Advertisement

ಸಂಗೀತ ಗಂಧವ ಆಘ್ರಾಣಿಸಿ!

06:40 AM Jan 07, 2018 | Harsha Rao |

ಯಾವುದೋ ಒಂದು ರಸ್ತೆಯ ಯಾವುದೋ ಅನಾಮಧೇಯ ತಿರುವಿನಲ್ಲಿ ನೀವು ಡ್ರೈವ್‌ ಮಾಡುತ್ತಿರುವಾಗ ಇದ್ದಕಿದ್ದಂತೆ ನಿಮಗೊಂದು ಹಾಡು ನೆನಪಾಗಿಬಿಡುತ್ತದೆ. ಕೆಲವೊಮ್ಮೆ ಆ ಹಾಡು ಅದೆಷ್ಟು ಹಳೆಯ ಹಾಡಾಗಿರುತ್ತದೆಂದರೆ ನಿಮಗೀಗ ಐವತ್ತು ಮತ್ತು ನಿಮ್ಮ ಮದುವೆಯ ಮೊದಲ ರಾತ್ರಿ ನಿಮ್ಮ ಗೆಳೆಯರು ನಿಮ್ಮನ್ನು ಕಿಚಾಯಿಸಲೆಂದು ರಾತ್ರಿಯಿಡೀ ಹೊರಗೆ ಹಾಡುತ್ತ ಕುಳಿತಿದ್ದಂಥ ಪ್ರಾಚೀನ ಹಾಡು. ಹಾಗೆ ಆಕ್ರಮಿಸಿದ ಆ ಹಾಡನ್ನು ನೀವು ಕೆಲಕಾಲ ಗುನುಗುತ್ತ ಹೋಗುತ್ತೀರಿ.

Advertisement

ನಂತರ ಇದ್ದಕ್ಕಿದ್ದಂತೆ ನಿಮ್ಮÇÉೊಂದು ಪಾಪದ ಕುತೂಹಲ ಎದ್ದು ನಿಂತು ಕೇಳುತ್ತದೆ. ಇದ್ದಕ್ಕಿದ್ದಂತೆ ಈ ಹಾಡು ನೆನಪಾಗಿದ್ದು ಯಾಕೆ? ಇದ್ದಕ್ಕಿದ್ದಂತೆ ಉತ್ತರವು ಹಾಗೆ ಎದುರು ಬಂದು ನಿಲ್ಲದಿದ್ದರೂ ಮನಸ್ಸನ್ನು ತೀವ್ರವಾಗಿ ಆಕ್ರಮಿಸಿದ ಆ ಹಾಡಿನ ಆವರ್ತನವು ಉರುಳುತ್ತ ಹೋದಂತೆ ಅÇÉೆÇÉೋ ಮಾರ್ಗಮಧ್ಯೆ ನಿಮಗೆ ಆ ಗಂಧವು ತಾಗುತ್ತದೆ. ಆ ಹಾಡು ಹೊಳೆದು ತನ್ನನ್ನು ಹಾಡಿಕೊಳ್ಳುವಂತೆ ನಿಮ್ಮ ಮನಸ್ಸನ್ನು ಉದ್ರೇಕಿಸಿದ ಆ ತಿರುವಿನಲ್ಲಿ ಮೂಗನ್ನೂ ಮನಸ್ಸನ್ನು ತಾಕಿದ ಆ ಗಂಧ. ಅದು ಸಂಪಿಗೆ ಹೂವಿನ ಗಂಧವಾಗಿತ್ತಾ? ಉತ್ತರವು ಅದೇ ಹಾಡನ್ನು ಹಾದು ಹೋಗುತ್ತ ಹದವಾದ ಸಂಪಿಗೆಯ ಘಮದಲ್ಲಿ ಹಾಡಿನ ಸಂದರ್ಭವೂ ಆ ರಾತ್ರಿಯ ಮೊದಲ ಸ್ಪರ್ಶದ ಹಿತದ ಆಮೋದವು ಮನಸ್ಸಿನ ಆವರಣದಲ್ಲಿ ಸುತ್ತುತ್ತ ಹೋದಂತೆ ಅಂದು ಹೊರಗೆ ಕುಳಿತು ಕಿಚಾಯಿಸುತ್ತಿದ್ದ ಗೆಳೆಯರನ್ನು ಒಬ್ಬೊಬ್ಬರನ್ನಾಗಿ ನಿಮ್ಮ ಮನಸ್ಸಿಗೆ ಬಂದಂತೆ ನೆನೆದುಕೊಳ್ಳುತ್ತ ಹೋಗುತ್ತಿರುವಾಗ ಉತ್ತರದ ಗೊಂದಲವು ಪೂರ್ವದಲ್ಲಿ ಬಗೆಹರಿದು ಹುಟ್ಟುತ್ತದೆ. ನಿಮ್ಮ ಮೊದಲ ರಾತ್ರಿಯ ಮಂಚದ ಸುತ್ತ ಸಂಪಿಗೆಯ ಮಾಲೆಯನ್ನು ಕಟ್ಟಿದ್ದರು ಮತ್ತು ಮಧುಮಂಚದಲ್ಲಿದ್ದ ನಿಮ್ಮನ್ನು ಕಿಚಾಯಿಸುತ್ತ ಹೊರಗೆ ನಿಮ್ಮ ಗೆಳೆಯರು ಆ ಹಾಡನ್ನು ಹಾಡುತ್ತಿದ್ದರು. ಕಾಲಾಂತರದಲ್ಲಿ ನೀವು ಆ ಹಾಡನ್ನು ಮರೆತಿದ್ದರೂ, ರೇಡಿಯೋ, ದೂರದರ್ಶನ, ಇಂಟರ್ನೆಟ್‌ ಯೂಟ್ಯೂಬಾದಿಗಳು ಆ ಹಾಡನ್ನು ಮರೆತಿದ್ದರೂ ಇಂದು ಇದ್ದಕ್ಕಿದ್ದಂತೆ ಆ ತಿರುವಿನಲ್ಲಿ ತೇಲಿ ಬಂದ ಸಂಪಿಗೆಯ ಗಂಧವು ಆ ಅದೇ ಹಾಡಿನ ನೆಪದಲ್ಲಿ ನಿಮ್ಮ ನೆನಪನ್ನು ಕೆಣಕಿದೆ. 

ಸಂಗೀತಕ್ಕೆ ಸ್ವರಗಳಿವೆ, ಲಯವಿದೆ, ನಾದವಿದೆ, ಶ್ರುತಿಯಿದೆ ಎಂಬುದೆಲ್ಲ ತೀರ ಸ್ವಾಭಾವಿಕವಾದ ಮತ್ತು ಶಾಸ್ತ್ರೀಯವಾದ ಮಾತಾಗುತ್ತದೆ. ಸಂಗೀತವನ್ನು ನಾವು ಭಾವನಾತ್ಮಕವಾಗಿ ಅರ್ಥ ಮಾಡಿಕೊಳ್ಳುವವರೆಗೆ ಸಂಗೀತವು ಕೇವಲ ಪ್ರದರ್ಶನಕ್ಕೆ ಸೀಮಿತಗೊಳ್ಳುವ ಕಲೆಯಾಗುತ್ತದೆಯಷ್ಟೆ. ಹೀಗೆ ಸುಮ್ಮನೆ ನಿಮ್ಮ ಸಂಗೀತದ ಕಲಾವಿದರನ್ನು ಮಾತನಾಡಿಸಿ ಕೇಳಿ ನೋಡಿ. ಮಳೆಗಾಲದ ಪರಮಾವಧಿಯಲ್ಲಿ ಕಂಗೆಟ್ಟ ಟ್ರಾಫಿಕ್‌ ಜಾಮಿನ ನಡುವೆ ಕೆಟ್ಟು ನಿಂತ ಕೆಟಿಯೆಮ್ಮಿನ ಸುಟ್ಟ ಎಂಜಿನ್ನಿನ ಸದ್ದಿನÇÉೋ, ಚ‌ಳಿಗಾಲದ ಹಬೆಯ ಸ್ನಾನದ ಹದದಲ್ಲಿಯೋ, ಬೇಸಗೆಯ ಉಪ್ಪಿನ ಬೆವರನ್ನು ಒರೆಸುವಾಗಲೋ, ಕವಳದ ಬಟ್ಟಲಿನಿಂದ ಎತ್ತಿಕೊಂಡ ಕೊನೆಯ ಎಲೆಯ ಶಾರೆ ತೆಗೆಯುವಾಗಲೋ, ಮಗುವೊಂದರ ಹೊಸ ಬಗೆಯ ರಂಪದ ಕಿರುಚಾಟದ ನಡುವೆಯೋ ಅಥವಾ ಮನೆಯ ಎದುರಿನ ರಸ್ತೆಯಲ್ಲಿ ಹಾದು ಹೋದ ಅಶೋಕಾ ಲೈಲೆಂಡ್‌ನ‌ ಕಿತ್ತುಹೋದ ಬಲಬದಿಯ ಸಿವಿ ಬೂಟ್‌ ಮಾಡುತ್ತಿರುವ ಅಸಂಗತ ಕರಕರೆಯÇÉೋ ನಾಲ್ಕಾರು ವರ್ಷಗಳಿಂದ ಕೇಳಿರದ ಅಥವಾ ಅಭ್ಯಾಸ ಮಾಡಿರದ ರಾಗವೊಂದು ಇದ್ದಕ್ಕಿದ್ದಂತೆ ನೆನಪಾಗಿ ಗುನುಗುವ ಪ್ರಕ್ರಿಯೆಯು ಆರಂಭವಾಗಿಬಿಡುತ್ತದೆ. ರಾಗವೊಂದರ ಹೊಸ ಬಗೆಯ ಹುಟ್ಟಿಗೆ, ಕಾವ್ಯದ ಹುಟ್ಟಿಗೆ, ನಾಟ್ಯದ ಹುಟ್ಟಿಗೆ ಕಾರಣವಾಗುವ ತನ್ಮಾತ್ರಗಳಲ್ಲಿ ಈ ಗಂಧಕ್ಕೊಂದು ಮಜವಾದ ಸ್ಥಾನವಿದೆ. ಬಹಳ ಬಾರಿ ನಾವಿದನ್ನು ಗಮನಿಸಿರುವುದಿಲ್ಲ. ಕೆಲವೊಮ್ಮೆ ಗಮನಿಸಿದರೂ ಗ್ರಹಿಸಿರುವುದಿಲ್ಲ. ಸಂಗೀತದ ಭಾವನಾತ್ಮಕ ಜಗತ್ತಿನಲ್ಲಿ ಈ ಗ್ರಹಿಸುವಿಕೆ ಮತ್ತು ಗಮನಿಸುವಿಕೆ ಇವೆರಡಕ್ಕೂ ನಿಜವಾಗಿ ಬಹಳ ದೊಡª ಅಂತರವಿದೆ. ಆ ರಸ್ತೆಯ ತಿರುವಿನಲ್ಲಿ ಇದ್ದಕ್ಕಿದ್ದಂತೆ ನೆನಪಾದ ಹಾಡಿನ ಕಾರಣವನ್ನು ಹುಡುಕುತ್ತ ಹೋಗುವುದು ಗಮನ ಮತ್ತು ಕಾರಣವನ್ನು ಕಂಡು ಹಿಡಿಯುವುದು ಗ್ರಹಣ. ಹಾಗೆ ನೆನಪಾದ ಆ ಹಾಡು ನಿಲ್ಲದೆ ಚಕ್ರದಂತೆ ಮತ್ತೆ ಸುತ್ತುತ್ತ ಮತ್ತದೇ ಮಧುಮಂಚದ ನೆನಪನ್ನು ಸೃಷ್ಟಿಸುತ್ತ ಹೋಗುವ ಗಮನದ ಅಂತ್ಯದಲ್ಲಿ ಎದ್ದು ನಿಲ್ಲುವ ಸಂಪಿಗೆಯ ಗಂಧವು ನಿಜವಾದ ಗ್ರಹಣ. 

ಈ ಅನುಭವವು ಕೇವಲ ಹಾಡಿನೊಂದಿಗೆ ಅಥವಾ ಸಂಗೀತದೊಂದಿಗೆ ಮಾತ್ರ ಸಂಬಂಧಿಸಬೇಕೆಂದೇನಿಲ್ಲ. ಮಿರ್ಜಾನ್‌ ಕೋಟೆಯ ಮೇಲೆ ನಿಂತಾಗ ಬೇಕಲ್‌ ಕೋಟೆಯ ನೆನಪೂ, ಕಿಶೋರಿ ಅಮ್ಮನನ್ನು ಕೇಳುವಾಗ ಕೇಸರೀಬಾಯಿಯವರ ನೆನಪು ಹೀಗೆ, ಮುನೇಶ್ವರ ಬ್ಲಾಕಿನ ಕೆಳಗೆ ಓಡಾಡುವಾಗ ಕಾಕಮುಟ್ಟೈ ಸಿನೆಮಾದ ಅಣ್ಣ-ತಮ್ಮಂದಿರ ನೆನಪು ಹೀಗೆ ರೂಪತನ್ಮಾತ್ರೆಯ ಪ್ರಭಾವಕ್ಕೆ ಹೊರತಾದದ್ದಲ್ಲ ಈ ಇಂಥ ಅನುಭವಗಳು. ಆದರೆ ಇಲ್ಲಿ ದೃಶ್ಯದಿಂದ ದೃಶ್ಯವೊಂದು ನೆನಪಾಗುತ್ತದೆ ಅಥವಾ ಶಬ್ದದಿಂದ ಶಬ್ದವೊಂದು ನೆನಪಾಗುತ್ತದೆ. ಆದರೆ, ಗಂಧದಿಂದ ಹಾಡು ಹುಟ್ಟುವ ಚಲನಶೀಲ ಪ್ರಕ್ರಿಯೆಯಿದೆಯಲ್ಲ, ಅದು ನಿಜಕ್ಕೂ ಮಹತ್ತರವಾದದ್ದು.  

ನಾಗದಾಳಿಯ ಪರಿಮಳವನ್ನು ಬಲ್ಲ ನನಗೆ ಆ ಪರಿಮಳವು ಮುಕೇಶನನ್ನು ಕೇಳುವಾಗ ಹೆಚ್ಚು ಕಾಡುತ್ತದೆ ಎಂದಾದರೆ ಅದೇ ಪರಿಮಳವನ್ನು ನನ್ನಷ್ಟೇ ಚೆನ್ನಾಗಿ ತಿಳಿದುಕೊಂಡ ನನ್ನ ಗೆಳತಿಗೆ ಅರ್ಜಿತ್‌ ಸಿಂಗನನ್ನು ಕೇಳುವಾಗ ಅದೇ ನಾಗದಾಳಿಯ ಪರಿಮಳವು ಹೆಚ್ಚು ಕಾಡಬಹುದು. ಇದಕ್ಕೆ ಮುಖ್ಯ ಕಾರಣವಿಷ್ಟೆ. ಆ ಹಾಡನ್ನು ಅಥವಾ ಆ ರಾಗವನ್ನು ನಿಜಕ್ಕೂ ಆಸ್ವಾದಿಸುವಾಗ ನಮ್ಮ ಸುತ್ತಮುತ್ತಲಿನ ಗಂಧವು ರಾಗದೊಳಗೆ ಅಥವಾ ಹಾಡಿನೊಳಗೆ ಇಳಿಯುವುದು ಮತ್ತು ಆ ಹಾಡಿನ ರಾಗವು ತಾನೇ ಗಂಧವಾಗುವುದು. ಇಲ್ಲಿ ಗಂಧವೂ ಮತ್ತು ಆ ರಾಗವೂ ಒಂದಾಗುವ ಪ್ರಕ್ರಿಯೆಯು ಬಹಳ ಜೈವಿಕವಾದದ್ದು ಮತ್ತು ಅಸಾಧಾರಣ ತಾದಾತ್ಮ$Âವನ್ನು ಒಳಗೊಳ್ಳುವಂಥದ್ದು! ನೀವು ಡ್ರೈವ್‌ ಮಾಡುತ್ತಿರುವ ಕಾರು ಮ್ಯಾನ್ಯುವಲ್‌ ಕಾರಾಗಿದ್ದರೂ ಡ್ರೈವ್‌ ಮಾಡುವ ಕೆಲಸವು ಆಟೋಮ್ಯಾಟಿಕ್‌. ಮನಸ್ಸಿಗೆ ಗೊತ್ತಾಗಿ ಹೋಗಿದೆ. ಭಾವವಿಲ್ಲದೆ ಕೇವಲ ಆರೋಹ-ಅವರೋಹಗಳ ಸ್ವರಗತಿಯನ್ನು ಆಚೀಚೆ ಮಾಡುತ್ತ ಸಿದ್ಧಗೊಳಿಸಿದ ತಾನುಗಳು ಬೇಡದಿದ್ದರೂ ಕಛೇರಿಯಲ್ಲಿ ಉದುರುವಂತೆ ಕಾರು ನಡೆಯುತ್ತಿರುತ್ತದೆ. ಆದರೆ, ರಸ್ತೆಯ ಆ ತಿರುವಿನಲ್ಲಿ ಕ್ಷಣಾರ್ಧದಲ್ಲಿ ನರಮಂಡಲವನ್ನು ಆವರಿಸುವ ಸಂಪಿಗೆಯ ಗಂಧಕ್ಕೆ ಕಾಲವನ್ನು ಮೀರಿ  ನಿಂತು ಅದೇ ಸಂಪಿಗೆಯ ಗಂಧವನ್ನು ಹಚ್ಚಿಕೊಂಡ ಹಾಡನ್ನು ನೆನೆಯಿಸುವ ಶಕ್ತಿಯು ಇರುವಂಥದ್ದು ಸಾಮಾನ್ಯ ನಿಟ್ಟಿನ ಲಾಜಿಕ್ಕಿಗೆ ಅರ್ಥವಾಗುವಂಥದ್ದಲ್ಲ. 

Advertisement

ರಾಗಕ್ಕೊಂದು ಗಂಧವಿರುತ್ತದೆ ಎಂದು ಹೇಳುವುದಕ್ಕಿಂತ ರಾಗವೊಂದಕ್ಕೆ ಗಂಧದ ಎಲ್ಲ ಬಗೆಯ ಭಾವಸಾಧ್ಯ ಲೇಪವು ಇರುತ್ತದೆ ಎನ್ನಬಹುದೇನೊ. ಎಲ್ಲ ರಾಗಗಳಿಗೂ ಅಂಥ¨ªೊಂದು ಸಾಧ್ಯತೆಯಿರುತ್ತದೆ. ಶುಕ್ರವಾರದ ಸಂಜೆಯ ನಂದಾದೀಪದ ಎದುರು ಹಾಡಿಸಿಕೊಳ್ಳುವ ಭಾಗ್ಯದ ಲಕ್ಷ್ಮೀಯು, ಆ ಸಂಜೆಯಷ್ಟೆ ಕಾಯಿಸಿದ ತುಪ್ಪಕ್ಕೊಂದು ದಿವ್ಯವಾದ ಗಂಧವನ್ನು ಹಚ್ಚುವಷ್ಟೆ ಆಪ್ತವಾಗಿ ಸೈಕಲ್‌ ಬ್ರಾಂಡ್‌ ಅಗರ್‌ ಬತ್ತಿಯ ಪರಿಮಳವು ನಿಮ್ಮ ಪ್ರೀತಿಯ ಆ ಸಂಧ್ಯಾ ರಾಗವನ್ನು ನೆನಪಿಸಬಹುದು. ಹಾಗೆ ಬಂದ ಆ ರಾಗವು ಎಷ್ಟು ಕಾಲ ನಿಮ್ಮ ಸುತ್ತಲಿರುತ್ತದೆ ಎಂಬುದು ಖಂಡಿತವಾಗಿ ನಿಮ್ಮ ಜೀವನಪ್ರೀತಿಯನ್ನು ಅವಲಂಬಿಸುವಂಥದ್ದು. ನೆನಪು ಆಳವಾದಷ್ಟೂ ಗಂಧದ ತೀವ್ರತೆ ಮತ್ತು ಆ ತೀವ್ರತೆಯು ಹಚ್ಚುವ ರಾಗದ ಅಥವಾ ಸಂಗೀತದ ತೀವ್ರತೆಯು ಒಂದನ್ನೊಂದು ಮೀರುವಂಥದ್ದು ಮತ್ತು ರಸ್ತೆಯ ತಿರುವು ಅನಾಮಧೇಯವಾಗಿದ್ದಷ್ಟೂ ಆ ಭಾವದ ತೀವ್ರತೆಗೊಂದು ಸುಖವಾದ ಗಂಧದ ಲೇಪ ಮತ್ತು ಸಂತೋಷದ ದೀಪದ ಬೆಳಕು ನಿರಂತರವಾಗಿರುತ್ತದೆ. ಹಾಗೆ ಅನಿರೀಕ್ಷಿತವಾಗಿ ಸಿಕ್ಕುವ ಗಂಧದ ಮೂಲವನ್ನು ಗ್ರಹಿಸುವತ್ತ ಗಮನವಿಡಬೇಕಷ್ಟೆ.

– ಕಣಾದ ರಾಘವ

Advertisement

Udayavani is now on Telegram. Click here to join our channel and stay updated with the latest news.

Next