Advertisement

Skeleton Lake: ಭಾರತದಲ್ಲಿದೆ ನಿಗೂಢ ಅಸ್ಥಿಪಂಜರಗಳ ಸರೋವರ… ಸಂಶೋಧಕರಿಗೂ ಸವಾಲಾದ ರಹಸ್ಯ

05:11 PM Jul 29, 2024 | ಸುಧೀರ್ |

ದೇಶದಲ್ಲಿ ಅದೆಷ್ಟೋ ಲೆಕ್ಕವಿಲ್ಲದಷ್ಟು ನಿಗೂಢವಾದ ಸ್ಥಳಗಳಿವೆ ಕೆಲವು ಈಗೀಗ ಗೋಚರಕ್ಕೆ ಬಂದರೆ ಕೆಲವೊಂದು ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ ಎಂದು ಹೇಳಿದರೂ ತಪ್ಪಾಗಲಾರದು. ಹಾಗೆಯೇ ಗೋಚರಕ್ಕೆ ಬಂದಿರುವ ಕೆಲ ಸ್ಥಳಗಳ ಹಿಂದಿನ ರಹಸ್ಯಗಳು ಭೇದಿಸಲಾಗದೆ ನಿಗೂಢವಾಗಿಯೇ ಉಳಿದುಕೊಂಡಿದೆ. ಈ ಸಾಲಿಗೆ ಹಿಮಾಚಲ ಪ್ರದೇಶದಲ್ಲಿರುವ ಗಿರಿ ಶಿಖರದಲ್ಲಿರುವ ‘ರೂಪಕುಂಡ್’ ಎಂಬ ಸರೋವರ ಇದನ್ನು ಅಸ್ಥಿಪಂಜರಗಳ ಸರೋವರ ಎಂದು ಕರೆಯುತ್ತಾರೆ.

Advertisement

ಭಾರತದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಭರಿತ ಶಿಖರಗಳ ನಡುವೆ ರೂಪಕುಂಡ್ ಎಂಬ ಹೆಸರಿನ ಸರೋವರವಿದೆ, ಈ ಸರೋವರದ ಪಕ್ಕದಲ್ಲಿ ನೂರಾರು ಮಾನವರ ಮೂಳೆಗಳು ಅಲ್ಲಲ್ಲಿ ಚದುರಿಕೊಂಡಿರುವ ರೀತಿಯಲ್ಲಿ ಕಾಣಸಿಗುತ್ತದೆಯಂತೆ. ಈ ನಿಗೂಢವಾಗಿರುವ ಪ್ರದೇಶಕ್ಕೆ ಭೇಟಿ ನೀಡಲು ಜನ ಹಿಂದೇಟು ಹಾಕುತ್ತಾರಂತೆ, ಇನ್ನೂ ಕೆಲವರು ಧೈರ್ಯ ಮಾಡಿ ಈ ಪ್ರದೇಶಕ್ಕೆ ಭೇಟಿ ನೀಡಿ ಹೆದರಿಕೊಂಡದ್ದೂ ಇದೆಯಂತೆ.

ಸಮುದ್ರ ಮಟ್ಟದಿಂದ ಸುಮಾರು 16,500 ಅಡಿ ಎತ್ತರದಲ್ಲಿರುವ ಈ ಸರೋವರವು ಹಿಮಾಲಯದ ಮೂರು ಶಿಖರಗಳ ನಡುವೆ ಇರುವುದರಿಂದ ಇದನ್ನು ‘ತ್ರಿಶೂಲ್; ಎಂದು ಕರೆಯಲಾಗುತ್ತದೆ. ತ್ರಿಶೂಲ್ ಪರ್ವತವನ್ನು ಭಾರತದ ಅತಿ ಎತ್ತರದ ಪರ್ವತ ಶಿಖರ ಎಂದು ಪರಿಗಣಿಸಲಾಗಿದೆ.

ಈ ಸರೋವರ ಮೊದಲು ಕಂಡವರು ಯಾರು?
ರೂಪಕುಂಡ್ ಸರೋವರವನ್ನು 1942 ರಲ್ಲಿ, ಬ್ರಿಟಿಷ್ ರೇಂಜರ್ ಗಸ್ತು ತಿರುಗುತ್ತಿದ್ದಾಗ ಈ ಸರೋವರವನ್ನು ಮೊದಲು ನೋಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಇಲ್ಲಿರುವ ಅಸ್ಥಿ ಪಂಜರಗಳ ಬಗ್ಗೆ ನಾನಾ ರೀತಿಯ ಕಟ್ಟುಕಥೆಗಳು ಹರಡಲು ಆರಂಭವಾಯಿತು. ಇದಾದ ಬಳಿಕ ಮಾನವಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಸುಮಾರು ಅರ್ಧ ಶತಮಾನದಿಂದ ಈ ಅಸ್ಥಿಪಂಜರಗಳನ್ನು ಅಧ್ಯಯನ ಮಾಡುತ್ತಿದ್ದಾರೆ ಆದರೆ ಅವರಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.

Advertisement

600 ರಿಂದ 800 ಮಾನವರ ಅಸ್ಥಿಪಂಜರ:
ಸರೋವರದ ಮೇಲಿನ ಮಂಜುಗಡ್ಡೆ ಕರಗಿದಾಗ ಮಾತ್ರ ಈ ಮಾನವ ಅಸ್ಥಿಪಂಜರಗಳು ಗೋಚರಿಸುತ್ತವೆ. ಈ ಸರೋವರದಿಂದ ಇಲ್ಲಿಯವರೆಗೆ 600 ರಿಂದ 800 ಮಾನವ ಅಸ್ಥಿಪಂಜರಗಳನ್ನು ಹೊರತೆಗೆಯಲಾಗಿದೆ ಎಂದು ಹೇಳಲಾಗುತ್ತಿದ್ದು. ಈ ಅಸ್ಥಿಪಂಜರಗಳು ಯಾರಿಗೆ ಸೇರಿವೆ, ಇಷ್ಟೊಂದು ಜನರು ಹೇಗೆ ಸತ್ತರು ಮತ್ತು ಅವರು ಎಲ್ಲಿಂದ ಬಂದರು ಎಂದು ವಿಜ್ಞಾನಿಗಳು ಅಧ್ಯಯನ ಮಾಡುತ್ತಲೇ ಇದ್ದಾರೆ, ಆದರೆ ಇಲ್ಲಿಯವರೆಗೆ ವಿಜ್ಞಾನಿಗಳಿಗೆ ಇಲ್ಲಿಯ ರಹಸ್ಯವನ್ನು ಭೇದಿಸಲು ಮಾತ್ರ ಸಾಧ್ಯವಾಗಲಿಲ್ಲ.

ಅಸ್ಥಿಪಂಜರಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳು:
ಅಸ್ಥಿಪಂಜರ ಸರೋವರದ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ ಅದರಲ್ಲಿ ಮೊದಲನೆಯದು ‘ಈ ಅಸ್ಥಿಪಂಜರಗಳು 870 ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತಿದ್ದು ದಂತಕಥೆಯ ಪ್ರಕಾರ, ರಾಜ ತನ್ನ ಗರ್ಭಿಣಿ ಪತ್ನಿ ಹಾಗೂ ಸೇವಕರ ಜೊತೆ ಇಲ್ಲಿನ ನಂದಾ ದೇವಿ ದೇವಾಲಯಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದಾಗ ರೂಪಕುಂಡ ಸರೋವರದ ಬಳಿ ಬಿರುಗಾಳಿಗೆ ಸಿಲುಕಿ ರಾಜ, ರಾಣಿ ಮತ್ತು ಸೇವಕರ ಗುಂಪು ಕಣ್ಮರೆಯಾಗಿ ಹೋಗಿತ್ತು, ಸರೋವರದ ಬಳಿ ಪತ್ತೆಯಾಗಿರುವ ಅಸ್ಥಿಪಂಜರಗಳು ಅವರಿಗೇ ಸೇರಿದ್ದು ಎಂದು ಹೇಳಲಾಗುತ್ತಿದೆ.

ಇನ್ನೊಂದು ಅಭಿಪ್ರಾಯದ ಪ್ರಕಾರ ಇದು ಜಪಾನ್ ಸೈನಿಕರಿಗೆ ಸೇರಿದ ಅಸ್ಥಿಪಂಜರಗಳಾಗಿವೆ ಎಂದು ಹೇಳಲಾಗುತ್ತಿದೆ ಜಪಾನ್ ಸೈನಿಕರು ಈಶಾನ್ಯ ಭಾಗದ ಮೂಲಕ ಭಾರತಕ್ಕೆ ನುಸುಳಲು ಯತ್ನಿಸಿದ ವೇಳೆ ನಡೆದ ಯುದ್ಧದಲ್ಲಿ ಮೃತಪಟ್ಟ ಸೈನಿಕರ ದೇಹವನ್ನು ಈ ಸರೋವರಕ್ಕೆ ಎಸೆಯಲಾಯಿತು ಎಂದು ಹೇಳಲಾಗುತ್ತಿದೆ.

ಮತ್ತೊಂದು ಕಥೆಯ ಪ್ರಕಾರ, ಶತಮಾನಗಳ ಹಿಂದೆ ಇಲ್ಲಿನ ಗ್ರಾಮವೊಂದರ ಜನ ಸಾಂಕ್ರಾಮಿಕ ರೋಗಕ್ಕೆ ಬಲಿಯಾದರು ಹಾಗಾಗಿ ಅವರನ್ನು ಈ ಪ್ರದೇಶದಲ್ಲಿ ಸಮಾಧಿ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಇನ್ನೊಂದು ಅಭಿಪ್ರಾಯದಲ್ಲಿ ಇಲ್ಲಿ ಪೂಜಿಸಲ್ಪಡುವ ನಂದಾದೇವಿ ಬಹಳ ಶಕ್ತಿಶಾಲಿಯಾಗಿದ್ದು ದೇವಿಯ ಆರಾಧನೆ ಮಾಡುವವರೆ ತಮ್ಮನ್ನು ದೇವಿಗೆ ಅರ್ಪಣೆ ಮಾಡಿರುವ ಸ್ಥಳವೆಂದೂ ಹೇಳಲಾಗುತ್ತಿದೆ.

ಮಹಿಳೆಯರ ಅಸ್ಥಿಪಂಜರಗಳೂ ಇವೆ:
ಅಧ್ಯಯನ ವರದಿಯ ಪ್ರಕಾರ ಇಲ್ಲಿ ಪತ್ತೆಯಾಗಿರುವ ಅಸ್ಥಿಪಂಜರಗಳಲ್ಲಿ 35 ರಿಂದ 40 ವಯಸ್ಸಿನವರದ್ದೇ ಆಗಿದ್ದು ಅದರಲ್ಲಿ ಕೆಲವು ವೃದ್ಧೆಯರ ಅಸ್ಥಿಪಂಜರವೂ ಸೇರಿವೆ ಎನ್ನಲಾಗಿದೆ.

ಇತ್ತೀಚಿಗೆ ನಡೆದ ಅಧ್ಯಯನ ವರದಿ ಹೇಳೋದೇನು:
ಈ ಸರೋವರದ ಕುರಿತು ಈ ಹಿಂದೆ ಜನರ ನಡುವೆ ಏನು ಊಹಾಪೋಹಗಳು ಇತ್ತು ಅದೆಲ್ಲವೂ ಸುಳ್ಳು ಎಂದು ಇಲ್ಲಿ ಅಧ್ಯಯನ ನಡೆಸಿರುವ ತಂಡಗಳು ಹೇಳಿವೆ. ಈ ಅಧ್ಯಯನವು ಭಾರತ, ಜರ್ಮನಿ ಮತ್ತು ಅಮೆರಿಕದ 16 ಸಂಸ್ಥೆಗಳಿಂದ ಮಾಡಲ್ಪಟ್ಟಿದ್ದು, ಅಧ್ಯಯನ ಮಾಡಿರುವ ವಿಜ್ಞಾನಿಗಳು ಸರೋವರದಲ್ಲಿದ್ದ ಸುಮಾರು 38 ಮಾನವರ ಅವಶೇಷಗಳನ್ನು ಕಾರ್ಬನ್ ಡೇಟಿಂಗ್ ಆಧಾರದ ಮೇಲೆ ಅಧ್ಯಯನ ಮಾಡಿದ್ದು ಇವುಗಳಲ್ಲಿ 15 ಮಹಿಳೆಯರ ಅವಶೇಷಗಳು ಸೇರಿತ್ತು ಎಂದು ಹೇಳಲಾಗಿದೆ, ಅಧ್ಯಯನದ ವೇಳೆ ಸರೋವರದಲ್ಲಿ ಪತ್ತೆಯಾದ ಅವಶೇಷಗಳಲ್ಲಿ ಕೆಲವೊಂದು 1,200 ವರ್ಷಗಳ ಹಿಂದಿನದು ಎಂದು ಹೇಳಿಕೊಂಡಿದ್ದಾರೆ ಅಲ್ಲದೆ ಅಲ್ಲಿ ಪತ್ತೆಯಾಗಿರುವ ಅವಶೇಷಗಳಿಗೆ ಹಲವು ವರ್ಷಗಳ ಅಂತರವಿದೆ ಎಂದು ಸಂಶೋಧಕರು ಹೇಳಿಕೊಂಡಿದ್ದಾರೆ.

ಈ ಕುರಿತು ಅಧ್ಯಯನ ನಡೆಸಿರುವ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿರುವ ಐಡಿಯನ್ ಹಾರ್ನಿ ನೀಡಿರುವ ಹೇಳಿಕೆಯಲ್ಲಿ ಈ ಹಿಂದೆ ರೂಪಕುಂಡ್ ಸರೋವರದಲ್ಲಿ ಬಿರುಗಾಳಿ, ಯುದ್ಧದಿಂದ ಸತ್ತಿದ್ದಾರೆ ಎನ್ನಲಾದ ಸಿದ್ದಾಂತವನ್ನು ತಿರಸ್ಕರಿಸಿದ್ದು, ರೂಪ್‌ಕುಂಡ್ ಸರೋವರದಲ್ಲಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಜೊತೆಗೆ ಅಲ್ಲಿ ಸಿಕ್ಕಿರುವ ಅವಶೇಷಗಳು ಎಲ್ಲವೂ ಒಂದೇ ಅವಧಿಯಲ್ಲಿ ನಡೆದಿರುವುದಲ್ಲ. ಅದಕ್ಕೆಲ್ಲ ನೂರಾರು ವರುಷಗಳ ಅಂತರವಿದೆ ಎಂದು ಹೇಳಿಕೊಂಡಿದ್ದು, ಹಾಗಾಗಿ ರೂಪ್‌ಕುಂಡ್ (ಅಸ್ಥಿಪಂಜರಗಳ) ಸರೋವರ ಇನ್ನೂ ರಹಸ್ಯವಾಗಿಯೇ ಉಳಿದುಕೊಂಡಿದ್ದು, ಈ ಕೆರೆಯು ಪ್ರವಾಸಿಗರ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಕೆರೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೂಡ ಬರುತ್ತಿದ್ದಾರೆ.

*ಸುಧೀರ್‌ ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next