Advertisement

ಮುತ್ತುಗದೂರಲ್ಲಿ ಮ್ಯೂಸಿಯಂ ನಿರ್ಮಾಣ

06:45 PM Sep 24, 2021 | Team Udayavani |

 ಸಿರಿಗೆರೆ: ನಮ್ಮ ಪರಮಾರಾಧ್ಯ ಗುರುಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯಮಹಾಸ್ವಾಮಿಗಳವರು ಕಾಳಿದಾಸನನ್ನು ಸರಿಗಟ್ಟುವ ಕಾವ್ಯಪ್ರತಿಭೆಯನ್ನು ಹೊಂದಿದ್ದ ಗಣಿಯಾಗಿದ್ದರು ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು. ಲಿಂಗೈಕ್ಯ ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಮುತ್ತಗದೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

Advertisement

ನಮ್ಮ ಗುರುಗಳು ಕಾಶಿಯಲ್ಲಿ ಹಲವು ವರ್ಷಗಳ ಕಾಲ ಸಂಸ್ಕೃತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ್ದರು. ವಿದ್ಯಾರ್ಥಿಯಾಗಿರುವಾಗಲೇ ಅಪ್ರತಿಮ ಸಂಸ್ಕೃತ ಕಾವ್ಯವನ್ನು ಬರೆದಿದ್ದರು. ಅವರ ಕಾವ್ಯ ಕಾಶಿಯ ಹಲವು ಪ್ರಮುಖ ಸಂಸ್ಕೃತ ಪತ್ರಿಕೆಗಳಲ್ಲಿ ಆಗಲೇ ಪ್ರಕಟವಾಗಿದ್ದವು ಎಂದು ಸ್ಮರಿಸಿದರು. ಲಿಂಗೈಕ್ಯ ಗುರುಗಳು ತಮ್ಮ ಬದುಕಿನ ಅಂತಿಮ ದಿನಗಳನ್ನು ಕಳೆದ ಮುತ್ತುಗದೂರು ಬಿಡಾರಕ್ಕೆ ಮ್ಯೂಸಿಯಂ ಸ್ವರೂಪ ನೀಡಲಾಗುವುದು. ಹಿರಿಯ ಗುರುಗಳ ಬದುಕಿನ ಸಮಗ್ರ ಚಿತ್ರಣ ಸಿಗುವಂತೆ ಚಿತ್ರಪಟಗಳನ್ನು ಅಳವಡಿಸಲಾಗುವುದು. ತಾವು ಚಿಕ್ಕವಯಸ್ಸಿನಲ್ಲಿದ್ದಾಗ ತೆಂಗಿನಚಿಪ್ಪಿನ ವಾಯಲಿನ್‌ ಮಾಡಿ ನುಡಿಸುತ್ತಿದ್ದನ್ನು ಗಮನಿಸಿದ ಹಿರಿಯ ಶ್ರೀಗಳು ಮಠದಲ್ಲಿದ್ದ ಪಿಟೀಲೊಂದನ್ನು ತಮಗೆ ಕೊಡುಗೆಯಾಗಿ ನೀಡಿ ಹಾರೈಸಿದ್ದರು. ತಾವು ಕಾಶಿಯಲ್ಲಿ ಓದುತ್ತಿದ್ದಾಗ ತಮ್ಮನ್ನು ಚಿಕ್ಕಜಾಜೂರು ರೇಲ್ವೆ ನಿಲ್ದಾಣಕ್ಕೆ ಕರೆ ತಂದು ರೈಲಿಗೆ ಹತ್ತಿಸುತ್ತಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕೂ ದೊಡ್ಡ ಕಾಣಕೆ ನೀಡಿದ್ದಾರೆ ಎಂದರು.

ಆರೋಗ್ಯ ರಕ್ಷಣೆಗೆ ಗಮನ ಕೊಡಿ:

ಕೊರೊನಾ ತಡೆಗಟ್ಟಲು ಲಸಿಕೆ ಬಂದಿದೆಯೆಂದು ಮೈಮರೆಯಬಾರದು. ಲಸಿಕೆಯನ್ನು ಪಡೆದ ಹಲವರು ಕೋವಿಡ್‌ಗೆ ತುತ್ತಾಗಿರುವ ಘಟನೆಗಳು ನಡೆದಿವೆ. ಆದ್ದರಿಂದ ಎಲ್ಲರೂ ಸ್ವತ್ಛತೆ, ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಸಚಿವ ಎಚ್‌. ಆಂಜನೇಯ, ನಮ್ಮ ಕಾಲದ ಆಧುನಿಕ ಬಸವಣ್ಣ ಶಿವಕುಮಾರ ಶ್ರೀಗಳು. ಅವರ ಸಂಕಲ್ಪವನ್ನು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಮಾಜವನ್ನು ಮುನ್ನಡೆಸುತ್ತಾ ಬೃಹನ್ಮಠದ ಕೀರ್ತಿ ಹಬ್ಬುವಂತೆ ಮಾಡಿದ್ದಾರೆ ಎಂದರು.

ಶ್ರದ್ಧಾಭಕ್ತಿಯ ಮೆರವಣಿಗೆ

Advertisement

ಸಿರಿಗೆರೆ: ಲಿಂಗೈಕ್ಯ ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 29ನೇ ಶ್ರದ್ಧಾಂಜಲಿ ಸಮಾರಂಭದ ಅಂಗವಾಗಿ ಸಿರಿಗೆರೆಯ ಪ್ರಮುಖ ಬೀದಿಗಳಲ್ಲಿ ಲಿಂಗೈಕ್ಯ ಗುರುಗಳ ಪುತ್ಥಳಿ ಮೆರವಣಿಗೆ ನಡೆಯಿತು. ಅಲಂಕೃತ ಟ್ರ್ಯಾಕ್ಟರ್ ನಲ್ಲಿ ಬೃಹನ್ಮಠದ ಸಾಂಪ್ರದಾಯಿಕ ಪಲ್ಲಕ್ಕಿಯನ್ನಿರಿಸಿ ಪುಷ್ಪಾಲಂಕಾರ ಮಾಡಲಾಗಿತ್ತು. ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಲಿಂಗೈಕ್ಯ ಗುರುಗಳ ಪುತ್ಥಳಿಗೆ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಪುತ್ಥಳಿಯನ್ನು ಇರಿಸಿದ್ದ ಪಲ್ಲಕ್ಕಿಯ ವಾಹನದ ಮುಂದೆ ಬೃಹನ್ಮಠದ ಬಿರುದಾವಳಿಗಳನ್ನು ಹಿಡಿದ ಯುವಕರು ಸಾಲಾಗಿ ಸಾಗಿದರು. ಮೆರವಣಿಗೆಯಲ್ಲಿ ಸಿರಿಗೆರೆಯ ನಾಗರಿಕರಲ್ಲದೆ ಹೊರ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ನಂದಿಕೋಲು, ಬ್ಯಾಂಡ್‌ಸೆಟ್‌, ನಾಸಿಕ್‌ ಬ್ಯಾಂಡ್‌, ವೀರಗಾಸೆ, ಡೋಲು, ಭಜನಾ ತಂಡಗಳು ಗಮನ ಸೆಳೆದವು.

ಮುಸ್ಲಿಂ ಬಾಂಧವರಿಂದ ತರಕಾರಿ ಕೊಡುಗೆ

ಸಿರಿಗೆರೆ: ತರಳಬಾಳು ಜಗದ್ಗುರು ಬೃಹನ್ಮಠಕ್ಕೂ ಮುಸ್ಲಿಂ ಸಮುದಾಯದವರು ಮಾತ್ರ ವಾಸ ಮಾಡುವ ಗೌರಮ್ಮನಹಳ್ಳಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಕಾರಣ ಲಿಂಗೈಕ್ಯ ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ಯತೀತ ನಿಲುವು. ಈ ಬಾಂಧವ್ಯ ಈಗಲೂ ಮುಂದುವರೆದಿದೆ. ಇದರ ಪ್ರತೀಕವಾಗಿ ಗೌರಮ್ಮನಹಳ್ಳಿಯ ಮುಸ್ಲಿಂ ಬಾಂಧವರು ಲಿಂಗೈಕ್ಯ ಗುರುಗಳ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಒಂದು ಲೋಡ್‌ನ‌ಷ್ಟು ವಿವಿಧ ತರಕಾರಿಗಳನ್ನು ತಂದು ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ರಾಹಿಂ ಬೇಗ್‌, ಐಸಾಕ್‌ ಬೇಗ್‌, ಮಹಮ್ಮದ್‌ ಇಸಾಕ್‌, ಸಮೀಉಲ್ಲಾ ಖಾನ್‌, ಮುಸ್ತಾರ್‌ ಬೇಗ್‌, ಅಜೀಜ್‌ ಬೇಗ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next