ಸುರತ್ಕಲ್:ಇಲ್ಲಿನ ಸೂರಿಂಜೆಯ ಶಿಬರೂರು ದೇವಸ್ಥಾನ ಸಮೀಪ ನಂದಿನಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ಸಂಜೆ ಕೃಷ್ಣಾಪುರದ ಮಕ್ಸೂದ್ ಎಂಬಾತ ನಾಲ್ವರು ಸ್ನೇಹಿತರೊಂದಿಗೆ ಈಜಲೆಂದು ತೆರಳಿದ್ದು ರಾತ್ರಿಯಾದರೂ ಮನೆಗೆ ವಾಪಸಾಗಿರಲ್ಲಿಲ್ಲ, ಹೆದರಿದ ಪೋಷಕರು ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಅವರು ಸರಿಯಾಗಿ ಉತ್ತರ ನೀಡಿರಲಿಲ್ಲ.
ಸುರತ್ಕಲ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಬುಧವಾರ ಬೆಳಗ್ಗೆ ಮಕ್ಸೂದ್ ಜೊತೆ ಈಜಲು ತೆರಳಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನದಿಯ ಬಳಿ ಭಾರಿ ಹುಡುಕಾಟ ನಡೆಸಿ ಮಧ್ಯಾಹ್ನದ ವೇಳೆ ಮಕ್ಸೂದ್ನ ಶವ ಪತ್ತೆಯಾಗಿದೆ.
ತಣ್ಣೀರು ಬಾವಿ ಮುಳುಗು ತಜ್ಞರು ಸ್ಥಳಕ್ಕಾಗಮಿಸಿ ಹರ ಸಾಹಸಪಟ್ಟು ಶವವನ್ನು ಪತ್ತೆ ಹಚ್ಚಿ ಮೇಲಕ್ಕೆ ತಂದಿದ್ದಾರೆ. ಮಂಗಳವಾರ ಮದ್ಯರಾತ್ರಿಯಿಂದ ಬುಧವಾರ ವರೆಗೆ ಹುಡುಕಾಟ ನಡೆಸಲಾಗಿದ್ದು
ಆಕ್ಸಿಜನ್ ಬೋಟ್ ಬಳಕೆ ಮಾಡಲಾಗಿತ್ತು.
ವಶದಲ್ಲಿರುವ ನಾಲ್ವರ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದು ಕೊಲೆಯೋ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಆದರೆ ಮಕ್ಸೂದ್ ಪೋಷಕರು ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೊಲೆ ಎಂದಿದ್ದಾರೆ.