Advertisement

ವೈದ್ಯಕೀಯ ಸೇವೆಗೆ ಖಾಸಗಿ ವೈದ್ಯರು ಸಿದ್ಧ: ನಡಹಳಿ

05:40 PM Apr 11, 2020 | Naveen |

ಮುದ್ದೇಬಿಹಾಳ: ಖಾಸಗಿ ವೈದ್ಯರು ಕೊರೊನಾದಿಂದ ಸ್ವಯಂ ರಕ್ಷಣೆ ಮಾಡಿಕೊಂಡು ಇತರೆ ರೋಗಿಗಳಿಗೆ, ತೀರ ಅಗತ್ಯಬಿದ್ದರೆ ಸೋಂಕಿತರಿಗೂ ಚಿಕಿತ್ಸೆ ನೀಡಲು ಸಿದ್ಧರಿದ್ದಾರೆ. ಇವರಿಗೆ ಎನ್‌-95 ಮಾಸ್ಕ್, ಸ್ಯಾನಿಟೈಜರ್‌, ಪಿಪಿಟಿ ಕಿಟ್‌ ವಿತರಣೆಗೆ ವ್ಯವಸ್ಥೆ ಮಾಡಬೇಕು. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಂಭವನೀಯ ಅಪಾಯ ಎದುರಿಸಲು ಈಗಲೇ ತಯಾರಿ ನಡೆಸಬೇಕು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಕೊರೊನಾ ನಿಯಂತ್ರಣ ತಂಡದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಇಲ್ಲಿನ ತಮ್ಮ ದಾಸೋಹ ನಿಲಯದಲ್ಲಿ ಮುದ್ದೇಬಿಹಾಳ, ನಾಲತವಾಡ ಪಟ್ಟಣಗಳ ಖಾಸಗಿ ವೈದ್ಯರ ಸಭೆಯಲ್ಲಿ ಚರ್ಚಿಸಿ ಮಾತನಾಡಿದ ಅವರು, ವೈದ್ಯರು ಕೊರೊನಾ ಸಂಕಷ್ಟದಲ್ಲೂ ಸೇವೆ ನೀಡುತ್ತಿದ್ದಾರೆ. ಕೆಲವರು ಮೊಬೈಲ್‌ ಮೂಲಕವೇ ಮಾರ್ಗದರ್ಶನ ನೀಡುತ್ತಿದ್ದಾರೆ. ಸರ್ಕಾರದ ಕಟ್ಟುನಿಟ್ಟಿನ ನಿಯಮಗಳು ಭಯ ಮುಕ್ತರಾಗಿ ಚಿಕಿತ್ಸೆ ನೀಡಲು ತೊಡಕಾಗಿವೆ. ಇದನ್ನೂ ಸಹಿತ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು. ಈ ಬಗ್ಗೆ ನಾನೂ ಆರೋಗ್ಯಮಂತ್ರಿಗಳ
ಜತೆ ಮಾತನಾಡುತ್ತೇನೆ. ಕಾನೂನು ತೊಡಕಾಗದಂತೆ ಖಾಸಗಿ ವೈದ್ಯರನ್ನು ಬಳಸಿಕೊಳ್ಳಲು ವಿನಂತಿಸುತ್ತೇನೆ ಎಂದರು.

ಈ ವೇಳೆ ಡಾ| ಉತ್ಕರ್ಷ ನಾಗೂರ, ಡಾ| ಸಿ.ಎಚ್‌.ನಾಗರಬೆಟ್ಟ, ಡಾ|ಡಿ.ಬಿ.ಒಸ್ವಾಲ್‌, ಡಾ| ಎ.ಎಂ.ಮುಲ್ಲಾ, ಡಾ| ಎಸ್‌.ಬಿ. ವಡವಡಗಿ, ಡಾ|ವೀರೇಶ ಪಾಟೀಲ, ಡಾ| ವೀರೇಶ ಇಟಗಿ, ಡಾ| ಎಂ.ಎಂ.ಹಿರೇಮಠ, ಡಾ|ಎಸ್‌.ಐ.ಜುಲ್ಪೆ, ನಾಲತವಾಡದ ಡಾ| ರಾಜೇಂದ್ರ ಗಲಗಲಿ ಮಾತನಾಡಿ ಶೇ.60ರಷ್ಟು ರೋಗಿಗಳು ಕೆಮ್ಮು, ನೆಗಡಿ, ಜ್ವರ, ತಲೆನೋವಿನ ಚಿಕಿತ್ಸೆಗಾಗಿಯೇ ಬರುತ್ತಿದ್ದಾರೆ. ಇವರಲ್ಲಿ ಯಾರಿಗೆ ಕೊರೊನಾ ಇದೆ ಎಂದು ಕಂಡುಹಿಡಿಯುವುದು ಕಷ್ಟ. ಒಂದು ವೇಳೆ ಚಿಕಿತ್ಸೆ ನಂತರ ಕೊರೊನಾ ಕಂಡುಬಂದರೆ ಚಿಕಿತ್ಸೆ ನೀಡಿದ ವೈದ್ಯರನ್ನು ಹೊಣೆಮಾಡಲಾಗುತ್ತದೆ. ಇದರಿಂದಾಗಿ ಯಾರೂ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಆದರೂ ಸರ್ಕಾರ ಕರೆ ನೀಡಿದರೆ ತಾವೆಲ್ಲ ಸೇವೆಗೆ ಸಿದ್ಧ. ನಮಗೆ ಸೌಲಭ್ಯ, ರಕ್ಷಣೆ ಕೊಡಬೇಕು ಎಂದರು.

ಅಂದಾಜು 2 ಗಂಟೆ ನಡೆದ ಚರ್ಚೆಯ ಒಟ್ಟಾರೆ ಸಾರಾಂಶವನ್ನು ದಾಖಲಿಸಿಕೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಶಾಸಕರು ಟಿಎಚ್‌ಒ ಡಾ| ಸತೀಶ ತಿವಾರಿಗೆ ಸೂಚಿಸಿದರು. ಮಾಸ್ಕ್ ಒದಗಿಸುವ ಕುರಿತು ಸಭೆಯಲ್ಲೇ ಪೂರೈಕೆದಾರರ ಜತೆ ಚರ್ಚಿಸಲಾಯಿತು. ಹೆರಿಗೆ ಚಿಕಿತ್ಸೆಯನ್ನು ಇತರೆ ಚಿಕಿತ್ಸೆಗಳಿಂದ ಪ್ರತ್ಯೇಕವಾಗಿರಿಸಲು ತೀರ್ಮಾನಿಸಲಾಯಿತು. ತಹಸೀಲ್ದಾರ್‌ ಜಿ.ಎಸ್‌.ಮಳಗಿ, ತಾಪಂ ಇಒ ಶಶಿಕಾಂತ ಶಿವಪುರೆ, ಸಿಪಿಐ ಆನಂದ ವಾಗಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, 50ಕ್ಕೂ ಹೆಚ್ಚು ಖಾಸಗಿ ವೈದ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next