ಚಿಕ್ಕಬಳ್ಳಾಪುರ : ವಿಶ್ವವಿಖ್ಯಾತ ನಂದಿಬೆಟ್ಟದ ತಪ್ಪಲಿನಲ್ಲಿ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ಯುವಕನನ್ನು ವಾಯುಪಡೆಯ ಹೆಲಿಕ್ಯಾಪ್ಟರ್ ಬಳಸಿ ರಕ್ಷಿಸಿದ ಸಾಹಸಮಯ ಘಟನೆ ಭಾನುವಾರ ನಡೆದಿದೆ.
ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ದೆಹಲಿ ಮೂಲದ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ನಿಶಾಂಕ್ ಕೌಲ್ (19) ನನ್ನ ಸಕಾಲಿಕ ಕಾರ್ಯಾಚರಣೆ ನಡೆಸಿದ ವಾಯುಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ವಾಯುಪಡೆಯ ಹೆಲಿಕ್ಯಾಪ್ಟರ್ ಮೂಲಕ ನಿಶಾಂಕ್ ನನ್ನ ನೇರವಾಗಿ ಏರ್ ಬೇಸ್ ಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
200 ಅಡಿ ಆಳದಲ್ಲಿ ಸಿಲುಕಿದ್ದ ನಿಶಾಂಕ್ ನನ್ನ ರಕ್ಷಿಸಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್ ಪಿ ಜಿ.ಕೆ.ಮಿಥುನ್ ಹೇಳಿದ್ದಾರೆ. ಯುವಕ ಸುರಕ್ಷಿತವಾಗಿದ್ದಾನೆ ಎಂದು ಸ್ಪಷ್ಟಪಡಿಸಿದ್ದು ಯುವಕನನ್ನು ರಕ್ಷಿಸಲು ಸಹಕರಿಸಿದ ಎಲ್ಲಾ ಸಿಬ್ಬಂದಿಯ ಜೊತೆಗೆ ತ್ವರಿತ ವಾ ಗಿ ಸಹಕರಿಸಿದ ವಾಯುಪಡೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಿಶಾಂತ್ ನನ್ನು ಅಗ್ನಿಶಾಮಕ, ಎಸ್ಡಿಆರ್ ಎಫ್, ಎನ್ಡಿಆರ್ ಎಫ್ ಮತ್ತು ಜಿಲ್ಲಾಡಳಿತವು ಸಮನ್ವಯದಿಂದ ಜಂಟಿ ಕಾರ್ಯಚರಣೆ ನಡೆಸಿ ವಾಯುಸೇನೆ ಸಹಕಾರದಿಂದ ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಭಾರೀ ಪ್ರಯತ್ನ ಮಾಡಿದ್ದರು.
ವಾರಾಂತ್ಯಕ್ಕಾಗಿ ನಂದಿಬೆಟ್ಟಕ್ಕೆ ಬಂದ ನಿಶಾಂಕ್ ಮತ್ತು ಸ್ನೇಹಿತರು ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ನಿಶಾಂಕ್ ಕಾಲು ಜಾರಿ ಬಿದ್ದಿದ್ದು, ಕೂಡಲೇ ಸ್ನೇಹಿತರು ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾರೆ. ಕರೆಗೆ ತಕ್ಷಣ ಸ್ಪಂದಿಸಿದ ಸ್ಥಳೀಯ ಪೊಲೀಸರು ಹಾಗೂ ಆಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು ಪ್ಯಾರಶೂಟ್ ಮೂಲಕ ನಿಶಾಂಕ್ ನನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ.
ಕೆಳಗೆ ಬಿದ್ದು, ಕಡಿದಾದ ಬಂಡೆಯೊಂದರಲ್ಲಿ ಸಿಲುಕಿಕೊಂಡಿದ್ದ ನಿಶಾಂಕ್ ಗೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಂದಿಬೆಟ್ಟದಲ್ಲಿ ಸುಮಾರು ವರ್ಷಗಳ ಬಳಿಕ ರೋಪ್ವೇ ನಿರ್ಮಾಣ ಮಾಡಲು ಸಚಿವ ಸಂಪುಟದ ಒಪ್ಪಿಗೆ ದೊರೆತ ಬೆನ್ನಲ್ಲೇ ಈ ಘಟನೆ ನಡೆದಿದೆ.