Advertisement

ಮುದ್ರಾಡಿ ಬೆಳಗುಂಡಿಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ

11:57 AM Apr 04, 2018 | |

ಮುದ್ರಾಡಿ: ಮಲೆನಾಡಿನ ಸುಂದರ ಹಸಿರು ವರ್ಣದ ಪ್ರದೇಶ ಮುದ್ರಾಡಿಯ ಬೆಳಗುಂಡಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಮುಂಬಯಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ಸಭೆಯು ಮಾ. 30 ರಂದು ಅಂಧೇರಿ ಪಶ್ಚಿಮದ ಅದಮಾರು ಮಠದಲ್ಲಿ ಆಯೋಜಿಸಲಾಯಿತು.

Advertisement

ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಮಿತಿಯ ಅಧ್ಯಕ್ಷ  ಮುದ್ರಾಡಿ ಸಿರಿಬೀಡು ದಿವಾಕರ ಶೆಟ್ಟಿ ಮಾತನಾಡಿ, ಈ ದೇವಸ್ಥಾನದ ಅದಮಾರು ಮಠದ ಅಧೀನದಲ್ಲಿದ್ದು, ಕರ್ನಾಟಕ ಸರಕಾರದ  ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ. ಕಾರಣಿಕ ಕ್ಷೇತ್ರವಾದ ಇದರ ಜೀರ್ಣೋದ್ಧಾರ ನಡೆಯಬೇಕೆಂಬುದು ಭಕ್ತರು ಅಭಿಲಾಷೆ. ಶ್ರೀ ದೇವರ ಆಣತಿಯಂತೆ, ಜೀರ್ಣೋದ್ಧಾರದ ಹೊಣೆಯನ್ನು ನನಗೆ ವಹಿಸಲಾಗಿದೆ. ಈ ಹಿಂದೆ ಕ್ಷೇತ್ರದ ಜೀರ್ಣೋದ್ಧಾರ ನನ್ನ ತಂದೆಯವರ ಮುತುವರ್ಜಿಯಲ್ಲಿ ನಡೆಸಲಾಗಿತ್ತು. ಇದೀಗ ಬಹುಕಾಲದ ಬಳಿಕ ಈ ಸೇವೆ ನನಗೆ ಒದಗಿದೆ. ಹಳ್ಳಿಯಲ್ಲಿ ದೇವಸ್ಥಾನವನ್ನು ನಡೆಸುವುದು ಕಷ್ಟ. ಜೀರ್ಣೋದ್ಧಾರ ಕಾರ್ಯದಲ್ಲಿ ಯಾರಿದ್ದಾರೆ. ಯಾರಿಲ್ಲ ಎನ್ನುವುದು ಮುಖ್ಯವಲ್ಲ. ದೇವರ ಕೆಲಸ ಮಾಡಿಸುವುದು ದೇವರ ಕೈಯಲ್ಲಿದೆ. ಗ್ರಾಮದೇವರನ್ನು  ಭಯ-ಭಕ್ತಿಯಿಂದ  ಪೂಜಿಸಿದರೆ  ಎಲ್ಲರಿಗೂ ಒಳ್ಳೆಯದು. ದೇವಸ್ಥಾನ ಶಿಥಿಲಗೊಂಡಿದ್ದು, ಇದರ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರಾಗಿ ಅದಮಾರು ಮಠದ ಶ್ರೀಗಳು  ಸಂತೋಷದಿಂದ  ಒಪ್ಪಿಕೊಂಡಿದ್ದಾರೆ. ದೇವಸ್ಥಾನ ಜೀರ್ಣೋದ್ಧಾರಗೊಂಡಾಗ ಊರು ಅಭಿವೃದ್ಧಿಯಾಗಿ, ಧರ್ಮ ಜಾಗೃತಿ ಉಂಟಾಗುತ್ತದೆ. ಊರಿನ ಜನತೆಗೆ ದೇವರ ಅನುಗ್ರಹದಿಂದ  ಸುಖ, ಶಾಂತಿ ಲಭಿಸುತ್ತದೆ. ಈ ಪುಣ್ಯಕಾರ್ಯಕ್ಕೆ ಜಾತಿ,ಮತ ಮರೆತು ಎಲ್ಲರೂ ಶ್ರಮಿಸೋಣ ಎಂದರು.
ಆಶೀರ್ವಚನದ ನುಡಿಯನ್ನಾಡಿದ ಮುದ್ರಾಡಿಯ ಬಕ್ರೆ ಮಠದ ಪುರೋಹಿತರಾದ ಸಂತೋಷ್‌ ಭಟ್‌ ಅವರು,  ಊರಿನ ಜನರೆಲ್ಲ ಒಟ್ಟಾಗಿ ಸೇರುವುದು ದೇವಸ್ಥಾನದಲ್ಲಿ ಮಾತ್ರ. ದೇವಸ್ಥಾನದಲ್ಲಿ ಪ್ರತಿ ಜಾತಿಯವರಿಗೂ ಸೇವೆ ನೀಡಲು ಅವಕಾಶವಿದೆ. ದೇವಸ್ಥಾನ ಶಿಥಿಲಗೊಂಡು ಬೀಳಬಾರದು. ತಲೆಮಾರುಗಳ ವರೆಗೆ ಉಳಿಯಬೇಕು. ದೇವಸ್ಥಾನ  ಜೀರ್ಣೋದ್ಧಾರಗೊಂಡ ಬಳಿಕ 12 ವರ್ಷಗಳಿಗೊಮ್ಮೆ  ಬ್ರಹ್ಮಕಲಶ ನಡೆಯುತ್ತಿರಬೇಕು. ಬೆಳಗುಂಡಿಯ ದೇವಸ್ಥಾನ ಸುಮಾರು 300 ವರ್ಷಗಳಷ್ಟು  ಪುರಾತನವಾದದ್ದು. ಹಿಂದಿನ ತಲೆಮಾರು ನಡೆಸಿಕೊಂಡು ಬಂದ ಪ್ರವೃತ್ತಿಯನ್ನು ನಾವು ಮುಂದುವರಿಸಬೇಕು. ಪ್ರತಿಯೊಂದು ಊರಿಗೆ  ದೇವಸ್ಥಾನದ ಆವಶ್ಯಕತೆಯಿದೆ. ಭಕ್ತರು  ಧಾರ್ಮಿಕ ನೆಲೆಯಲ್ಲಿ  ಮಾಡಬಹುದಾದ ಕರ್ತವ್ಯವನ್ನು ತಿಳಿಸಿದರು.

ಸೂರತ್‌ ಬಿಲ್ಲವ ಸಂಘದ ಅಧ್ಯಕ್ಷ, ಉದ್ಯಮಿ ಮುದ್ರಾಡಿ ಮನೋಜ್‌ ಪೂಜಾರಿ ತನ್ನ ಅನಿಸಿಕೆ ತಿಳಿಸುತ್ತಾ, ನನ್ನ ಊರಿನ ದೇವಸ್ಥಾನದ  ಪುಣ್ಯಕಾರ್ಯ ಮಾಡುವ ಅವರಕಾಶ ಸಿಕ್ಕಿದ್ದು ನನ್ನ ಭಾಗ ಅದನ್ನು ಭಕ್ತಿಯಿಂದ ಮಾಡುವೆ, ಬೆಳಗುಂಡಿ ದೇವಸ್ಥಾನ ಪುರಾತನ ಹಾಗೂ ಭಕ್ತಿ ಪ್ರಧಾನ ಕ್ಷೇತ್ರವಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ  ನನ್ನ ಶಕ್ತಿ  ಮೀರಿ ಪ್ರಯತ್ನಿಸುತ್ತೇನೆ.  ದಿವಾಕರ ಶೆಟ್ಟಿ  ಅವರ ಜವಾಬ್ದಾರಿಯುತ ಕಾರ್ಯಕ್ಕೆ ಊರವರಾದ ನಾವೆಲ್ಲರೂ ಬೆಂಬಲಿಗರಾಗಿ ನಿಲ್ಲಬೇಕು ಎಂದರು.

ವೇದಿಕೆಯಲ್ಲಿ  ಹಿರಿಯ ಹೊಟೇಲ್‌ ಉದ್ಯಮಿ ಮುದ್ರಾಡಿ ಮೇಲ್ಮನೆ ರಾಜು ಡಿ. ಶೆಟ್ಟಿ, ಮುದ್ರಾಡಿ ಚೀಂಕ್ರಬೆಟ್ಟು ಆನಂದ ಪೂಜಾರಿ, ಪೊವಾಯಿ  ಹೀರಾನಂದಾನಿಯ ಮಂತ್ರ ಹೊಟೇಲ್‌ನ ಮಾಲಕ ಅಪ್ಪಣ್ಣ ಶೆಟ್ಟಿ, ಅಂಧೇರಿ ಪೂರ್ವದ ಹರೇ ರಾಮ  ಹರೇಕೃಷ್ಣ ಹೊಟೇಲ್‌ನ  ಮಾಲಕ ಜಗದೀಶ್‌ ಎನ್‌. ಶೆಟ್ಟಿ  ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ನರೇಂದ್ರ ಕಬ್ಬಿನಾಲೆ ನಿರ್ವಹಿಸಿ ವಂದಿಸಿದರು. ಬಕ್ರೆ ಮಠದ ಸಂತೋಷ್‌ ಭಟ್‌ ಮತ್ತು ಮುದ್ರಾಡಿ  ಮನೋಜ್‌ ಪೂಜಾರಿ ಅವರನ್ನು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next