Advertisement

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

11:26 PM Sep 20, 2024 | Team Udayavani |

ಬೆಂಗಳೂರು: ದೇಶದ್ರೋಹಿಗಳು ಹಾಗೂ ಒಂದು ಕೋಮಿನ ಪರ ರಾಜ್ಯ ಕಾಂಗ್ರೆಸ್‌ ಸರಕಾರ ಮೃದು ಧೋರಣೆ ತಾಳಿದ್ದು ಶಾಂತಿ-ಸುವ್ಯವಸ್ಥೆ ಕದಡುತ್ತಿದೆ. ನಾಗಮಂಗಲ ಗಲಭೆ ಪ್ರಕರಣದಲ್ಲಿ ರಾಜ್ಯ ಸರಕಾರದ ಬಗ್ಗೆ ನಮಗೆ ಅನುಮಾನವಿದ್ದು ಎನ್‌ಐಎ ತನಿಖೆ ನಡೆಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

Advertisement

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಉಪಮುಖ್ಯಮಂತ್ರಿ ಡಾ| ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದ ಸತ್ಯ ಶೋಧನಾ ಸಮಿತಿ ವರದಿ ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಬಗ್ಗೆ ಕಾಂಗ್ರೆಸ್‌ ಸರಕಾರದಿಂದ ಸಮರ್ಪಕ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ. ಎನ್‌ಐಎ ತನಿಖೆಗೆ ಸಿಎಂ ಸಿದ್ದರಾಮಯ್ಯ ನೀಡಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾಕರ ತುಷ್ಟೀಕರಣದ ರಾಜಕಾರಣ ಬದಿಗಿಡಿ. ಎಲ್ಲ ಸಮಾಜದ ಜನರು ನೆಮ್ಮದಿಯಿಂದ ಬದುಕುವಂತಾಗಲು ಅಲ್ಪಸಂಖ್ಯಾಕರ ಓಲೈಕೆ ರಾಜಕಾರಣ ಬದಿಗಿಟ್ಟರಷ್ಟೇ ಸಾಧ್ಯ. ಹಿಂದೂಗಳ ಮೇಲೆ ಬಲಾತ್ಕಾರ ಆಗುತ್ತಿದೆ. ಪೊಲೀಸರ ಕಣ್ಮುಂದೆ ಇದೆಲ್ಲ ನಡೆದರೂ ಕಣ್ಮುಚ್ಚಿ ಕೂತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು.
ವರದಿ ಬರಲಿ

ಸೋಲಿನ ಹತಾಶೆ ಡಿ..ಕೆ. ಸೋದರರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಈ ಪ್ರಕರಣದಿಂದ ಅರ್ಥವಾಗುತ್ತದೆ. ಆಡಿಯೋ ಧ್ವನಿ ಮುನಿರತ್ನ ಅವರದ್ದು ಎಂಬ ಬಗ್ಗೆ ಎಫ್ಎಸ್‌ಎಲ್‌ ವರದಿ ಬರಲಿ. ತನಿಖೆಯಾಗಿ ಸತ್ಯಾಸತ್ಯತೆ ಹೊರಬಂದ ಮೇಲೆ ಅದರ ಬಗ್ಗೆ ಚರ್ಚೆ ಮಾಡೋಣ ಎಂದರು.

ವಲಸಿಗರ ಕೈವಾಡ: ಬಿಜೆಪಿ ಸತ್ಯಶೋಧನೆ
ನಾಗಮಂಗಲ ಪ್ರಕರಣದಲ್ಲಿ ಬಾಂಗ್ಲಾದೇಶಿ ಹಾಗೂ ಅಸ್ಸಾಮ್‌ನಿಂದ ವಲಸೆ ಬಂದ ಅನ್ಯ ಕೋಮಿನವರ ಪಾತ್ರ ಇದೆ ಎಂದು ಬಿಜೆಪಿ ಸತ್ಯಶೋಧನಾ ಸಮಿತಿಯಲ್ಲಿ ಉಲ್ಲೇಖಿಸಲಾಗಿದ್ದು ಇದೊಂದು ಪಕ್ಕಾ ಲೆಕ್ಕಾಚಾರದ ಘಟನೆ ಎಂದು ಬಿಜೆಪಿ ಸತ್ಯ ಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ನಾಗಮಂಗಲದಲ್ಲಿ ಅನ್ಯಕೋಮಿನವರು ಆರ್ಥಿಕವಾಗಿ ಸಬಲರಾಗಿದ್ದು ಬಾಂಗ್ಲಾದೇಶ ಹಾಗೂ ಅನ್ಯ ರಾಜ್ಯಗಳಿಂದ ಬಂದವರು ಪ್ರಾಬಲ್ಯ ಸಾಧಿಸಿದ್ದಾರೆ. ಸ್ಥಳೀಯ ಅಲ್ಪಸಂಖ್ಯಾಕರಿಗೂ ಇವರ ಉಪಟಳ ಸಾಕೆನಿಸಿದ್ದು, ಸುಮಾರು 800 ಎಕರೆಯಷ್ಟು ಪ್ರದೇಶದಲ್ಲಿ ಒಂದೇ ಸಮುದಾಯದವರು ನೆಲೆಯೂರಿದ್ದು ಮತ್ತೂಂದು ಮಲಪ್ಪುರಂ ಸೃಷ್ಟಿಯಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ವರದಿಯಲ್ಲಿ ಉಲ್ಲೇಖವಾದ ಕೆಲ ಅಂಶಗಳು ಹೀಗಿವೆ…..
-ಗಲಭೆಯಿಂದ ಹಾನಿಗೀಡಾದ ಅಂಗಡಿ-ಮುಂಗಟ್ಟುಗಳ ಮಾಲಕರ ಭೇಟಿ ಮಾಡಿ ವಾಸ್ತವ ಮಾಹಿತಿ ಸಂಗ್ರಹ
-ಇದೊಂದು ಪೂರ್ವ ನಿಯೋಜಿತ ಕೃತ್ಯ, ತುಷ್ಟೀಕರಣ ರಾಜಕೀಯವೇ ಗಲಭೆಗೆ ಕಾರಣ
-ಆಪಾದನೆಗೆ ಒಳಗಾದ ವ್ಯಕ್ತಿಗಳ ವಿರುದ್ಧದ ಪ್ರಕರಣವನ್ನು ಸರಕಾರ ವಾಪಸ್‌ ಪಡೆದಿದೆ
-ಘಟನೆ ಬಳಿಕ ಸೂಕ್ತ ತನಿಖೆ ನಡೆಸದಂತೆ ಪೊಲೀಸರ ಕೈಗಳನ್ನು ಕಟ್ಟಿ ಹಾಕಲಾಗಿದೆ
-ಕಳೆದ ವರ್ಷ ಇಂಥದ್ದೇ ಪ್ರಕರಣ ನಡೆದಿದ್ದರೂ ಮುನ್ನೆಚ್ಚರಿಕೆ ವಹಿಸಿಲ್ಲ
-ಮಾಸ್ಕ್ ಧರಿಸಿ ನಿರ್ದಿಷ್ಟ ಅಂಗಡಿಗಳ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ
-ಪಿಎಫ್ಐನವರಿಗೆ, ಸಮಾಜ ವಿರೋಧಿ ಕೃತ್ಯಗಳಿಗೆ ನಾಗಮಂಗಲ ನೆಲೆ ಆಗಿದೆ
-ಅಮಾಯಕರ ಮೇಲೆ ಕೇಸ್‌ ದಾಖಲಾಗಿದೆ
-ಎನ್‌ ಐಎ ತನಿಖೆ ಆಗಬೇಕು
-ಸಮಾಜ ವಿರೋಧಿ ವ್ಯಕ್ತಿಗಳು ನಾಗಮಂಗಲದಲ್ಲಿ ನೆಲೆಯಾಗಿದ್ದಾರೆ
-ಬೆಂಕಿ ಹಾಕಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕು

Advertisement

Udayavani is now on Telegram. Click here to join our channel and stay updated with the latest news.

Next