

ಸ್ವಚ್ಛತೆ: ರಥಗಳು  ಸಂಚರಿಸುವ  ರಥಬೀದಿಯುದ್ದಕ್ಕೂ ಶ್ರೀಶಂಕರ ಮಠ, ಶ್ರೀರಾಘವೇಂದ್ರ ಮಠ, ರಾಕ್ಷಸ ಮಂಟಪ, ಶಿವರಾತ್ರಿ ಜಗದ್ಗುರು ವೃತ್ತ ಹಾಗೂ ಎಂಜಿ ರಸ್ತೆಯ ಅಂಗಡಿ ಬೀದಿಯಲ್ಲಿ ಸ್ವಯಂ ಪ್ರೇರಿತರಾಗಿ ವರ್ತಕರು, ಬೀದಿಬದಿ ವ್ಯಾಪಾರಿಗಳು ರಥ ಬೀದಿಯನ್ನು ಸ್ವಚ್ಛಗೊಳಿಸಿದರು. ಇದೇ ಸಂದರ್ಭದಲ್ಲಿ ನಗರಸಭೆ ಪೌರಕಾರ್ಮಿಕರು ರಸ್ತೆಯಲ್ಲಿ ಮರಳು ಹರಡಿ ಕೆಮ್ಮಣ್ಣಿನಿಂದ ರಥ ಎಳೆಯುವ ಮಾರ್ಗದ ಗಡಿ ಗುರುತಿಸಿದರು.

ಅರವಟ್ಟಿಗೆ: ಜಿಲ್ಲಾಧಿಕಾರಿ ಆದೇಶದಂತೆ ಸಂಘ-ಸಂಸ್ಥೆಗಳು ಪ್ರಸಾದ ಹಂಚಲು, ಕಾನೂನು ಬದ್ಧವಾಗಿ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಂಡು ಅರವಟ್ಟಿಗೆಗೆ ಸಿದ್ಧತೆ ನಡೆಸಿವೆ. ಸ್ನಾನ ಘಟ್ಟದಲ್ಲಿ ಸ್ವಚ್ಛತೆಗಾಗಿ ಬೋರ್ಡ್‌ಗಳನ್ನು ಹಾಕಿ, ತ್ಯಾಜ್ಯರಹಿತ ಸ್ನಾನಘಟ್ಟವನ್ನಾಗಿಸಲು ದೇವಾಲಯದ ಅಧಿಕಾರಿಗಳಾದ ಕುಮಾರಸ್ವಾಮಿ ಹಾಗೂ ಗಂಗಯ್ಯ ಕ್ರಮ ಕೈಗೊಂಡಿದ್ದಾರೆ.

ದೇಗುಲದ ಸುತ್ತ, ಕಪಿಲಾ ನದಿ ಆಸು-ಪಾಸು, ಮುಂತಾದ ಕಡೆ ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳ ತಡೆಗಾಗಿ ಬ್ಲೀಚಿಂಗ್‌ ಪೌಡ‌ರ್‌ ಹಾಕಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದಾರೆ.

Advertisement

2 ಲಕ್ಷ ಭಕ್ತರು ಭಾಗಿ: ಸೋಮವಾರ ಸಂಜೆಯೇ ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಭಕ್ತರು ಆಗಮಿಸಿದ್ದು, ಜನಸಾಗರವೇ ಬೀಡು ಬಿಟ್ಟಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ.

ದೇವಸ್ಥಾನದ ವತಿಯಿಂದ ಶುದ್ಧ ಕುಡಿಯುವ ನೀರು, ಶೌಚಾಲಯ, ತಾತ್ಕಾಲಿಕ ಆಸ್ಪತ್ರೆ, ಅರಕ್ಷಕ ಠಾಣೆ, ಆ್ಯಂಬ್ಯುಲೆನ್ಸ್‌ ವಾಹನ, ಅಗ್ನಿಶಾಮಕ ದಳಗಳನ್ನು ಸಿದ್ಧಪಡಿಸಲಾಗಿದೆ. ದಾಸೋಹ ಭವನದಲ್ಲಿ ಸಂಜೆಯ ಪ್ರಸಾದ  ವಿನಿಯೋಗಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. 

ಲಕ್ಷ ಲಡ್ಡು ತಯಾರು: ಇಲ್ಲಿನ ಭಾರತೀ ತೀರ್ಥ ಶಂಕರ ಮಠದಲ್ಲಿ ಬೆಂಗಳೂರಿನ ಶ್ರೀಕಂಠೇಶ್ವರ ಸ್ವಾಮಿ ಸೇವಾ  ಸಂಸ್ಥೆಯು ಭಕ್ತರಿಗಾಗಿ ಲಡ್ಡು ತಯಾರಿಸುತ್ತಿದೆ. ಸುಮಾರು ಒಂದು ಲಕ್ಷ ಭಕ್ತರಿಗೆ ಲಡ್ಡು ವಿತರಿಸಲಾಗುವುದು.

ಉಪಾಹಾರ ವ್ಯವಸ್ಥೆ: ನಂಜನಗೂಡಿನ ಸೇವಾ ಬಳಗದಿಂದ ಸಂಜೆ ಫ‌ಲಹಾರ ಭೋಜನ  ಏರ್ಪಡಿಸಿದ್ದರೆ, ದೊಡ್ಡಬಳ್ಳಾಪುರದ ಶ್ರೀಕಂಠಪ್ಪನ ಭಕ್ತರು ಸುಮಾರು ಹತ್ತು ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಿದ್ದಾರೆ. ಅರಮನೆ ಮಾಳದಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ರಥೋತ್ಸವದ ಪ್ರಯುಕ್ತ ಪ್ರಸಾದ, ನೀರು, ಮಜ್ಜಿಗೆ, ಪಾನಕ, ಹಣ್ಣು ವಿತರಣೆಗೆ ತಯಾರಿ ನಡೆಸಿವೆ.

ಮಂಗಳವಾರ ಬೆಳಗ್ಗೆ 6.40ರಿಂದ 7 ಗಂಟೆಯ ಒಳಗೆ ರಥೋತ್ಸವಕ್ಕೆ ಜಿಲ್ಲಾಧಿಕಾರಿ ಅಭಿರಾಂ ಶಂಕರ್‌ ಚಾಲನೆ ನೀಡಲಿದ್ದಾರೆ. ರಥಗಳ ಚಕ್ರಕ್ಕೆ ಗೊದುಮ ನೀಡುವ ಯುವಪಡೆಗೆ ದೇವಸ್ಥಾನದ ವತಿಯಿಂದಲೇ ಟೀ-ಶರ್ಟ್‌ ನೀಡಲಾಗುವುದು ದೇಗುಲದ ಇಒ ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next