Advertisement

ಮಂದಿರ ನಿರ್ಮಾಣಕ್ಕೆ ಅಸ್ಸಾಂನ ಮುಸ್ಲಿಂ ಸಂಘಟನೆ 5 ಲಕ್ಷ ದೇಣಿಗೆ

09:58 AM Nov 20, 2019 | Team Udayavani |

ಗುವಾಹಟಿ/ಅಯೋಧ್ಯಾ: ಅಸ್ಸಾಂನಲ್ಲಿರುವ 21 ಮುಸ್ಲಿಂ ಸಂಘಟನೆಗಳ ಒಕ್ಕೂಟ ಜನಗುಸ್ತಿಯ ಸಮನ್ನೊಯ್‌ ಪರಿಷದ್‌ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡುವ ನಿರ್ಧಾರ ಪ್ರಕಟಿಸಿದೆ.

Advertisement

ನ.9ರಂದು ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಸ್ವಾಗತಿಸಿರುವ ಪರಿಷದ್‌, ದೇಗುಲ ನಿರ್ಮಾಣಕ್ಕೆ ಇದ್ದ ಅಡಚಣೆ ನಿವಾರಣೆಯಾಗಿದೆ. ಇದೊಂದು ಐತಿಹಾಸಿಕ ತೀರ್ಪು. ಅದನ್ನು ಸ್ವಾಗತಿಸುವುದಾಗಿ ಪರಿಷದ್‌ನ ಮುಖ್ಯ ಸಂಚಾಲಕ ಮೊಮಿನುಲ್‌ ಅವ್ವಲ್‌ ಹೇಳಿದ್ದಾರೆ. ಈ ಪರಿಷದ್‌ ಗಾರಿಯಾ, ಮಾರಿಯಾ, ದೇಶಿ, ಮೈಮಲ್‌ ಮತ್ತು ಕಚಾರಿ ಎಂಬ ಮುಸ್ಲಿಂ ಸಂಘಟನೆಗಳ ಒಕ್ಕೂಟವಾಗಿದೆ. ಇವು ಅಸ್ಸಾಂನ ಮೂಲ ಮುಸ್ಲಿಂ ಸಂಘಟನೆಗಳು ಎಂದು ಹೇಳಿಕೊಳ್ಳುತ್ತಿವೆ.

ಮುಂದಿನ ವಾರ ಭೇಟಿ: ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಟ್ರಸ್ಟ್‌ ಸ್ಥಾಪಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಿರ್ಮೋಹಿ ಅಖಾಡಾದ ಪ್ರಮುಖರು ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ರವಿವಾರ ಅಯೋಧ್ಯೆಯಲ್ಲಿ ನಡೆದಿದ್ದ ಸಾಧುಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

2.77 ಎಕರೆ ಜಮೀನು ಪ್ರಕರಣದಲ್ಲಿ ಪ್ರಧಾನವಾಗಿ ಕಾನೂನು ಹೋರಾಟ ನಡೆಸಿದ್ದ ನಿರ್ಮೋಹಿ ಅಖಾಡಾ, ಶೀಘ್ರದಲ್ಲಿಯೇ ರಚನೆಯಾಗುವ ಟ್ರಸ್ಟ್‌ ನಲ್ಲಿನ ಪ್ರಮುಖ ಹುದ್ದೆಗಳನ್ನು ಪಡೆದುಕೊಳ್ಳಲು ಬಯಸಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲು ‘ರಾಮನಂದಿ ವೈಶ್ಣೂ’ ಎಂಬ ಸಮುದಾಯಕ್ಕೆ ಸೇರಿದ ಸಾಧುಗಳು ಅರ್ಹರು ಎಂದು ನಿರ್ಮೋಹಿ ಅಖಾಡಾದ ವಕ್ತಾರ ಮತ್ತು ವಕೀಲ ರಂಜಿತ್‌ ಲಾಲ್‌ ವರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next