Advertisement

ಸಂಗೀತಕ್ಕಿದೆ ನೋವು ಮರೆಸುವ ದಿವ್ಯ ಶಕ್ತಿ

12:59 PM Apr 26, 2022 | Team Udayavani |

ಲಕ್ಷ್ಮೇಶ್ವರ: ಸಂಗೀತಕ್ಕಿರುವ ಶಕ್ತಿ ಅಪಾರ. ಸಂಗೀತದ ಪ್ರತಿ ರಾಗಾಲಾಪದಲ್ಲೂ ಸಕಲ ಜೀವರಾಶಿಗಳ ನೋವು, ಸಂಕಷ್ಟ ಮರೆಸುವ ದಿವ್ಯ ಶಕ್ತಿ ಅಡಗಿದೆ. ಸತತ ಅಭ್ಯಾಸ, ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕತೆಯ ನಡುವೆಯೂ ಒಲಿಯುವ ಅದೃಷ್ಟದ ವಿದ್ಯೆಯಾಗಿದೆ ಎಂದು ಹಿರಿಯ ಉದ್ಯಮಿ ಶಿವಣ್ಣ ಕೋಳಿವಾಡ ಹೇಳಿದರು.

Advertisement

ಪಟ್ಟಣದ ಬಸ್ತಿಬಣ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಪುಲಿಗೆರೆ ಕಲಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಯನ, ನಾಟ್ಯ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತಕ್ಕೆ ಎಲ್ಲ ಮನೋರೋಗಗಳನ್ನು ಗುಣಪಡಿಸುವ, ನೊಂದ ಮನಸ್ಸಿಗೆ ನೆಮ್ಮದಿ, ಆನಂದ ನೀಡುವ ಶಕ್ತಿಯಿದೆ. ಸಂಗೀತ ಮತ್ತು ನಾಟಕ ಕ್ಷೇತ್ರಕ್ಕೆ ಲಕ್ಷ್ಮೇಶ್ವರದ ಕೊಡುಗೆ ಅಪಾರವಾಗಿದೆ. ಇಲ್ಲಿನ ಬಚ್ಚಾಸಾನಿ ಎಂಬ ಮಹಿಳೆ ರಾಜ್ಯದ ಪ್ರಥಮ ಮಹಿಳಾ ನಾಟಕ ಕಂಪನಿ ಕಟ್ಟಿ ಬೆಳೆಸಿದ ಕೀರ್ತಿಗೆ ಪಾತ್ರಳಾಗಿದ್ದಾಳೆ. ಸಂಗೀತ ಸೇವೆಗಾಗೀಯೇ ಜೀವನ ಮುಡಿಪಾಗಿಟ್ಟ ಕಲಾವಿದರನ್ನು ನೀಡಿದ ಹೆಮ್ಮೆ ತವರೂರಿನದ್ದಾಗಿದೆ. ಸಂಗೀತ ಕಲಾವಿದರನ್ನು ಮತ್ತು ಪೋಷಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಇಂದಿನ ತಾಂತ್ರಿಕ ಯುಗದಲ್ಲೂ ಸಂಗೀತ ಕ್ಷೇತ್ರವನ್ನು ಪ್ರೋತ್ಸಾಹಿಸಿ ಪೋಷಿಸುವ ಮನಸ್ಸು ನಮ್ಮೆಲ್ಲರದ್ದಾಗಬೇಕೆಂದರು.

ಅತಿಥಿ ಮಾಲಾದೇವಿ ದಂದರಗಿ ಮಾತನಾಡಿ, ಸಂಗೀತ ಸೇವೆ ಮಾಡುವುದು ಸಹ ಒಂದು ಪುಣ್ಯವಾಗಿದೆ. ಗಾಯನಕ್ಕೆ ಒಲಿಯದ ಮನವಿಲ್ಲ ಎನ್ನುವಂತೆ ಸಂಗೀತ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಪಟ್ಟಣದಲ್ಲಿ ಮೂಡಿಬರಬೇಕಾಗಿದೆ. ಈ ಮೂಲಕ ಬಡ ಹಾಗೂ ಬೆಳಕಿಗೆ ಬಾರದ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯವಾಗಬೇಕಾಗಿದೆ. ಬಹುದಿನಗಳಿಂದ ಪಟ್ಟಣದಲ್ಲಿ ಸಂಗೀತಾಸಕ್ತರಿಗೆ ಸಂಗೀತ ಆಲಿಸುವ ಸೌಭಾಗ್ಯದ ಕೊರತೆ ಉಂಟಾಗಿತ್ತು. ಅದನ್ನು ಪ್ರೊ.ಐ.ಸಿ.ಧರಣಿ ಅವರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ಬಂದ ಪುಲಿಗೆರೆ ಕಲಾ ಬಳಗ ಈಡೇಸುವಂತಾಗಿದೆ. ಅಲ್ಲದೇ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಭರತನಾಟ್ಯ ಕಲಾವಿದೆ ನಮ್ಮೂರಿನ ಮೊಮ್ಮಗಳು ಮೈತ್ರಿ ಶಿವಕುಮಾರ ಮಾದಗುಂಡಿ ಅವರ ಅದ್ಭುತ ಪ್ರತಿಭೆಯನ್ನು ಸಹ ಇಲ್ಲಿ ಪರಿಚಯಿಸಿದ್ದು ಸ್ವಾಗತಾರ್ಹ ಎಂದರು.

ಸಭೆಯಲ್ಲಿ ಪಂ.ಅಶೋಕ ನಾಡಿಗೇರ, ಮಹಾದೇವಪ್ಪ ಅಣ್ಣಿಗೇರಿ, ಈಶ್ವರ ಮೆಡ್ಲೆàರಿ, ಡಿ.ಎಂ.ಪೂಜಾರ ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದ ರೂವಾರಿ ಹಾಗೂ ನಿವೃತ್ತ ಪ್ರಾಚಾರ್ಯ ಪ್ರೊ|ಐ.ಸಿ.ಧರಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುಲಿಗೆರೆ ಕಲಾಬಳಗ ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿಗೆ ನೀಡಬೇಕೆನ್ನುವ ಉದ್ದೇಶದಿಂದ ಅಸ್ಥಿತ್ವಕ್ಕೆ ಬಂದಿದ್ದು, ಪಟ್ಟಣದ ಎಲ್ಲರ ಸಹಕಾರದಿಂದ ಉತ್ತಮ ಸಂಗೀತ ಕಾರ್ಯಕ್ರಮಗಳನ್ನು ನಾಡಿಗೆ ನೀಡುವ ಉದ್ದೇಶ ಹೊಂದಿದ್ದೇವೆಂದು ಹೇಳಿದರು.

ನಂತರ ನಡೆದ ಸಂಗೀತ ಕಾರ್ಯಕ್ರಮದ ಆರಂಭದಲ್ಲಿ ಯುವ ಗಾಯಕಿ ಪ್ರಿಯಾಂಕಾ ಹಾವೇರಿ ಅವರು ಗಾಯನ ಆರಂಭಿಸಿದರು. ನಂತರದಲ್ಲಿ ಹಿಂದೂಸ್ಥಾನಿ ಗಾಯಕಿ ಗಾಯತ್ರಿ ಕುಲಕರ್ಣಿ ಸಂಘಟನೆಯ ರೂವಾರಿ ಪ್ರೊ|ಐ.ಸಿ.ಧರಣಿ, ಹಿರಿಯ ಗಾಯಕ ಮಂಜುನಾಥ ದೊಡ್ಡಮನಿ ಅವರು ನೀಡಿದ ಸಂಗೀತ ಸೇವೆ ಸಂಗಿತಾಸಕ್ತರ ಮನತಣಿಸಿದವು. ನಂತರ ಹಿರಿಯ ಹಿಂದೂಸ್ಥಾನಿ ಗಾಯಕ ಪಂ. ಅಶೋಕ ನಾಡಿಗೇರ ಅವರು ಸಂಗೀತ ಪ್ರಸ್ತುತಪಡಿಸಿ ಭೈರವಿ ರಾಗದೊಂದಿಗೆ ಮುಕ್ತಾಯಗೊಳಿಸಿದರು. ಇವರಿಗೆ ಬಾಬಣ್ಣ ಎಸುಗಡೆ ಅವರು ಹಾರ್ಮೋನಿಯಂ ಹಾಗೂ ಕೃಷ್ಣಕುಮಾರ ಕುಲಕರ್ಣಿ, ಮಾಳೇಶ ಕಡ್ಡಿಪೂಜಾರ ಅವರು ತಬಲಾ ಸಾಥ್‌ ನೀಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಹಾಗೂ ವಿಶ್ವದಾಖಲೆಯ 8 ವರ್ಷದ ಪುಟ್ಟಬಾಲೆ ಮೈತ್ರಿ ಶಿವಕುಮಾರ ಮಾದಗುಂಡಿ ಅವರ ಅದ್ಭುತ ಭರತನಾಟ್ಯ ಪ್ರೇಕ್ಷರ ಮನ ಸೆಳೆಯಿತು. ಎ.ಎನ್‌ .ನಾವ್ಹಿ, ಎಸ್‌.ಎಫ್‌.ಆದಿ, ಐ.ಎ.ಬಳಿಗಾರ ಹಾಗೂ ಬಸವರಾಜ ಬಾಳೇಶ್ವರಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next