Advertisement

ನನ್ನ ಡೆಡ್‌ಬಾಡಿ ಕೂಡ ಬಿಜೆಪಿಗೆ ಹೋಗಲ್ಲ

11:53 AM Jul 13, 2018 | Team Udayavani |

ಮೈಸೂರು: ನಾನಲ್ಲ, ನನ್ನ ಡೆಡ್‌ಬಾಡಿ ಕೂಡ ಬಿಜೆಪಿಗೆ ಹೋಗಲ್ಲ. 12 ವರ್ಷಗಳ ಹಿಂದೆ ಹೇಳಿದ್ದ ಈ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಈ ಮರದಿಂದ ಆ ಮರಕ್ಕೆ ನೆಗೆಯಲು ರಾಜಕಾರಣವೆಂದರೆ ಮರಕೋತಿ ಆಟವಲ್ಲ, ತತ್ವ-ಸಿದ್ಧಾಂತಗಳನ್ನು ನಂಬಿ ರಾಜಕಾರಣ ಮಾಡುವವನು ನಾನು ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ ಕೆಲವರು ಪಕ್ಷದಲ್ಲಿ ನಾನೇ ಮೆರೆಯಬೇಕು ಎಂದು ಈ ರೀತಿಯ ಷಡ್ಯಂತ್ರ-ಪಿತೂರಿ ಮಾಡುತ್ತಿದ್ದಾರೆ. ಹೋರಾಟದ ಮೂಲಕ ತತ್ವ-ಸಿದ್ಧಾಂತಗಳನ್ನು ನಂಬಿ 35 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದವನು ನಾನು, ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ತೊರೆಯಲ್ಲ: ನಾನು ಬಿಜೆಪಿಗೆ ಹೋಗುತ್ತೇನೆಂದು ಕೆಲವರು ಭಾವಿಸಿದ್ದರೆ, ಅದು ಅವರ ಭ್ರಮೆಯಾಗಲಿದೆ. ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ, ಈ ಪಕ್ಷದಲ್ಲೇ ನನ್ನ ರಾಜಕೀಯ ಜೀವನ ಕೂಡ ಅಂತ್ಯವಾಗಲಿದೆ. ನಾನು ಸಿದ್ಧಾಂತಗಳನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿರುವವನು, ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲಾ. ಹೀಗಾಗಿ ಯಾವುದೇ ಕಾರಣಕ್ಕೂ ಸಿದ್ಧಾಂತಗಳ ಜೊತೆಗೆ ರಾಜಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್‌ ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದಿಗ್ಭ್ರಾಂತನಾಗಿದ್ದೇನೆ: ವಿಧಾನಸಭೆ ಚುನಾವಣೆ ಸೋಲಿನ ಆಘಾತದಿಂದ ಹೊರಬರಲು ಒಂದೂವರೆ ತಿಂಗಳು ಬೇಕಾಯಿತು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರಿಗೆ ಮತ್ತು ತಿ.ನರಸೀಪುರದಲ್ಲಿ ನನಗೆ ಈ ರೀತಿಯ ಹೀನಾಯ ಸೋಲಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ.

ವಿರೋಧಿ ಅಲೆ ಇರಲಿಲ್ಲ: ಕಾಂಗ್ರೆಸ್‌ ಪಕ್ಷ ಸಿದ್ದರಾಮಯ್ಯ ನಾಯಕತ್ವದಲ್ಲಿ ರಾಜ್ಯದಲ್ಲಿ ಐದು ವರ್ಷ ಸುಭದ್ರ ಸರ್ಕಾರ ನೀಡಿದ್ದಲ್ಲದೆ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿತ್ತು. ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಇರಲಿಲ್ಲ. ಹೀಗಾಗಿ ಕಾಂಗ್ರೆಸ್‌ ಪಕ್ಷ 120 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿತ್ತು.

Advertisement

ಆದರೆ, ಚುನಾವಣೆ ಮೂರ್‍ನಾಲ್ಕು ದಿನಗಳಿರುವಾಗ ಎಲ್ಲ ಲೆಕ್ಕಾಚಾರಗಳೂ ಬುಡಮೇಲಾಗಿ, ಅಭಿವೃದ್ಧಿ ಕಾರ್ಯಗಳ ಮೇಲೆ ಜಾತಿ ಸವಾರಿ ಮಾಡಿದ್ದರಿಂದ ಕಾಂಗ್ರೆಸ್‌ ಪಕ್ಷ ಸೋಲಬೇಕಾಯಿತು. ಜಾತಿ ಸಮೀಕರಣ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೂಲೆಗುಂಪು ಮಾಡಿತು. ಈ ಚುನಾವಣೆ ಸೋಲಿನಿಂದ ನಾನು ತುಂಬಾ ದಿಗ್ಭ್ರಾಂತನಾಗಿದ್ದೇನೆ ಎಂದರು.

ಚುನಾವಣೆಯಲ್ಲಿ ನನ್ನ ಸೋಲಿಗೆ ಜೆಡಿಎಸ್‌ನ ಗೆಲುವು ಕಾರಣವಲ್ಲ. ಬದಲಿಗೆ ಬಿಜೆಪಿ ತಾನು ಗೆಲ್ಲಲು ಆಗದ ಕ್ಷೇತ್ರಗಳಲ್ಲಿ ತನ್ನ ಮತಗಳನ್ನು ಜೆಡಿಎಸ್‌ ಅಭ್ಯರ್ಥಿಗಳಿಗೆ ವರ್ಗಾವಣೆಯಾಗುವಂತೆ ನೋಡಿಕೊಂಡಿದ್ದೇ ಕಾರಣ. ಈ ಸೋಲು ನನ್ನನ್ನು ದಿಗ್ಬ್ರಾಂತನನ್ನಾಗಿಸಿದೆ. ಕ್ಷೇತ್ರದಲ್ಲಿ ನನ್ನ ಮಗನ ಹೆಸರು ಕೇಳಿಬಂದಿದ್ದಕ್ಕೂ ನನ್ನ ಸೋಲಿಗೂ ಸಂಬಂಧ ಇಲ್ಲ ಎಂದು ಹೇಳಿದರು.

ಪ್ರಕೃತಿ ಚಿಕಿತ್ಸೆ: ಚುನಾವಣೆ ಪ್ರಚಾರದ ವೇಳೆ ಬಹಳ ಓಡಾಡಿ ದಣಿದಿದ್ದರಿಂದ ದೇಹದ ಅಂಗಾಗಗಳ ಪುನಶ್ಚೇತನಕ್ಕಾಗಿ ಒಂದೂವರೆ ತಿಂಗಳು ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೆ. ಈ ಕಾರಣದಿಂದ ಸಭೆ-ಸಮಾರಂಭಗಳಿಂದ ದೂರ ಉಳಿದಿದ್ದೆ, ಇದನ್ನೇ ದೊಡ್ಡದಾಗಿ ಬಿಂಬಿಸಿ ನನ್ನನ್ನು ಪಕ್ಷದಿಂದ ಹೊರ ಹಾಕಿಸಿ ತಾವು ಅಧಿಕಾರ ಅನುಭವಿಸಬಹುದು ಅಂದುಕೊಂಡಿದ್ದಾರೆ ಕೆಲವರು ಎಂದು ಟೀಕಿಸಿದರು.

ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಬಂದಿರುವ ಕೆಲವರು  ನಾನು ಬಿಜೆಪಿಗೆ ಹೋಗುತ್ತೇನೆಂದು ಪಿತೂರಿ ಮಾಡುತ್ತಿದ್ದಾರೆ. ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗುವುದಿಲ್ಲ, ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ.
-ಡಾ.ಎಚ್‌.ಸಿ.ಮಹದೇವಪ್ಪ, ಮಾಜಿ ಸಚಿವ

ಸಿದ್ದರಾಮಯ್ಯ ಜತೆ ಚೆನ್ನಾಗಿದ್ದೇನೆ: ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ನಮ್ಮ ಸಂಬಂಧ ಹಳಸಿದೆ ಎಂದು ಅವರೂ ಹೇಳಿಲ್ಲ, ನಾನೂ ಹೇಳಿಲ್ಲ. ಇದೆಲ್ಲಾ ಕೆಲವರು ಹರಡುತ್ತಿರುವ ವದಂತಿಗಳು, ಇದರಲ್ಲಿ ಸತ್ಯಾಂಶವಿಲ್ಲ ಎಂದು ಮಾಜಿ ಸಚಿವ ಡಾ.ಮಹದೇವಪ್ಪ ಹೇಳಿದರು.

ಐದು ವರ್ಷಗಳ ಕಾಲ ಆಡಳಿತದ ಕಡೆಗೆ ಗಮನಕೊಟ್ಟು ಆರೋಗ್ಯವನ್ನು ನಿರ್ಲಕ್ಷಿಸಿದ್ದೆ. ಆದ್ದರಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಕಳೆದ 15 ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿಯೇ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆದ ಪಕ್ಷದ ಆತ್ಮಾವಲೋಕನ ಸಭೆಗಳಿಗೂ ಹಾಜರಾಗಲಾಗಿಲ್ಲ.  ಕೆಪಿಸಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭಕ್ಕೂ ಹೋಗಲು ಸಾಧ್ಯವಾಗದೆ ದೂರವಾಣಿ ಮೂಲಕ ಅವರಿಗೆ ಶುಭಾಶಯ ಕೋರಿದ್ದೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next