Advertisement

ಪುರಸಭೆ: ಅಂತಿಮವಾಗದ ಅಭ್ಯರ್ಥಿಗಳ ಪಟ್ಟಿ

10:39 AM May 12, 2019 | Team Udayavani |

ಬಂಗಾರಪೇಟೆ: ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು 16 ಕೊನೆ ದಿನವಾಗಿದೆ. ಮೂರು ದಿನಗಳಲ್ಲಿ ಕೇವಲ ಬೆರಳಿಕೆಯಷ್ಟು ನಾಮಪತ್ರ ಸಲ್ಲಿಕೆಯಾಗಿದ್ದು, ರಾಜ್ಯದ ಪ್ರಮುಖ ಮೂರೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗದೇ ಗೊಂದಲದಲ್ಲಿ ಸಿಲುಕಿವೆ.

Advertisement

ಕಾಂಗ್ರೆಸ್‌ಗೆ 27 ವಾರ್ಡ್‌ಗಳಲ್ಲಿ ಮೂರು ನಾಲ್ಕು ಮಂದಿ ಆಕಾಂಕ್ಷಿಗಳಿರುವುದರಿಂದ ಸ್ಥಳೀಯ ಶಾಸಕರಿಗೆ ಯಾರಿಗೆ ಟಿಕೆಟ್ ನೀಡಬೇಕೆಂಬ ತಲೆ ಬಿಸಿ ಶುರುವಾಗಿದೆ. ಮೀಸಲಾತಿ ಬದಲಾಗಿರುವುದರಿಂದ ಹಾಲಿ ಸದಸ್ಯರು ಹೊಸ ವಾರ್ಡ್‌ಗಳತ್ತ ಮುಖ ಮಾಡಿದ್ದು, ತಮಗೆ ಅನುಕೂಲವಾಗಿರುವ ವಾರ್ಡ್‌ಗೇ ಟಿಕೆಟ್ ನೀಡಬೇಕೆಂದು ಮುಖಂಡರಲ್ಲಿ ಒತ್ತಡ ಹೇರುತ್ತಿದ್ದು, ಟಿಕೆಟ್ ಹಂಚಿಕೆ ಗೊಂದಲವಾಗಿದೆ.

ಹುಡುಕಾಟ: ಕಾಂಗ್ರೆಸ್‌ನಲ್ಲಿ ಪ್ರಭಾವಿಗಳು ಸ್ಪರ್ಧಿಸುವ ವಾರ್ಡ್‌ಗಳಲ್ಲಿ ಟಿಕೆಟ್ ಹಂಚಿಕೆ ಬಹುತೇಕ ಇತ್ಯರ್ಥವಾಗಿದೆ. ಕೆಲವು ಕಡೆ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಹಾಗೂ ಕೆಲವು ಕಡೆ ಮೀಸಲಾತಿಯಲ್ಲಿ ಅಭ್ಯರ್ಥಿಗಳ ಕೊರತೆ ಹೆಚ್ಚಾಗಿರುವುದರಿಂದ ಮುಖಂಡರು ಹುಡುಕಾಟದಲ್ಲಿ ತೊಡಗಿದ್ದಾರೆ.

ಹೊಸಮುಖಗಳದ್ದೇ ಚಿಂತೆ: ಪುರಸಭೆ 27 ವಾರ್ಡ್‌ಗಳಿಗೆ ವರ್ಷದ ಹಿಂದೆಯೇ ಮೀಸಲಾತಿ ಪ್ರಕಟಣೆಗೊಂಡಿತ್ತು. ಆದ್ದರಿಂದ ಕಾಂಗ್ರೆಸ್‌ನ ಪ್ರಭಾವಿ ಸದಸ್ಯರು ಈಗಾಗಲೇ 6 ತಿಂಗಳ ಹಿಂದೆಯೇ ತಾವು ಸ್ಪರ್ಧೆ ಬಯಸಿರುವ ವಾರ್ಡ್‌ಗಳಲ್ಲಿ ಮತದಾರರನ್ನು ಗೆಲ್ಲಲು ಪ್ರಚಾರ ಪ್ರಾರಂಭಿಸಿದ್ದರು. ಅಲ್ಲದೆ, ಈ ಬಾರಿ ಹೊಸ ಮುಖಗಳೂ ಹಳಬರಿಗೆ ಸಡ್ಡು ಹೊಡೆಯಲು ಸಿದ್ಧತೆಯಲ್ಲಿರುವುದು ರಾಜಕೀಯ ಪಕ್ಷಗಳ ನಾಯಕರಿಗೆ ತಲೆಬಿಸಿಯಾಗಿದೆ. ಯಾರಿಗೇ ಟಿಕೆಟ್ ನೀಡಿದರೂ ಮತ್ತೂಬ್ಬರು ಬಂಡಾಯವಾಗಿ ಕಣಕ್ಕಿಳಿಯದೆ ಪಕ್ಷಕ್ಕಾಗಿ ಶ್ರಮಿಸಬೇಕೆಂದು ಸೂಚನೆ ಸಹ ನೀಡಲಾಗಿದೆ.

ಸೂಕ್ತ ಅಭ್ಯರ್ಥಿಗಳಿಗೆ ತಲಾಶ್‌: ಇನ್ನು ಬಿಜೆಪಿ, ಜೆಡಿಎಸ್‌ನಲ್ಲಿ ಟಿಕೆಟ್ ಬಯಸಿ ಹಲವು ಮಂದಿ ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಆದರೆ, ಪಟ್ಟಣದ ಪುರಸಭೆ ಹಲವು ದಶಕಗಳಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಎದುರಿಸುವುದು ಅಷ್ಟು ಸುಲಭವಲ್ಲ ಎಂದು ತಿಳಿದು, ಎಲ್ಲಾ ರೀತಿಯಿಂದಲೂ ಬಲಿಷ್ಠವಾಗಿರುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಎರಡೂ ಪಕ್ಷಗಳು ಅಭ್ಯರ್ಥಿಗಳ ತಲಾಶೆಯಲ್ಲಿದ್ದಾರೆ.

Advertisement

ಪ್ರಚಾರ ಶುರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ ಮಾಡಿದ ಜೆಡಿಎಸ್‌ ಕಾರ್ಯಕರ್ತರು ಪುರಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿದರೆ ಒಂದಷ್ಟು ಸ್ಥಾನ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಅದು ಫ‌ಲ ನೀಡದ ಕಾರಣ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿದೆ. ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಅಂತಿಮಗೊಳ್ಳದಿದ್ದರೂ ಆಕಾಂಕ್ಷಿಗಳು ಮಾತ್ರ ತಮ್ಮ ವಾರ್ಡ್‌ಗಳಲ್ಲಿ ಪ್ರಚಾರ ಶುರು ಮಾಡಿಬಿಟ್ಟಿದ್ದಾರೆ. ತಮ್ಮ ಪಕ್ಷ ಟಿಕೆಟ್ ನೀಡಿದರೆ ಸರಿ ಇಲ್ಲದಿದ್ದರೆ ಬಂಡಾಯವಾಗಿಯಾದರೂ ಸರಿ ನಿಂತು ತಮ್ಮ ಅಸ್ತಿತ್ವವನ್ನು ತೋರಿಸಲು ಪಣ ತೊಟ್ಟಿದ್ದಾರೆ.

ಪುರಸಭೆ ಅಧಿಕಾರಕ್ಕೆ ಬಂದ ದಿನದಿಂದ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಪುರಸಭೆ ಆಡಳಿತವನ್ನು ಕಾಂಗ್ರೆಸ್‌ ಇನ್ನು ಭದ್ರಪಡಿಸಿಕೊಳ್ಳಲು ಕಸರತ್ತು ಆರಂಭಿಸಿದೆ. ಈ ಹಿಂದೆ 23 ವಾರ್ಡ್‌ಗಳಿದ್ದ ಪುರಸಭೆ ಈಗ 27ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ಲೆಕ್ಕಾಚಾರ ಪ್ರಾರಂಭವಾಗಿದೆ.

ಪುರಸಭೆ 23 ಸದಸ್ಯರ ಪೈಕಿ ಕಾಂಗ್ರೆಸ್‌ 15, ಜೆಡಿಎಸ್‌ 5, ಬಿಜೆಪಿ 2 ಪಕ್ಷೇತರ ಅಭ್ಯರ್ಥಿ 1 ಸ್ಥಾನಗಳಿಸಿದ್ದು, ಕಾಂಗ್ರೆಸ್‌ ಪಕ್ಷದವರು ಆಡಳಿತ ನಡೆಸಿದ್ದರು. ಪಟ್ಟಣದಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನೇತೃತ್ವದಲ್ಲಿ ಡಬಲ್ರಸ್ತೆ, ಚರಂಡಿ, ರಸ್ತೆಗಳ ಅಭಿವೃದ್ಧಿ, ನೂತನ ಸಾರ್ವಜನಿಕ ಆಸ್ಪತ್ರೆ ಹೀಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಪಟ್ಟಣದಲ್ಲಿ ಮಾಡಲಾಗಿದೆ ಎಂದು, ಕುಡಿಯುವ ನೀರಿನ ಸಮಸ್ಯೆಗೆ ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ರಂಗಮಂದಿರ, ನೂತನ ಪುರಸಭೆ ಕಚೇರಿ ಕಟ್ಟಡ, ಬಸ್‌ನಿಲ್ದಾಣ, ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕಾಂಗ್ರೆಸ್‌ ಹೇಳಿಕೊಳ್ಳುತ್ತಿದ್ದು, ವಾರ್ಡ್‌ಗಳಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ಗಾಗಿ ಕಸರತ್ತು ಆರಂಭಿಸಿದ್ದಾರೆ. ಉಳಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದಲ್ಲಿ ಸಜ್ಜಾಗುತ್ತಿದೆ. ಜೆಡಿಎಸ್‌ ಅಭ್ಯರ್ಥಿಗಳು ಕಡಿಮೆಯಾದರೂ ಕಣಕ್ಕೆ ಇಳಿಸಲು ಮುಖಂಡರಾದ ಎಂ.ಮಲ್ಲೇಶಬಾಬು ನೇತೃತ್ವದಲ್ಲಿ ತಾಲೀಮು ನಡೆಯುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next