Advertisement

ತಂದೆ–ತಾಯಿ ಕಳೆದುಕೊಂಡು ಹಾಸ್ಟೆಲ್‌ನಲ್ಲೇ ಉಳಿದಾಕೆ, ವ್ಯಾಸಂಗ ಮಾಡಿ 9 ಚಿನ್ನದ ಪದಕ ಗೆದ್ದಳು

01:16 PM Mar 23, 2022 | Team Udayavani |

ಮೈಸೂರು: ತಂದೆ – ತಾಯಿ ಕಳೆದುಕೊಂಡ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್‌ನಲ್ಲೇ ಉಳಿದು ವಿದ್ಯಾಭ್ಯಾಸ ಮಾಡಿ, 9 ಚಿನ್ನದ ಪದಕ ಜೊತೆಗೆ 10 ನಗದು ಬಹುಮಾನ ಪಡೆದದ್ದು ಮೈಸೂರು ವಿವಿ 102ನೇ ಘಟಿಕೋತ್ಸವದಲ್ಲಿ ಗಮನ ಸೆಳೆಯಿತು.

Advertisement

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕೊತ್ತೇಗಾಲ ಗ್ರಾಮದ ವಿದ್ಯಾ ರ್ಥಿನಿ ವಿ.ತೇಜಸ್ವಿನಿ ಪದವಿಯಲ್ಲಿ 9 ಚಿನ್ನದ ಪದಕ ಪಡೆದು ಗಮನ ಸೆಳೆದರು.

ನಾಲ್ಕನೇ ತರಗತಿ ವ್ಯಾಸಂಗ ಮಾಡುವಾಗ ತಾಯಿ ಕಳೆದುಕೊಂಡಿದ್ದ ಇವರು, ಪಿಯುಸಿ ಓದು ವಾಗ ತಂದೆಯೂ ಮರಣ ಹೊಂದಿದ್ದರು. ಪ್ರತಿಭಾವಂತೆ ಆಗಿದ್ದ ತೇಜಸ್ವಿನಿ ಬೆಂಬಲಕ್ಕೆ ನಿಂತ ಆಕೆಯ ಕಾಲೇಜಿನ ಬೋಧಕ ಸಿಬ್ಬಂದಿ ಉನ್ನತ ಶಿಕ್ಷಣಕ್ಕಾಗಿ ಮೈಸೂರು ಮಹಾರಾಣಿ ಕಲಾ ಕಾಲೇಜಿಗೆ ಸೇರ್ಪಡೆ ಮಾಡುತ್ತಾರೆ.

ನಂತರ ಆ ಕಾಲೇಜಿನಲ್ಲೂ ಉಪನ್ಯಾಸಕರ ಮೆಚ್ಚುಗೆ ಪಡೆದ ತೇಜಸ್ವಿನಿ ಪದವಿ ಶಿಕ್ಷಣದಲ್ಲೂ ಅತ್ಯುತ್ತಮ ಅಂಕ ಪಡೆದು 9 ಚಿನ್ನದ ಪದಕ ಪಡೆದಿರುವುದು ಗಮನಾರ್ಹ. ಕಳೆದ ನಾಲ್ಕು ವರ್ಷಗಳಿಂದ ಹಾಸ್ಟೆಲ್‌ನಲ್ಲೇ ಉಳಿದು ವ್ಯಾಸಂಗ ಮಾಡುತ್ತಿರುವ ನನಗೆ, ಕಾಲೇಜಿನ ಉಪನ್ಯಾಸಕರು, ಸ್ನೇಹಿತರು, ಹಾಸ್ಟೆಲ್‌ನ ನಿಲಯ ಪಾಲಕರೇ ಪೋಷಕರಾಗಿದ್ದು, ಇವರ ನೆರವಿನಿಂದಲೇ ಮಾನಸಗಂಗೋತ್ರಿಯಲ್ಲಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಥಮ ವರ್ಷದ ಎಂಎ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡರು.

ಸಣ್ಣ ಹಳ್ಳಿಯಿಂದ ಬಂದು ಇಷ್ಟು ಪದಕ ಪಡೆದಿರುವುದಕ್ಕೆ ಎಲ್ಲಿಲ್ಲದ ಸಂಭ್ರಮ ಇದೆ. ಆದರೆ, ಈ ಗಳಿಗೆಯನ್ನು ನೋಡಲು ನಮ್ಮ ಅಪ್ಪ-ಅಮ್ಮ ಇಲ್ಲ ಎನ್ನುವುದೇ ಅತೀವ ನೋವು. ನಮ್ಮಪ್ಪನಿಗೆ ನಾನು ಉನ್ನತ ಮಟ್ಟದ ಅಧಿಕಾರಿಯಾಗಬೇಕು ಎಂಬ ಕನಸಿತ್ತು. ಅದನ್ನು ಸಾಕಾರಗೊಳಿಸುತ್ತೇನೆ. ನಾನು ಐಎಎಸ್‌ ಪರೀಕ್ಷೆ ಬರೆದು ಅಧಿಕಾರಿಯಾಗುತ್ತೇನೆ ಎಂದು ತನ್ನ ಕನಸನ್ನು ತೇಜಸ್ವಿನಿ ಬಿಚ್ಚಿಟ್ಟರು.

Advertisement

ತಂದೆ ವೆಂಕಟೇಶ ಹಾಗೂ ತಾಯಿ ನಾಗಮ್ಮ ಪುತ್ರಿಯಾದ ತೇಜಸ್ವಿನಿಗೆ ಅಕ್ಕ ಮತ್ತು ತಮ್ಮ ಇದ್ದು, ಇವರಿಬ್ಬರು ಊರಿನಲ್ಲೇ ಇದ್ದು ವ್ಯಾಸಂಗ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next