Advertisement

ಮಕ್ಕಳಿಗೆ ಶಿಕ್ಷಣ ನೀಡಿ ಕೃಷಿಯಲ್ಲಿ ತೊಡಗಿಸಲು ನಾಗರಾಳ ಸಲಹೆ

03:25 PM Aug 08, 2017 | |

ಆಲಮಟ್ಟಿ: ಯುವಕರ ನಡೆ ಕೃಷಿ ಕಡೆಗೆ ಎನ್ನುವ ಶಿಕ್ಷಣ ಅತಿ ಅವಶ್ಯವಾಗಿದೆ ಎಂದು ಕೃಷಿ ಪಂಡಿತ ಡಾ| ಮಲ್ಲಣ್ಣ ನಾಗರಾಳ ಹೇಳಿದರು.

Advertisement

ಸೋಮವಾರ ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ಸ್ಥಳೀಯ ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ನಡೆದ ಮುತ್ತೆದೆಯರಿಗೆ ಉಡಿ ತುಂಬುವ, ಸುಮಂಗಲೆಯರಿಂದ ಕುಂಭಮೇಳ ಹಾಗೂ ಕೃಷ್ಣೆಯ ಜಲನಿಧಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ಮಣ್ಣು ಹಾಗೂ ನೀರು ಬಳಕೆಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಈಗಿನ ಶಿಕ್ಷಣ ಎಂದರೆ ಪ್ರಮಾಣ ಪತ್ರಗಳನ್ನು ಪಡೆಯುವುದಾಗಿದೆ. ಆದರೆ ಕೃಷಿ ಎಂದರೆ ಜೀವನ ಕೊಡುವ ಉದ್ಯೋಗವಾಗಿದೆ. ಆದ್ದರಿಂದ ರೈತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉಳಿದ ಉದ್ಯೋಗಗಳಿಗೆ ಹಚ್ಚದೇ ಕೃಷಿಯೆಡೆಗೆ ಸೆಳೆಯುವುದರಿಂದ ಉತ್ತಮ ಆರೋಗ್ಯ
ಕಾಪಾಡಿಕೊಳ್ಳುವುದರೊಂದಿಗೆ ಜಗತ್ತಿಗೆ ಅನ್ನ ನೀಡಿದ ಕೀರ್ತಿ ಅವರದಾಗುತ್ತದೆ ಎಂದರು. ರೈತರು ಮುಖ್ಯವಾಗಿ ತಮ್ಮ ಜಮೀನುಗಳನ್ನು ಸಮತಟ್ಟು ಮಾಡಿಕೊಂಡು ಅದರಲ್ಲಿರುವ ಕರಕಿ, ಕನೈದಿಲೆ, ಮುಳ್ಳು ಕಂಟಿಗಳನ್ನು ಬೆಳೆಯದಂತೆ ನೋಡಿಕೊಳ್ಳಬೇಕು. ಕರಕಿ ಹೊಲಾ ಸರ್ಕಾರದ ಸಾಲ ಕನಗ್ಯಾನ ಬೇರ ಪರಕೀಯರ ಜಾಲದಿಂದ ಪಾರಾಗಬೇಕಾದ್ರ ಮೊದಲು ಮಳೆ ನೀರನ್ನು ತಮ್ಮ ಜಮೀನುಗಳಲ್ಲಿ ಅಗತ್ಯದ ಪ್ರಮಾಣದಲ್ಲಿ ನೀರು ತಡೆಗಟ್ಟಬೇಕು. ಇದರಿಂದ ಒಂದು ಎಕರೆ ಜಮೀನಿನಲ್ಲಿ ಒಂದು ಗಂಟೆಗೆ ಒಂದು ಅಂಗುಲ (ಇಂಚ್‌) ಮಳೆ ಸುರಿದರೆ 3,630 ಘನ ಮೀ. ನೀರು ಸಂಗ್ರಹವಾಗುತ್ತದೆ. ಇದನ್ನು ಹರಿಯಲು ಬಿಟ್ಟರೆ ಒಂದು ಎಕರೆಯಲ್ಲಿ ಸಂಗ್ರಹವಾಗುವ ಫಲವತ್ತಾದ ಮಣ್ಣಿನಲ್ಲಿ ಒಂದು ಸೆಕೆಂಡಿಗೆ 95 ಗ್ಯಾಲನ್‌ ನೀರು ಹಾಗೂ 200 ಎತ್ತಿನ ಬಂಡಿಯಷ್ಟು ಮಣ್ಣು ಹರಿದುಕೊಂಡು ಹೋಗುತ್ತದೆ. ಇದರಿಂದ ಮೇಲ್ಪದರದಲ್ಲಿರುವ ಉತ್ತಮ ಮಣ್ಣು ಹರಿದು ಹೋಗುವುದರಿಂದ ರೈತರಿಗೆ ಬೆಳೆ ಬಾರದೆ ಹಾನಿಯಾಗುತ್ತದೆ ಎಂದರು.

ಜಾಗತೀಕರಣದ ಫಲವಾಗಿ ವಿಜ್ಞಾನ ಹಾಗೂ  ತ್ರಜ್ಞಾನಗಳು ಹೆಚ್ಚಾಗಿದ್ದರೂ ಕೂಡ ಯಾರಿಂದಲೂ ಕೂಡ ಮಣ್ಣು ಹಾಗೂ ನೀರನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ, ಮನುಷ್ಯನ ದೇಹದಲ್ಲಿರುವ ಒಂದು ಹನಿ ರಕ್ತ ಸ್ರಾವವಾದರೆ ಅದನ್ನು ಸರಿಪಡಿಸಲು ಹಣ್ಣು ಹಾಗೂ ಉತ್ತಮ ಆಹಾರ ಸೇವನೆಯಿಂದ ಕೆಲ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ. ಆದರೆ ಒಂದು ಅಂಗುಲ ಮಣ್ಣು ಉತ್ಪತ್ತಿಯಾಗಲು ಒಂದು ಸಾವಿರ ವರ್ಷಗಳೇ ಗತಿಸುತ್ತವೆ. ರೈತರು ಮಣ್ಣು ಹಾಗೂ ನೀರು ಹಾಳಾಗದಂತೆ ಕಾಪಾಡಿಕೊಳ್ಳಲು ಮನೆಯಲ್ಲಿ ಜಾನುವಾರುಗಳ ಸಾಕಣೆಯೂ ಕೂಡ ಅತಿ ಮಹತ್ವದ್ದಾಗಿದೆ. ಕೃಷಿಯಲ್ಲಿ ಯಂತ್ರೋಪಕರಣ ಬಳಸುವುದರಿಂದ ಕಾರ್ಬನ್‌ ಡೈ ಆಕ್ಸೈಡ್‌, ಮೋನಾಕ್ಸೈಡ್‌ ಗಳಂತಹ ಪರಿಸರಕ್ಕೆ ವಿರುದ್ಧವಾದ ವಾತಾವರಣ ಸೃಷ್ಟಿಯಾಗುತ್ತದೆ. ಇದು ಎಲ್ಲ ಜೀವಿಗಳ ಪ್ರಾಣಕ್ಕೆ ಕಂಟಕವಾಗುತ್ತದೆ. ಪ್ರತಿಯೊಬ್ಬರೂ ಕೂಡ ಮನೆ ಹಾಗೂ ಹೊಲಗಳಲ್ಲಿ ಗಿಡ ಮರ ಬೆಳೆಸುವುದರೊಂದಿಗೆ ಹೂ, ಕಾಯಿ, ಹಣ್ಣು, ಪೀಠೊಪಕರಣಗಳ ತಯಾರಿಕೆ, ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣ, ಉರುವಲು ಸೌದೆಗಳನ್ನು ಕೊಡುವುದರೊಂದಿಗೆ ಆಮ್ಲಜನಕವನ್ನೂ ನೀಡುತ್ತವೆ. ಇದರಿಂದ ಎಲ್ಲ ಜೀವಸಂಕುಲ ರಕ್ಷಿಸಿಕೊಳ್ಳಬಹುದಾಗಿದೆ ಎಂದರು.

ಕೃಷಿಯಲ್ಲಿ ರಾಸಾಯನಿಕ ಹಾಗೂ ಯಂತ್ರೋಪಕರಣ ಬಳಸದೇ ನಮ್ಮ ಹಿರಿಯರು ನೂರು ವರ್ಷಗಳ ಕಾಲ ಬದುಕಲು ಸಾಧ್ಯವಾಗಿದ್ದು ಪಂಚಭೂತ ತತ್ವಗಳ ಆಧಾರದಲ್ಲಿ ಬೆಳೆ ಬೆಳೆಯುತ್ತಿರುವುದರ ಪರಿಣಾಮವೇ ಹೊರತು ಬೇರೇನೂ ಅಲ್ಲ. ಆದ್ದರಿಂದ ಶಿಕ್ಷಣವೆಂದರೆ ಕೇವಲ ವೈದ್ಯರು, ತಾಂತ್ರಿಕ ಅಭಿಯಂತರುಗಳಾಗಬಾರದು. ವಿದ್ಯಾರ್ಥಿಗಳಾದಿಯಾಗಿ ಸಮಯ ವ್ಯರ್ಥವಾಗಿ ಕಳೆಯದೇ ಕೃಷಿಯಲ್ಲಿ ತೊಡಗಿಕೊಂಡರೆ ಅದರಲ್ಲಿರುವ ಸಂತೋಷ, ಆನಂದ, ನೆಮ್ಮದಿ ಆರೋಗ್ಯ, ಮಾನಸಿಕ ನೆಮ್ಮದಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

Advertisement

ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಮಾತನಾಡಿದರು. ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಉದ್ಘಾಟಿಸಿದರು. ನಿಡಗುಂದಿ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಬಿ.ಎನ್‌. ಗುಣದಾಳ, ಅರವಿಂದ ಕೊಪ್ಪ, ಮಹಾಂತೇಶ ಪಟ್ಟಣದ, ಲಕ್ಷ್ಮೀ ದೇಸಾಯಿ, ಎಸ್‌.ಎಸ್‌. ಖಾದ್ರಿ ಇನಾಮದಾರ, ಮಹಾಂತೇಶ ಸಾಲಿಮಠ, ಶಿವಲಿಂಗ ಕೂಡಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next