Advertisement

Water: ನೀರು ಭುವನದ ಭಾಗ್ಯ

03:48 PM Apr 18, 2024 | Team Udayavani |

ನೀರು ಭಾವನಾತ್ಮಕವಾಗಿ ನಮ್ಮೊಂದಿಗೆ ಬೆರೆತಿರುವ ಸಂಯುಕ್ತ-ಸಾರ್ವತ್ರಿಕ ದ್ರಾವಕ. ನೀರು ನಮ್ಮನ್ನು ಬೆರಗು, ನಲಿವು ಮತ್ತು ಬೆದರಿಸುವ ಪರಿ ವಿಶಿಷ್ಟವಾದದ್ದೇ. ಈ ಮೂರೂ ಕ್ರಿಯೆಗಳಲ್ಲೂ ನೀರು ಬರಿಯ ರಾಸಾಯನಿಕ ಸಂಯುಕ್ತವಾಗುಳಿಯದೇ ಜೀವದ್ರವವಾಗಿ ಜೈವಿಕತೆ-ಭೌತಿಕತೆಯನ್ನು ಪೋಷಿಸಿದೆ.

Advertisement

ಮುಗಿಯದೇ ಇರುವ ಅಪರಿಮಿತ ಸಂಪನ್ಮೂಲಗಳ ಪಟ್ಟಿಯಲ್ಲಿ ಸೇರಿದ್ದ ಜಲಸಂಪನ್ಮೂಲಗಳೆಲ್ಲಾ ಇಂದು ಸುಸ್ಥಿರತೆಗೆ ಒಳಪಡುವ ಪದಾರ್ಥಗಳಾಗಿ ಭಾವಬಂಧನಕ್ಕೆ ಒಳಗಾಗಿವೆ. ದಿನಗಳ ಎಣೆಯಿಲ್ಲದೆಯೇ ನೀರನ್ನು ಸಂಭ್ರಮಿಸಿದ, ಶೋಕಿಸಿದ, ಚಕಿತಗೊಳಿಸಿದ ನಿರೀಕ್ಷಿತ-ಅನಿರೀಕ್ಷಿತ ವಿದ್ಯಮಾನಗಳೆಲ್ಲವನ್ನೂ ಮಾರ್ಚ್‌ 22ಕ್ಕೆ ಮೊಟಕುಗೊಳಿಸಿ ಜಲದಿನವನ್ನು ಆಚರಿಸುವ ಅವಸರದ ಅಧ್ವಾನ ನಮ್ಮದು!!

ಖ್ಯಾತ ಭೂಗೋಳತಜ್ಞ ಡಾ| ಬಿ.ಪಿ. ರಾಧಾಕೃಷ್ಣರು 1967ರಲ್ಲಿ ಹೇಳಿದ್ದರಂತೆ-ಕೊಳವೆ ಬಾವಿಗಳು ಬರಸ್ಥಿತಿಗೆ ವಿಮೆಯಂತೆ ಉಪಯೋಗಿಸಬೇಕು, ನಿರ್ಲಕ್ಷ್ಯದ ದುಡುಕಿನಿಂದಲ್ಲ. 1967ರಲ್ಲಿ ರಾಜ್ಯಾದ್ಯಂತ ಅರವತ್ತು ಸಾವಿರ ಕೊಳವೆಬಾವಿಗಳಿದ್ದರೆ, ಸದ್ಯ 50 ಲಕ್ಷಕ್ಕೂ ಮಿಕ್ಕಿ ಕೊಳವೆಬಾವಿಗಳು ಚಾಲ್ತಿಯಲ್ಲಿದೆ. ಅವುಗಳಲ್ಲಿ ಶೇ.60 ಕೊಳವೆಬಾವಿಗಳು ಕುಡಿಯಲು ಯೋಗ್ಯವಾದ ನೀರನ್ನು ಉಣಿಸುತ್ತಿಲ್ಲ. ಈ ಕೊಳವೆಬಾವಿಗಳು ನೀರಸುಳಿವಿಲ್ಲದ ಜಾಗಗಳಿಗೆ ಪರಿಹಾರವೆಂದು ಭಾವಿಸಿದರೆ, ಇವುಗಳು ಮನುಷ್ಯನ ನಿತ್ಯದ ನೀರ ಅಭ್ಯಾಸಗಳನ್ನೇ ಬದಲಿಸಿವೆ.

ಇದಕ್ಕೆ ದೃಷ್ಟಾಂತ ದಶಕಗಳಿಂದಲೂ ನೀರಾವರಿಗೆ ನೆಚ್ಚಿಕೊಂಡಿದ್ದ ನೀರ ಕಾಲುವೆಗಳನ್ನು ಬಿಟ್ಟು ಕೊಳವೆಬಾವಿಗಳನ್ನು ನೀರಾವರಿಗೆ ಬಳಸಿಕೊಂಡದ್ದು. ಅರುವತ್ತದ ದಶಕದಲ್ಲಿ ಶೇ.1 ರಷ್ಟಿದ್ದ ಅಂತರ್ಜಲಯುತ ನೀರಾವರಿ 2008 ಕ್ಕೆ 60% ತಲುಪಿದೆ.

ಮಿತಿಮೀರಿದ ಭೂಜಲದ ಉಪಯೋಗದಿಂದ 60 % ಕೊಳವೆಬಾವಿಗಳು ಕೇವಲ ಒಂದು ವರುಷದಲ್ಲೇ ನೀರುಣಿಸುವ ಸಾಮರ್ಥ್ಯವನ್ನು ಕಳೆದುಕೊಂಡದ್ದು ಮತ್ತೂ ಶೋಚನೀಯವೇ. ಇನ್ನು ಭಾರತದ ಬಹುತೇಕ ಹಳ್ಳಿಗಳ-ಪುರಪ್ರದೇಶಗಳ ಕುಡಿಯುವ ನೀರಿನ ಪೂರೈಕೆ ಅಂತರ್ಜಲದಿಂದಲೇ. ಜನಕ್ಕೊಂದರಂತೆ ಕೊಳವೆಬಾವಿಗಳನ್ನು ಕೊರೆದು ತಂತ್ರಜ್ಞಾನವನ್ನು ಹೆಚ್ಚಿಸಿಕೊಂಡಿರುವ ನಾವು ಅಂತರ್ಜಲ ಮರುಭರ್ತಿಯಬಗ್ಗೆ ಆಲೋಚಿಸಿದ್ದೇವೆಯೇ? ನದಿಗಳಿಗೆ ಮತ್ತು ಅಂತರ್ಜಲದ ನೀರಿನಾಗರವೇನು? ಮಳೆಯಲ್ಲವೇ ನೀರ ಪೊರೆದವಳು!

Advertisement

ಭೂಮಿಯಲ್ಲಿ ಲಭ್ಯವಿರುವ ನೀರಿನ ಆಕರಗಳು ಹಲವಾರು, ಆದರೆ ಮೂಲ ಮಳೆಯೇ. ಭಾರತವನ್ನೂ ಒಳಗೊಂಡಂತೆ ಉಷ್ಣವಲಯದ ದೇಶಗಳಲ್ಲಿ ಮಳೆಯೇ ಅನೇಕ ಬೇಡಿಕೆಗಳಿಗೆ ಜೀವಾಳ. ದೇಶದಲ್ಲಿ ಬೀಳುವ ಮಳೆಯ 80% ನೈಋತ್ಯ ಮಾನ್ಸೂನಿನಿಂದಾಗುವುದು. ದತ್ತಗಳಾಧಾರದಲ್ಲಿ ನಡೆಸಿದ ಅನೇಕ ಅಧ್ಯಯನಗಳು ಕಳೆದ ಶತಮಾನದ ಮಳೆಯ ಪ್ರವೃತ್ತಿಯ ಬದಲಾವಣೆಗಳನ್ನು ತಿಳಿಸಿವೆ. ದೇಶದ ಭೌಗೋಳಿಕ ಅಳತೆಯಲ್ಲಿ ನಡೆಸಿದ ಅಧ್ಯಯನವೊಂದು 135 ವರ್ಷಗಳ ಮಳೆಯ ಏರಿಳಿತಗಳನ್ನು ಹೇಳುತ್ತದೆ.

ಇದರಂತೆ,ಮಾನ್ಸೂನ್‌ ತಿಂಗಳ ಆಗಸ್ಟ್ ಮಳೆಯು ಏರಿಕೆಯನ್ನು ಕಂಡಿದ್ದರೆ, ಜೂನ್‌, ಜುಲಾಯಿಗಳು ಮಳೆಯ ಇಳಿಕೆಯನ್ನು ಕಂಡಿವೆ. ಸುದೀರ್ಘ‌ಕಾಲಾವಧಿಯಲ್ಲಿ ಮುಂಗಾರಿನ ಮಳೆಯ ಪ್ರಮಾಣ ತುಸು ಕುಸಿದು, ತದನಂತರದ ತಿಂಗಳುಗಳಲ್ಲಿ ಏರಿಕೆಯನ್ನು ಕಂಡಿವೆ. ಬಸಿ ಕ್ಷೇತ್ರಗಳ ಆಧಾರದಲ್ಲಿ ಮಾಡಿದ ಸಂಶೋಧನೆಗಳು ಕರಾವಳಿಯ ಪಶ್ಚಿಮವಾಹಿನೀ ನದಿಗಳ ಕ್ಷೇತ್ರಗಳಲ್ಲಿ ಮಳೆಯ ಇಳಿಕೆಯನ್ನು ವ್ಯಕ್ತಪಡಿಸಿವೆ. ಒಟ್ಟಿನಲ್ಲಿ, ಹವಾಮಾನವನ್ನು ನಿರ್ಧರಿಸುವ ಬಹುಮುಖ್ಯ ಅಂಶ ನೀರು. ನೀರಿನ ಮೂಲ ಮಳೆಯೂ ವಾಯುಗುಣ ಬದಲಾವಣೆಯ ತೆಕ್ಕೆಗೆ ಸಿಲುಕಿದೆ.

ನೀರು ಜೀವ ಚೈತನ್ಯದ ದ್ರವ. ನೀರನ್ನು ಉಳಿಸಿ ಎನ್ನುವುದು ನೀರನ್ನು ಜತನದಿಂದ, ವ್ಯವಸ್ಥಿತವಾಗಿ ಬಳಸಿ ಎಂದಂತೆ. ದೇಶದಲ್ಲಿ ಸುಮಾರು 167 ದಶಲಕ್ಷ ಜನರ ಬೇಡಿಕೆಗಳಿಗೆ ಶುದ್ಧ ನೀರೇ ಸಿಗುತ್ತಿಲ್ಲ.

-ವಿಶ್ವನಾಥ ಭಟ್‌

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next