Advertisement

ದರ್ಬೆ ವೃತ್ತಕ್ಕೆ ನಾಮಕರಣ: ಸದ್ಯಕ್ಕೆ ಸ್ಥಳೀಯಾಡಳಿತ ಮೌನ

11:22 PM Feb 12, 2020 | Sriram |

ಪುತ್ತೂರು : ನಗರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ ನಗರದ ಮುಖ್ಯರಸ್ತೆಯ ದರ್ಬೆ ಜಂಕ್ಷನ್‌ನಲ್ಲಿ ಸುಂದರ ವೃತ್ತವನ್ನು ನಿರ್ಮಿಸಲಾಗಿದೆ.

Advertisement

ವೃತ್ತಕ್ಕೆ ನಾಮಕರಣ ಮಾಡುವಂತೆ ಸಲ್ಲಿಕೆಯಾದ ಬೇಡಿಕೆಗೆ ಅನುಗುಣವಾಗಿ ನಗರಸಭೆ ಆಡಳಿತವು ನೀಡಿದ ಆಕ್ಷೇಪಣೆ ಅವಕಾಶದ ಬಳಿಕ ಬಂದ ಹಲವು ಹೆಸರುಗಳ ಬೇಡಿಕೆ ಪಟ್ಟಿಯ ಕಾರಣದಿಂದ ಸ್ಥಳೀಯಾಡಳಿತವನ್ನು ತತ್‌ಕ್ಷಣಕ್ಕೆ ಮೌನಕ್ಕೆ ಶರಣಾಗುವಂತೆ ಮಾಡಿದೆ.

ಪ್ರಧಾನ ಜಂಕ್ಷನ್‌
ಪುತ್ತೂರು ನಗರಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ವಾಹನಗಳ ಪಾಲಿಗೆ ದರ್ಬೆ ವೃತ್ತ ಪ್ರಧಾನ ಜಂಕ್ಷನ್‌. ಮಡಿಕೇರಿ, ಸುಳ್ಯ ಹಾಗೂ ಸುಬ್ರಹ್ಮಣ್ಯ ಭಾಗಗಳಿಂದ ನಗರದೊಳಗೆ ಪ್ರವೇಶ ಪಡೆಯುವವರಿಗೆ ದರ್ಬೆ ಜಂಕ್ಷನ್‌ ಆಗಿದೆ. ಅಂಗಡಿ ಮುಂಗಟ್ಟುಗಳ ಸಹಿತ ಜನನಿಬಿಡ ಪ್ರದೇಶವೂ ಆಗಿದೆ. ಸಂಚಾರ ಸುಗಮದ ದೃಷ್ಟಿಯಿಂದ ಸರ್ಕಲ್‌ ಸ್ಥಳೀಯಾಡಳಿತದ ಮೂಲಕ ನಿರ್ಮಾಣಗೊಂಡಿದೆ.

ಕೋಚಣ್ಣ ರೈ ಹೆಸರು
ಸರ್ಕಲ್‌ ಪೂರ್ಣಗೊಂಡ ಆರಂಭದಲ್ಲಿ ಪುತ್ತೂರಿನ ಅಭಿವೃದ್ಧಿಗೆ ಕೊಡುಗೆ ನೀಡಿದ ಗಾಂಧಿವಾದಿ ಚಿಲ್ಮೆತ್ತಾರು ಕೋಚಣ್ಣ ರೈ ಹೆಸರನ್ನು ಇಡುವಂತೆ ಬೀರಮಲೆ ಅಭಿವೃದ್ಧಿ ಸಮಿತಿಯಿಂದ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಕಲ್ಪಿಸಿ ಪ್ರಕಟನೆ ನೀಡಲಾಗಿತ್ತು.

ಕೋಚಣ್ಣ ರೈ 1980-81ರಲ್ಲಿ ಪುತ್ತೂರಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸಿ ಪುತ್ತೂರಿನ ಅಭಿವೃದ್ಧಿಗೆ ಹಲವು ರೀತಿಯ ಕೊಡುಗೆಗಳನ್ನು ನೀಡಿದ್ದರು. ಪ್ರವಾಸಿ ಸ್ಥಳ ಬಿರುಮಲೆ ಗುಡ್ಡ ಅಭಿವೃದ್ಧಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ 12 ಎಕ್ರೆ ವಿಶಾಲ ಪ್ರದೇಶವನ್ನು ದೇವಾಲಯದ ಸ್ವಾಧೀನಕ್ಕೆ ನೀಡುವಲ್ಲಿ ವಿಶೇಷ ಪ್ರಯತ್ನ ನಡೆಸಿದ್ದರು. ಪುತ್ತೂರಿನ ಅಭಿವೃದ್ಧಿಗೆ ಶ್ರಮಿಸಿದ ಕೋಚಣ್ಣ ರೈ ಅವರ ಹೆಸರನ್ನು ವೃತ್ತಕ್ಕೆ ಇಡುವಂತೆ ಮನವಿ ಮಾಡಲಾಗಿತ್ತು. ಪುತ್ತೂರು ಯುವ ಬಂಟರ ಸಂಘದಿಂದಲೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿ ನಗರಸಭೆಗೆ ಮನವಿ ನೀಡಲಾಗಿತ್ತು.

Advertisement

ಹಲವು ಬೇಡಿಕೆಗಳು
ಅನಂತರದಲ್ಲಿ ದಲಿತ ಸಂಘಟನೆಗಳು ಇಲ್ಲಿಗೆ ಅಂಬೇಡ್ಕರ್‌ ವೃತ್ತ ಎಂದು ನಾಮಕರಣ ಮಾಡುವಂತೆ ಮನವಿ ಮಾಡಿದ್ದವು. ಇನ್ನೊಂದು ಸಂಘಟನೆ ಪುತ್ತೂರಿನ ಪ್ರಥಮ ಶಾಸಕ ಕೆ.ವಿ. ಗೌಡ ಅವರ ಹೆಸರನ್ನು ಇಡುವಂತೆ ಬೇಡಿಕೆ ಇಟ್ಟಿದೆ. ಕೆ.ವಿ. ಗೌಡ ಅವರು 1952ರ ಅವಧಿಯಿಂದ ಮೂರು ತಾಲೂಕುಗಳನ್ನು ಒಳಗೊಂಡ ಪುತ್ತೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದವರು. ಪುತ್ತೂರಿನ ಹೆಸರನ್ನು ರಾಜ್ಯದಲ್ಲಿಯೇ ಗುರುತಿಸುವಂತೆ ಮಾಡಿದ ಕಾರಣಕ್ಕೆ ಅವರ ಮನೆಯ ಪಕ್ಕದಲ್ಲೇ ಇರುವ ವೃತ್ತಕ್ಕೆ ಅವರ ಹೆಸರನ್ನು ಇಡಬೇಕು ಎಂದು ಮನವಿ ಮಾಡಿದ್ದಾರೆ.

ವೃತ್ತಕ್ಕೆ ಹೆಸರಿಡುವ ಸಂಬಂಧ ಹಲವು ಬೇಡಿಕೆಗಳು ಬಂದಿರುವುದರಿಂದ ಸ್ಥಳೀ ಯಾಡಳಿತಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಹಾಲಿ ಸ್ಥಳೀಯಾಡಳಿತ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲದೇ ಇರುವುದರಿಂದ ಆಡಳಿತ ಅಸ್ತಿತ್ವಕ್ಕೆ ಬಂದ ಬಳಿಕ ತೀರ್ಮಾನದ ಮೊರೆ ಹೋಗಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮನವಿ ನೀಡಿದ್ದೇವೆ
ಪುತ್ತೂರಿನ ಪ್ರಥಮ ಶಾಸಕರಾಗಿ ಸೇವೆ ನೀಡಿದ ಕೆ.ವಿ. ಗೌಡ ಅವರ ಹೆಸರನ್ನು ವೃತ್ತಕ್ಕೆ ಇಡುವಂತೆ ಮನವಿ ನೀಡಿದ್ದೇವೆ. ಪುತ್ತೂರಿಗೆ ಕೊಡುಗೆ ನೀಡಿದ ಕೋಚಣ್ಣ ರೈ ಅವರ ಹೆಸರಿಗೂ ನಮ್ಮ ಸಹಮತವಿದೆ. ದರ್ಬೆ ಬೈಪಾಸ್‌ ಸರ್ಕಲ್‌ಗೆ ಕೋಚಣ್ಣ ರೈ ಅವರ ಹೆಸರು, ದರ್ಬೆ ಜಂಕ್ಷನ್‌ ಸರ್ಕಲ್‌ಗೆ ಕೆ.ವಿ. ಗೌಡ ಹೆಸರನ್ನು ಇಡಲು ಸಲಹೆ ನೀಡಿದ್ದೇವೆ.
-ಚಿದಾನಂದ ಬೈಲಾಡಿ, ನ್ಯಾಯವಾದಿ

ಸಭೆಯಲ್ಲಿ ತೀರ್ಮಾನ
ದರ್ಬೆ ವೃತ್ತಕ್ಕೆ ನಾಮಕರಣ ಮಾಡುವ ಕುರಿತಂತೆ ಹಲವು ಹೆಸರುಗಳ ಬೇಡಿಕೆ ಬಂದಿದೆ. ಈ ಕಾರಣದಿಂದ ಮುಂದಿನ ಕೌನ್ಸಿಲ್‌ ಮೀಟಿಂಗ್‌ನಲ್ಲಿ ಈ ವಿಚಾರವನ್ನಿಟ್ಟು ತೀರ್ಮಾನಕ್ಕೆ ಬರಲು ನಿರ್ಧರಿಸಲಾಗಿದೆ.
-ರೂಪಾ ಟಿ. ಶೆಟ್ಟಿ , ಪೌರಾಯುಕ್ತೆ, ನಗರಸಭೆ, ಪುತ್ತೂರು

-ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next