Advertisement

ನಳ ದಮಯಂತಿಯರು! ನಲ್ಲಿಗಾಗಿ ಆಡುವ ಜಗಳಕ್ಕೊಂದು ಭಾವಪೂರ್ಣ ಶ್ರದ್ಧಾಂಜಲಿ

03:45 AM Feb 01, 2017 | Harsha Rao |

ಬೀದಿ ನಲ್ಲಿಯೂ ಇಲ್ಲ ಜಗಳವೂ ಇಲ್ಲ 
ಎರಡು ದಶಕದ ಹಿಂದಿನ ಸಂದರ್ಭ.  ಶಿಕಾರಿಪುರದಲ್ಲಿ ಬೇಸಿಗೆ ಬಂತೆದರೆ ಹನಿ ನೀರಿಗೂ ಪರದಾಟ ಆರಂಭವಾಗುತ್ತಿತ್ತು. ಎರಡು ಕೊಡ ನೀರಿಗಾಗಿ ಕಿಲೋಮೀಟರ್‌ ಗಟ್ಟಲೆ ದೂರವಿದ್ದ ಬಸ್‌ ಸ್ಟಾಂಡ್‌, ಬಿಡಿಒ ಆಫೀಸ್‌ ಬಾವಿ, ಕುರುಬ ಗುಂಡಿ  ಮೊದಲಾದ ಕಡೆ ನಾನು ಸಂಸಾರ ಸಮೇತ ನಿತ್ಯ ಗಂಗಾಯಾತ್ರೆ ತೆರಳುವುದು ಅನಿವಾರ್ಯವಾಗುತ್ತಿತ್ತು.

Advertisement

ಹೊಂಡದ ಕೇರಿಯಲ್ಲಿ ನಮ್ಮ ಮನೆಯ ಬಳಿಯಿದ್ದ ಬೀದಿ ನಲ್ಲಿ  ನೀರಿನ ವಿಚಾರದಲ್ಲಿ ರಣರಂಗವಾಗಿ ಪರಿಣಮಿಸುತ್ತಿತ್ತು.
ನೀರುಗಂಟಿ ನೀರು ಯಾವಾಗ ಬಿಡುತ್ತಾನೆಂಬುದೇ ಗೊತ್ತಾಗುತ್ತಿರಲಿಲ್ಲ. ಕೆಲವರು ನೀರಿಗಾಗಿ ಕಾದು ಕೊಡ ಬಕೆಟ್‌, ತಂಬಿಗೆ  ಮೊದಲಾದ ವಸ್ತುಗಳನ್ನು ಕಾಯ್ದಿರಿಸುತ್ತಿದ್ದರು. ಈ ಸಂದರ್ಭದಲ್ಲಿ ಯಾರಾದರೂ ಕೊಡ, ಬಕೆಟ್‌ಗಳನ್ನು ಹೊತ್ತೂಯ್ದರೆ ಎಂಬ ಭೀತಿಯಲ್ಲಿ ಬಾಟಲಿಯ ಮುಚ್ಚಳಗಳನ್ನು ಸರದಂತೆ ಪೋಣಿಸಿ ನಲ್ಲಿಗೆ ಹಾಕುತ್ತಿದ್ದರು. ಹರಲು ಮುರಕು ಕೊಡ, ಬಕೆಟ್‌ಗಳು ಸರದಿ ಕಾಯ್ದಿರಿಸಲು ಬಳಕೆಯಾಗುತ್ತಿದ್ದವು. ಕೆಲ ಪಡ್ಡೆಗಳು ಇಲ್ಲಿಂದ ಕದ್ದ ವಸ್ತುಗಳನ್ನು  ಹಳೇ ಕಬ್ಬಿಣ, ತಗಡು … ಪ್ಲಾಸ್ಟಿಕ್‌ನವರಿಗೆ ಹಾಡಿ ಕಡಲೇ ಮಿಠಾಯಿ ತಿಂದು ಬಾಯಿ ಚಪ್ಪರಿಸುತ್ತಿದ್ದರೆ ಅತ್ತ ಅವುಗಳನ್ನು ಕಳೆದುಕೊಂಡು, ಸದರಿ ಸಾಲಿನಿಂದಲೂ ವಂಚಿತರಾದವರು ಸೊಂಟದ ಕೆಳಗಿನ ಭಾಷೆಯಲ್ಲಿ ಸಾರ್ವಜನಿಕವಾಗಿ ಬೈಯ್ಯುವುದು ಸರ್ವೇ ಸಾಮಾನ್ಯವಾಗಿತ್ತು. 

ಆಕಸ್ಮಿಕವಾಗಿ ಯಾರಾದರೂ ಸರದಿ ತಪ್ಪಿದರಂತೂ ಕಿವಿ ಮುಚ್ಚಿಕೊಳ್ಳುವಂತ ಬಯುYಳ ಬೋನಸ್‌.  ನೀರು ಹಿಡಿಯಲು ಬಂದು ಗಂಟೆಗಟ್ಟಲೇ ಕಾದು ಸುಸ್ತಾದ ನೀಲಮ್ಮ ನೀವೆ‌ಲ್ಲಾ ನೀರು ಹಿಡೀತಾ ಇರಿ, ನಾನು ಮೆಟ್ಟು ಹೊಲೀಯೋಕೆ ಹೋಗ್ತೀನೆ ಎಂದು ದಬಾಯಿಸುತ್ತಿದ್ದರೆ ಆಕೆಯನ್ನು ರೇಗಿಸಲು ಇನ್ನು ಕೆಲವರು ನಮ್ಮ ಚಪ್ಲಿ ಹರಿದು ಹೋಗಿದೆಯಮ್ಮಾ …  ಸ್ವಲ್ಪ ಹೊಲಿದು ಕೊಡ್ತೀಯಾ ಎಂದು ಕಿಚಾಯಿಸಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದರು.

ಒಬ್ಬರಿಗೆ ಎರಡೇ ಕೊಡ ನೀರು. ಹಾಗೆ ಸರದಿ ಕಟ್ಟಿದವರು 25ಕ್ಕೂ ಹೆಚ್ಚು ಮನೆಯವರು. ಎರಡನೇ ಪಾಳಿ ವರೆಗೆ  ನೀರು ಬರುತ್ತಿದ್ದರೆ ಇನ್ನಷ್ಟು ನೀರು ಹಿಡಿಯಬೇಕು ಎಂದು ಕೆಲವರು ನಿಯಮ ಮಾಡಿದಾಗ ಮೇಸ್ಟ್ರ ಹೆಂಡತಿ ಹಳದಮ್ಮ ಇಲ್ಲದ್ದೇ ಕಾನೂನು ಮಾಡ್ತೀರಾ ಮುಂಡೇಮಕ್ಳ …  ಎಂದು ವಾಚಾಮಗೋಚರ ಬಯ್ಯುತ್ತಿದ್ದರೆ ಕೆಲವರಿಗೆ ಮನರಂಜನೆ ಒದಗಿಸುತ್ತಿತ್ತು.

ಕೆಲವೊಮ್ಮೆ ನೀರಿಗಾಗಿ ತಳ್ಳಾಟ ನೂಕಾಟಗಳು ಆರಂಭವಾಗಿ ಕಿರಗೂರಿನ ಗಯ್ನಾಳಿಗಳಂತೆ ಹೆಂಗಸರ ಅಬ್ಬರ ಶುರುವಾಗಿಬಿಡುತ್ತಿತ್ತು. ಬಹುತೇಕ ಗಂಡಸರು ಶ್ರಮಿಕ ವರ್ಗದವರಾಗಿದ್ದರಿಂದ ಅವರ್ಯಾರೂ ನಲ್ಲಿ ಕಟ್ಟೆಗೆ ಹೆಚ್ಚು ಹಣಕುತ್ತಿರಲಿಲ್ಲ. 

Advertisement

ನಿನ್ನ ದೊಡ್ಡ ನಿಂದ ನೂಕಿಬಿಟ್ಟು ಕೊಡಪಾನ ತುಂಬಿಕೊಡ್ಯಲ್ಲೇ … ಎಂದು ಶಾಂತಕ್ಕ ಕ್ರಾಂತಿಯಾರಿಯಂತೆ ಕಿರುಚಾಡಿದರೆ ಅದಕ್ಕೆ ಪ್ರತಿಯಾಗಿ ಹಳದಮ್ಮ ನಿನ್ನದೇನೂ ಸಣ್ಣದೇ ಎಂದು ಟಾಂಗ್‌ ನೀಡುತ್ತಿದ್ದಳು. 
ಇನ್ನೂ ಕೆಲ ಹೆಂಗಸರಂತೂ ನೀರು ಸಿಗದಿದ್ದರೆ ತಮ್ಮದೇ ಭಾಷೆಯಲ್ಲಿ ಅಶ್ಲೀಲವಾಗಿ ನಿಂದಿಸಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನಮ್ಮ ಮಕ್ಕಳಿಗೆ ಹಿಂದಿ, ಉರ್ದು ಭಾಷೆ ಸಲ್ಪಮಟ್ಟಿಗಾದರೂ ಬಂದಿದೆ ಎಂದರೆ ಅದಕ್ಕೆ ಈ ನಲ್ಲಿಕಟ್ಟೆ ಬೈಗುಳಗಳ ಅಬ್ಬರವೇ ಮೂಲ. ಕೆಲವರಂತೂ ಸಾರ್ವಜನಿಕ ನಲ್ಲಿ ಕಟ್ಟೆಯ ಮುಂದೆ ಸರದಿ ಕಾಯಿರಿ ಎಂದು ಫ‌ಲಕವನ್ನೂ ಬರೆದಿರುತ್ತಿದ್ದರು.

ಇಷ್ಟೆಲ್ಲಾ ಜಗಳಗಳ ನಡುವೆ ಯಾವುದಾದರೂ ಅವಿವಾಹಿತ ಪುರುಷರು, ಪತ್ನಿಯನ್ನು ಊರಿಗೆ ಕಳಿಸಿದ್ದ ಪತಿರಾಯರು  ನೀರು ಹಿಡಿಯಲು ಬಂದರೆ …  ಪಾಪ ಅವ್ರ ಮನೆಯವರು ಇಲ್ಲ, ಒಂದೆರಡು ಕೊಡ ನೀರು ಬಿಟ್ಟು ಕಳುಹಿಸಿ …  ಎಂಬ ಭೂತ ದಯೆಯೂ ವ್ಯಕ್ತವಾಗುತ್ತಿತ್ತು. 

ಮನೆಯ ಕಷ್ಟ, ಕಾರ್ಪಣ್ಯ, ಯಾರು ಯಾರೊಂದಿಗೆ ಓಡಿ ಹೋದರು, ಯಾರೊಂದಿಗೆ ಯಾರಿಗೆ ಅಕ್ರಮ ಸಂಬಂಧವಿದೆ, ಆಕೆ ಯಾರಿಂದ ಕದ್ದು ಬಸಿರಾದಳು, ಸಂತಾನ ಪಡೆದಳು ಎಂಬಿತಾöದಿ ಗಾಸಿಪ್‌ಗ್ಳಿಗೂ ಬೀದಿ ನಲ್ಲಿ ವೇದಿಕೆಯಾಗಿತ್ತು. ಕೆಲವರಂತೂ ಬಾಯಿ ಚಪಲಕ್ಕಾಗಿ ಯಾರೊಂದಿಗೆ ಯಾರಿಗೋ ಸಂಬಂಧ ಕಲ್ಪಿಸಿ ಬಿಡುತ್ತಿದ್ದರು. ಅನ್ಯಧರ್ಮೀಯರು ಪ್ರಬಲ ಕೋಮಿಗೆ ಸರಿಸಮನಾಗಿದ್ದ ನಮ್ಮ ಬಡಾವಣೆಯಲ್ಲಿ ನೀರು ಹಿಡಿಯುವಾಗ ಜಗಳವಾಡುತ್ತಿದ್ದವರು ಆನಂತರ ಕಷ್ಟ, ಕಾರ್ಪಣ್ಯಗಳು ಬಂದಾಗ ಒಬ್ಬರಿಒಗೊಬ್ಬರು ಸ್ಪಂದಿಸುತ್ತಿದ್ದರು. 

ಶುಭಕಾರ್ಯಗಳು ನಡೆದರೆ ಚಪ್ಪರ ಹಾಕುವುದರಿಂದ ಹಿಡಿದು ಏನೇ ಕೆಲಸವಿದ್ದರೂ ಮಾಡುತ್ತಿದ್ದರು. ಯಾರ ಮನೆಯಲ್ಲಾದರೂ ತಮ್ಮ ಮನೆಯವರೇ ಮೃತಪಟ್ಟಷ್ಟು ದುಃಖ ಪಡುತ್ತಿದ್ದರು. ಜಗಳ, ಬೈಗುಳ ಕೇವಲ ನಲ್ಲಿಕಟ್ಟೆಗಷ್ಟೇ ಸೀಮಿತ. ನೀರಿನ ಹೆಸರಿನಲ್ಲಿ ಕಿಚ್ಚು ಹತ್ತಿದರೂ ಅದು ಆ ಆವರಣದ ಹೊರಗೆ ಬರುತ್ತಿರಲಿಲ್ಲ. ಜಾತಿ-ಮತ-ಧರ್ಮ ಮೀರಿದ ಮಾನವೀಯ ಸಂಬಂಧಕ್ಕೆ ಮತ್ತೆ ಎಲ್ಲರ ಹೃದಯ ಮಿಡಿಯುತ್ತಿತ್ತು. ನಾಕು ಅಕ್ಷರ ಕಲಿತು ನಾಳೆ ನಮ್ಮ ಮಕ್ಕಳು ಚನ್ನಾಗಿರಲೆಂಬ ಆಶಯ ಬೂಬಮ್ಮಗಳ (ಅಲ್ಪಸಂಖ್ಯಾತ ಹೆಂಗಸರಿಗೆ ಅನ್ವರ್ಥ ನಾಮ)  ಬಾಯಿಂದ ಬರುತ್ತಿತ್ತು. 
ಈಗ ಕಾಲ ಬದಲಾಗಿದೆ. ಹಾಳು ಕೊಂಪೆಯಂತಿದ್ದ ಶಿಕಾರಿಪುರದಲ್ಲಿ ಮನೆಗೊಂದು ನಲ್ಲಿ ಬಂದಿದೆ, ಮನೆ ಒಳಗೇ ನೀರು ಬಂದಿರುವುದರಿಂದ ಒಂದಷ್ಟು ಜಗಳ, ಪ್ರೀತಿ  ಮನರಂಜನೆಯ ಸಂಗಮವಾಗಿದ್ದ ಬೀದಿ ನಲ್ಲಿಯನ್ನು ಕೇಳುವವರೇ ಇಲ್ಲದಂತಾಗಿದೆ. ಸ್ವಂತ ನಲ್ಲಿ ಬಂದಿರುವುದರಿಂದ ಜನರು ಬೀದಿಯ ಜನರೊಂದಿಗೆ ಬೆರೆಯುವುದನ್ನೇ ಮರೆತಿದ್ದಾರೆ. ಪ್ಯಾಕೇಟ್‌ ಹಾಲು ಸಂಸ್ಕೃತಿ ಬೆಳೆದಾಗಿನಿಂದ ಗೌಳಿ, ರುದ್ರ, ಸೋಮರೊಂದಿಗೆ ಸುಖ ದುಃಖ ಹಂಚಿಕೊಳ್ಳುವ ಪ್ರಕ್ರಿಯೆ ಕಾಣದಾಗಿದೆ. ಆಧುನಿಕ ಸೌಲಭ್ಯಗಳು, ನಮ್ಮ ನಮ್ಮ ನಡುವಿನ ಮುಕ್ತ ಮಾತು, ಕೋಪ, ತಾಪ, ಅಭಿಮಾನಗಳ ಹೊಮ್ಮುವಿಕೆಗೆ ಬ್ರೇಕ್‌ ಹಾಕಿದೆಯಲ್ಲಾ ಎಂದು ಒಮ್ಮೊಮ್ಮೆ ಪಿಚ್ಚೆನಿಸುತ್ತದೆ. ದಶಕನ ನಂತರ ನಾನು ಇದೇ ಹೊಂಡದಕೇರಿಗೆ ಹೋದಾಗ.. ನಮ್ಮ ಟೀಚರಮ್ಮಾ ಬಂದಿದ್ದಾರೆ ಎಂದು ಫ‌ಹಿಮಾ, ರೋಖಾಬೂಬಿ, ಸರೋಜಮ್ಮ, ಕಮಾಲ್‌ಸಾಬ, ಶಾಂತಕ್ಕ ಅಭಿಮಾನ ಪಟ್ಟಾಗ ನಾವು ಇಷ್ಟೆಲ್ಲಾ ಜಗಳವಾಡಿದ್ದೆವಾ ಎಂದು ಬೆರಗಾಗುತ್ತದೆ. 
ಅಂದಿನ ಜಲ ಕದನಗಳೆಲ್ಲವೂ ನಿಮಿತ್ತ ಮಾತ್ರ, ಕುಲ ಯಾವುದಾದರೇನು .. ಆ ಜನಗಳ ಹೃದಯ ನಿರ್ಮಲ. ಈಗ ಆ ರೀತಿ ಜಗಳ ಆಡುತ್ತೇವೆಂದರೂ ಸಂದರ್ಭ ಬಾರದು… ಸಂಕಷ್ಟದಲ್ಲೂ ಸುಖ ಕಾಣಬೇಕು, ಜಗಳವಾಡಿದರೂ ಜಲ್ದಿ ಜಲ್ದಿ ಅದನ್ನು ಮರೆಯಬೇಕು… ಏನಂತೀರಿ ?

– ಬಿ.ಎಸ್‌.ಸುಧಾರತ್ನಮ್ಮ

Advertisement

Udayavani is now on Telegram. Click here to join our channel and stay updated with the latest news.

Next