Advertisement

ಮೈಸೂರಿನಿಂದ ರಾಮನಗರದತ್ತ ಪ್ರಯಾಣ

06:00 AM Jul 31, 2018 | |

ಮೈಸೂರು: ಕನ್ನಡ ಚಿತ್ರನಗರಿ(ಫಿಲ್ಮ್ ಸಿಟಿ)ಗೆ ಈಗ ಟೂರಿಂಗ್‌ ಟಾಕೀಸ್‌ ಸ್ಥಾನಮಾನ ಸಿಕ್ಕಿದೆ!

Advertisement

ಕನ್ನಡ ಚಿತ್ರರಂಗಕ್ಕೆ ಸೂಕ್ತ ನೆಲೆ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು 3 ದಶಕಗಳ ಹಿಂದೆಯೇ ರೂಪಿಸಲಾಗಿದ್ದರೂ, ಬೇರೆ ಬೇರೆ ಸರ್ಕಾರಗಳ ಅವಧಿಯಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುವ ಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೈಸೂರು ಜಿಲ್ಲೆಗೆ ಹೋಗಿದ್ದ ಈ ಚಿತ್ರನಗರಿ, ಈಗ ಕುಮಾರಸ್ವಾಮಿ ಅವರ ಕಾಲದಲ್ಲಿ ರಾಮನಗರಕ್ಕೆ ಶಿಫ್ಟ್ ಆಗಿದೆ.

ಚಿತ್ರನಗರಿ ಮಾಡಬೇಕೆಂಬ ಉದ್ದೇಶ ರೂಪುಗೊಂಡಿದ್ದು ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದಾಗ. ಆಗ ಬೆಂಗಳೂರು ಹೊರ ವಲಯದ ಹೆಸರಘಟ್ಟದಲ್ಲಿ 400 ಎಕರೆ ಭೂಮಿ ನೀಡಲಾಗಿತ್ತು. ಆದರೆ, ಯೋಜನೆ ಮಾತ್ರ ಅನುಷ್ಠಾನವಾಗಲೇ ಇಲ್ಲ. ನಂತರದಲ್ಲಿ ಎಲ್ಲ ಮುಖ್ಯಮಂತ್ರಿಗಳು ಚಿತ್ರನಗರಿ ಬಗ್ಗೆ ಭರವಸೆ ನೀಡುತ್ತಿದ್ದರೇ ಹೊರತು ಈಡೇರುತ್ತಿರಲಿಲ್ಲ.

ಆದರೆ, ಸಿದ್ದರಾಮಯ್ಯ ಸಿಎಂ ಆದಾಗ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಮರುಜೀವ ನೀಡಿದರು. 2015ರಲ್ಲಿ ಮೈಸೂರಿನಲ್ಲೇ ನಡೆದ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರಿನಲ್ಲೇ ಚಿತ್ರನಗರಿ ನಿರ್ಮಿಸುವ ಘೋಷಣೆ ಮಾಡಿದ್ದಲ್ಲದೇ, ವರುಣಾ ಕ್ಷೇತ್ರದ ಹಿಮ್ಮಾವು ಗ್ರಾಮದ ವ್ಯಾಪ್ತಿಯಲ್ಲಿ 110 ಎಕರೆ ಭೂಮಿಯನ್ನು ವಾರ್ತಾ ಇಲಾಖೆಗೆ ಮಂಜೂರು ಮಾಡಿಸಿದ್ದರು.

ಈಗ ರಾಮನಗರಕ್ಕೆ ಪ್ರಯಾಣ: ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಮುತುವರ್ಜಿ ವಹಿಸಿ ಒಂದಷ್ಟು ಕೆಲಸಗಳನ್ನು ಮಾಡಿದರಾದರೂ ಯೋಜನೆ ಅನುಷ್ಠಾನವಾಗಲಿಲ್ಲ. ಇದೀಗ ಕುಮಾರಸ್ವಾಮಿ ಸಿಎಂ ಆಗಿದ್ದು, ಈ ಚಿತ್ರನಗರಿ ಯೋಜನೆಯನ್ನು ತಮ್ಮ ಕ್ಷೇತ್ರ ರಾಮನಗರಕ್ಕೆ ತೆಗೆದುಕೊಂಡು ಬಂದಿದ್ದಾರೆ. ತಾವು ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ರಾಮನಗರದ ಫಿಲ್ಮ್ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್‌ ರೆಕಾರ್ಡಿಂಗ್‌ ಮಾಡುವ ಸಂಸ್ಥೆ, ಅನಿಮೇಷನ್‌ ಸ್ಟುಡಿಯೋಗಳು, ಕಂಪ್ಯೂಟರ್‌ ಗ್ರಾಫಿಕ್ಸ್‌ ಸ್ಟುಡಿಯೋಗಳು ಸೇರಿ ಚಲನಚಿತ್ರರಂಗಕ್ಕೆ ಸೇವೆಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ. ಬಂಡವಾಳ ನೀಡಲಾಗುವುದು. ಜತೆಗೆ ಹೊರ ದೇಶಗಳಿಂದ ಚಿತ್ರ ನಿರ್ಮಾಣಕ್ಕಾಗಿ ಬರುವ ಕಲಾವಿದರು ಮತ್ತು ತಂತ್ರಜ್ಞರಿಗೆ ವಸತಿ ಹಾಗೂ ಇನ್ನಿತರೆ ಅವಶ್ಯಕ ಮೂಲ ಸೌಲಭ್ಯ ನಿರ್ಮಾಣಕ್ಕಾಗಿ 20 ಕೋಟಿ ನೀಡುವುದಾಗಿ ಹೇಳಿದ್ದರು. ಇದರ ಜತೆಗೆ ರಾಮನಗರದಲ್ಲೇ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿವಿ  ಆರಂಭಿಸಲು 30 ಕೋಟಿ ಬಂಡವಾಳ ನೀಡುವುದಾಗಿಯೂ ಹೇಳಿದ್ದಾರೆ.

Advertisement

ಮೈಸೂರಿನಲ್ಲೇ ಇರಲಿ
ಮೈಸೂರಿನಲ್ಲೇ ಚಿತ್ರನಗರಿ ನಿರ್ಮಾಣ ಆಗಬೇಕೆಂದು 1980ರ ದಶಕದಲ್ಲೇ ಧ್ವನಿ ಎತ್ತಿದ್ದ ಜೂನಿಯರ್‌ ನರಸಿಂಹರಾಜು, ಚಿತ್ರನಗರಿ ನಿರ್ಮಾಣಕ್ಕೆ ಮೈಸೂರು ಎಲ್ಲ ರೀತಿಯಲ್ಲೂ ಪ್ರಶಸ್ತವಾದ ಸ್ಥಳ ಎನ್ನುತ್ತಾರೆ. ಮೈಸೂರು ಸುತ್ತಮುತ್ತ 10 ರಿಂದ 100 ಕಿ.ಮೀ ಒಳಗೆ ಹೊರಾಂಗಣ ಚಿತ್ರೀಕರಣಕ್ಕೆ ಸಾಕಷ್ಟು ತಾಣಗಳಿವೆ, ಪಕ್ಕದ ಕೊಡಗು ಜಿಲ್ಲೆಗೆ ಹೊರಾಂಗಣ ಚಿತ್ರೀಕರಣಕ್ಕೆ ಹೋದರೂ ಅಲ್ಲಿ ತಂಗುವ ಬದಲು ವಾಪಸ್‌ ಬರಬಹುದಾಗಿದೆ. ಇದರಿಂದ ಹಣ ಮತ್ತು ಸಮಯ ಎರಡೂ ಉಳಿಯುತ್ತದೆ ಎಂದು ಹೇಳುತ್ತಾರೆ.

ಚಿತ್ರನಗರಿ ಎಂದರೆ ಕೇವಲ ಶೂಟಿಂಗ್‌ ತಾಣವಲ್ಲ. ಕಲಾವಿದರು, ತಂತ್ರಜ್ಞರು ಸೇರಿ ಸಿನಿಮಾ ಮಂದಿ ಎಲ್ಲರೂ ಒಂದೇ ಕಡೆ ಇರುವಂತಾಗಬೇಕು. ಗಾಂಧಿನಗರ ವ್ಯಾಪಾರಿ ಕೇಂದ್ರ ಅಷ್ಟೇ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಿದರೆ ಹಣ, ಸಮಯ ಎರಡೂ ಉಳಿತಾಯವಾಗುತ್ತದೆ. ಹೀಗಾಗಿ ಮೈಸೂರು ಚಿತ್ರನಗರಿಗೆ ಸೂಕ್ತವಾದ ಸ್ಥಳ.
– ಜೂನಿಯರ್‌ ನರಸಿಂಹರಾಜು,ನಟ

ವಾರ್ತಾ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಭೂಮಿ ಹಸ್ತಾಂತರವಾಗಿದೆ. ಕೆಎಐಡಿಬಿಗೆ ಇಲಾಖೆಯಿಂದ ಗುತ್ತಿಗೆ ಮೊತ್ತವನ್ನು ಪಾವತಿಸಬೇಕು. ಈ ಸಂಬಂಧ ಎರಡೂ ಇಲಾಖೆ ನಡುವೆ ಮಾತುಕತೆ ನಡೆದಿದೆ. ರಾಮನಗರಕ್ಕೆ ಚಿತ್ರನಗರಿ ಸ್ಥಳಾಂತರವಾಗುವ ಬಗ್ಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ.
– ಜನಾರ್ದನ,ಉಪ ನಿರ್ದೇಶಕ,ಪ್ರವಾಸೋದ್ಯಮ ಇಲಾಖೆ

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next