Advertisement

ನಾಡ ಹಬ್ಬ ದಸರೆಯಲ್ಲಿ ಜನವೋ ಜನ…

01:10 PM Sep 23, 2017 | Team Udayavani |

ಮೈಸೂರು: ವರ್ಷವಿಡೀ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಹಾಗೂ ಅವರ ಕುಟುಂಬದವರನ್ನು ದಸರೆ ಸಂಭ್ರಮದಲ್ಲಿ ಭಾಗಿಯಾಗುವಂತೆ ಮಾಡುವ ರೈತ ದಸರಾ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು. ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ರೈತ ದಸರೆಗೆ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್‌ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿ, 2-3 ತಿಂಗಳಿಂದ ಮಳೆ ಉತ್ತಮವಾಗಿ ಬೀಳುತ್ತಿರುವುದರಿಂದ ರೈತರ ಮೊಗದಲ್ಲಿ ಸಂತಸವುಂಟು ಮಾಡಿದ್ದು, ರೈತರಿಗೆ ಬೆಳೆ ಸಮೃದ್ಧವಾಗಿ ದೊರೆತು, ಅವರ ಸಾಲ ಕಡಿಮೆಯಾಗುವ ಮೂಲಕ ರೈತರ ಆತ್ಮಹತ್ಯೆಗಳು ನಿಲ್ಲಬೇಕಿದೆ ಎಂದರು. ಬೆಂಗಳೂರು ಕೃಷಿ ವಿವಿ ಜಿಕೆವಿಕೆ ಕುಲಪತಿ ಡಾ.ಎಂ.ಶಿವಣ್ಣ, ರೈತರು ಕೃಷಿಯಲ್ಲಿ ಯಶಸ್ವಿಯಾಗಬೇಕಾದರೆ ಬದಲಾವಣೆಗೆ ಹೊಂದಿಕೊಂಡು ಬೆಳೆ ಬೆಳೆಯಬೇಕು. ರಾಜ್ಯದಲ್ಲಿ 72 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಇತ್ತು. ಅದು 21 ಲಕ್ಷ ಹೆಕ್ಟೇರ್‌ಗೆ ಕುಸಿದಿದೆ ಎಂದು ವಿಷಾದಿಸಿದರು.  

ಆಕರ್ಷಕ ಮೆರವಣಿಗೆ: ಈ ಮುನ್ನ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಆಯೋಜಿಸಿದ್ದ ಮೆರವಣಿಗೆಗೆ ಮೇಯರ್‌ ಎಂ.ಜೆ.ರವಿಕುಮಾರ್‌ ಚಾಲನೆ ನೀಡಿದರು.  ಪೂರ್ಣಕುಂಭ ಹೊತ್ತ ಸುಮಂಗಲಿಯರು ಮುಂದೆ ಸಾಗಿದರೆ, ಡೊಳ್ಳುಕುಣಿತ,ಕಂಸಾಳೆ, ಹುಲಿವೇಷ, ಹಗಲುವೇಷ, ವೀರಭದ್ರನ ಕುಣಿತ, ನಂದಿಧ್ವಜ ಕಲಾವಿದರು ಆಕರ್ಷಕ ನೃತ್ಯ ಮಾಡಿ ಹಿಂಬಾಲಿಸಿದರು. ಇದಾದ ಬಳಿಕ ಎತ್ತಿನಗಾಡಿಗಳು ಹೊರಟವು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಪಶುಭಾಗ್ಯ ಸ್ತಬ್ಧಚಿತ್ರ ಮೀನುಗಾರಿಕೆ ಇಲಾಖೆಯ ಸ್ತಬ್ಧಚಿತ್ರ ಸಾಮಾಜಿಕ ಅರಣ್ಯ ವಿಭಾಗದಿಂದ ನೀರಿಗಾಗಿ ಅರಣ್ಯ, ತೋಟಗಾರಿಕೆ ಇಲಾಖೆಯಿಂದ ಕೇಂದ್ರ, ರಾಜ್ಯ ಸರ್ಕಾರದ ಕಾರ್ಯಕ್ರಮ ಬಿಂಬಿಸುವ ಸ್ತಬ್ಧಚಿತ್ರ, ಕೃಷಿ ಇಲಾಖೆಯಿಂದ ಕೃಷಿಭಾಗ್ಯ ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಕೆ.ಆರ್‌.ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಜೆ.ಕೆ.ಮೈದಾನ ತಲುಪಿತು.

ವಸ್ತುಪ್ರದರ್ಶನ: ಜೆ.ಕೆ.ಮೈದಾನದಲ್ಲಿ ಆಯೋಜಿಸಿದ್ದ ವಸ್ತುಪ್ರದರ್ಶನ ರೈತರನ್ನು ಆಕರ್ಷಿಸಿತು. 25 ಮಳಿಗೆಗಳು ರೈತರನ್ನು ಆಕರ್ಷಿಸಿದವು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ.ಮಂಜುನಾಥ್‌, ರೈತರ ದಸರಾ ಉಪ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷರಾದ ರಮೇಶ್‌, ಮಹದೇವ್‌, ಸೋಮೇಶ್‌ ಇದ್ದರು.  

Advertisement

ಸಚಿವರ ಗೈರು: ರೈತರ ಅಸಮಾಧಾನ  ರೈತರಿಗಾಗಿ ನಡೆಸುವ ರೈತದಸರೆ ಉದ್ಘಾಟನೆಗೆ ಕೃಷಿ ಸಚಿವ ಕೃಷ್ಣಬೈರೇಗೌಡ ಅವರ ಗೈರು ಹಾಜರಿ ನೆರೆದಿದ್ದ ರೈತರಲ್ಲಿ ಅಸಮಾಧಾನ ಮೂಡಿಸಿತು. ಪ್ರತಿಬಾರಿಯೂ ನೆಪಮಾತ್ರಕ್ಕೆ ರೈತ ದಸರೆ ನಡೆಸಲಾಗುತ್ತದೆ. ಆದರೆ ಇದರಲ್ಲಿ ರೈತರ ಅನುಕೂಲಕ್ಕಾಗಿ ಯಾವುದೇ ಮಾಹಿತಿ ಲಭಿಸುವುದಿಲ್ಲ. ಇನ್ನೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ರೈತ ದಸರೆ ಬಗ್ಗೆ ಹೆಚ್ಚಿನ ಆಸಕ್ತಿ ತೋರುವುದಿಲ್ಲ ಎಂದು ಕೆಲವು ರೈತರು ತಮ್ಮ ಅಸಮಾಧಾನ ಹೊರಹಾಕಿದರು. 

ವಿವಿಧ ವಿಭಾಗಗಳ ಸಾಧಕ ರೈತರಿಗೆ ಸನ್ಮಾನ
ಕೃಷಿ ಇಲಾಖೆಯ ಜಿಲ್ಲಾ ಮಟ್ಟದ 2015-16ನೇ ಸಾಲಿನ ಬೆಳೆ ಕಟಾವು ಸ್ಪರ್ಧೆಯಲ್ಲಿ ಜಯಮ್ಮ, ರಾಜೇಂದ್ರ ಕುಮಾರ್‌, ವೀರಜಮ್ಮ, ಎ.ನಾಗರಾಜ್‌, ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಕಟಾವು ಸ್ಪರ್ಧೆ ವಿಜೇತರಾದ ಕೆಂಪಲಮ್ಮ, ಪುಟ್ಟೇಗೌಡ, ಪಾಪೇಗೌಡ, ಕೆ.ಎಸ್‌.ಶಿವಕುಮಾರ್‌, ಕೆ.ನಾರಾಯಣ, ತೋಟಗಾರಿಕೆ ಇಲಾಖೆಯಿಂದ ಎನ್‌.ಕುಮಾರ್‌, ಗಿರಿಜಾ, ಮಾರಯ್ಯ,

ಪಶುಸಂಗೋಪನೆಯಿಂದ ಚಂದ್ರಶೇಖರ, ಅಶ್ವತ್ಥ, ಸಾಗರ್‌ ಅರಸ್‌, ಮೀನುಗಾರಿಕೆ ಇಲಾಖೆಯಿಂದ ಮಸ್ತಾನ್‌ ಸಾಬ್‌, ವಿ.ಮಹೇಶ್‌, ಮಂಚಯ್ಯ, ರೇಷ್ಮೆ ಇಲಾಖೆಯಿಂದ ಪುಟ್ಟೇಗೌಡ, ಮಲ್ಲೇಶ್‌, ಎಸ್‌.ಪಿ.ಬಸವರಾಜು, ಅರಣ್ಯ ಇಲಾಖೆಯಿಂದ ಎಚ್‌.ಬಿ.ಶಿವರಾಜು, ಎಸ್‌.ಎಂ.ಉಲ್ಲಾಸ್‌, ಎಚ್‌.ಎಸ್‌.ಮಂಜುನಾಥಗೌಡ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next