Advertisement

ಫ‌ಳಕ್ಕನೆ ನಕ್ಕ ಪ್ಯಾಲೇಸ್‌

02:02 PM Oct 13, 2018 | |

ಶ್ರೀರಂಗಪಟ್ಟಣ ಪತನದ ನಂತರ ಈಸ್ಟ್‌ ಇಂಡಿಯಾ ಕಂಪನಿಯ ಸೂಚನೆ ಮೇರೆಗೆ, ಯದುವಂಶದ ಅರಸರು ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಕ್ರಿ.ಶ.1897ರ ಫೆಬ್ರವರಿ 27ರಂದು ಮೈಸೂರು ರಾಜಮನೆತನದ ಮೊದಲನೆಯ ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಸಂದರ್ಭದಲ್ಲಿ, ಮರದ ಅರಮನೆ ಬೆಂಕಿಗೆ ಆಹುತಿಯಾಯಿತು. ಆಗ ಮಹಾರಾಣಿ ವಾಣಿವಿಲಾಸ ಅವರು, ಅದೇ ಜಾಗದಲ್ಲಿ ಹೊಸ ಅರಮನೆ ಕಟ್ಟಿಸುವ ಕೆಲಸವನ್ನು ಅದೇ ವರ್ಷ ಆರಂಭಿಸಿದರು.ಇದಕ್ಕಾಗಿ, ಹೆಸರಾಂತ ಇಂಜಿನಿಯರ್‌ ಹೆನ್ರಿ ಇರ್ವಿನ್‌ರನ್ನು ಕರೆಸಿ, ಅವರಿಂದ ಹೊಸ ಅರಮನೆ ನಿರ್ಮಾಣಕ್ಕೆ ವಿನ್ಯಾಸ ಮಾಡಿಸಲಾಯಿತು. 75 ಎಕರೆ 10 ಗುಂಟೆ ವಿಸ್ತೀರ್ಣದಲ್ಲಿ, ಇಂಡೋ ಸಾರ್ಸೆನಿಕ್‌ ಶೈಲಿಯ ಭವ್ಯವಾದ ಅರಮನೆ ಕಟ್ಟಡ ನಿರ್ಮಾಣ ಕಾರ್ಯ 1912ರಲ್ಲಿ ಪೂರ್ಣಗೊಂಡಿತು. ಅಂಬಾ ವಿಲಾಸ ಅಥವಾ ಲಕ್ಷ್ಮೀ ವಿಲಾಸ ಅರಮನೆ ಎಂದು ಕರೆಯಲಾಗುವ ಮೈಸೂರಿನ ಪ್ರಮುಖ ಅರಮನೆ ನಿರ್ಮಾಣಕ್ಕೆ ಅಂದಿನ ಕಾಲಕ್ಕೇ ತಗುಲಿದ ವೆಚ್ಚ 4.1 ದಶಲಕ್ಷ ರೂಪಾಯಿ! ಮೈಸೂರಿನಲ್ಲಿರುವುದು ದ್ರಾವಿಡಿಯನ್‌, ಇಂಡೋಸಾರ್ಸನಿಕ್‌, ಓರಿಯಂಟಲ್‌ ಹಾಗೂ ರೋಮನ್‌ ಶೈಲಿಯಲ್ಲಿ ನಿರ್ಮಾಣವಾಗಿರುವ ಮೂರು ಅಂತಸ್ತಿನ ಸುಂದರ ಅರಮನೆ.

Advertisement

ಶಿಮ್ಲಾದ ವೈಸ್‌ ರೀಗಲ್‌ ಲಾಡ್ಜ್ನ ಶಿಲ್ಪಿ ಹೆನ್ರಿ ಇರ್ವಿನ್‌ ಅವರಿಂದ ವಾಸ್ತುಶಿಲ್ಪದ ನಕಾಶೆ ಅನು ಮೋದನೆಯೊಂದಿಗೆ ಎಂಜಿನಿಯರ್‌ ಬಿ.ಪಿ.ರಾಘವುಲು ನಾಯ್ಡು ಅವರಿಂದ ಅರಮನೆಯ ನಿರ್ಮಾಣ ಕಾರ್ಯ ನಡೆಯಿತು. ಗ್ರೇ ಗ್ರಾನೈಟ್‌ ಮತ್ತು ಗುಲಾಬಿ ಬಣ್ಣದ ಮಾರ್ಬಲ್‌ ಗೋಳಗಳನ್ನು ಹೊಂದಿದ್ದು, ಅರಮನೆಯ ಗೋಪುರ, 145 ಅಡಿ ಎತ್ತರ ಹಾಗೂ ಏಳು ಕಮಾನುಗಳಿಂದ ಕೂಡಿದೆ. 4.5 ಅಡಿ ದಪ್ಪ 31 ಅಡಿ ಎತ್ತರದ ಕೋಟೆ ಹೊಂದಿದೆ. ಕೋಟೆ ಯಲ್ಲಿ ಭುವನೇಶ್ವರಿ, ಶ್ವೇತವರಾಹ ಸ್ವಾಮಿ, ಸೋಮೇಶ್ವರ, ಲಕ್ಷ್ಮೀರಮಣ ಸ್ವಾಮಿ, ಕೋಡಿ ಭೈರವ, ತ್ರೀನೇಶ್ವರಸ್ವಾಮಿ, ಗಾಯತ್ರಿ ದೇವಸ್ಥಾನ ಸೇರಿದಂತೆ 12 ದೇವಸ್ಥಾನಗಳಿವೆ. ಅರಮನೆಯ ಮತ್ತೂಂದು ಪ್ರಮುಖ ಆಕರ್ಷಣೆ, 60 ಅಡಿ ಎತ್ತರ-46 ಅಡಿ ಅಗಲದ ಜಯ ಮಾರ್ತಾಂಡ ಪ್ರವೇಶ ದ್ವಾರ. ಏಳು μರಂಗಿಗಳಿಂದ ರಚಿತವಾದ ಆನೆ ಬಾಗಿಲು, ಅಂಬಾವಿಲಾಸ್‌ ಅಥವಾ ದಿವಾನ್‌ -ಈ-ಖಾಸ್‌ ಹೆಸರಿನ  ಖಾಸಗಿ ದರ್ಬಾರ್‌ ಸಭಾಂ ಗಣ ನೋಡುಗರ ಕಣ್ಮನ ಸೆಳೆಯುತ್ತದೆ. ಇದಲ್ಲದೆ ನವ ರಾತ್ರಿಯ ಸಂದರ್ಭದಲ್ಲಿ 200 ಕೆ.ಜಿ ಶುದ್ಧ ಚಿನ್ನದಿಂದ ತಯಾ ರಿಸಿದ ಸಿಂಹಾಸನವನ್ನೂ ಕೂಡ ಕಣ್ತುಂಬಿಕೊಳ್ಳಬಹುದು.

ಈ ವಿಶೇಷತೆಗಳಿಂದಾಗಿಯೇ ಮೈಸೂರು ಎಂದಾಕ್ಷಣ, ಎಲ್ಲರೂ ಒಮ್ಮೆ ಅರಮನೆ ವೀಕ್ಷಣೆ ಮಾಡಿ ಬರಬೇಕು ಎಂದು ತವಕಿಸುತ್ತಾರೆ. ವರ್ಷಕ್ಕೆ ಸರಾಸರಿ 32 ರಿಂದ 35 ಲಕ್ಷ ಪ್ರವಾಸಿಗರು ಅರಮನೆ ವೀಕ್ಷಣೆ ಮಾಡುತ್ತಿದ್ದು, ಈ ಪೈಕಿ ಒಂದು ಲಕ್ಷ ವಿದೇಶಿ ಪ್ರವಾಸಿಗರೂ ಸೇರಿದ್ದಾರೆ. ಮೈಸೂರು ಅರಮನೆ ಮಂಡಳಿ ರಚನೆಯಾದ ನಂತರ, ತೋಟಗಾರಿಕೆ ವಿಭಾಗದಿಂದ ಅರಮನೆ ಆವರಣದಲ್ಲಿನ ಉದ್ಯಾನಗಳ ನಿರ್ವಹಣೆ, ಸ್ವತ್ಛತಾ ವಿಭಾಗಗಳಲ್ಲಿ 35 ಮಂದಿ ಕಾಯಂ ಸಿಬ್ಬಂದಿ ಹಾಗೂ 75 ಮಂದಿ ಹೊರ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು, ಶೌಚಾಲಯ, ಗಾಲಿಕುರ್ಚಿ, ಬ್ರೈಲ್‌ಲಿಪಿಯಲ್ಲಿ ಮಾಹಿತಿ ಪುಸ್ತಕ ಸೇರಿದಂತೆ ಪ್ರವಾಸಿಗರಿಗೆ ಕನಿಷ್ಠ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರತಿ ವರ್ಷ ದಸರೆಯ ಸಂದರ್ಭದಲ್ಲಿ ಪ್ರಾಚ್ಯ ವಸ್ತು ಮತ್ತು ಪರಂಪರೆ ಇಲಾಖೆಯವರು ಇ-ಪ್ರೊಕ್ಯೂರ್‌ವೆುಂಟ್‌ನಲ್ಲಿ ಟೆಂಡರ್‌ ಕರೆದು ಯಶಸ್ವಿ ಬಿಡ್ಡು ದಾರರಿಂದ ಅರಮನೆಯ ಹೊರ ಆವರಣಕ್ಕೆ ನೈಸರ್ಗಿಕ ಸುಣ್ಣ-ಬಣ್ಣ ಬಳಿಸಲಾಗುತ್ತದೆ. ಒಳ ಆವರಣದ ಕೆಲವು ಭಾಗಗಳಿಗೆ ಪೇಂಟಿಂಗ್‌ ಮಾಡಿಸಬೇಕಾದರೆ ವಿಶೇಷ ಪರಿಣಿತರ ತಂಡ ರಚಿಸಿ ಅವರ ಸಲಹೆ ಮೇರೆಗೆ ಪೇಂಟಿಂಗ್‌ ಮಾಡಿಸಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಒಳ ಆವರಣಕ್ಕೆ ಪೇಂಟಿಂಗ್‌ ಮಾಡಿಸಿಲ್ಲ. 

ಝಗಮಗಿಸುವ ಅರಮನೆ
 ನವರಾತ್ರಿಯ ಹತ್ತು ದಿನಗಳು ಸೇರಿದಂತೆ ವಾರಾಂತ್ಯದ ದಿನಗಳು ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ರಾತ್ರಿ 7 ರಿಂದ 8ಗಂಟೆವರೆಗೆ ಒಂದು ಗಂಟೆಗಳ ಕಾಲ ಸ್ವರ್ಣವರ್ಣದಲ್ಲಿ ಜಗಮಗಿಸುವ ಮೈಸೂರು ಅರಮನೆಯ ವಿದ್ಯುದೀಪಾಲಂಕಾರಕ್ಕೆ ಮನಸೋಲದವರೇ ಇಲ್ಲ. ಮೈಸೂರು ಯದು ವಂಶದ ಕೊನೆಯ ರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ರ ಕಾಲದಲ್ಲಿ 1942ರ ಸುಮಾರಿನಲ್ಲಿ ಅರಮನೆಗೆ ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಮಾಡಿಸಲಾಗಿದೆ. ತೇಗದ ಮರದ ಪಟ್ಟಿಗಳ ಮೇಲೆ ವೋಲ್ಡರ್‌ಗಳನ್ನು ಜೋಡಿಸಿ ಅಂದಾಜು ಒಂದು ಲಕ್ಷ ಸೂð ಟೈಪ್‌ ಇನ್‌ ಕ್ಯಾಂಡಿಸೆಂಟ್‌ ಬಲ್ಬ್ ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ 30 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸ ಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್‌ನ ಬಲ್ಬ್ಗಳನ್ನು ಅಳವಡಿಸಲಾಯಿತು. ಸದ್ಯ 15 ವ್ಯಾಟ್‌ನ ಬಲ್ಬ್ ಗಳನ್ನು ಅಳವಡಿಸಲಾಗಿದೆ. 

ಮೈಸೂರು ಅರಮನೆಯ ದೀಪಾಲಂಕಾರ ವ್ಯವಸ್ಥೆಗಾಗಿಯೇ ಅರಮನೆಯ ಪವರ್‌ ಹೌಸ್‌ನಲ್ಲಿ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅರಮನೆ ಹಾಗೂ ಗೇಟ್‌ಗಳಿಗೆ ಮೂರು ಪ್ರತ್ಯೇಕ ಸ್ವಿಚ್‌ಗಳಿದ್ದು, ದೀಪಾಲಂಕಾರದ ವೇಳಾಪಟ್ಟಿಯಂತೆ ಈ ಮೂವರು ಸಿಬ್ಬಂದಿ ಏಕಕಾಲಕ್ಕೆ ಮೂರು ಸ್ವಿಚ್‌ಗಳನ್ನು ಹಾಕುತ್ತಾರೆ. ಸ್ವಿಚ್‌ ಹಾಕಿದ ಕೂಡಲೇ ಇಡೀ ಅರಮನೆ ಸ್ವರ್ಣವರ್ಣದಿಂದ ಜಗಮಗಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತದೆ. ಸ್ವರ್ಣವರ್ಣದಿಂದ ಕಂಗೊಳಿಸುವ ಅರಮನೆಯನ್ನು ತೀರಾ ಹತ್ತಿರದಿಂದ ನೋಡಿದರಷ್ಟೆ ಬಲ್ಬ್ ಗಳನ್ನು ಅಳವಡಿಸಿರುವುದು ಕಾಣಿಸುತ್ತದೆ, ದೂರದಿಂದ ನೋಡಿದವರಿಗೆ ಬಲ್ಬ್ಗಳು ಕಾಣಿಸುವುದಿಲ್ಲ. ಜತೆಗೆ ಅರಮನೆಗೆ ಅಳವಡಿಸಿರುವ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳ ವಿಶೇಷತೆಯೆಂದರೆ ವಿದ್ಯುದ್ದೀಪದ ಶೇಡ್‌ ಪಕ್ಕದವರ ಮೇಲೆ ಬೀಳುವುದಿಲ್ಲ.

Advertisement

ವಿದ್ಯುತ್‌ ಉಳಿತಾಯ ಮತ್ತು ಪರಿಸರ ಸ್ನೇಹಿ ಕ್ರಮಗಳ ಸಲುವಾಗಿ ಮಂಡಳಿ ಕೂಡ ಅರಮನೆಗೆ ಅಳವಡಿಸಿರುವ ಇನ್‌ಕ್ಯಾಂಡಿಸೆಂಟ್‌ ಬಲ್ಬ್ಗಳನ್ನು ಬದಲಿಸಿ, ಎಲ್‌ಇಡಿ ಬಲ್ಬ್ ಗಳನ್ನು ಅಳವಡಿಸುವ ಚಿಂತನೆ ನಡೆಸಿತ್ತು. ಆದರೆ, ಹೀಗೆ ಮಾಡಿದರೆ ವಿದ್ಯುದೀಪಾಲಂಕಾರ ಮಾಡಿದ ಕೂಡಲೇ ಸ್ವರ್ಣವರ್ಣದಿಂದ ಜಗಮಗಿಸುವ ಅರಮನೆ, ಬೆಳ್ಳಿಬಣ್ಣಕ್ಕೆ ತಿರುಗುತ್ತದೆ ಎಂಬ ಕಾರಣಕ್ಕೆ ಆ ಪ್ರಸ್ತಾವನೆ ಕೈಬಿಡಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಇನ್‌ಕ್ಯಾಂಡಿಸೆಂಟ್‌ ಬಲ್ಬ್ ಗಳನ್ನು ಎಲ್‌ಇಡಿ ಬಲ್ಬ್ಗೆ ಪರಿವರ್ತಿಸುವ ಚಿಂತನೆ ನಡೆಸಿದಾಗ ಪ್ರತಿಷ್ಠಿತ ಫಿಲಿಪ್ಸ್‌ ಕಂಪನಿ ಮುಂದೆ ಬಂದು ಪ್ರಾಯೋಗಿಕವಾಗಿ ಅರಮನೆ ಆವರಣದಲ್ಲಿನ ಶ್ರೀಭುವನೇಶ್ವರಿ ದೇವಾಲಯಕ್ಕೆ ಅಳವಡಿಸಿರುವ ಇನ್‌ ಕ್ಯಾಂಡಿಸೆಂಟ್‌ ಬಲ್ಬ್ಗಳ ಸುಮಾರು ಎರಡು ಸಾಲು (300ರಿಂದ 400) ಬಲ್ಬ್ಗಳನ್ನು ತೆಗೆದು ಎಲ್‌ಇಡಿ ಬಲ್ಬ್ಗಳನ್ನು ಹಾಕಿತ್ತು. ಬಣ್ಣ ಬದಲಾವಣೆಯ ಕುರುಹು ಇಲ್ಲಿ ಸಿಕ್ಕಿತು. ಅರಮನೆಯ ಗೋಪುರ ಹಾಗೂ ಹೊರಭಾಗದಲ್ಲಿ ವಿದ್ಯುತ್‌ ಬಲ್ಬ್ಗಳನ್ನು ಅಳವಡಿಸಿರುವುದರಿಂದ ಪಕ್ಷಿಗಳು ಕುಳಿತು, ಮಳೆ-ಗಾಳಿಗೆ ಬಿದ್ದು ಹಾಳಾಗುವುದು ಸೇರಿದಂತೆ ವಾರ್ಷಿಕ 15 ರಿಂದ 20 ಸಾವಿರ ಬಲ್ಬ್ಳನ್ನು ನಿರಂತರವಾಗಿ ಬದಲಾಯಿಸಲಾಗುತ್ತದೆ ಎನ್ನುತ್ತಾರೆ ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ.

77 ಲಕ್ಷ ಬಿಲ್‌ ಬರುತ್ತೆ !
ಮೈಸೂರು ಅರಮನೆಗೆ ಅನಿಯಮಿತವಾಗಿ ವಿದ್ಯುತ್‌ ಪೂರೈಸಲು 1000 ಕೆ.ವಿ ಯ 2 ಹಾಗೂ 500 ಕೆ.ವಿ ಯ ಎರಡು ಟ್ರಾನ್ಸ್‌ ಫಾರ್ಮರ್‌ಗಳನ್ನು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ, ಅರಮನೆ ಆವರಣದಲ್ಲಿ ಸ್ಥಾಪಿಸಿದ್ದು, ಇದರಿಂದ 11 ಕೆ.ವಿ/ 250 ವ್ಯಾಟ್‌ ವಿದ್ಯುತ್‌ ನಿರಂತರವಾಗಿ ಪೂರೈಕೆಯಾಗುತ್ತದೆ. ಅರಮನೆ ದೀಪಾಲಂಕಾರಕ್ಕೆ ವಾರ್ಷಿಕ 6,10,00 ಯೂನಿಟ್‌ ವಿದ್ಯುತ್‌ ಬಳಸಿಕೊಳ್ಳಲಾಗುತ್ತಿದ್ದು. ಇದಕ್ಕಾಗಿ ಮೈಸೂರು ಅರಮನೆ ಮಂಡಳಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಗೆ ವಾರ್ಷಿಕ 77 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುತ್ತದೆ.

ಗಿರೀಶ್‌ ಹುಣಸೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next