Advertisement

ಮುನಿಯಪ್ಪ, ಮುನಿಸ್ವಾಮಿ ಭವಿಷ್ಯ ಇಂದು ಪ್ರಕಟ

10:59 AM May 23, 2019 | Suhan S |

ಕೋಲಾರ: ಲೋಕಸಭಾ ಚುನಾವಣೆಯಲ್ಲಿ 14 ಅಭ್ಯರ್ಥಿಗಳ ಭವಿಷ್ಯವನ್ನು 12.55 ಲಕ್ಷ ಮತದಾರರು ನಿರ್ಧರಿಸಿದ್ದು, ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಶಾಂತಿಯುತವಾಗಿ ಫ‌ಲಿತಾಂಶ ಘೋಷಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಸೋಲು ಗೆಲುವಿನ ಬಗ್ಗೆ ಕೋಲಾರ ಕ್ಷೇತ್ರದ ಎರಡು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ತವಕ ಹೆಚ್ಚಾಗಿದೆ.

Advertisement

ಕೋಲಾರ ಕ್ಷೇತ್ರದಲ್ಲಿ ಏ.18 ರಂದು ಮತದಾನ ನಡೆದಿದ್ದು, 35 ದಿನಗಳಿಂದಲೂ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಹಾಗೂ ಬಿಜೆಪಿಯ ಎಸ್‌.ಮುನಿಸ್ವಾಮಿ ಸೇರಿ 14 ಅಭ್ಯರ್ಥಿಗಳು ಫ‌ಲಿತಾಂಶಕ್ಕಾಗಿ ಕಾಯುತ್ತಿದ್ದರು. ಇದೀಗ ಕಾಯುವಿಕೆಗೆ ತೆರೆ ಬೀಳುತ್ತಿದ್ದು, ಮತಯಂತ್ರಗಳಲ್ಲಿ ಅಡಗಿದ್ದ ಅಭ್ಯರ್ಥಿಗಳ ಭವಿಷ್ಯ ಗುರುವಾರ ಬೆಳಗ್ಗೆ 8 ಗಂಟೆಯಿಂದ ಹೊರಗೆ ಬರಲಿದ್ದು, ಸಂಜೆ ವೇಳೆಗೆ ಪೂರ್ಣಪ್ರಮಾಣದಲ್ಲಿ ಲಭ್ಯವಾಗಲಿದೆ.

12.55 ಲಕ್ಷ ಮತದಾನ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16,28,782 ಅರ್ಹ ಮತದಾರರಿದ್ದು, ಇವರಲ್ಲಿ 8,16,475 ಪುರುಷ, 8,12,149 ಮಹಿಳೆ ಹಾಗೂ 158 ಇತರೆ ಮತದಾರರು ಸೇರಿದ್ದರು. ಏಪ್ರಿಲ್ 18 ರಂದು ಕ್ಷೇತ್ರದಲ್ಲಿ ಒಟ್ಟು 2,100 ಮತಗಟೆrಗಳಲ್ಲಿ ಮತದಾನ ನಡೆದು ಶೇ.77.15 ಪ್ರಮಾಣದಲ್ಲಿ ಒಟ್ಟು 12,55,976 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 6,42,349 ಪುರುಷ, 6,13,607 ಮಹಿಳಾ ಹಾಗೂ 20 ಇತರೆ ಮತದಾರರು ಮತ ಚಲಾಯಿಸಿದ್ದರು.

ಕಣದಲ್ಲಿದ್ದವರು: ಕೋಲಾರ ಲೋಕಸಭಾ ಚುನಾವಣಾ ಕಣದಲ್ಲಿ ಒಟ್ಟು 14 ಮಂದಿ ಅಭ್ಯರ್ಥಿಗಳಿದ್ದಾರೆ. ಬಿಎಸ್ಪಿ ಅಭ್ಯರ್ಥಿಎಂ.ಜಿ.ಜಯಪ್ರಸಾದ್‌, ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ, ಬಿಜೆಪಿ ಎಸ್‌.ಮುನಿಸ್ವಾಮಿ, ಪ್ರಾದೇಶಿಕ ಪಕ್ಷಗಳಾದ ಅಂಬೇಡ್ಕರ್‌ ಸಮಾಜ ಪಕ್ಷದ ಎಂ.ಬಿ.ಅಶೋಕ, ರಿಪಬ್ಲಿಕನ್‌ ಸೇನಾ ಪಕ್ಷದ ಜಿ.ಚಿಕ್ಕನಾರಾಯಣ, ಉತ್ತಮ ಪ್ರಜಾಕೀಯ ಪಕ್ಷದ ಆರ್‌.ರಾಮಾಂಜಿನಪ್ಪ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಎ) ವೆಂಕಟೇಶಪ್ಪ, ಪಿರಮಿಡ್‌ ಪಾರ್ಟಿ ಆಫ್‌ ಇಂಡಿಯಾದ ಎನ್‌.ಎಂ.ಸರ್ವೇಶ. ಪಕ್ಷೇತರರಾಗಿ ಮೇಡಿಹಾಳ ಛಲವಾದಿ ಎಂ.ಚಂದ್ರಶೇಖರ್‌, ಪಿ.ಮುನಿರಾಜಪ್ಪ, ಡಾ. ವಿ.ಎಂ.ರಮೇಶ್‌, ಎಲ್.ರಾಜ್‌ಕುಮರೇಸನ್‌, ಸಿ.ಶಂಕರಪ್ಪ ಹಾಗೂ ಎನ್‌.ಸಿ.ಸುಬ್ಬರಾಯಪ್ಪ ಚುನಾವಣಾ ಕಣದಲ್ಲಿದ್ದಾರೆ. ಜೊತೆಗೆ ನೋಟಾ ಬಟನ್‌ ಇದ್ದು, ಎಷ್ಟು ಮತ ಚಲಾವಣೆಯಾಗಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಬಂದೋಬಸ್ತ್: ಮತಯಂತ್ರಗಳನ್ನು ಕಳೆದ 35 ದಿನಗಳಿಂದಲೂ ಸರ್ಪಗಾವಲಿನಲ್ಲಿ ಹಗಲು ರಾತ್ರಿ ಪಾಳಿಯ ಮೇಲೆ ಸಮರ್ಪಕವಾಗಿ ಕಾದ ಪೊಲೀಸ್‌ ಸಿಬ್ಬಂದಿ, ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಲು ಅಗತ್ಯ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದ್ದಾರೆ.

Advertisement

ಮತ ಎಣಿಕೆ ದಿನಕ್ಕಾಗಿ ಕೋಲಾರ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುತ್ತಮುತ್ತಲ ಎಲ್ಲಾ ರಸ್ತೆಗಳಲ್ಲಿಯೂ ಕಟಕಟೆಗಳನ್ನು ಕಟ್ಟಿದ್ದು, ಇಡೀ ದಿನ ಈ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿಯೇ ಮದ್ಯ ಮಾರಾಟ ನಿಷೇಧಿಸಲಾಗಿದೆ. ವಿಜಯೋತ್ಸವಕ್ಕೆ ಕಡಿವಾಣ ಹಾಕಲಾಗಿದೆ.

ಸಂಜೆ ವೇಳೆಗೆ ಫ‌ಲಿತಾಂಶ: ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ, ಪೂರ್ಣ ಪ್ರಮಾಣದಲ್ಲಿ ಫ‌ಲಿತಾಂಶ ಪ್ರಕಟವಾಗಲು ಸಂಜೆ 4 ಗಂಟೆ ಆಗಬಹುದು ಎಂದು ಅಂದಾಜಿಸಲಾಗಿದೆ. ಬಹುತೇಕ ಸಮೀಕ್ಷೆಗಳಲ್ಲಿ ಕೆಲವು ಕಾಂಗ್ರೆಸ್‌ ಮತ್ತು ಕೆಲವು ಬಿಜೆಪಿ ಗೆಲುವು ಎಂದು ಬಿಂಬಿಸಿವೆ.

ಇದರಿಂದ ಕೋಲಾರ ಫ‌ಲಿತಾಂಶ ಕುರಿತಂತೆ ಗೊಂದಲ ಮುಂದುವರಿದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿಗರಲ್ಲಿ ಡವ ಡವ ಹೆಚ್ಚಾಗುವಂತಾಗಿದೆ.

ನಮೋ ಅಲೆಯಲ್ಲಿ ಕೆಎಚ್ಎಂ ತಂತ್ರಗಾರಿಕೆ ಫ‌ಲಿಸುವುದೇ?:

 ರಾಜಕೀಯ ತಂತ್ರಗಾರಿಕೆ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ 7 ಬಾರಿ ಗೆಲುವು ಸಾಧಿಸಿದ್ದು, 8ನೇ ಬಾರಿಯೂ ಗೆದ್ದು ಬೀಗುವರೇ ಅಥವಾ ಕಾಂಗ್ರೆಸ್‌ ಭಿನ್ನಮತ ಹಾಗೂ ಮೋದಿ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆದ್ದು ಬೀಗುವರೇ ಎಂಬುದು ಗುರುವಾರದ ಫಲಿತಾಂಶ ಸಾಕ್ಷೀಕರಿಸಲಿದೆ. ತ್ರಿಕೋನ ಸ್ಪರ್ಧೆ ಇದ್ದ 2014ರ ಚುನಾವಣೆಯಲ್ಲಿ 47921 ಮತಗಳ ಅಂತರದಿಂದ ಕೆಎಚ್ಎಂ ಜಯಗಳಿಸಿದ್ದರಾದರೂ, ಈ ಬಾರಿ ನೇರ ಹಣಾಹಣಿಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಲವು ಶಾಸಕರು, ಮಾಜಿ ಶಾಸಕರು, ಬಿಜೆಪಿ ಪರ ನಿಂತಿದ್ದು, ಶತಾಯಗತಾಯ ಮುನಿಯಪ್ಪರನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಮುನಿಯಪ್ಪಗೆ 8ನೇ ಬಾರಿ ಗೆಲುವು ಸಿಗುವುದೇ ಅಥವಾ ಬಿಜೆಪಿ ಮೊದಲ ಗೆಲುವು ದಾಖಲಿಸಿ ಸೋಲಿಲ್ಲದ ಸರದಾರನ ಮನೆಗೆ ಕಳುಹಿಸುವುದೇ ಕಾದು ನೋಡಬೇಕಷ್ಟೆ. ಕಳೆದ 2014ರ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ-418349 ಮತ ಗಳಿಸಿದ್ದು, ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಕೋಲಾರ ಕೇಶವ 370428 ಮತ, ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ 267211 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಸಂಸದ ಮುನಿಯಪ್ಪ ಕಳೆದ 2009ರ ಲೋಕಸಭಾ ಚುನವಣೆಯಲ್ಲಿ 22345 ಮತಗಳ ಅಂತರದಿಂದ ಬಿಜೆಪಿಯ ಡಿ.ಎಸ್‌.ವೀರಯ್ಯ ವಿರುದ್ಧ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ ವೇಮಗಲ್ ಕ್ಷೇತ್ರವೊಂದರಿಂದಲೇ 65 ಸಾವಿರ ಮತಗಳ ಅಂತರ ಪಡೆದುಕೊಂಡು ಗೆಲುವು ಸಾಧಿಸಿದ್ದ ಮುನಿಯಪ್ಪಗೆ 2009ರಲ್ಲಿ ಸ್ವಕ್ಷೇತ್ರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವೊಂದರಲ್ಲೇ 28255 ಹೆಚ್ಚು ಮತಗಳಿಸುವ ಮೂಲಕ ಸ್ಥಾನ ದಕ್ಕಿತ್ತು. 2014 ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಶ್ರೀನಿವಾಸಪುರದಲ್ಲಿ 3802 ಅಂತರ, ಮುಳಬಾಗಿಲಿನಲ್ಲಿ 10494 ಹಾಗೂ ಮಾಲೂರಿನಲ್ಲಿ 4348 ಹಾಗೂ ಕೋಲಾರದಲ್ಲಿ 3568 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಉಳಿದಂತೆ ಚಿಂತಾಮಣಿ ಹಾಗೂ ಶಿಡ್ಲಘಟ್ಟಗಳಲ್ಲಿ ಜೆಡಿಎಸ್‌ ಅಭ್ಯರ್ಥಿ ಕೇಶವ ಮುನ್ನಡೆ ಕಾಯ್ದುಕೊಂಡರೆ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಕೆಜಿಎಫ್‌ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.ಈ ಬಾರಿ ಮತದಾನೋತ್ತರ ಸಮೀಕ್ಷೆಗಳ ಒಂದರಲ್ಲಿ ಮುನಿಯಪ್ಪ ಗೆಲ್ಲುವರೆಂದು ತಿಳಿಸಿದ್ದರೆ ಉಳಿದವುಗಳಲ್ಲಿ ಬಿಜೆಪಿಗೆ ಗೆಲುವು ಎಂದು ತಿಳಿಸಲಾಗಿದ್ದು, ಅಂತಿಮವಾಗಿ ಗುರುವಾರದ ಫಲಿತಾಂಶದಿಂದ ನಿರ್ಧಾರವಾಗಬೇಕಾಗಿದೆ.
● ಕೆ.ಎಸ್‌.ಗಣೇಶ್‌
Advertisement

Udayavani is now on Telegram. Click here to join our channel and stay updated with the latest news.

Next