Advertisement

Mysore: ನಾಳೆ ಅರಮನೆ ನಗರಿಯಲ್ಲಿ ಐತಿಹಾಸಿಕ ಜಂಬೂಸವಾರಿ

04:32 PM Oct 11, 2024 | Team Udayavani |

ಮೈಸೂರು: ಜಗದ್ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂತಿಮ ಘಟ್ಟವಾದ ವಿಜಯದಶಮಿಯಂದು ಲಕ್ಷಾಂತರ ಮಂದಿಯ ಹರ್ಷೋದ್ಘಾರದೊಂದಿಗೆ ವಿಜೃಂಭಣೆಯಿಂದ ಜರುಗುವ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

Advertisement

ಅ.12ರಂದು ಶನಿವಾರ ಮಧ್ಯಾಹ್ನ 1.41ರಿಂದ 2.10 ವರಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ಗಜಪಡೆಯ ಧನಂಜಯ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ.

ನಂತರ ಸಂಜೆ 4ರಿಂದ 4.30 ಗಂಟೆವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ವಿಜಯ ದಶಮಿ (ಜಂಬೂಸವಾರಿ) ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೇರಿ ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಕಳೆದ 9 ದಿನಗಳಿಂದ ವಿವಿಧ ಕಾರ್ಯಕ್ರಮಗಳ ಮೂಲಕ ದೇಶ ವಿದೇಶದ ಲಕ್ಷಾಂತರ ಮಂದಿಯನ್ನು ಆಕರ್ಷಿಸಿದ್ದ ನಾಡಹಬ್ಬಕ್ಕೆ ಜಂಬೂಸವಾರಿ ಮತ್ತು ಪಂಜಿನ ಕವಾಯತಿನೊಂದಿಗೆ ಶನಿವಾರ ವಿಧ್ಯುಕ್ತ ತೆರೆ ಬೀಳಲಿದೆ. ಜಂಬೂ ಸವಾರಿ ವೀಕ್ಷಿಸಲು ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಅರಮನೆ ಆವರಣ ಸೇರಿ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಆಸನದ ವ್ಯವಸ್ಥೆ ಸೇರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

5ನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು 2020, 21ರಲ್ಲಿ ಕೊರೊನಾ ಕಾರಣದಿಂದಾಗಿ ಅರಮನೆಗೆ ಸೀಮಿತವಾಗಿದ್ದ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್‌ ಅಭಿಮನ್ಯು ಅರಮನೆ ಆವರಣದಲ್ಲಷ್ಟೇ ಅಂಬಾರಿ ಹೊತ್ತಿದ್ದ. 2022, 23ರಲ್ಲಿ ಬನ್ನಿಮಂಟಪದವರೆಗೆ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಅಭಿಮನ್ಯು ಸತತ 5ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಸಜ್ಜಾಗಿದ್ದಾನೆ. ಅಭಿಮನ್ಯು ಜತೆಗೆ 8 ಆನೆಗಳು, ಅಶ್ವರೋಹಿಪಡೆ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿವೆ. ಇದರ ಜತೆಗೆ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ ಒಟ್ಟು 51 ಸ್ತಬ್ಧಚಿತ್ರಗಳು ಸೇರಿ 100ಕ್ಕೂ ಹೆಚ್ಚು ಜಾನಪದ ತಂಡಗಳು ಭಾಗವಹಿಸಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next