Advertisement

ನನ್ನ ಮಗ ನಿಖೀಲ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ

03:12 PM Aug 04, 2019 | Suhan S |

ಕೆ.ಆರ್‌.ಪೇಟೆ: ನಾನು ಮೋಜು ಮಾಡಲು ಮುಖ್ಯಮಂತ್ರಿಯಾಗಿರಲಿಲ್ಲ, ಒಬ್ಬ ಮುಖ್ಯ ಮಂತ್ರಿಯಾಗಿ ನೊಂದ ಜನರ ಕಣ್ಣೀರನ್ನು ಒರೆಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ, ನಾನೆಂದೂ ಹಣ ಆಸ್ತಿಯನ್ನು ಬಯಸಿದವನಲ್ಲ, ನೊಂದ ಜನರು ಮಾಡುವ ಆಶೀವಾದದ ಬಲವೇ ನನ್ನ ಧೀಶಕ್ತಿಯಾಗಿದೆ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

Advertisement

ಕೆ.ಆರ್‌.ಪೇಟೆ ಪಟ್ಟಣದ ಯಶಸ್ವಿನಿ ಸಮೂದಾಯ ಭವನದಲ್ಲಿ ನಡೆದ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಶಾಸಕ ನಾರಾಯಣಗೌಡ ಅವರ ವಿಶ್ವಾಸದ್ರೋಹ ಹಾಗೂ ತಮ್ಮ ಸಹೋದರಿ ಅನುಸೂಯ ಮಂಜುನಾಥ್‌ ಅವರ ಬಗ್ಗೆ ಮಾಡಿರುವ ಸುಳ್ಳು ಆರೋಪಗಳಿಂದ ನೊಂದು ಕಾರ್ಯಕರ್ತರ ಎದುರು ಕಣ್ಣೀರು ಹಾಕಿದರು.

ಶಾಸಕ ನಾರಾಯಣಗೌಡ ಒಬ್ಬ ವಿಶ್ವಾಸಘಾತುಕ ಇಡೀ ಕುಟುಂಬವನ್ನು ಎದುರು ಹಾಕಿಕೊಂಡು ಈ ಭಾರಿ ಅವನಿಗೆ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿದೆ, ಇಂತಹ ನಯವಂಚನೆ ಹಾಗೂ ಮೋಸ ನನಗೆ ಆಗಬೇಕು. ನನ್ನ ವಿರುದ್ಧ ನಿರಂತರವಾಗಿ ಸಮರವನ್ನು ಸಾರುತ್ತಿರುವ ಮಾಧ್ಯಮಗಳ ಮುಂದೆ ನಾನು ಮಾತನಾಡುವುದನ್ನೇ ನಿಲ್ಲಿಸಿದ್ದೇನೆ. ಈಗಾಗಲೇ ನನ್ನ ಕುಟುಂಬವನ್ನು ನಿರಂತರವಾಗಿ ಹರಾಜು ಹಾಕಿರುವ ಮಾಧ್ಯಮಗಳಲ್ಲಿ ಮನವಿ ಮಡುತ್ತೇನೆ, ದಯಮಾಡಿ ನನ್ನ ಮಗ ಸೇರಿದಂತೆ ನನ್ನ ಕುಟುಂಬದವರ ವಿರುದ್ಧ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಬಿತ್ತರಿಸಬೇಡಿ, ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಯಾವುದೇ ಕ್ಷೇತ್ರದ ಉಪ ಚುನಾವಣೆಯಲ್ಲಿ ನನ್ನ ಮಗನಾಗಲೀ ಕುಟುಂಬದ ಸದಸ್ಯರಾಗಲೀ ಸ್ಪರ್ಧೆ ಮಾಡಲ್ಲ. ಸ್ಥಳೀಯವಾಗಿಯೇ ಪ್ರಬಲವಾದ ಅಭ್ಯರ್ಥಿಯನ್ನು ಹುಡುಕಿ ಹುರಿಯಾಳನ್ನಾಗಿ ಮಾಡುತ್ತೇನೆ. ದಯಮಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗನಿಗೆ ಸೋಲಿನ ವಿಷ ನೀಡಿದಂತೆ ಇಲ್ಲಿನ ಅಭ್ಯರ್ಥಿಯನ್ನು ಸೋಲಿಸಬೇಡಿ, ಹಣಕ್ಕಾಗಿ ಮಾರಾಟವಾಗಿ ನನ್ನ ಸಹೋದರಿ ಮತ್ತು ಕುಟುಂಬದವರ ಮೇಲೆ ಆರೋಪ ಮಾಡಿರುವ ನಯವಂಚಕ ನಾರಾಯಣಗೌಡನಿಗೆ ತಕ್ಕ ಪಾಠವನ್ನು ಕಲಿಸಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ವಿಷಕಂಠನಾಗಿದ್ದೇನೆ: ನಾನು ನನ್ನ ಕುಟುಂಬವನ್ನು ಉದ್ಧಾರ ಮಾಡಿಕೊಳ್ಳಲು ರಾಜಕಾರಣ ಮಾಡುತ್ತಿಲ್ಲ, ನನಗೆ ರಾಜಕಾರಣವೂ ಬೇಕಾಗಿಲ್ಲ, ಬಡವರು, ನೊಂದವರು ಅಸಹಾಯಕರಿಗೆ ಸಹಾಯ ಮಾಡಲು, ನ್ಯಾಯವನ್ನು ದೊರಕಿಸಿಕೊಡಲು ರಾಜಕಾರಣ ಮಾಡುತ್ತಿದ್ದೇನೆ. ನನಗೆ ಎದುರಾಗುವ ಎಲ್ಲಾ ನೋವುಗಳನ್ನು ನುಂಗಿಕೊಂಡು ವಿಷಕಂಠನಾಗಿದ್ದೇನೆ.

ಕುಮಾರಸ್ವಾಮಿ ಭವಿಷ್ಯ: ನಾನು ಇಸ್ರೇಲ್ ಅಧ್ಯಯನ ಪ್ರವಾಸ ಕೈಗೊಂಡಾಗಲೇ ಸಾವಿಗೆ ಶರಣಾಗಬೇಕಿತ್ತು, ಆದರೆ ದೇವರ ಕೃಪೆಯಿಂದ‌, ಹೃದ್ರೋಗತಜ್ಞ ನನ್ನ ಭಾವ ಮಂಜುನಾಥ ಅವರ ಚಿಕಿತ್ಸೆಯಿಂದಾಗಿ ನಾನು ಈವರೆಗೂ ಬದುಕಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ ಕುಮಾರಸಾಮಿ ಈ ಸರ್ಕಾರ ಎಷ್ಟು ದಿನ ನಡೆಯುತ್ತದೆಯೋ ನಾನು ನೋಡ್ತೀನಿ, 17ಜನ ಅನರ್ಹ ಶಾಸಕರು ಯಡಿಯೂರಪ್ಪ ಅವರನ್ನು ಕಿತ್ತುಕೊಂಡು ತಿಂತಾರೆ, ಮಂತ್ರಿಮಂಡಲ ಮಾಡುವುದರಲ್ಲೇ ಅಸಮಾಧಾನ ನ್ಪೋಟವಾಗ್ತದೆ, ಕೆಲವೇ ತಿಂಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕಥೆ ಮುಗಿಯುತ್ತದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.

Advertisement

ಮಾಧ್ಯಮದವರಿಗೆ ಮನವಿ: ನನ್ನ ಮಗ ನಿಖೀಲ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬಲು ನಾನು ರಾಜಕಾರಣ ಮಾಡ್ತಿದ್ದೇನೆ, ಇಷ್ಟು ಸಾಕು, ಮಾಧ್ಯಮಗಳ ನಿರಂತರವಾದ ಅಪಪ್ರಚಾರದಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಸೋತಿದ್ದಾನೆ. ದಯಮಾಡಿ ಮಾಧ್ಯಮಗಳು ನನ್ನ ಕುಟುಂಬದ ವಿರುದ್ಧ ಮಾಡುತ್ತಿರುವ ಅಪಪ್ರಚಾರ, ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು. ಮಾಜಿಸಚಿವ .ಪುಟ್ಟರಾಜು, ಸಾರಾ ಮಹೇಶ್‌, ಶಾಸಕ ಸುರೇಶ್‌ಗೌಡ, ಸಿ.ಎನ್‌.ಬಾಲಕೃಷ್ಣ, ವಿಧಾನಪರಿಷತ್‌ ಸದಸ್ಯ ಅಪ್ಪಾಜಿಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌, ಜಿಪಂ ಮಾಜಿಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಮಾಜಿಉಪಾಧ್ಯಕ್ಷ ಕೆ.ಎಸ್‌.ಪ್ರಭಾಕರ್‌, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಬಸ್‌ ಕೃಷ್ಣೇಗೌಡ, ಪುರಸಭೆ ಸದಸ್ಯ ಕೆ.ಎಸ್‌.ಸಂತೋಷ್‌ ಸೇರಿದಂತೆ ಜೆಡಿಎಸ್‌ ಕಾರ್ಯಕರ್ತರಿದ್ದರು.

ದೇವೇಗೌಡರಿಗೂ ಕೆಆರ್‌ಪೇಟೆಗೂ ನಂಟು: ದೇವೇಗೌಡರಿಗೂ ಕೆ.ಆರ್‌.ಪೇಟೆ ಕ್ಷೇತ್ರಕ್ಕೂ ಬಿಡಿಸಲಾಗದ ನಂಟಿದೆ. ಹೇಮಾವತಿ ನೀರನ್ನು ಈ ಭಾಗಕ್ಕೆ ಕೊಡಿಸಿದ ಕೀರ್ತಿ ದೇವೇಗೌಡರದ್ದಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆಡಿಎಸ್‌ ಕಾರ್ಯಕರ್ತರ ಜತೆ ಮಾತನಾಡಿದ ಅವರು, ಕೆಲವು ಯುವಕರಿಗೆ ಈ ವಿಚಾರ ಗೊತ್ತಿಲ್ಲ. ಅವಕ್ಕೆ ಬರೀ ಸಾಮಾಜಿಕ ಜಾಲತಾಣದಲ್ಲಿ ನಿಖೀಲ್ ಎಲ್ಲಿದ್ದೀಯಪ್ಪ.. ಕುಮಾರ ಎಲ್ಲಿದ್ದೀಯಪ್ಪ.. ಅನ್ನೋದಷ್ಟೇ ಗೊತ್ತು. ಈ ಕ್ಷೇತ್ರದ ಜನರು ಹಿಂದಿನಿಂದಲೂ ದೇವೇಗೌಡರ ಜೊತೆ ಇದ್ದಾರೆ. ಇವತ್ತು ನಮ್ಮನ್ನು ಬಿಟ್ಟು ಹೋದವನ (ನಾರಾಯಣಗೌಡ) ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ, ಆ ವಿಷಯದಲ್ಲಿ ನಮ್ಮ ಕುಟುಂಬದ ಸ್ವಯಂಕೃತ ಅಪರಾಧವೂ ಇದೆ ಎಂದು ಹೇಳಿದರು.
ಒಕ್ಕಲಿಗ ಅಧಿಕಾರಿಗಳ ಚೆಂಡಾಟ:

ಯಡಿಯೂರಪ್ಪ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಬಿಜೆಪಿ ಸರ್ಕಾರದಲ್ಲಿ ಒಕ್ಕಲಿಗ ಅಧಿಕಾರಿಗಳನ್ನು ಚೆಂಡಾಡುತ್ತಿದ್ದಾರೆ. ರವಿಕಾಂತೇ ಗೌಡರನ್ನು ಎತ್ತಂಗಡಿ ಮಾಡಿದ್ದೇಕೆ. ಅವರು ಯಾವ ತಪ್ಪು ಮಾಡಿದರು ಅಂತ ವರ್ಗಾವಣೆ ಮಾಡಿದರು. ಅವರು ಕುಮಾರಸ್ವಾಮಿ ಅಭಿಮಾನಿ ಎಂಬ ಕಾರಣಕ್ಕೆ ವರ್ಗಾವಣೆ ಮಾಡಿದರು ಎಂದು ದೂಷಿಸಿದರು. ನನ್ನನ್ನು ನಂಬಿಕೊಂಡಿರುವ ಲಕ್ಷಾಂತರ ಕಾರ್ಯಕರ್ತರಿಗಾಗಿ ನಾನು ಇನ್ನೂ ರಾಜಕೀಯದಲ್ಲಿದ್ದೇನೆ. ಇಲ್ಲದಿದ್ದರೆ ನಾನು ಇಷ್ಟೊತ್ತಿಗೆ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ. ನನಗೆ ದೇವೇಗೌಡರ ರೀತಿ ಇಳಿ ವಯಸ್ಸಿನಲ್ಲೂ ರಾಜಕೀಯ ಮಾಡುವ ಹಂಗಿಲ್ಲ ಎಂದು ನೇರವಾಗಿ ಹೇಳಿದರು.
ವೃದ್ಧರ ಜತೆ ಬದುಕಲು ಚಿಂತನೆ:

ನಾನು ಮುಖ್ಯಮಂತ್ರಿ ಆದ ದಿನದಿಂದ ಸರ್ಕಾರ ತೆಗೆಯಲು ಮಾಧ್ಯಮಗಳು ಮುಂದಾದವು. ನನ್ನ ಮಗನ ಸೋಲಿನಲ್ಲೂ ಮಾಧ್ಯಮಗಳ ಪಾತ್ರವಿದೆ. ಆದರೆ, ನನಗೆ ಅಧಿಕಾರಕ್ಕಿಂತ ಜನರ ಪ್ರೀತಿ ಮುಖ್ಯ. ಕೇತೋಗಾನಹಳ್ಳಿಯಲ್ಲಿ ನಾನು ಸಂಪಾದಿಸಿದ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಿಸಲು ನಿರ್ಧಾರ ಮಾಡಿದ್ದೇನೆ. ವೃದ್ಧಾಶ್ರಮದಲ್ಲಿ ವೃದ್ಧರ ಜೊತೆ ಬದುಕಲು ಚಿಂತಿಸಿದ್ದೇನೆ ಎಂದರು. ನಾಲೆಗಳಿಗೆ ನೀರು ಬಿಡಿಸಿದ್ದಕ್ಕೆ ಚುನಾವಣಾ ಆಯೋಗದ ಮೂಲಕ ಸ್ವಾಭಿಮಾನಿಗಳು ನನಗೆ ನೋಟಿಸ್‌ ಕೊಡಿಸಿದ್ದರು ಎಂದು ಸಂಸದೆ ಸುಮಲತಾ ಹೆಸರೇಳದೆ ನಿಂದಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next