Advertisement

ಜೇಟ್ಲೀ ಬಜೆಟ್‌ ಮೇಲೆ ಮೈಸೂರಿಗರ ಹತ್ತಾರು ನಿರೀಕ್ಷೆ

05:42 PM Feb 01, 2018 | |

ಮೈಸೂರು: ಕೇಂದ್ರ ವಿತ್ತ ಮಂತ್ರಿ ಅರುಣ್‌ ಜೇಟ್ಲಿ ಅವರು ಗುರುವಾರ ಮಂಡಿಸಲಿರುವ 2018- 19ನೇ ಸಾಲಿನ ಆಯವ್ಯಯದಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಯಾವ ಕೊಡುಗೆ ನೀಡಲಿದ್ದಾರೆ ಎಂಬ ನಿರೀಕ್ಷೆ ಹುಟ್ಟಿಸಿದೆ.

Advertisement

ರಾಜಧಾನಿ ಬೆಂಗಳೂರಿನ ನಂತರ ಎಲ್ಲರ ದೃಷ್ಟಿ ಹರಿಯುವುದು ಮೈಸೂರಿ ನತ್ತ. ಕಳೆದ ಬಾರಿ ಘೋಷಿಸಿದ ಬೃಹತ್‌ ಜವಳಿ ಪಾರ್ಕ್‌ ತಾಂತ್ರಿಕ ಕಾರಣಗಳಿಂದಾಗಿ ಈವರೆಗೆ ಕಾರ್ಯಗತವಾಗಿಲ್ಲ. ಆದರೂ ಈ ಬಾರಿಯ ಬಜೆಟ್‌ನಲ್ಲಿ ಮೈಸೂರಿಗರು ಬೆಟ್ಟದಷ್ಟು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಬೆಳೆಗಾರರ ಹಿತರಕ್ಷಣೆ, ಯುವಜನರಿಗೆ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮಕ್ಕೆ ಆದ್ಯತೆ ಸಿಗಬೇಕಿದೆ.

ಮೈಸೂರಿನಲ್ಲಿ ಸಾಕಷ್ಟು ಎಂಜಿನಿಯರಿಂಗ್‌ ಕಾಲೇಜುಗಳಿದ್ದು ಪ್ರತಿ ವರ್ಷ ನೂರಾರು ಮಂದಿ ಎಂಜಿನಯರಿಂಗ್‌ ಪದವಿ ಪಡೆದು ಹೊರ ಬರುತ್ತಾರೆ. ಅವರಿಗೆ ಸ್ಥಳೀಯವಾಗಿ ಸೂಕ್ತ ಉದ್ಯೋಗ ದೊರೆಯದ ಕಾರಣ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಅರಮನೆಗಳ ನಗರಿ ಮೈಸೂರು ಪ್ರವಾಸಿಗರ ನೆಚ್ಚಿನ ತಾಣ. ಆದರೆ, ನಿಯಮಿತವಾಗಿ ಪ್ರವಾಸಿಗರನ್ನು ಸೆಳೆಯಲು ಪೂರಕ ವಾತಾವರಣ ಸೃಷ್ಟಿಸುವ ಕೆಲಸ ಆಗ ಬೇಕಿದೆ. ರೈತರ ಹಿತ ದೃಷ್ಟಿಯಿಂದ ಸ್ಥಳೀಯವಾಗಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಕೇಂದ್ರಗಳು, ಮಾರುಕಟ್ಟೆ ಸ್ಥಾಪಿಸಬೇಕಾದ ಅಗತ್ಯತೆ ಇದೆ.

ಇತರ ನಗರಗಳಿಗೆ ಇನಷ್ಟು ರೈಲು ನಿರೀಕ್ಷೆ: ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು-ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗ ಕಾರ್ಯಾರಂಭದ ಜತೆಗೆ ಮೈಸೂರು ರೈಲು ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಪ್ರಯಾಣಿಕ ಸ್ನೇಹಿ ವಾತಾವರಣ ನಿರ್ಮಿಸಿರುವುದು ರೈಲು ಪ್ರಯಾಣಿಕರಿಗೆ ಸಂತಸ ತಂದಿದೆ. ಇದರ ಜತೆಗೆ ಮೈಸೂರು – ಬೆಂಗಳೂರು ನಡುವೆ ವಾಹನ ದಟ್ಟಣೆ ಯಿಂದರಸ್ತೆ ಸಂಚಾರ ಕಷ್ಟಸಾಧ್ಯವಾಗಿರುವುದ ರಿಂದ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಅವಲಂಬಿಸುತ್ತಿದ್ದು, ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಗೆ ಇನ್ನಷ್ಟು ಹೊಸ ರೈಲುಗಳ ಘೋಷಣೆ ಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಡಿಸೇಲ್‌ ದರ ವ್ಯತ್ಯಯ ಹೊರೆ: ಹಿಂದೆಲ್ಲಾ ಕರ್ನಾಟಕದ ತಂಬಾಕಿಗೆ ರಫ್ತು ಸಹಾಯಧನ ಸಿಗುತ್ತಿತ್ತು. ಎನ್‌ಡಿಎ ಸರ್ಕಾರ ಅದನ್ನು ತೆಗೆದುಹಾಕಿದ್ದು, ರಫ‌¤ ಸಹಾಯಧನವನ್ನು ಮತ್ತೆ ಆರಂಭಿಸಬೇಕು. ತಂಬಾಕು ಸೇರಿದಂತೆ ರೈತ ಬೆಳೆದ ಬೆಳೆಗಳ ಮೇಲೆ ಜಿಎಸ್‌ಟಿ ಹಾಕುವುದನ್ನು ತಪ್ಪಿಸಬೇಕು.
 
ಡಿಸೇಲ್‌ ದರ ಪ್ರತಿ ನಿತ್ಯ ಏರು ಪೇರಾಗುವುದರಿಂದ ಟ್ರ್ಯಾಕ್ಟರ್‌ ಹೊಂದಿರುವ ರೈತರಿಗೆ ಹೊರೆಯಾಗಿದೆ. ಹೀಗಾಗಿ ದರ ನಿಗದಿ ಸರಿಪಡಿಸಬೇಕು. ಕೃಷಿ ಉತ್ಪನ್ನಗಳಿಗಾಗಿ ಸ್ಥಳೀಯವಾಗಿ ಸಂಸ್ಕರಣಾ ಕೇಂದ್ರ, ಶೈತ್ಯಾಗಾರ, ಬೃಹತ್‌ ಉಗ್ರಾಣಗಳ ನಿರ್ಮಾಣ ವಾಗಬೇಕು.
 
ಕನಿಷ್ಠ ಬೆಂಬಲ ಬೆಲೆಯ ಲಾಭ ರೈತರಿಗೆ ದೊರಕುವಂತಾಗಬೇಕು. ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಜತೆಗೆ ಕೃಷಿ ಮಾರುಕಟ್ಟೆಯ ವಹಿವಾಟಿನ ಬಗ್ಗೆ ರೈತನ ಮೊಬೈಲ್‌ಗೆ ಸಂದೇಶ ಬರುವುದಾದರೆ ರೈತ ನಷ್ಟ ಅನುಭವಿಸುವುದನ್ನು ತಪ್ಪಿಸಬಹುದು ಎನ್ನುತ್ತಾರೆ ರಾಜ್ಯ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷರಾದ ವಕೀಲ
ಬಿ.ವಿ.ಜವರೇಗೌಡ ಅವರು. ಒಂದು ದೇಶ-ಒಂದು ತೆರಿಗೆ ಪದ್ಧತಿ ಮುಖ್ಯವಾಗಿ ಜಾರಿಗೆ ಬರಬೇಕು. ಹೋಟೆಲ್‌ ಉದ್ಯಮಕ್ಕೇ ನಾಲ್ಕು ರೀತಿಯ ಜಿಎಸ್‌ಟಿ ಇದೆ. ಇದನ್ನು ತಪ್ಪಿ$ಸಬೇಕು. ಜತೆಗೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಬೇಕಾದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಸಂಗ್ರಹವನ್ನು ರದ್ದು ಪಡಿಸಬೇಕು.
 ● ನಾರಾಯಣ ಗೌಡ, ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ

Advertisement

ಪ್ರವಾಸಿಗರ ಮೆಚ್ಚಿನ ತಾಣವಾದ ಮೈಸೂರನ್ನು ಪಾರಂಪರಿಕ ನಗರ (ಹೆರಿಟೇಜ್‌ ಸಿಟಿ) ಎಂದು ಘೋಷಣೆ ಮಾಡಿ, ಅನುದಾನವನ್ನು ಮೀಸಲಿಡಬೇಕು. ಜತೆಗೆ ಮೈಸೂರಿಗೆ ಸಾಫ್ಟ್ವೇರ್‌ ಇಂಡಸ್ಟ್ರಿಗಳು ಬರುವಂತಾಗಿ ಉದ್ಯೋಗ ಸೃಷ್ಟಿಗೆ ಅವಕಾಶವಾಗಬೇಕು. ಪ್ರವಾಸೋದ್ಯಮ ಬೆಳೆಯಲು ವಿಮಾನ ಯಾನ ಸೌಲಭ್ಯ ಹೆಚ್ಚಬೇಕು. ಜತೆಗೆ ಅಂದಾಜು 800 ಕೋಟಿ ರೂ. ವೆಚ್ಚದ ವಿವಿಧೋದ್ದೇಶ ಸಮ್ಮೇಳನ ಕೇಂದ್ರ ನಿರ್ಮಾಣ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಕೇಂದ್ರ ನಿರ್ಮಾಣವಾದರೆ ಮೈಸೂರಿನಲ್ಲಿ ಪ್ರವಾಸೋದ್ಯಮದ ಚಟುವಟಿಕೆಗಳು ಹೆಚ್ಚಲಿದೆ.
 ● ಬಿ.ಎಸ್‌.ಪ್ರಶಾಂತ್‌, ಮೈಸೂರು ಟ್ರಾವೆಲ್‌ ಏಜೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ 

„ ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next