Advertisement

ಪ್ರಾಪರ್ಟಿ ಪರೇಡ್‌ ನಡೆಸಿದ ಮೈಸೂರು ಪೊಲೀಸರು

09:22 PM Jul 02, 2019 | Team Udayavani |

ಮೈಸೂರು: ಮೈಸೂರು ನಗರದಲ್ಲಿ 2018 ಮತ್ತು 2019ನೇ ಸಾಲಿನಲ್ಲಿ 511ವಿವಿಧ ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, 415 ಆರೋಪಿಗಳನ್ನು ಬಂಧಿಸಿ 5.96 ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ನಗರದ ಸಿಎಆರ್‌ ಮೈದಾನದಲ್ಲಿ ಮಂಗಳವಾರ ಪ್ರಾಪರ್ಟಿ ಪರೇಡ್‌ ನಡೆಸಿ ವಶಪಡಿಸಿಕೊಂಡಿರುವ ಮಾಲುಗಳನ್ನು ಅವುಗಳ ವಾರಸುದಾರರಿಗೆ ಹಿಂತಿರುಗಿಸಿದರು. 2018ರಲ್ಲಿ ಒಟ್ಟು 621 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 341 ಪ್ರಕರಣಗಳನ್ನು ಪತ್ತೆ ಹಚ್ಚಿ 4.07 ಕೋಟಿ ರೂ. ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

2019ರಲ್ಲಿ ಒಟ್ಟು 288 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 170 ಪ್ರಕರಣಗಳನ್ನು ಪತ್ತೆ ಹಚ್ಚಿ 1.90 ಕೋಟಿ ರೂ. ಮೌಲ್ಯದ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. 6 ಕೇಜಿ 321 ಗ್ರಾಂ ಚಿನ್ನಾಭರಣ, 8 ಕೇಜಿ ಬೆಳ್ಳಿ ಪದಾರ್ಥ, 211 ದ್ವಿಚಕ್ರ ವಾಹನಗಳು, 27 ಕಾರು ಮತ್ತು ಜೀಪು, 35 ಇತರೆ ವಾಹನಗಳು, 131 ಮೊಬೈಲ್‌ ಫೋನ್‌ಗಳು, 12 ಲ್ಯಾಪ್‌ಟಾಪ್‌, 1.12 ಕೋಟ ರೂ. ನಗದು ಹಾಗೂ 30 ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ನಗರದ ಪ್ರಮುಖ ಕಟ್ಟಡಗಳು, ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು, ಪೆಟ್ರೋಲ್‌ ಬಂಕ್‌ಗಳು ಮತ್ತು ವಸತಿ ಸಮುತ್ಛಯಗಳು ಹಾಗೂ ಬಡಾವಣೆಗಳಲ್ಲಿ ಖಾಸಗಿಯಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ದುರಸ್ತಿಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಸರಿಪಡಿಸಿ ಸರಿಯಾದ ದಿಕ್ಕಿಗೆ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.

ನಗರದಲ್ಲಿ ಒಂಟಿಯಾಗಿ ವಾಸವಿರುವ ವಯೋವೃದ್ಧªರ ರಕ್ಷಣೆಗಾಗಿ ಅಭಯ, ನಗರದ ಬಾಡಿಗೆ ಮನೆಗಳಲ್ಲಿ ವಾಸವಿರುವವರ ಮಾಹಿತಿ ಸಂಗ್ರಹಣೆಗೆ ಸುರಕ್ಷಾ ತಂಡ, ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರಿಂದ ಜಂಟಿಯಾಗಿ ಮತ್ತು ಅನಿರೀಕ್ಷಿತವಾಗಿ ವಾಹನಗಳ ತಪಾಸಣೆಗೆ ಆಪರೇಷನ್‌ ಚೀತಾ, ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ಹೆಚ್ಚಿಸಲಾಗಿದ್ದು, ರಾತ್ರಿ ಗಸ್ತು ಬಿಗಿಗೊಳಿಸಲಾಗಿದೆ.

Advertisement

ದಿನದ 24 ಗಂಟೆಯೂ ನಗರದ ಗಸ್ತು ನಿರ್ವಹಣೆಗೆ 40 ಗರುಡಾ ವಾಹನಗಳು ಮತ್ತು 36 ಚೀತಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ನಗರದ ಪ್ರಮುಖ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ಕಳವು ನಿಯಂತ್ರಣ ಮಾಡುವ ಸಂಬಂಧ ಮಫ್ತಿಯಲ್ಲಿ ಪೊಲೀಸ್‌ ಸಿಬ್ಬಂದಿ ನೇಮಕ ಮತ್ತು ನಿಗಾವಹಿಸುವಿಕೆ ಮತ್ತು ವಾಣಿಜ್ಯ ಸಂಕೀರ್ಣಗಳ ಪಾರ್ಕಿಂಗ್‌ ಸ್ಥಳಗಳಲ್ಲಿ ಖಾಸಗಿಯಾಗಿ ಸಿಸಿ ಕ್ಯಾಮರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹೊರ ಊರಿಗೆ ಹೋಗುವಾಗ ಈ ಬಗ್ಗೆ ಪೊಲೀಸ್‌ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಅರಿವು ಕಾರ್ಯಕ್ರಮ: ಪೊಲೀಸ್‌ ಸಿಬ್ಬಂದಿ ಪ್ರತಿ ತಿಂಗಳು ಎರಡು ಹೊಸ ಬೀಟ್‌ ಸಿಸ್ಟಂ ಸದಸ್ಯರ ಸಭೆ ನಡೆಸುತ್ತಿದ್ದು, ಈ ಸಭೆಗಳಲ್ಲಿ ಸಾರ್ವಜನಿಕರಿಗೆ ಅಪರಾಧ ನಿಯಂತ್ರಣ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ. ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅಪರಾಧ ನಿಯಂತ್ರಣ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ. ಜತೆಗೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬಡಾವಣೆಗಳಲ್ಲಿ ಪೊಲೀಸ್‌ ವಾಹನಗಳ ಪಬ್ಲಿಕ್‌ ಅಡ್ರೆಸ್ಸಿಂಗ್‌ ಸಿಸ್ಟಂ ಮೂಲಕ ಅಪರಾಧ ನಿಯಂತ್ರಣ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ.

ವಿಶೇಷ ಸಂದರ್ಭಗಳಲ್ಲಿ ಅಪರಾಧ ನಿಯಂತ್ರಣ ಕುರಿತ ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಜತೆಗೆ ವರದಿಯಾಗಿರುವ ಪ್ರಕರಣಗಳ ಪತ್ತೆಗೆ ಎಸಿಪಿ ಮಟ್ಟದಲ್ಲಿ ತಂಡಗಳನ್ನು ರಚಿಸಿದ್ದು, ತಾಂತ್ರಿಕ ಕೋಶ, ಬೆರಳಚ್ಚು, ಶ್ವಾನದಳ, ಇತರೆ ವೈಜ್ಞಾನಿಕತೆಯನ್ನು ಬಳಕೆ ಮಾಡಿಕೊಂಡು ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ವಿವರಿಸಿದರು.

ಕಳ್ಳತನ ತಡೆಗೆ ವಿಶೇಷ ಕಾರ್ಯಾಚರಣೆ: ನಗರದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸರಗಳ್ಳತನವನ್ನು ನಿಯಂತ್ರಿಸಲು ಬೆಳಗ್ಗೆ 6 ರಿಂದ 9ಗಂಟೆವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 9ಗಂಟೆವರೆಗೆ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಿ ಆಪರೇಷನ್‌ ಸನ್‌ರೈಸ್‌ ಮತ್ತು ಸನ್‌ಸೆಟ್‌ ಕಾರ್ಯಾಚರಣೆ ನಡೆಸಲಾಗುವುದು. ಸರಗಳ್ಳತನ ಪತ್ತೆ ಸಂಬಂಧ ಆಪರೇಷನ್‌ ಫಾಸ್ಟ್‌ ಟ್ರಾಕ್‌ ವಿಶೇಷ ಕಾರ್ಯಾಚರಣೆ. ಪೊಲೀಸರು ಸಾರ್ವಜನಿಕರಂತೆ ವರ್ತಿಸಿ, ಸ್ವತ್ತು ಕಳವು ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಲು ಆಪರೇಷನ್‌ ಡಿಕಾಯ್‌ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next