Advertisement

ತ್ರಿಮೂರ್ತಿಗಳು-ದಾಸ ಶ್ರೇಷ್ಟರ ಆರಾಧನೆ 

12:30 AM Feb 22, 2019 | |

ಸಂಗೀತ ಪರಿಷತ್‌ ಮಂಗಳೂರು(ರಿ.), ಇವರು ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳು ಮತ್ತು ದಾಸವರೇಣ್ಯರ “ಆರಾಧನೋತ್ಸವ’ವನ್ನು ಏರ್ಪಡಿಸಿದ್ದರು. ಚೆನ್ನೈ ಯ ಕಲಾವಿದ ಸುನೀಲ್‌ ಗಾರ್ಗನ್‌ ಅವರ ಕಛೇರಿಯೊಂದಿಗೆ ಆರಾಧನೆ ಆರಂಭವಾಯಿತು. ಮೋಹನ ವರ್ಣದೊಂದಿಗೆ ಕಛೇರಿ ಆರಂಭಿಸಿದ ಕಲಾವಿದ ವೆಂಕಟವಿಠಲದಾಸರ ಗಂಭೀರ ನಾಟ ರಾಗದ ಗಣಪತಿ ಎನ್ನ ಪಾಲಿಸೊ ಗಂಭೀರವನ್ನು ಸ್ವರ ಕಲ್ಪನೆಗಳೊಂದಿಗೆ ಪ್ರಸ್ತುತಪಡಿಸುವ ಮೂಲಕ ತಾನೋರ್ವ ಪ್ರಬುದ್ಧ ಗಾಯಕನಾಗಿ ಹೊರಹೊಮ್ಮುತ್ತಿರುವುದನ್ನು ಶ್ರುತ ಪಡಿಸಿದರು. ತ್ಯಾಗರಾಜರ ರವಿಚಂದ್ರಿಕ ರಾಗದ ಮಾಕೇಲರ ವಿಚಾರಮುವನ್ನು ಮತ್ತು ಪುರಂದರದಾಸರ ಕಾನಡದ ನಾನಿನ್ನ ಧ್ಯಾನದೊಳಿರಲು ಆಲಾಪನೆಯೊಂದಿಗೆ ಹೃದಯಂಗಮವಾಗಿ ನಿರೂಪಿಸಿದರು. ಭಾವ ಪ್ರಧಾನವಾದಆಲಾಪನೆಯೊಂದಿಗೆ ವಿಜಯದಾಸರ ಬಾರಯ್ಯ ಶ್ರೀನಿವಾಸ ಭಕ್ತರ ಮನೆಗೆಯನ್ನು ಅಂದವಾದ ಸಂಗತಿಗಳಿಂದ ನಿರೂಪಿಸಿ ರಸಿಕರ ಮನಮುಟ್ಟಿದರು. ತ್ವರಿತಗತಿಯ ತ್ಯಾಗರಾಜರ ದರ್ಬಾರ್‌ ರಾಗದ ಯೋಚನ ಕಮಲ ಲೊಚನವನ್ನು ಪ್ರಸ್ತುತಪಡಿಸಿ ಲಘು ಆಲಾಪನೆಯೊಂದಿಗೆ ಗೋಪಾಲಕೃಷ್ಣ ಭಾರತಿಯವರ ನಾಟಕುರುಂಜಿ ರಾಗದ ವಳಿ ಮಾರೈ ತಿರಕ್ಕುಡೆ ಮಲೈಪೋಲೆಯಲ್ಲಿ ಮನ ಸೆಳೆದ ಸ್ವರ ಮಾಲಿಕೆಗಳು ಪ್ರೇಕ್ಷಕರಿಗೆ ಕಲಾವಿದನ ಸಾಧನೆಯ ಪರಿಚಯ ಮಾಡಿಸಿದವು. ಪುರಂದರದಾಸರ ಜಗದೋದ್ಧಾರನ ಹಾಡಿ, ಶಾಮಾ ಶಾಸಿŒಗಳ ನೀಲಾಂಬರಿಯ ಬ್ರೋವವಮ್ಮ ಬಂಗಾರು ವಿನೊಂದಿಗೆ ಕಛೇರಿ ಮುಕ್ತಾಯವಾಯಿತು. ವಯಲಿನ್‌ನಲ್ಲಿ ಗೋಕುಲ್‌ ಅಲಂಗೊಡೆ , ಮೃದಂಗದಲ್ಲಿ ಸನೋಜ್‌ ಕುಮಾರ್‌ ಸಹಕರಿಸಿದರು. 

Advertisement

ಅಪರಾಹ್ನದ ಕಛೇರಿಯನ್ನು ನಡೆಸಿಕೊಟ್ಟವರು ಉಜಿರೆಯ ಕೃಷ್ಣಗಾನಸುಧಾ ಸಂಗೀತ ವಿದ್ಯಾಲಯದ ನಿರ್ದೇಶಕಿ ಅನಸೂಯ ಪಾಟಕ್‌. ಬಹುದಾರಿ ವರ್ಣದೊಂದಿಗೆ ಆರಂಭಿಸಿ ಬೇಗಡೆಯ ವಲ್ಲಭನಾಯಕಸ್ಯವನ್ನು ಸಮರ್ಥವಾಗಿ ನಿರೂಪಿಸಿದರು. ಅಠಾಣದ ಅನುಪಮ ಗುಣಾಂಬುಧಿ ಹಾಡಿ ಆಲಾಪನೆಯೊಂದಿಗೆ ಕಾಮವರ್ಧಿನಿಯ ಅಪ್ಪ ರಾಮಭಕ್ತಿಯನ್ನು ಮನೋಜ್ಞವಾಗಿ ನಿರೂಪಿಸಿ ಮನಗೆದ್ದರು. ರಾಗಮಾಲಿಕೆಯಲ್ಲಿ ಭಜನೆ ಮಾಡಬಾರದೆ ನಿರೂಪಿಸಿ, ಆಲಾಪನೆಯೊಂದಿಗೆ ಶಹಾನದ ಈ ವಸುಧಾ ನೀವಂಟಿ ದೈವವನ್ನು ಕಲ್ಪನಾ ಸ್ವರಗಳೊಂದಿಗೆ ಪ್ರಸ್ತುತಪಡಿಸಿದರು. ಪ್ರಧಾನ ರಾಗವಾದ ತೋಡಿಯ ಜೇಸೀ ನಾದೆಲ್ಲದಲ್ಲಿ ಆಲಾಪನೆ, ನೆರವಲ್‌ ಮತ್ತು ಸುಂದರ ಸ್ವರಪ್ರಸ್ತಾರಗಳಿಂದ ತಾನೋರ್ವ ಉತ್ತಮ ಗಾಯಕಿ ಎಂದು ನಿರೂಪಿಸಿದರು. ಹಿಂದೋಳದಲ್ಲಿ ವಿಜಯದಾಸರ ಪರದೇಸಿ ನೀನು ಮತ್ತು ತಿಲ್ಲಾನದೊಂದಿಗೆ ಕಛೇರಿ ಮುಕ್ತಾಯಗೊಳಿಸಿದರು. ಪಿಟೀಲಿನಲ್ಲಿ ಗಣರಾಜ ಕಾರ್ಲೆ ,ಮೃದಂಗದಲ್ಲಿ ಪನ್ನಗ ಶರ್ಮನ್‌ ಸಹಕರಿಸಿದರು. 

ವಿ| ಮಧೂರು ಬಾಲಸುಬ್ರಹ್ಮಣ್ಯಮ್‌ ಶಿಷ್ಯರೊಂದಿಗೆ ಪಂಚರತ್ನ ಗೋಷ್ಠಿ ಗಾಯನ ನಡೆಸಿಕೊಟ್ಟ ನಂತರ ಹರಿದಾಸರೆಂದೇ ಖ್ಯಾತಿ ಪಡೆದ ಡಾ|ವಿದ್ಯಾಭೂಷಣ ಅವರು ವ್ಯಾಸರಾಜ ತೀರ್ಥರ ಬಲ್ಲವಗಿಲ್ಲಿದೆ ವೈಕುಂಠ ದೊಂದಿಗೆ ದಾಸ ಶ್ರೇಷ್ಠರ ಆರಾಧನೆ ಆರಂಭಿಸಿದರು. ಕನಕದಾಸರ ತೊರೆದು ಜೀವಿಸಬಹುದೆಯನ್ನು ಅಪ್ಯಾಯಮಾನವಾಗಿ ಹಾಡಿ ಲಘು ಆಲಾಪನೆಯೊಂದಿಗೆ ತ್ಯಾಗರಾಜರ ಬಹುದಾರಿಯ ಬೊವಬಾರಮಾ ನಿರೂಪಿಸಿದರು. ಕನಕದಾಸರ ಇಷ್ಟು ದಿನ ಈ ವೈಕುಂಠ ಭಾವ ಪೂರ್ಣವಾಗಿ ಹಾಡಿ ಪಟ್ಣಂ ಸುಬ್ರಹ್ಮಣ್ಯ ಅಯ್ಯರ್‌ ಅವರ ಕಲ್ಯಾಣಿಯ ನಿಜ ದಾಸ ವರಧಾವನ್ನು ಆಲಾಪನೆ, ಸ್ವರಕಲ್ಪನೆಗಳೊಂದಿಗೆ ಪ್ರಸ್ತುತ ಪಡಿಸಿದಾಗ ದೀರ್ಘ‌ ಕರತಾಡನ ಕೇಳಿಬಂತು. ಮಣಿದವರ ಮನದಾಸೆ, ಆನಂದಭೈರವಿಯ ಪುರಂದರದಾಸರ ಸುಮ್ಮನೆ ಬರುವುದೆ ಮುಕ್ತಿಗಳನ್ನು ಹಾಡಿ ಪುರಂದರದಾಸರ ಕಲಿಯುಗದಲಿ ಹರಿನಾಮವ ನೆನೆದರೆಯನ್ನು ಭಕ್ತಿಪೂರ್ವಕವಾಗಿ ನಿರೂಪಿಸಿ ಇವ ನಮ್ಮ ಕಣ್ಣ ದ್ವಾಪರದ ಅಣ್ಣವನ್ನು ಹಾಡಿದರು. ಮಧ್ವ ಮೋಹನದಾಸರ ಸಂಜೀವನ ಗಿರಿಧರವನ್ನು ಭಾವಪೂರ್ಣವಾಗಿ ಪ್ರಸ್ತುತಪಡಿಸಿ ಕಮಲೇಷವಿಠಲದಾಸರ ವರ ಮಂತ್ರಾಲಯ. ಪುರಂದರದಾಸರ ವೆಂಕಟಾಚಲ ನಿಲಯಂ ಹಾಡಿ ಭಾಗ್ಯಾದ ಲಕ್ಷ್ಮೀಬಾರಮ್ಮದೊಂದಿಗೆ ಆರಾಧನೆ ಮುಕ್ತಾಯಗೊಳಿಸಿದರು. ಪಿಟೀಲಿನಲ್ಲಿ ಪ್ರಾದೇಶ್‌ ಆಚಾರ್‌, ಮೃದಂಗದಲ್ಲಿ ಅನಿರುದ್ಧ ಭಟ್‌ ಮತ್ತು ಗಣೇಶ್‌ ಮೂರ್ತಿ ಘಟದಲ್ಲಿ ಸಹಕಾರ ನೀಡಿದರು.

ಕೃತಿ ಮಂಗಳೂರು 

Advertisement

Udayavani is now on Telegram. Click here to join our channel and stay updated with the latest news.

Next