Advertisement

ನಾಡ ಕಚೇರಿಗಿಲ್ಲ ಸ್ವಂತ ಕಟ್ಟಡ ಭಾಗ್ಯ!

09:27 AM Jul 12, 2019 | Suhan S |

ನರೇಗಲ್ಲ: ಗಜೇಂದ್ರಗಡ ತಾಲೂಕಿನಲ್ಲಿಯೇ ಅತೀ ದೊಡ್ಡ ಹೋಬಳಿಯಾಗಿದೆ. ಆದರೆ ಪಟ್ಟಣದ ನಾಡ ಕಚೇರಿಗಿಲ್ಲ ಸ್ವಂತ ಕಟ್ಟಡ. ಗ್ರಾಮ ಲೆಕ್ಕಾಧಿಕಾರಿ ನಿವಾಸದಲ್ಲಿಯೇ ಉಪ ತಹಶೀಲ್ದಾರ್‌ ಕಚೇರಿ ಕಾರ್ಯಗಳು ನಡೆಯುತ್ತಿವೆ. ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೆ ಇಲ್ಲ ಮೂಲ ಸೌಭಲ್ಯಗಳು.

Advertisement

ಪಟ್ಟಣದಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಉಪ ತಹಶೀಲ್ದಾರ್‌ ಕಚೇರಿಯು ಗ್ರಾಮ ಲೆಕ್ಕಾಧಿಕಾರಿಗಳ ನಿವಾಸವಾಗಿದ್ದು. ಆದರೆ ಅವರ ಕಾರ್ಯಾಲಯ ಇರುವುದು ಗಣೇಶ ದೇವಸ್ಥಾನದ ಕೊಠಡಿಯಲ್ಲಿಯೇ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಕಚೇರಿಯ ಕೆಲಸ ಕಾರ್ಯಗಳನ್ನು ಇಲ್ಲಿಂದಲೇ ನಿರ್ವಹಿಸುತ್ತಿದ್ದಾರೆ. ಆದರೇ ಗ್ರಾಮ ಲೆಕ್ಕಾಧಿಕಾರಿಗಳಿಗೆಂದೇ ನಿರ್ಮಾಣವಾಗಿರುವ ಅವರ ನಿವಾಸವು ನಾಡ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರು ಅನಿವಾರ್ಯವಾಗಿ ಕಾರ್ಯ ನಿರ್ವಹಿಸುವ ಸ್ಥಳವನ್ನು ಬಿಟ್ಟು ಬೇರೆ ಕಡೆಯಿಂದ ಬಂದು ಇಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು 75 ವರ್ಷಗಳ ಹಿಂದೆ ಕರ್ನಾಟಕ ಏಕೀಕರಣ ಸಮಯದಲ್ಲಿ ನರೇಗಲ್ಲ ಪಟ್ಟಣವನ್ನು ತಾಲೂಕು ಎಂದು ಗುರುತಿಸಲಾಗಿತ್ತು ಎನ್ನುವುದು ಪಟ್ಟಣದ ಹಿರಿಯರ ಹೇಳಿಕೆ. ಆದರೆ, ಸಾರ್ವಜನಿಕರು ಇಚ್ಛಾಶಕ್ತಿ ಕೊರತೆ ಹಾಗೂ ಜನಪತ್ರಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಇಲ್ಲಿನ ನಾಡ ಕಚೇರಿಗೆ ಸ್ವಂತ ಕಟ್ಟಡವೆನ್ನುವುದು ಮರೀಚಿಕೆಯಾಗಿದೆ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ನಾಡ ಕಚೇರಿಗೆ ಸ್ವಂತ ಕಟ್ಟಡವಿಲ್ಲದೆ ಇರುವುದು ಹಾಗೂ ಇಲ್ಲಿ ಹಿರಿಯ ಅಧಿಕಾರಿಗಳು ಸಮರ್ಪಕವಾಗಿ ಖುದ್ದು ಹಾಜರಾಗಿ ಕಾರ್ಯ ನಿರ್ವಹಿಸದಿರುವುದು ಇಲ್ಲಿನ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕಾಗಿದೆ.

ನರೇಗಲ್ಲ ಹೋಬಳಿಗೆ ಹಾಲಕೇರೆ, ನಿಡಗುಂದಿ, ನಿಡಗುಂದಿಕೊಪ್ಪ, ಕಳಕಾಪುರ, ತೊಟಗಂಟಿ, ದ್ಯಾಮಪುರ, ಕೊಚಲಾಪುರ, ಕೊಡಿಕೊಪ್ಪ, ಮಲ್ಲಾಪುರ, ಸರ್ಜಾಪುರ, ಶಾಂತಗೇರಿ, ಬೊಮ್ಮಸಾಗರ, ಚಿಕ್ಕಅಳಗುಂಡಿ, ಚಿಕ್ಕ ಅಳಗುಂಡಿ, ದ್ಯಾಮನುಸಿ, ಗುಳಗುಳಿ, ಸೂಡಿ, ಕಲ್ಲಿಗನೂರ, ಮುಸಿಗೇರಿ, ಬೇವಿನಕಟ್ಟಿ, ನೆಲ್ಲೂರ, ಶಾಂತಗೇರಿ, ನರೇಗಲ್ಲ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳು ಬರುತ್ತವೆ. ಈ ಗ್ರಾಮಗಳ ಜನತೆ ನಾಡ ಕಾರ್ಯಲಯಕ್ಕೆ ನಿತ್ಯ ಒಂದಿಲೊಂದು ಕೆಲಸ ಕಾರ್ಯಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಹೀಗೆ ಬಂದ ಸಾರ್ವಜನಿಕರಿಗೆ ಉಪ ತಹಶೀಲ್ದಾರ್‌ ಹಾಗೂ ಕಂದಾಯ ನಿರೀಕ್ಷಕರು ಇಲ್ಲದೇ ಇರುವುದರಿಂದ ಗೊಣಗುತ್ತಲೇ ಮರಳಿ ಸ್ವಗ್ರಾಮಕ್ಕೆ ತೆರಳಬೇಕು. ಕೆಲಸದ ಅವಶ್ಯಕತೆ ಅನಿವಾರ್ಯವಾಗಿದರೇ ಗಜೇಂದ್ರಗಡಕ್ಕೆ ಸಮಯ ಹಾಗೂ ಹಣ ಖರ್ಚು ಅಲ್ಲದೇ ದೈಹಿಕವಾಗಿ ಶ್ರಮಿಸಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವ ಕೆಲಸಕ್ಕಾಗಿ: ಹೋಬಳಿ ಕೇಂದ್ರದಲ್ಲಿ ದೊರೆಯುವ ಸೇವೆಗಳಾದ ಇ ನಕ್ಷೆ, ಇ ಸ್ವತ್ತು, ಪೋಡಿ, ಹದ್ದುಬಸ್ತ್, ಜಾತಿ ಮತ್ತು ಆದಾಯ, ಆಧಾರ ಕಾರ್ಡ್‌, ಚಿಕ್ಕ ಹಿಡುವಳಿದಾರ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಶಿಷ್ಟಚೇತನರ ಮಾಸಾಶನ, ವಿಧವಾ, ಮೈತ್ರಿ, ಮನಸ್ವಿನಿ, ಅನುಕಂಪದ ಆಧಾರದ ಮೇಲೆ ನೌಕರಿಗೆ ಸಂಭಂಸಿದ ಪ್ರಮಾಣ ಪತ್ರಗಳು, ವಾರಸಾ, ರಹವಾಸಿ, ನಿವಾಸಿ, ಭೂ ಹಿಡುವಳಿದಾರ, ಬೋನೋಫೈಡ್‌ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಸಾರ್ವಜನಿಕರು ನಿತ್ಯ ನಾಡಕಚೇರಿಗೆ ಬರುತ್ತಾರೆ. ಆದರೆ ಇಲ್ಲಿ ಉಪ ತಹಶೀಲ್ದಾರ್‌ ಹಾಗೂ ಕಂದಾಯ ನಿರೀಕ್ಷಕರು ಇಲ್ಲಿ ಸಮರ್ಪಕವಾಗಿ ವೇಳೆಗೆ ಸರಿಯಾಗಿ ಇದ್ದು ಕಾರ್ಯನಿರ್ವಹಿಸದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎನ್ನುವುದು ಇಲ್ಲಿಗೆ ಬಂದ ಜನತೆಯ ಅಭಿಪ್ರಾಯವಾಗಿದೆ.

Advertisement

ಸಾರ್ವಜನಿಕರ ಗೋಳು: ವಿವಿಧ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ಇಲ್ಲಿ ಶೌಚಾಲಯವು ಇಲ್ಲದೇ ಇರುವುದರಿಂದ ಪಕ್ಕದಲ್ಲಿಯೇ ಇರುವ ಗಾಂಧಿಭವನದ ಹಿಂದುಗಡೆ ಇಲ್ಲವೇ ಗೋಡೆಗಳ ಮರೆಗೆ ಪುರುಷರು ಮೂತ್ರ ಮಾಡಿ ಗಲೀಜು ಮಾಡುತ್ತಿದ್ದಾರೆ. ಮಹಿಳೆಯರಿಗೆ ಶೌಚಾಲಯ ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಮಳೆ ಬಂದರೇ ಹಾಗೂ ಬೇಸಿಗೆಯಲ್ಲಿ ಸಾರ್ವಜನಿಕರು ನಿಲ್ಲುವುದಕ್ಕೆ ನೆರಳು ಇಲ್ಲದೇ ಇಕ್ಕಟ್ಟಾದ ಗ್ರಾಮ ಲೆಕ್ಕಾಧಿಕಾರಿಗಳ ನಿವಾಸದ ಮುಂದೆ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

 

•ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next