Advertisement

Corporation: ನಿಗಮ ನೇಮಕಕ್ಕೆ ಮುಹೂರ್ತ?- ಖುದ್ದು ಡಿ.ಕೆ.ಶಿವಕುಮಾರ್‌ ಘೋಷಣೆ

10:07 PM Oct 24, 2023 | Pranav MS |

ಬೆಂಗಳೂರು: ರಾಜ್ಯ ಸರ್ಕಾರದ ನಿಗಮ, ಮಂಡಳಿಗಳಿಗೆ ನೇಮಕಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಂತೆ ಇದೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಎರಡು ಡಜನ್‌ಗೂ ಹೆಚ್ಚು ಶಾಸಕರಿಗೆ ಸರ್ಕಾರಿ ಗೂಟದ ಕಾರಿನ ಯೋಗ ಲಭಿಸುವ ಅಂದಾಜು ಇದೆ.

Advertisement

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅ.25ರ ಬಳಿಕ ಈ ಸಂಬಂಧ ಸಿಎಂ ಹಾಗೂ ತಾವು ನಡೆಸುವುದಾಗಿ ಹೇಳಿದ್ದಾರೆ. ಯಾರಿಗೆ ಎಷ್ಟು ಪ್ರಾತಿನಿಧ್ಯ ಎಂಬುದರ ಬಗ್ಗೆ ಮಾತುಕತೆಯಲ್ಲಿ ತೀರ್ಮಾನವಾಗುವ ಸಾಧ್ಯತೆಗಳಿವೆ.

ಹಿರಿತನ, ಅನುಭವ, ಅರ್ಹತೆ ಇದ್ದರೂ ಸಂಪುಟ ರಚನೆ ಸಂದರ್ಭದಲ್ಲಿ ಹಲವು ಕಾರಣಗಳಿಂದ ಕೆಲವು ಹಿರಿಯ ಮುಖಂಡರಿಗೆ ಸ್ಥಾನ ಕಲ್ಪಿಸಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದ ಸಂಪುಟ ರಚನೆಯಾಗಿದ್ದರೂ ಹಲವು ಜಿಲ್ಲೆ, ಜಾತಿಗಳಿಗೆ ಇನ್ನೂ ಪ್ರಾತಿನಿಧ್ಯ ದೊರೆತಿಲ್ಲ. ಹೀಗೆ ಹಲವು ಕಾರಣಗಳಿಂದ ಅರ್ಹರು ಸಂಪುಟದಿಂದ ಹೊರಗಡೆ ಉಳಿದಿದ್ದಾರೆ. ಸರ್ಕಾರ ರಚನೆಯಾಗಿ 5 ತಿಂಗಳು ಕಳೆದಿದ್ದರೂ ಒಂದೆರಡು ಆಯೋಗ, ನಿಗಮ, ಮಂಡಳಿ ಹೊರತುಪಡಿಸಿದರೆ ಪೂರ್ಣ ಪ್ರಮಾಣದಲ್ಲಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗಿಲ್ಲ.

ಸಚಿವ ಸ್ಥಾನ ಸಿಗದ ಹಲವು ಹಿರಿಯರು ತಮಗೆ ಯಾವುದೇ ಕಾರಣಕ್ಕೂ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ಬೇಡವೆಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದರೂ ಆಗೊಮ್ಮೆ-ಈಗೊಮ್ಮೆ ಸರ್ಕಾರ ಹಾಗೂ ಸಚಿವರ ಕಾರ್ಯವೈಖರಿ ಕುರಿತು ಸಾರ್ವಜನಿಕರವಾಗಿಯೇ ತಮ್ಮ ಅಸಮಾಧಾನ ಹೊರ ಹಾಕುವ ಮೂಲಕ ಸರ್ಕಾರಕ್ಕೆ ಕಿರಿಕಿರಿ ಉಂಟು ಮಾಡುತ್ತಿರುವುದರಿಂದ ಅವರನ್ನು ಹೇಗೆ ಸಮಾಧಾನಪಡಿಸುವುದು ಎಂಬುದು ಒಂದು ಸವಾಲು. ಮತ್ತೂಂದೆಡೆ ತಮಗೆ ಸಚಿವ ಸ್ಥಾನ ಸಿಗುವುದೇ ಇಲ್ಲ ಎಂಬುದು ಖಾತರಿಯಾಗಿರುವ ಶಾಸಕರು “ಸಂಪನ್ಮೂಲ’ ವುಳ್ಳ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಮೇಲೆ ಆರಂಭದಿಂದಲೂ ಒತ್ತಡ ಹೇರುತ್ತಲೇ ಇದ್ದಾರೆ.

ಕಾರ್ಯತರ್ಕರಿಗೆ ಆದ್ಯತೆ:
ಶಾಸಕರ ಜತೆಗೆ ಪಕ್ಷ ಸಂಘಟನೆ, ಚುನಾವಣೆ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಸಿಗದ ಅರ್ಹ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ಮಾಡಬೇಕೆಂಬುದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್‌ ಒತ್ತಾಸೆಯಾಗಿದೆ. ಶಾಸಕರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕೆಂಬುದು ಸಿಎಂ ಬಯಕೆಯಾಗಿದ್ದರೆ, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕೆಂಬುದು ಉಪ ಮುಖ್ಯಮಂತ್ರಿ ವಾದವಾಗಿತ್ತು.

Advertisement

ಅಂತಿಮವಾಗಿ ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನ ನಿವಾಸದಲ್ಲಿ ಖರ್ಗೆ, ಡಿಕೆಶಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ನಡೆಸಿದ ಮಾತುಕತೆಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರು ಇಬ್ಬರಿಗೂ ಪ್ರಾತಿನಿಧ್ಯ ನೀಡಿ ನೇಮಕಾತಿ ಮಾಡಿ ಎಂದು ಹೈಕಮಾಂಡ್‌ ಸೂಚಿಸಿದೆ.

ಅಧಿಕಾರ ನೀಡುವ ಹಂಬಲವಿದೆ: ಡಿಸಿಎಂ
ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎನ್ನುವ ಹಂಬಲ ತೀವ್ರವಾಗಿ ನಮಗೂ ಇದೆ. ನಾನೂ ಒಬ್ಬ ಕಾರ್ಯಕರ್ತನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ದಸರಾ ಹಬ್ಬದ ಬಳಿಕ ಕಾರ್ಯಾಧ್ಯಕ್ಷರು, ನಿಗಮ ಮಂಡಳಿಗಳ ನೇಮಕದ ಸಂಬಂಧ ಸಭೆಗಳು ನಡೆಯಲಿವೆ. ಕಳೆದ 20 ರಂದು ಸಿಎಂ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಬೇಕೆಂದು ಸಮಯ ನಿಗದಿಯಾಗಿತ್ತು.ಆದರೆ ಆ ದಿನ ಬೇರೆ ಕೆಲಸಗಳ ನಿಮಿತ್ತ ಚರ್ಚೆ ನಡೆಯಲಿಲ್ಲ. ಹಬ್ಬ ಮುಗಿದ ನಂತರ ನಾವಿಬ್ಬರು ಕುಳಿತು ಚರ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ನವದೆಹಲಿಯಿಂದ ಹೈಕಮಾಂಡ್‌ ಪ್ರತಿನಿಧಿಗಳು ಬರುತ್ತಾರೆ. ನಮ್ಮ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ ಅವರು ರಾಜಸ್ಥಾನ ಸೇರಿದಂತೆ ಇತರೇ ರಾಜ್ಯಗಳ ಚುನಾವಣಾ ಟಿಕೆಟ್‌ ಹಂಚಿಕೆ ಕೆಲಸದಲ್ಲಿ ನಿರತರಾಗಿದ್ದಾರೆ. ಅಷ್ಟರಲ್ಲಿ ನಾವು ಸಭೆ ಸೇರಿ ಮಾತುಕತೆ ನಡೆಸುತ್ತೇವೆ ಎಂದು ಡಿಸಿಎಂ ಹೇಳಿದರು.

ಮಂಡಳಿ ಬಲವೆಷ್ಟು?
70- ರಾಜ್ಯದಲ್ಲಿನ ನಿಗಮ, ಮಂಡಳಿಗಳು
ನಗರಾಭಿವೃದ್ಧಿ ಪ್ರಾಧಿಕಾರಗಳು
ಅಚ್ಚುಕಟ್ಟು ಪ್ರದೇಶಗಳು- ಕಾಡಾ
ವಿವಿಧ ಸಂಸ್ಥೆಗಳ ನಿರ್ದೇಶಕ ಹುದ್ದೆಗಳು

Advertisement

Udayavani is now on Telegram. Click here to join our channel and stay updated with the latest news.

Next