Advertisement

12 ಸಾವಿರ ರಾಸುಗಳ ರಕ್ಷಣೆಗೆ ಜಮೀನೇ ಇಲ್ಲ

07:53 PM Dec 05, 2019 | Naveen |

ನಾಗರಾಜಯ್ಯ
ಮುಳಬಾಗಿಲು:
ತಾಲೂಕಿನ ತಾಯಲೂರು ಹೋಬಳಿಯ 66 ಹಳ್ಳಿಗಳಲ್ಲಿ 12 ಸಾವಿರ ಜಾನುವಾರುಗಳಿಗೆ ಕಂದಾಯ ಕಾಯ್ದೆ ನಿಯಮಾನುಸಾರ 3600 ಎಕರೆ ಜಮೀನು ಕಾಯ್ದಿರಿಸಬೇಕಾಗಿದ್ದರೂ ಸರ್ಕಾರದ ನೀತಿ ನಿಯಮಗಳಿಂದ ಒಂದೇ ಒಂದು ಎಕರೆ ಜಮೀನು ಜಾನುವಾರುಗಳ ಸಂರಕ್ಷಣೆಗಾಗಿ ಕಾಯ್ದಿರಿಸದೇ ಇರುವುದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳ ಪೋಷಣೆ ಹೇಗೆ ಎಂಬ ಆತಂಕ ದನಗಾಹಿಗಳಲ್ಲಿ ಮೂಡಿಸಿದೆ.

Advertisement

ತಾಲೂಕಿನ ತಾಯಲೂರು ಹೋಬಳಿಯಲ್ಲಿ 8 ಕಂದಾಯ ವೃತ್ತಗಳಿದ್ದು ತಾಯಲೂರು ಗ್ರಾಮದಲ್ಲಿ ಕುರಿ ಹಾಗೂ ಮೇಕೆಗಳನ್ನು ಹೊರತುಪಡಿಸಿ 1045 ಹಸು ಮತ್ತು ಎಮ್ಮೆಗಳಿದ್ದು ಕಾನೂನು ರೀತಿ 100 ಜಾನುವಾರುಗಳಿಗೆ 30 ಎಕರೆ ಜಮೀನು ಕಾಯ್ದಿರಿಸಬೇಕಾಗಿದೆ.

30 ಎಕರೆ ಮೀಸಲಿಗೆ ಆಗ್ರಹ: ತಾಯಲೂರು ಮತ್ತು ತಾಯಲೂರು ಅಮಾನಿಕೆರೆ ವ್ಯಾಪ್ತಿಯಲ್ಲಿ 60 ಎಕರೆ ಸರ್ಕಾರಿ ಗೋಮಾಳ ಜಮೀನಿದ್ದು ಪ್ರಸ್ತುತ ಅದನ್ನು ಕೆಲವರು ಸಾಗುವಳಿ ಮಾಡಿಕೊಳ್ಳುತ್ತಿರುವುದರಿಂದ ಒಂದು ಎಕರೆ ಜಮೀನು ಸಹ ಜಾನುವಾರುಗಳಿಗೆ ಕಾಯ್ದಿರಿಸದೇ ಇರುವುದರಿಂದ ಜಾನುವಾರುಗಳನ್ನು ಮೇಯಿಸಲು ಅನಾನುಕೂಲ ಉಂಟಾಗಿರುವುದರಿಂದ ಇರುವ 60 ಎಕರೆ ಪೈಕಿ 30 ಎಕರೆ ಜಮೀನನ್ನು ಜಾನುವಾರುಗಳ ಹುಲ್ಲುಗಾವುಲಿಗಾಗಿ ಕಾಯ್ದಿರಿಸಬೇಕು ಎಂಬುದು ದನಗಾಹಿಗಳ ಆಗ್ರಹ.

ಅನಧಿಕೃತವಾಗಿ ಸಾಗುವಳಿ: ದೂಲಪಲ್ಲಿ ಕಂದಾಯ ವೃತ್ತದಲ್ಲಿ ದೂಲಪಲ್ಲಿ, ಯಳಚೇಪಲ್ಲಿ, ಟಿ.ಅಗರ, ಕುಪ್ಪಂಪಾಳ್ಯ, ಅಬ್ಬೇನಹಳ್ಳಿ ಭೈರಸಂದ್ರ ಸೇರಿದಂತೆ 6 ಗ್ರಾಮಗಳಿದ್ದು ದೂಲಪಲ್ಲಿಯಲ್ಲಿ 216 ಜಾನುವಾರುಗಳಿದ್ದು ಕೇವಲ 6 ಎಕರೆ ಸರ್ಕಾರಿ ಗೋಮಾಳವಿದೆ, ಯಳಚೇಪಲ್ಲಿಯಲ್ಲಿ 528 ಜಾನುವಾರುಗಳಿದ್ದು ಕೇವಲ 5.20 ಎಕರೆ ಸರ್ಕಾರಿ ಜಮೀನಿದೆ. ಟಿ.ಅಗರ 316 ಗೋವುಗಳಿದ್ದು 3 ಎಕರೆ ಮಾತ್ರ ಸರ್ಕಾರಿ ಜಮೀನಿದೆ. ಕುಪ್ಪಂಪಾಳ್ಯ 250 ಜಾನುವಾರುಗಳಿದ್ದು 5.20 ಎಕರೆ ಸರ್ಕಾರಿ ಜಮೀನಿದೆ, ಅಬ್ಬೇನಹಳ್ಳಿಯಲ್ಲಿ 187 ಜಾನುವಾರುಗಳಿದ್ದು 1.20 ಎಕರೆ ಗೋಮಾಳವಿದೆ. ಭೈರಸಂದ್ರದಲ್ಲಿ 593 ಗೋವುಗಳಿದ್ದು 10.30 ಎಕರೆ ಜಮೀನಿದ್ದು ಒಟ್ಟಾರೆ ಈ ಹಳ್ಳಿಗಳಲ್ಲಿ 2090 ಜಾನುವಾರುಗಳಿಗೆ 630 ಎಕರೆ ಜಮೀನು ಕಾಯ್ದಿರಿಸಬೇಕಾಗಿದೆ ಆದರೆ 33 ಎಕರೆ ಮಾತ್ರ ಸರ್ಕಾರಿ ಜಮೀನಿದ್ದು ಅದನ್ನೂ ಸಹ ರೈತರು ಅನಧಿಕೃತವಾಗಿ ಸಾಗುವಳಿ ಮಾಡಿಕೊಳ್ಳುತ್ತಿರುವುದರಿಂದ ಒಂದೇ ಒಂದು ಎಕರೆ ಜಮೀನು ಕಾಯ್ದಿರಿಸಿಲ್ಲ.

ಕೇವಲ 88.20 ಎಕರೆ ಗೋಮಾಳ: ಮೋತಕಪಲ್ಲಿ ಕಂದಾಯ ವೃತ್ತದಲ್ಲಿ ಮೋತಕಪಲ್ಲಿ, ಮಡಿವಾಳ, ಜೌಗುಪಲ್ಲಿ, ಮೇಲ್ತಾಯಲೂರು, ಕೊಂಡಿಹಳ್ಳಿ, ಬಿ. ಕೊರ ವೇನೂರು, ಮಿಂಡಹಳ್ಳಿ, ಸೋಮಾರಸನಹಳ್ಳಿ, ಮದ್ದೇರಿ, ಜಂಗಮಹೊಸಹಳ್ಳಿ ಸೇರಿದಂತೆ 11 ಹಳ್ಳಿಗಳಲ್ಲಿ 1398 ಜಾನುವಾರುಗಳಿದ್ದು ಕಾಯ್ದೆಯಂತೆ 420 ಎಕರೆ ಜಮೀನು ಕಾಯ್ದಿರಿಸಬೇಕಾಗಿದೆ. ಆದರೆ ಪ್ರಸ್ತುತ 88.20 ಎಕರೆ ಮಾತ್ರ ಸರ್ಕಾರಿ ಗೋಮಾಳವಿದ್ದು ಒಂದೇ ಒಂದು ಎಕರೆ ಜಮೀನು ಕಾಯ್ದಿರಿಸಿಲ್ಲ.

Advertisement

ರಾಸುಗಳ ಹುಲ್ಲುಗಾವಲಿಗೂ ಜಮೀನಿಲ್ಲ: ಕೆ.ಬೈಪಲ್ಲಿ ಕಂದಾಯ ವೃತ್ತದಲ್ಲಿ ಕೆ.ಬೈಪಲ್ಲಿ, ಶಿನಿಗೇನಹಳ್ಳಿ, ಪಾಯಸ್ತನ ಹಳ್ಳಿ, ಕಸುವುಗಾನಹಳ್ಳಿ, ಶೆಟ್ಟಿಕಲ್‌, ರಾಮಚಂದ್ರಾಪುರ ಸೇರಿದಂತೆ 6 ಹಳ್ಳಿಗಳಲ್ಲಿ 1745 ಜಾನುವಾರುಗಳಿದ್ದು ಕಾಯ್ದೆಯಂತೆ 520 ಎಕರೆ ಕಾಯ್ದಿರಿಸಬೇಕಾಗಿದೆ ಆದರೆ ಇರುವುದು 156 ಎಕರೆ ಮಾತ್ರ ಸರ್ಕಾರಿ ಗೋಮಾಳವಿದ್ದು ಅದನ್ನೂ ಕೆಲವರು ಸಾಗುವಳಿ ಮಾಡುತ್ತಿದ್ದು ಇಲ್ಲಿಯೂ ಒಂದು ಎಕರೆ ಸಹ ಜಾನುವಾರುಗಳ ಹುಲ್ಲುಗಾವಲಿಗೆ ಕಾಯ್ದಿರಿಸಲಾಗಿಲ್ಲ.

ರಾಸುಗಳ ಸಾಕಾಣಿಕೆಗೆ ತೀವ್ರ ತೊಂದರೆ: ದೊಮ್ಮಸಂದ್ರ ಕಂದಾಯ ವೃತ್ತದಲ್ಲಿ ದೊಮ್ಮಸಂದ್ರ, ದೊಡ್ಡಗುಟ್ಟಹಳ್ಳಿ, ಚಿಕ್ಕಗುಟ್ಟಹಳ್ಳಿ, ನಾಗಮಂಗಳ, ಚೊಕ್ಕ ದೊಡ್ಡಿ, ವಜ್ರನಾಗೇನಹಳ್ಳಿ, ಡಿ.ಕುರುಬರಹಳ್ಳಿ, ಬೆಳಗಾನ ಹಳ್ಳಿ ಸೇರಿದಂತೆ 8 ಹಳ್ಳಿಗಳಲ್ಲಿ 2041 ಜಾನುವಾರು ಗಳಿದ್ದು ಕಾಯ್ದೆಯಂತೆ 600 ಎಕರೆ ಜಮೀನು ಹುಲ್ಲುಗಾವುಲಿಗೆ ಕಾಯ್ದಿರಿಸಬೇಕಾಗಿದೆ, ಆದರೆ ಈ ಹಳ್ಳಿಗಳಲ್ಲಿ ಇರುವುದೇ 220 ಎಕರೆ ಸರ್ಕಾರಿ ಗೋಮಾಳವಿದೆ ಅದನ್ನಾದರೂ ಕಾಯ್ದಿರಿಸಬೇಕಾಗಿದೆ ಯಾದರೂ ಅದನ್ನೂ ಸಹ ಸಾಗುವಳಿ ಮಾಡುತ್ತಿರುವುದರಿಂದ ಇಲ್ಲಿಯೂ ಜಾನುವಾರುಗಳ ಸಾಕಾಣಿಕೆಗೆ ತೊಂದರೆಯುಂಟಾಗಿರುತ್ತದೆ.

ಕೇವಲ 141 ಎಕರೆ ಗೋಮಾಳ: ಜೆ.ಅಗ್ರಹಾರ ಕಂದಾಯ ವೃತ್ತದಲ್ಲಿ ಜೆ.ಅಗ್ರಹಾರ, ಎಂ.ಎನ್‌.ಹಳ್ಳಿ, ಮೋಪರಹಳ್ಳಿ, ಪುಟ್ಟೇನಹಳ್ಳಿ, ಪುಲಿಪಾಪೇನಹಳ್ಳಿ, ಯಚ್ಚನಹಳ್ಳಿ, ಕೆ.ಬಿಕ್ಕನಹಳ್ಳಿ, ಬೇವನತ್ತ, ಬಟವಾರಿಹಳ್ಳಿ, ತಿಮ್ಮಾಪುರ, ಕೆ.ಬಿ.ಕೊತ್ತೂರು ಸೇರಿದಂತೆ 11
ಹಳ್ಳಿಗಳಲ್ಲಿ 1930 ಜಾನುವಾರುಗಳಿದ್ದು ಕಾಯ್ದೆಯಂಂತೆ 570 ಎಕರೆ ಜಮೀನು ಹುಲ್ಲುಗಾವುಲಿಗೆ ಕಾಯ್ದಿರಿಸಬೇಕಾಗಿದೆ ಆದರೆ ಪ್ರಸ್ತುತ ಇರುವುದೇ 141 ಎಕರೆ ಸರ್ಕಾರಿ ಗೋಮಾಳ ಮಾತ್ರವಿದ್ದು
ಇಲ್ಲಿಯೂ ಒಂದೇ ಒಂದು ಎಕರೆ ಜಮೀನು ಜಾನುವಾರುಗಳ ಸಂರಕ್ಷಣೆಗೆ ಕಾಯ್ದಿರಿಸಿಲ್ಲ.

ರಾಸುಗಳ ರಕ್ಷಣೆ ಹೇಗೆ ಎಂಬ ಚಿಂತೆ: ಗುಮ್ಮಕಲ್ಲು ಕಂದಾಯ ವೃತ್ತದಲ್ಲಿ ಗುಮ್ಮಕಲ್ಲು, ನೆರ್ನಹಳ್ಳಿ, ಪುಲಿಓಬರೆಡ್ಡಿಹಳ್ಳಿ, ರಾಯಲಮಾನದಿನ್ನೆ, ಮೈಲಾಪುರ, ಯಡಹಳ್ಳಿ, ಜಿ.ಮಾರಂಡಹಳ್ಳಿ, ಸೂರಕುಂಟೆ, ಪಟ್ರ ಹಳ್ಳಿ, ಮಚ್ಚನಹಳ್ಳಿ, ಮಿಟ್ಟಹಳ್ಳಿ ಸೇರಿದಂತೆ 11 ಹಳ್ಳಿ ಗಳಲ್ಲಿ 2036 ಜಾನುವಾರುಗಳಿದ್ದು ಕಾಯ್ದೆಯಂತೆ 600 ಎಕರೆ ಜಮೀನು ಕಾಯ್ದಿರಿಸಬೇಕಾಗಿದೆ ಅದರೆ ಇರುವ 141 ಎಕರೆ ಸರ್ಕಾರಿ ಗೋಮಾಳವನ್ನು ಕೆಲವರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ.

ಅದೇ ರೀತಿ ತಿಮ್ಮರಾವುತನಹಳ್ಳಿ ಕಂದಾಯ ವೃತ್ತದ ತಿಮ್ಮರಾವುತನಹಳ್ಳಿ, ಚುಕ್ಕನಹಳ್ಳಿ, ಅಪ್ಪಿ ಕೊಂಡೇನಹಳ್ಳಿ, ಏತೋರಹಳ್ಳಿ, ಕೋಗಿಲೇರು, ಅಪ್ಪೇನಹಳ್ಳಿ, ಕುಂಪಾಂ ಡ ಹಳ್ಳಿ, ವೇಗಮಡಗು, ಸನ್ಯಾಸಪಲ್ಲಿ, ಗಡ್ಡಂಚಿನ್ನೇಪಲ್ಲಿ, ವಿ.ಕುರುಬರಹಳ್ಳಿ, ಕರವಿರೆಡ್ಡಿಹಳ್ಳಿ ಸೇರಿದಂತೆ 12 ಗ್ರಾಮಗಳಲ್ಲಿ ಸುಮಾರು 2373 ಜಾನುವಾರು ಗಳಿದ್ದು ಜಾನುವಾರು ಸಂರಕ್ಷಣೆ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next