Advertisement

ನೆಮ್ಮದಿಯ ಜೀವನಕ್ಕೆ ನಾಂದಿ ಬಾಬಾರ ಸಂದೇಶ

09:55 PM Jan 19, 2020 | Lakshmi GovindaRaj |

ಚಿಕ್ಕಬಳ್ಳಾಪುರ: ನೆಮ್ಮದಿಯ ಬಾಳಿಗೆ ನಾಂದಿಯಾಗುವ ಸಂದೇಶ ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರವರದ್ದು. ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ ಎಂದು ರಾಜ್ಯ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಡಾ.ಶಂಕರ ಬಿದರಿ ಹೇಳಿದರು.

Advertisement

ನಗರದ ಹೊರ ವಲಯದ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಪ್ರೇಮಾಮೃತಮ್‌ ಸಭಾಂಗಣದಲ್ಲಿ ಭಾನುವಾರ ಶ್ರೀ ಸತ್ಯಸಾಯಿ ಸಮೂಹ ಶಿಕ್ಷಣ ಸಂಸ್ಥೆಗಳ 45ನೇ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿ ಅವರು ಮಾತನಾಡಿದರು.

ಮಾನವೀಯ ಸಂದೇಶ: ಪ್ರೀತಿ, ಸ್ನೇಹ, ಸೌಹಾರ್ದ ಸತ್ಯಸಾಯಿ ಬಾಬಾರವರ ಸಂದೇಶ. ಸದಾ ಮಾನವ ಕಲ್ಯಾಣದ ಕುರಿತು ಚಿಂತಿಸಿದ ಬಾಬಾರವರು ಜಗತ್ತಿನ ಆಸ್ತಿ. ಅವರ ಪ್ರೇಮ ಕಾರುಣ್ಯದ ಪ್ರತೀಕಗಳೇ ಈ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು. ಜಗತ್ತು ಕ್ಷೊàಭೆಗೆ ಒಳಗಾಗಿದ್ದಾಗ ಬಾಬಾರವರು ಮಾನವೀಯ ಸಂದೇಶ ಸಾರಿ ಶಾಂತಿ ನೆಮ್ಮದಿಗೆ ಬುನಾದಿ ಹಾಕಿದ್ದಾರೆ. ಅದರ ಪ್ರತಿಫ‌ಲ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಕಾರ್ಯಚಟುವಟಿಕೆ, ಶಿಕ್ಷಕರ ನಡೆ ನುಡಿಯಲ್ಲಿ ಎದ್ದು ತೋರುತ್ತಿದೆ ಎಂದರು.

ಸೃಜನಶೀಲತೆ: ನೆಮ್ಮದಿಯ ಬದುಕಿಗೆ ಬೇಕಾದ ಸಮಗ್ರ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಸತ್ಯಸಾಯಿ ಶಿಕ್ಷಣ ವಿಭಾಗದಲ್ಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಮನುಷ್ಯನಿಗೆ ಸಮತೋಲನವಾಗಿರಬೇಕು. ಹಾಗಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬಿ ಸೃಜನಶೀಲತೆಯನ್ನು ಬೆಳೆಸುತ್ತವೆ ಎಂದರು.

ಸರ್ವರಿಗೂ ಸಮಪಾಲು: ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಮತಾವಾದಕ್ಕೆ ಜೀವಂತ ಉದಾಹರಣೆ ಸತ್ಯಸಾಯಿ ಸಂಸ್ಥೆ. ಬಡವರಲ್ಲಿ ಬಡವರನ್ನು ಗುರುತಿಸಿ ಉದ್ಧರಿಸುವ ಮಹತ್ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು. ಇದು ಸೇವೆಯ ಕೈಂಕರ್ಯದಲ್ಲಿ ತೊಡಗಿದವರಿಗೆಲ್ಲ ಆದರ್ಶ, ಎಲ್ಲರೂ ಸಮಾನ ಸುಖೀಗಳಾಗಬೇಕು ಎಂದರು.

Advertisement

ಶಾಸಕ ಡಾ.ಕೆ.ಸುಧಾಕರ್‌ ಮಾತನಾಡಿ, ಸಾಂಸ್ಕೃತಿಕ ಪರಂಪರೆಯಿಂದ ವಿಶ್ವಮಾನವರಾಗಬಹುದು. ಆಸೆಯೇ ದುಃಖಕ್ಕೆ ಮೂಲವಾದರೆ ಎಲ್ಲರನ್ನೂ ಪ್ರೇಮಿಸಿ ಸರ್ವರ ಒಳಿತಿಗಾಗಿ ಸೇವೆ ಸಲ್ಲಿಸುವುದೇ ಲೋಕ ಕಲ್ಯಾಣದ ಸೆಲೆ. ಅಲ್ಲಿಯೇ ಎಲ್ಲರ ಸುಖ, ಶಾಂತಿ, ನೆಮ್ಮದಿ ಇರುತ್ತದೆ ಎಂದರು. ನಾಗರಿಕ ಸಮಾಜ ನೆಮ್ಮದಿ ಕಾಣಬೇಕಾದರೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಶಿಕ್ಷಣ ದೊರೆಯಬೇಕು. ಅಂತಹ ಶಿಕ್ಷಣ ದೊರೆತರೆ ಎಲ್ಲರೂ ವಿಶ್ವ ಮಾನವರಾಗಿ ಬೆಳೆಯುತ್ತಾರೆ ಎಂದರು.

ವೇದಿಕೆಯಲ್ಲಿ ಅಮೆರಿಕಾದ ಭಕ್ತರು, ಯುನಿಸೆಫ್ ಸಂಸ್ಥೆಯ ಪ್ರತಿನಿಧಿಯೂ ಆದ ಮಿಸ್‌ಡಾನಾಗುಡ್‌ಮನ್‌ ಡಾ.ಕೆ.ಪಿ.ಸಾಯಿಲೀಲಾ, ಗುಲ್ಬರ್ಗಾ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್‌ ನರಸಿಂಹ ಮೂರ್ತಿ, ಕರಾವಳಿ ಕರ್ನಾಟಕದ ಶಿಕ್ಷಣ ತಜ್ಞ, ಡಾ.ಕೆ.ಪ್ರಭಾಕರ ಭಟ್‌ ಉಪಸ್ಥಿತರಿದ್ದರು.

ದೇಶದ ಪ್ರತಿ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ: ಸಮಾಂರಂಭದ ಸಾನ್ನಿಧ್ಯ ವಹಿಸಿದ್ದ ಸದ್ಗುರು ಮಧುಸೂದನ ಸಾಯಿಯವರು ದಿವ್ಯ ಸಂದೇಶ ನೀಡುತ್ತಾ, ಸಂಸ್ಥೆ, ಸಹಕಾರ ಮತ್ತು ಸರ್ಕಾರ ಒಂದಾಗಿ ಕೈ ಜೋಡಿಸಿದಾಗ ಮಹತ್ಕಾರ್ಯ ಸಾಧಿತವಾಗುತ್ತದೆ. ನಮ್ಮೊಳಗೆ ಸದಾ ಸಮನ್ವಯವಿದ್ದಾಗ ಯಾವುದೇ ಭಯವಿಲ್ಲ ಎಂದರು. ಮುಂದಿನ ದಿನಗಳಲ್ಲಿ ಸದ್ಭಕ್ತರ ನೆರವಿನಲ್ಲಿ ಭಾರತದ ಪ್ರತಿ ಜಿಲ್ಲೆಯಲ್ಲಿ ಸತ್ಯಸಾಯಿ ಸಂಸ್ಥೆಗಳು ತಲೆಯೆತ್ತಿ ಜಗತ್‌ ಕಲ್ಯಾಣಕ್ಕೆ ನೆರವು ನೀಡುವುದು. ಆ ದಿನ ಬಹುಬೇಗನೆ ಬರುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next