Advertisement

ಎಲ್ಲ ಶಾಲೆಗಳಂಥಲ್ಲ ನನ್ನ ಶಾಲೆ!

10:27 AM Sep 16, 2019 | mahesh |

ಇದು ಉತ್ಪ್ರೇಕ್ಷೆಯ ಮಾತಲ್ಲ. ವಾಸ್ತವವೂ ಹೌದು. ಪ್ರಥಮ ಬಾರಿಗೆ ನಮ್ಮ ಶಾಲೆಗೆ ಭೇಟಿ ಕೊಡುವ ಯಾರೇ ಆಗಿರಲಿ, ಇಲ್ಲಿನ ಪರಿಸರದ ಸೌಂದರ್ಯಕ್ಕೆ, ಶಾಲಾ ಆವರಣದ ಸ್ವಚ್ಛತೆಗೆ, ಶಾಲಾ ಹೊರಗೋಡೆಗಳ ವರ್ಲಿ ಚಿತ್ರಗಳಿಗೆ, ಶಾಲೆಯ ಮುಂದಿರುವ ಉದ್ಯಾನಕ್ಕೆ ಮಾರುಹೋಗಿಬಿಡು ತ್ತಾರೆ. ಜೊತೆಗೆ ಶಿಕ್ಷಕರ ಸಮವಸ್ತ್ರ, ವಿದ್ಯಾರ್ಥಿಗಳ ಶಿಸ್ತು, ವಿಶಾಲವಾದ ಆಟದ ಮೈದಾನ, ವಿಸ್ತೃತವಾದ ಶಾಲಾ ಜಮೀನು, ಹೂಬಳ್ಳಿಗಳಿಂದ ಆವರಿಸಿರುವ ಹಚ್ಚಹಸುರಿನ ಓಪನ್‌ ಸ್ಟೇಜ್, ಗೋಡೆಗಳಲ್ಲಿ ಸುಂದರ ವಿನ್ಯಾಸವಿರುವ, ಕಲಿಕೆಗೆ ಪೂರಕವಾದ ಚಾರ್ಟ್‌ ಗಳಿಂದ ಕಂಗೊಳಿಸುವ ತರಗತಿ ಕೊಠಡಿಗಳು, ಗ್ರೀನ್‌ ಬೋರ್ಡ್‌ ಹಾಗೂ ಅದರ ಸುತ್ತಲಿನ ಬಣ್ಣದ ಚೌಕಟ್ಟು ಇತ್ಯಾದಿಗಳ ಬಗ್ಗೆಯೂ ಎಲ್ಲರಿಗೂ ಮೆಚ್ಚುಗೆ ಮೂಡುತ್ತದೆ. ಹಾಗಿರುವಾಗ ಖಂಡಿತವಾಗಿಯೂ ಎಲ್ಲ ಶಾಲೆಗಳಂಥಲ್ಲ ನನ್ನ ಶಾಲೆ.

Advertisement

ನಮ್ಮ ಪುತ್ತೂರು ತಾಲೂಕಿಗೆ ಶಶಿಧರ್‌ ಜಿ. ಎಸ್‌. ಎಂಬ ಕಲಾರಾಧಕ, ಕಲಾಪೋಷಕ, ಕಲಾಹೃದಯಿ ಶಿಕ್ಷಣಾಧಿಕಾರಿಯಾಗಿ ಬಂದಂತಹ ಆ ಸಮಯದಲ್ಲಿ ಪುತ್ತೂರಿನಲ್ಲಿ ಒಂದು ಶೈಕ್ಷಣಿಕ ಸಂಚಲನ ಉಂಟಾಯಿತು. ಶಶಿಧರ್‌ ಅವರು ಹುಟ್ಟುಹಾಕಿದ ಮಿಷನ್‌ 95+ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಸುದ್ದಿಯಾಗಿತ್ತು. ತಮ್ಮ ಶೈಕ್ಷಣಿಕ ಸಾಧನೆಗಳಿಗಾಗಿ ಅವರು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡರು. ಅವರನ್ನು ನಾನು ಇಲ್ಲಿ ಸ್ಮರಿಸಲು ಕಾರಣವಿದೆ. ಉತ್ತಮ ಕೈಬರಹದ ಜೊತೆಗೆ ಕಲಾಕಾರರೂ ಆಗಿದ್ದ ಅವರು ಪುತ್ತೂರಿಗೆ ವರ್ಲಿ ಚಿತ್ರಕಲೆಯನ್ನು ಪರಿಚಯಿಸಿದರು. ಶಿಕ್ಷಣಾಧಿಕಾರಿ ಕಚೇರಿಯ ಬಳಿಯಿರುವ ಗುರುಭವನದಲ್ಲಿ ತಾಲೂಕಿನ ಎಲ್ಲಾ ಚಿತ್ರಕಲಾ ಶಿಕ್ಷಕರನ್ನೂ ಕರೆಸಿ, ಅಲ್ಲಿನ ಒಳ, ಹೊರ ಗೋಡೆಗಳಲ್ಲಿ ವರ್ಲಿ ಚಿತ್ರಗಳನ್ನು ಮಾಡಿಸಿದರು. ಇದರಿಂದ ಸ್ಫೂರ್ತಿ ಪಡೆದ ಕೆಲವು ಶಿಕ್ಷಕರು ತಮ್ಮ ತಮ್ಮ ಶಾಲೆಗಳಲ್ಲಿ ವರ್ಲಿ ಚಿತ್ರ ರಚಿಸಲು ಮುಂದಾದರು. ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ವಿನೋದ್‌ ಕುಮಾರ್‌ ಕೆ.ಎಸ್‌. ನಮ್ಮ ಶಾಲಾ ಗೋಡೆಗಳಲ್ಲಿ ವರ್ಲಿ ಚಿತ್ರ ರಚಿಸುವ ಪ್ರಸ್ತಾಪ ಮಾಡಿದರು. ನಮ್ಮ ಚಿತ್ರಕಲಾ ಶಿಕ್ಷಕರಾದ ಎಲ್ ಎಚ್‌. ಗೌಂಡಿ ತಮ್ಮ ಸ್ನೇಹಿತರೂ ಚಿತ್ರಕಲಾ ಶಿಕ್ಷಕರೂ ಆದ ತಾರಾನಾಥ ಕೈರಂಗಳ, ಜಗನ್ನಾಥ್‌ ಅರಿಯಡ್ಕ ಹಾಗೂ ಪ್ರಕಾಶ್‌ ವಿಟ್ಲರ ಸಹಕಾರ ಪಡೆದು ಗೋಡೆಗಳಲ್ಲಿ ವರ್ಲಿಯ ಸ್ಕೆಚ್‌ ಹಾಕಿಸಿದರು. ಚಿತ್ರಕಲೆಯಲ್ಲಿ ನಿಪುಣರಾದ ವಿದ್ಯಾರ್ಥಿಗಳ ಜೊತೆ ಸೇರಿ ಬಣ್ಣ ಹಚ್ಚಿದರು.

ಗೌಂಡಿ ಸರ್‌ ಅವರು ಕೆಲವು ಸಮಯದ ಬಳಿಕ ಶಾಲೆಯ ಜಗುಲಿಯ ಕಂಬಗಳಲ್ಲೂ ವರ್ಲಿ ವೈಭವ ಮೂಡಿಸಿದರು. ಸರ್ಕಾರ ವಿದ್ಯಾರ್ಥಿಗಳಿಗೆ ಕೊಡಮಾಡುವ ಯೋಜನೆಗಳು, ಪ್ರಮುಖ ರಾಷ್ಟ್ರೀಯ ಹಬ್ಬಗಳು, ಪ್ರತಿಭಾ ಕಾರಂಜಿ, ಧಾರ್ಮಿಕ ಹಬ್ಬಗಳು, ಹಳ್ಳಿ ಜೀವನ ಇತ್ಯಾದಿ ವಿಷಯಗಳು ವರ್ಲಿ ಚಿತ್ರದ ಮೂಲಕ ಗೋಡೆಗಳಲ್ಲಿ ಜೀವಪಡೆದಾಗ ಶಾಲೆಯ ಸೌಂದರ್ಯ ನೂರ್ಮಡಿಸಿತು. ಆ ಬಳಿಕ ಒಮ್ಮೆ ನಮ್ಮ ಶಾಲೆಗೆ ಭೇಟಿಕೊಟ್ಟ ಬಿಇಒ ಶಶಿಧರ್‌ ಜಿ.ಎಸ್‌. ಅವರು (ಅವರಿಗೆ ನಾನು ಸಣ್ಣ ಸಾಹಿತಿಯೆಂಬುದು ತಿಳಿದಿತ್ತು. ಸ್ವಲ್ಪಕಾಲದ ಬಳಿಕ ನನ್ನ ಮಕ್ಕಳ ಕವನಸಂಕಲನಕ್ಕೆ ಅವರು ಮುಖಪುಟ ವಿನ್ಯಾಸ ಮಾಡಿದರು) “”ಜೆಸ್ಸಿ ಮೇಡಂ, ನಿಮ್ಮ ಶಾಲೆಯ ಗೋಡೆಗಳು ಮಾತನಾಡುತ್ತಿವೆಯಲ್ಲ. ಈ ಬಗ್ಗೆ ಬರೆಯುವುದಿಲ್ವಾ? ಬರೀರಿ ಒಂದು ಲೇಖನ” ಎಂದರು. ಹಾಗೇ ಉದಯವಾಣಿಯಲ್ಲಿ “ಶ್‌, ಗೋಡೆಗಳು ಮಾತಾಡುತ್ತಿವೆ!’ ಎಂಬ ಲೇಖನ ಬರೆದೆ. ನಮ್ಮ ಶಾಲೆಯ ವರ್ಲಿಚಿತ್ರಗಳು ಜನಮನವನ್ನು ಸೂರೆಗೊಂಡವು.

ನಮ್ಮ ಶಾಲೆಯ ಮುಂಭಾಗದಲ್ಲಿ ಉದ್ದಕ್ಕೆ ಒಂದು ಸಾಲು ಅಶೋಕ ವೃಕ್ಷಗಳು, ಕೆಲವು ಕಟಿಂಗ್ಸ್ ಗಿಡಗಳು, ಬೆರಳೆಣಿಕೆಯ ಕ್ರಾಟನ್‌ ಗಿಡಗಳು ಇಷ್ಟೇ ಇದ್ದು ಹೇಳಿಕೊಳ್ಳುವಂತಹ ಸೌಂದರ್ಯವೇನೂ ನಮ್ಮ ಗಾರ್ಡನ್‌ಗೆ ಇರಲಿಲ್ಲ. ಹೀಗಿರುವಾಗ ಶಾಲೆಯ ಎದುರು ಹಸಿರು ಹುಲ್ಲುಹಾಸು ರಚಿಸುವ ಯೋಜನೆ ಹಾಕಿಕೊಂಡರು ನಮ್ಮ ವಿನೋದ್‌ ಸರ್‌. ಕೆಲವು ಲೋಡ್‌ ಮಣ್ಣು ತಂದು ಹರವಲಾಯಿತು. ನಂತರ ಪೂರ್ತಿ ಹುಲ್ಲುಹಾಸನ್ನು ಹರಡುವ ಬದಲು ಸಾಲಾಗಿ ಹುಲ್ಲನ್ನು ಸಣ್ಣ ಅಂತರ ದಲ್ಲಿ ನೆಟ್ಟೆವು. ಗಾರ್ಡನಿಂಗ್‌ ಮೇಲೆ ವಿಶೇಷ ಒಲವಿರುವ ನಾನು ಹಾಗೂ ಇತರ ಶಿಕ್ಷಕರು ಈ ಕಾರ್ಯದಲ್ಲಿ ಖುಷಿಯಿಂದ ಪಾಲ್ಗೊಂಡೆವು. ನನ್ನ ತವರು ಮನೆಯಲ್ಲಿ ವೈವಿಧ್ಯಮಯ ಹೂವಿನ ಗಿಡಗಳಿರುವುದರಿಂದ ನನ್ನ ಗಂಡನನ್ನು ಒತ್ತಾಯಿಸಿ ಮನೆಗೆ ಹೋಗಿ ಒಂದು ಭಾನುವಾರ ವಿವಿಧ ರೀತಿಯ ಗಿಡಗಳನ್ನು ತಂದೆ. ಗೌಂಡಿ ಸರ್‌ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಹೂತೋಟ ನಿರ್ಮಾಣ ಸುಸೂತ್ರವಾಗಿ ನಡೆಯಿತು. ದಿನಗಳೆದಂತೆ ಹುಲ್ಲು ಹುಲುಸಾಗಿ ಬೆಳೆದು ಹಸುರಿನಿಂದ ಕಂಗೊಳಿಸಿತು. ಹುಲ್ಲುಹಾಸಿನ ಸುತ್ತ ಆಕರ್ಷಕ ಗ್ರೀನ್‌ ಫೆಡ್ಸ್ (ಬೇಲಿ) ಹಾಕಲಾಯಿತು. ಹಳೆಯ ಪ್ಲಾಸ್ಟಿಕ್‌ ಬಾಟಲಿಗಳನ್ನು ಹೂಕುಂಡ ಮಾಡಿ ಗಿಡ ನೆಟ್ಟು ಜಗಲಿಯುದ್ದಕ್ಕೂ ನೇತು ಹಾಕಿದೆವು. ಶಾಲೆಯ ಸೌಂದರ್ಯ ಮತ್ತೂ ಹೆಚ್ಚಿತು.

ಇನ್ನೇನು ವಾರ್ಷಿಕೋತ್ಸವ ಹತ್ತಿರ ಬರುತ್ತಿತ್ತು. ವರ್ಷಂಪ್ರತಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಒಂದು ಹೊಸ ವಿಶೇಷ ಸ್ಪರ್ಧೆಯನ್ನು ಇಟ್ಟುಕೊಳ್ಳುವುದು ನಮ್ಮ ಶಾಲೆಯ ವಿಶೇಷತೆ. ಒಂದು ಬಾರಿ ಬೆಂಕಿಯಿಲ್ಲದ ಅಡುಗೆ ತಯಾರಿಯ ಸ್ಪರ್ಧೆ ಇಟ್ಟೆವು. ಅದರಲ್ಲಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು. ಒಂದು ವರ್ಷ ಬೆಂಕಿ ಬಳಸಿಯೋ, ಬಳಸದೆಯೋ ಮಾಡಬಹುದಾದ ಅಡುಗೆಯ ಸ್ಪರ್ಧೆ ನಡೆಸಿದ್ದೆವು. ಸೀಮೆಎಣ್ಣೆ ಸ್ಟವ್‌, ಇಂಡಕ್ಷನ್‌ ಸ್ಟವ್‌, ಕಟ್ಟಿಗೆ ಒಲೆ ಬಳಸಿ ವಿವಿಧ ತಂಡಗಳು ಫ್ರೈಡ್‌ರೈಸ್‌, ಘೀ ರೈಸ್‌, ಪುಳಿಯೋಗರೆ, ಲಡ್ಡು, ಬರ್ಗರ್‌, ಚುರುಮುರಿ, ರಾಯಿತ, ನೂಡಲ್ಸ್ ಈ ರೀತಿ ವೈವಿಧ್ಯಮಯ ಎಂಬತ್ತಕ್ಕೂ ಹೆಚ್ಚು ಅಡುಗೆಗಳನ್ನು ಪಾನೀಯದೊಂದಿಗೆ ತಯಾರಿಸಿ, ಆಕರ್ಷಕವಾಗಿ ಪ್ರದರ್ಶಿಸಿದರು. ಅವು ರುಚಿಕರವಾಗಿಯೂ ಇದ್ದವು. ಈ ಬಾರಿ ನಾವು ತರಗತಿ ಅಲಂಕಾರದ ಸ್ಪರ್ಧೆ ಹಮ್ಮಿಕೊಳ್ಳೋಣ ಎಂದರು ವಿನೋದ್‌ ಸರ್‌. ನಾವೂ ಒಪ್ಪಿದೆವು. ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಯ ಚಿತ್ರಕಲಾವಿದನ ನೇತೃತ್ವದಲ್ಲಿ ತರಗತಿಯ ಗೋಡೆಯ ಮೇಲೆ ಆಕರ್ಷಕ ವಿನ್ಯಾಸಗಳನ್ನು ರಚಿಸಿದರು. ಪೇಂಟ್‌ ಹಚ್ಚಿ ಸುಂದರಗೊಳಿಸಿದರು. ಜೊತೆಗೆ ತಾತ್ಕಾಲಿಕ ಅಲಂಕಾರಗಳು ಬೇರೆಯಿದ್ದವು. ಈ ಸ್ಪರ್ಧೆಗೆ ನಮ್ಮ ಶಾಲೆಯ ಶಿಕ್ಷಕರು ಅಂಕ ಹಾಕಿದರೆ ತರಗತಿ ಶಿಕ್ಷಕರ ಸ್ವಜನಪಕ್ಷಪಾತಕ್ಕೆ ಅವಕಾಶ ಉಂಟಾದರೆ ಎಂದು ವಸ್ತುನಿಷ್ಠ ತೀರ್ಪಿಗಾಗಿ ಹೊರಗಡೆಯಿಂದ ತೀರ್ಪುಗಾರರನ್ನು ಆಹ್ವಾನಿಸಿದೆವು. ನಗದು ಬಹುಮಾನ ಘೋಷಿಸಿದ್ದ ಆ ಸ್ಪರ್ಧೆ ಬಹುಶಃ ಶಾಲೆಯ ವಿದ್ಯಾರ್ಥಿಗಳ ಮನಗೆದ್ದ ಸ್ಪರ್ಧೆಯಾಗಿತ್ತು. ಶಾಲಾ ಸೌಂದರ್ಯದ ಕಿರೀಟಕ್ಕೆ ಹೊಸತೊಂದು ಗರಿ ಸೇರಿತು.

Advertisement

ಜೆಸ್ಸಿ ಪಿ. ವಿ.

Advertisement

Udayavani is now on Telegram. Click here to join our channel and stay updated with the latest news.

Next