Advertisement

ಬೈರಂಪಳ್ಳಿ: ಬಸ್‌ ಕಂಡಕ್ಟರ್‌ ಹತ್ಯೆ

09:33 AM Jul 13, 2019 | keerthan |

ಹೆಬ್ರಿ: ಪೆರ್ಡೂರು ಸಮೀಪದ ಬೈರಂಪಳ್ಳಿಯಲ್ಲಿ ಖಾಸಗಿ ಬಸ್‌ ನಿರ್ವಾಹಕನನ್ನು ಇಬ್ಬರು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.

Advertisement

ಪೆರ್ಡೂರು ಬೈರಂಪಳ್ಳಿಯ ದೂಪದಕಟ್ಟೆ ನಿವಾಸಿ ಪ್ರಶಾಂತ್‌ ಪೂಜಾರಿ (39) ಕೊಲೆಯಾದ ವ್ಯಕ್ತಿ. ಮಲ್ಪೆ ರೂಟಿನ ಸಿಟಿ ಬಸ್‌ನಲ್ಲಿ ಒಂದು ವರ್ಷದಿಂದ ನಿರ್ವಾಹಕನಾಗಿದ್ದ ಪ್ರಶಾಂತ್‌ ಗುರುವಾರ ರಾತ್ರಿ ಕೆಲಸ ಮುಗಿಸಿ ಮನೆಯಲ್ಲಿ ಊಟ ಮಾಡಿ ಮಲಗಿದ್ದರು. ತಡರಾತ್ರಿ 12 ಗಂಟೆಗೆ ಸುಮಾರು 25-30 ವರ್ಷದ ಇಬ್ಬರು ಅಪರಿಚಿತರು ಮನೆಯ ಬಾಗಿಲು ಬಡಿದಿದ್ದು ಪ್ರಶಾಂತ್‌ ಪೂಜಾರಿ ಬಾಗಿಲು ತೆಗೆದು ಹೊರಗೆ ಹೋಗಿದ್ದಾರೆ.

ತನ್ನ ಮನೆಯ ಕತ್ತಿಗೇ ಬಲಿಯಾದರು
ರಾತ್ರಿ ಮನೆಯ ಹೊರಗೆ ಮೂವರ ನಡುವೆ ಭಾರೀ ವಾಗ್ವಾದ ನಡೆಯುತ್ತಿದ್ದ ಸಂದರ್ಭ ಪ್ರಶಾಂತ ಅವರ ಪತ್ನಿ ವಿಜಯ ಪ್ರಾಣ ರಕ್ಷಣೆಗಾಗಿ ಮನೆಯಲ್ಲಿದ್ದ ಕತ್ತಿಯನ್ನು ಎತ್ತಿಕೊಂಡಿದ್ದರು. ದುಷ್ಕರ್ಮಿ ಗಳು ಅದೇ ಕತ್ತಿಯನ್ನು ಎಳೆದು ಪ್ರಶಾಂತ್‌ನನ್ನು ಕಡಿದು ಕೊಲೆ ಮಾಡಿದ್ದಾರೆ.

ಪತ್ನಿಯನ್ನು ಕೂಡಿ ಹಾಕಿದ್ದರು
ಆರೋಪಿಗಳು ವಿಜಯರನ್ನು ಮನೆಯೊಳಗೆ ಕೂಡಿ ಹಾಕಿದ್ದರು. ವಿಜಯ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರು ಬಂದು ಮನೆಯ ಬಾಗಿಲು ತೆರೆದರು. ಬಳಿಕ ಹುಡುಕಾಡಿದಾಗ ಪ್ರಶಾಂತ್‌ ಅವರು ಮನೆಯ ತೋಟದ ಮಧ್ಯೆ ಬಿದ್ದು ನರಳುತ್ತಿದ್ದರು. ವಿಜಯ ಅಲ್ಲಿಗೆ ಹೋಗಲು ಹೆದರಿ ತನ್ನ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅವರ ಅಣ್ಣ, ಪ್ರಶಾಂತ್‌ ಅವರ ತಂದೆ ಮತ್ತು ಅಕ್ಕ ತೋಟಕ್ಕೆ ಹೋಗಿ ಪರೀಕ್ಷಿಸಿದಾಗ ಪ್ರಶಾಂತ್‌ ಪೂಜಾರಿ ಅವರು ಮೃತ ಪಟ್ಟಿದ್ದರು. ಹಳೆಯ ದ್ವೇಷದಿಂದ ಕೊಲೆ ನಡೆದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿಗಳ ಬೈಕ್‌ ವಶ
ಆರೋಪಿಗಳು ತಾವು ಬಂದಿದ್ದ ಬೈಕನ್ನು ತೊರೆದು ಅಲ್ಲಿಂದ ಪರಾರಿಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Advertisement

ಸುಳಿವು ಲಭ್ಯ
ಪತ್ತೆಯಾದ ಬೈಕ್‌ ಪೆರ್ಡೂರಿನ ಪೆಟ್ರೋಲ್‌ ಪಂಪೊಂದರ ಉದ್ಯೋಗಿಯದ್ದಾಗಿದ್ದು, ಅದರ ಆಧಾರದಲ್ಲಿ ಆರೋಪಿಗಳ ಸುಳಿವು ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ

ಹೊಟೇಲ್‌ನಲ್ಲಿ ನಷ್ಟ ಅನುಭವಿಸಿದ್ದರು
ಪ್ರಶಾಂತ ಈ ಹಿಂದೆ ಪೆರ್ಡೂರು, ಪರ್ಕಳ ಮತ್ತು ಮಲ್ಪೆಯಲ್ಲಿ ಹೊಟೇಲ್‌ ಉದ್ಯಮ ನಡೆಸಿದ್ದು, ಅದರಲ್ಲಿ ನಷ್ಟ ಅನುಭವಿಸಿ ದ್ದರು ಎನ್ನಲಾಗುತ್ತಿದೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next