Advertisement

ಸುವರ್ಣ ವನಕ್ಕೆ ಹೈಟೆಕ್‌ಸ್ಪರ್ಶ

12:59 PM Feb 23, 2020 | Naveen |

ಎನ್‌.ಆರ್‌.ಪುರ: ಅರಣ್ಯ ಇಲಾಖೆಯವರು ಪಾಳುಬಿದ್ದಿದ್ದ ಇಲ್ಲಿನ ಸುವರ್ಣ ವನಕ್ಕೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಾಲೂಕಿನಲ್ಲಿ ಎಲ್ಲೂ ಕೂಡ ಒಂದೇ ಒಂದು ಪಾರ್ಕ್‌ ಆಗಲಿ, ವಾಕಿಂಗ್‌ ಪಾಥ್‌ ಆಗಲಿ ಇಲ್ಲ. ಇದ್ದ ಸುವರ್ಣ ವನ ಪಾಳುಬಿದ್ದಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಬಹಳ ಉತ್ಸುಕತೆಯಿಂದ ಉದ್ಯಾನಕ್ಕೆ ಹೈಟೆಕ್‌ ಸ್ಪರ್ಶ ನೀಡಿ, ಸಾರ್ವಜನಿಕರು, ಮಹಿಳೆಯರು, ಹಿರಿಯರು ಹಾಗೂ ಮಕ್ಕಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

Advertisement

ಪಟ್ಟಣದಿಂದ ಎರಡ್ಮೂರು ಕಿ.ಮೀ. ದೂರದಲ್ಲಿಯೇ ಈ ಸುವರ್ಣ ವನವಿದ್ದು, ಅಧಿಕ ವಿಸ್ತಾರ ಹೊಂದಿದೆ. ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದ ಈ ಸುವರ್ಣ ಪಾಳು ಕೊಂಪೆಯಾಗಿ ಮಾರ್ಪಾಡಾಗಿತ್ತು. ಕೇವಲ ನಾಲ್ಕೈದು ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗಿತ್ತು. ಅವು ಕೂಡ ಮುರಿದು ಹೋಗಿದ್ದವು. ಇದೀಗ ಅರಣ್ಯ ಇಲಾಖೆ ಈ ಸುವರ್ಣ ವನಕ್ಕೆ ಹೈಟೆಕ್‌ ಸ್ಪರ್ಶ ನೀಡುವ ಸಲುವಾಗಿ, ಇಲಾಖೆಯ ಟ್ರೀ ಪಾರ್ಕ್‌ ಯೋಜನೆಯಡಿ ಪಂಚ ವಾರ್ಷಿಕ ಯೋಜನೆಯನ್ನು ರೂಪಿಸಿಕೊಂಡು ಹೈಟೆಕ್‌ ಸ್ಪರ್ಶ ನೀಡುತ್ತಿದೆ. ಈಗಾಗಲೇ 35 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಪಾರ್ಕಿನಲ್ಲಿ ಕೆಲಸ ಚುರುಕಾಗಿ ಪ್ರಾರಂಭಿಸಿದೆ.

ಇಲಾಖೆ ಕೇವಲ ಮೋಜು-ಮಸ್ತಿಗಷ್ಟೇ ಈ ಪಾರ್ಕ್‌ನ್ನು ಅಭಿವೃದ್ಧಿಪಡಿಸುತ್ತಿಲ್ಲ. ಅರಣ್ಯದ ಬಗ್ಗೆ, ಅರಣ್ಯ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ಕೆ ಮುಂದಾಗಿದೆ. ಈ ಪಾರ್ಕಿನಲ್ಲಿ ಕಾಡು ನಾಶ, ಕಾಡಿನ ಸಂರಕ್ಷಣೆ ಬಗ್ಗೆ ಆಕರ್ಷಕ ಬೊಂಬೆಗಳನ್ನು ಅಳವಡಿಸುತ್ತಿದೆ. ಮಕ್ಕಳಿಗೆ ಗೊಂಬೆ ಮೂಲಕ ಅರಣ್ಯ ಸಂಪತ್ತಿನ ಸಂರಕ್ಷಣೆ ಬಗ್ಗೆ ಮಾಹಿತಿ ಕೊಡುವ ಉದ್ದೇಶ ಹೊಂದಿದೆ. ಮೊದಲು ಯಡೇಹಳ್ಳಿ ಎಂದಿದ್ದ ಊರಿಗೆ ಮೈಸೂರು ರಾಜರಾದ ನರಸಿಂಹರಾಜದತ್ತ ಒಡೆಯರ್‌ ಅವರು ಆಗಮಿಸಿದ ಸವಿನೆನಪಿಗಾಗಿ ನರಸಿಂಹರಾಜಪುರ ಎಂದು ನಾಮಾಂಕಿತಗೊಂಡಿದೆ. ಇದರ ನೆನಪಿಗಾಗಿ ಈ ಪಾರ್ಕಿನಲ್ಲಿ ನರಸಿಂಹರಾಜದತ್ತ ಒಡೆಯರ್‌ ಬಯಲು ರಂಗಮಂದಿರವನ್ನು ನಿರ್ಮಾಣ ಕಾರ್ಯ ನಡೆಯುತ್ತಿದೆ.

ಇನ್ನೂರು ಜನರು ಈ ರಂಗಮಂದಿರದಲ್ಲಿ ಕೂರಬಹುದಾಗಿದೆ. ಈ ಬಯಲು ರಂಗ ಮಂದಿರಕ್ಕೆ ಹೊಂದಿಕೊಂಡಂತೆ ಎರಡು ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಈ ಬಯಲು ರಂಗ ಮಂದಿದರದಲ್ಲಿ ಜನ್ಮದಿನ, ಸ್ವ ಸಹಾಯ ಸಂಘಗಳ ಕಾರ್ಯಕ್ರಮಗಳೂ ಒಳಗೊಂಡಂತೆ ಚಿಕ್ಕಪುಟ್ಟ ಸಮಾರಂಭವನ್ನು ಏರ್ಪಡಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಅಲ್ಲದೇ ಈ ಪಾರ್ಕಿನಲ್ಲಿ ಜಿಮ್‌ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಮುಂದೆ ಈ ಪಾರ್ಕಿನಲ್ಲಿ ನೀರಿಗಾಗಿ ಬೋರ್‌ವೆಲ್‌ ವ್ಯವಸ್ಥೆಯಿದ್ದು, ಈಜುಕೊಳ ನಿರ್ಮಿಸಿ, ಈಜುವ ತರಬೇತಿಯನ್ನು ನೀಡುವ ಚಿಂತನೆ ನಡೆಸಿರುವುದು ಜನರು ಹಾಗೂ ಮಕ್ಕಳಿಗೆ ಸಂತಸ ತಂದಿದೆ. ಈಗಾಗಲೇ ಪಾರ್ಕಿನ ಸುತ್ತ  ತಂತಿ ಬೇಲಿ ನಿರ್ಮಿಸಲಾಗಿದೆ. ಪಾರ್ಕಿನ ಒಳಭಾಗದಲ್ಲಿ ನಡೆದಾಡಲು ರಸ್ತೆ, ಪ್ರಯಾಣಿಕರಿಗೆ, ಸಾರ್ವಜನಿಕರಿಗಾಗಿ ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.

Advertisement

ಸುವರ್ಣ ಮುಂಭಾಗದಲ್ಲಿ ಸುಂದರವಾದ ಸ್ವಾಗತ ಕಮಾನನ್ನು ನಿರ್ಮಿಸಲಾಗಿದೆ. ಮುಂದೆ ಭೂಮಿ ಆಕಾರ ಬೃಹತ್‌ ವೃತ್ತ ನಿರ್ಮಿಸಲಾಗುತ್ತದೆ. ಪಾರ್ಕಿನಲ್ಲಿ ಓಪನ್‌ ಜಿಮ್‌ ಸಾಮಗ್ರಿಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಮಕ್ಕಳ ಆಕರ್ಷಣೆಗಾಗಿ ಕಲ್ಲಿನ ಬೆಂಚು, ತಂಗುದಾಣಗಳಿಗೆ ಕಾರ್ಟೂನ್‌ಗಳ ಚಿತ್ತಾರವನ್ನು ಬಿಡಿಸಲಾಗಿದೆ. ಅಲ್ಲಲ್ಲಿ ಮರದಿಂದ ಮಾಡಿದ ಕಸದ ಬುಟ್ಟಿಗಳನ್ನು
ಅಳವಡಿಸಲಾಗಿದೆ. ಪಾರ್ಕಿಗೆ ಬರುವ ಜನರು ಇಲ್ಲಿಗೆ ತಿಂಡಿ, ತಿನಿಸುಗಳನ್ನು ತಂದು ತಿನ್ನುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಪಾರ್ಕಿಗೆ ಬರುವ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಪಾರ್ಕಿನ ಒಳಭಾಗದಲ್ಲಿಯೇ ಆರೋಗ್ಯಕರ ಹಾಗೂ ಶುಚಿಯಾದ ಹೋಂ ಮೇಡ್‌ಫುಡ್‌, ತಂಪು ಪಾನೀಯ ಇನ್ನಿತರೆ ತಿಂಡಿ-ತಿನಿಸುಗಳ ಫ್ರೆಂಡ್ಲಿ ಇಕೋ ಶಾಪ್‌ ತೆರಯಲಾಗುತ್ತಿದೆ. ಅಲ್ಲದೆ, ಕ್ರಿಡಾಭಿಮಾನಿಗಳಿಗಾಗಿ ಪಾರ್ಕಿನ ಒಳಭಾಗದಲ್ಲಿಯೇ ವಾಲಿಬಾಲ್‌ ಕ್ರೀಡಾಂಗಣವನ್ನೂ ನಿರ್ಮಿಸಲಾಗುತ್ತಿದೆ. ವಾಕಿಂಗ್‌ ಪಾಥ್‌ಗೆ ಸುಸಜ್ಜಿತವಾಗಿ ಇನ್ನರ್‌ ಲಾಕ್‌ ಅಳವಡಿಸಲಾಗಿದೆ.

ಇನ್ನು ಶೃಂಗೇರಿ, ಹೊರನಾಡು, ಧರ್ಮಸ್ಥಳ, ಬಾಳೆಹೊನ್ನೂರು
ಕ್ಷೇತ್ರಗಳಿಗೆ ಈ ಮಾರ್ಗವಾಗಿ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗುವಂತೆ ರಿಲ್ಯಾಕ್ಸ್‌ ಸ್ಪಾಟ್‌ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪಾರ್ಕಿಗೆ ಬರುವವರಿಗೆ ಪಾರ್ಕಿಂಗ್‌ ವ್ಯವಸ್ಥೆಗೆ ಕಿರಿಕಿರಿ ಇಲ್ಲದಂತೆ ಪಾರ್ಕಿನ ಸುತ್ತಲ್ಲೂ ಪಾರ್ಕಿಂಗ್‌ ವ್ಯವಸ್ಥೆಗೆ ಬೇಕಾದಷ್ಟು ಪ್ರಮಾಣದಲ್ಲಿ ಜಾಗವಿದೆ. ಪಾರ್ಕಿನೊಳಗೆ ಇಬ್ಬರು ವಾಚರ್‌ಗಳನ್ನು ನಿಯೋಜಿಸಲಾಗುತ್ತದೆ.
ಇನ್ನು ಪಾರ್ಕಿನಲ್ಲಿ ವಿವಿಧ ಬಗೆಯ ಔಷಧ ಗಿಡಗಳನ್ನು ನೆಟ್ಟು ಮೆಡಿಸಿನ್‌ ಗಾರ್ಡನ್‌ ನಿರ್ಮಾಣ ಮಾಡಲಾಗುತ್ತಿದೆ. ವಾಯು ವಿಹಾರ ಮಾಡುವವರಿಗೆ ಆರೋಗ್ಯಕರವಾದ ಶುದ್ಧ ಗಾಳಿ ಸೇವೆ ದೊರೆಯಲಿದೆ. ಮುಂದೆ ಡಿಎಫ್‌ಒ ಹಾಗೂ ಆರ್‌ಎಫ್‌ಒ ಒಳಗೊಂಡ ಕಮಿಟಿ ರಚಿಸಿ ಈ ಪಾರ್ಕಿನ ನಿರ್ವಹಣೆ ಮಾಡಲಾಗುತ್ತದೆ.

ಈ ಪಾರ್ಕಿಗೆ ಬರುವವರಿಗೆ ರಿಯಾಯಿತಿ ದರದಲ್ಲಿ ಟಿಕೆಟ್‌ಗಳನ್ನು ನೀಡಲಾಗುವುದು. ಮಕ್ಕಳಿಗೆ ವಿಶೇಷ ರಿಯಾಯಿತಿ ನೀಡಲು ಚಿಂತನೆ ನಡೆಸಲಾಗಿದೆ. ಒಟ್ಟಾರೆಯಾಗಿ ಅರಣ್ಯ ಇಲಾಖೆ ಹೈಟೆಕ್‌ ಪಾರ್ಕ್‌ ನಿರ್ಮಿಸುತ್ತಿರುವುದನ್ನು ಸಾರ್ವಜನಿಕರು ಸದುಪಯೋಗ
ಮಾಡಿಕೊಳ್ಳುವುದರೊಂದಿಗೆ, ಬಾಟಿಕೆ ಸಾಮಗ್ರಿಗಳ ಬಗ್ಗೆಯೂ ಗಮನ ಹರಿಸಿ ಕಾಪಾಡಬೇಕಿದೆ. ಪುಟ್ಟ ಮಕ್ಕಳಾಡುವ ಆಟಿಕೆ ಸಾಮಗ್ರಿಗಳು ದೊಡ್ಡವರು ಕುಳಿತು ಹಾಳುಗೆಡವದೆ, ತಮ್ಮ ಮಕ್ಕಳಿಗೇ ನಿರ್ಮಾಣವಾದ ಉಲ್ಲಾಸದ ತಾಣವನ್ನು ಕಾಪಾಡುವ ಜವಾಬ್ದಾರಿಯೂ ಇದೆ.

ಸುವರ್ಣ ವನ ಅಭಿವೃದ್ಧಿಗಾಗಿ ಪಂಚ ವಾರ್ಷಿಕ ಯೋಜನೆ ರೂಪಿಸಿಕೊಂಡು 1 ಕೋಟಿ ರೂ. ಅನುದಾನದ ನಿರೀಕ್ಷೆ ಮಾಡಲಾಗುತ್ತಿತ್ತು. ಆದರೆ ಸಾರ್ವಜನಿಕರು-ಮಕ್ಕಳ ಮನರಂಜನೆಗಾಗಿ, ಮೈಸೂರು ರಾಜರ ನೆನಪಿಗಾಗಿ ಕೆಲವೊಂದು ಹೆಚ್ಚುವರಿ ಕಾಮಗಾರಿಗಳನ್ನು ಮಾಡಲಾಗಿದೆ. ಇದರಿಂದ 1.22 ಕೋಟಿ ರೂ. ವೆಚ್ಚ ಆಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಒಳಗೊಂಡಂತೆ ಅರಣ್ಯ ಇಲಾಖೆ ಸಚಿವರಿಂದ ಉದ್ಘಾಟನೆ ಮಾಡಿಸಲು ಅರಣ್ಯ ಇಲಾಖೆ ಕಾಮಗಾರಿಗಳನ್ನು ಚುರುಕುಗೊಳಿಸಿದೆ.
ರಂಗನಾಥ್‌, ಆರ್‌ಎಫ್‌ಓ

ಪ್ರಶಾಂತ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next