Advertisement

ನನಸಾಗುತ್ತಾ ಹೈಟೆಕ್‌ ರಸ್ತೆ ಕನಸು?

11:53 AM Dec 08, 2019 | Naveen |

„ಡಿ.ಬಿ. ವಡವಡಗಿ
ಮುದ್ದೇಬಿಹಾಳ:
ಯಾವುದೇ ಪಟ್ಟಣ, ನಗರ ಸುಂದರವಾಗಿ ಕಾಣಬೇಕಾದರೆ ಅಲ್ಲಿನ ಮುಖ್ಯ ರಸ್ತೆಗಳು ಸುಂದರವಾಗಿರಬೇಕು. ರಸ್ತೆಗಳ ನೋಟದಿಂದಲೇ ಪರಸ್ಥಳದಿಂದ ಬರುವ ಜನರು ಊರಿನ ಅಭಿವೃದ್ಧಿ ಅಳೆಯುತ್ತಾರೆ. ಇದಕ್ಕೆ ಪೂರಕ ಎನ್ನುವಂತೆ ಮುದ್ದೇಬಿಹಾಳ ಪಟ್ಟಣದಲ್ಲಿ ಹಾಯ್ದುಹೋಗುವ ಹುನ ಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿಯನ್ನು ವಿಶ್ವಬ್ಯಾಂಕ್‌ ಅನುದಾನದ ಅಡಿ ಸುಂದರವಾಗಿ ನಿರ್ಮಿಸುತ್ತಿರುವುದು ಪ್ರಗತಿಯ ಸಂಕೇತ ಎನ್ನಿಸಿಕೊಂಡಿದೆ.

Advertisement

ಹಿಂದಿನ ಕಾಂಗ್ರೆಸ್‌ ಶಾಸಕ ಸಿ.ಎಸ್‌. ನಾಡಗೌಡರ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ದೊರಕಿತ್ತು. ಈಗಿನ ಬಿಜೆಪಿ ಶಾಸಕ ಎ.ಎಸ್‌.
ಪಾಟೀಲ ನಡಹಳ್ಳಿ ಅವರು ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಛಾಟಿ ಬೀಸಿ ಗುಣಮಟ್ಟದಲ್ಲಿ ಕಾಮಗಾರಿ ನಡೆಯುವಂತೆ ನೋಡಿಕೊಂಡಿದ್ದಾರೆ. ಪಟ್ಟಣದ ಹಲವು ಸಂಘಟನೆಗಳು ನಿರಂತರ ಹೋರಾಟ ನಡೆಸಿ ರಾಜ್ಯ ಹೆದ್ದಾರಿ ನಿರ್ಮಾಣ ಹೋರಾಟ ಸಮಿತಿಯನ್ನೇ ಹುಟ್ಟು ಹಾಕಿ ಕಾಟಾಚಾರಕ್ಕೆ ನಡೆಯಲಿದ್ದ ಕಾಮಗಾರಿಗೆ ಬಿಸಿ ಮುಟ್ಟಿಸಿದ್ದಾರೆ. ಇದಕ್ಕಾಗಿ ನಿಗದಿಪಡಿಸಿದ ಅನುದಾನ ಪೂರ್ತಿ ಕಾಮಗಾರಿಗೆ ಬಳಕೆ ಆಗುವಂತೆ, ಪೋಲಾಗಲು ಆಸ್ಪದ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಹೋರಾಟದ ಪರಿಣಾಮವೋ ಅಥವಾ ಶಾಸಕರ ಅಭಿವೃದ್ಧಿ ಪರ ಚಿಂತನೆಯೋ ರಾಜ್ಯ ಹೆದ್ದಾರಿಯನ್ನು ಪಟ್ಟಣದ ವ್ಯಾಪ್ತಿಯೊಳಗೆ ತಂಗಡಗಿ ರಸ್ತೆಯ ಹಡಲಗೇರಿ ಕ್ರಾಸ್‌ನಿಂದ ಹಿಡಿದು ಬಸವೇಶ್ವರ, ಅಂಬೇಡ್ಕರ್‌, ಬನಶಂಕರಿ ವೃತ್ತಗಳ ಮಾರ್ಗವಾಗಿ ತಾಳಿಕೋಟೆ ರಸ್ತೆಯ ಆಶ್ರಯ ಕಾಲೋನಿ ಕ್ರಾಸ್‌ವರೆಗಿನ ಅಂದಾಜು 3.4 ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಗಲೀಕರಣಗೊಳಿಸಿದ್ದು ಚರಂಡಿ, ರಸ್ತೆ ವಿಭಜಕ, ಫುಟ್‌ಪಾತ್‌, ಬೀದಿ ದೀಪ ಸೇರಿ ಇತರೆ ಸೌಲಭ್ಯ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಾರಂಭದಲ್ಲಿ ರಸ್ತೆ ಮಧ್ಯದಿಂದ 11.25 ಮೀ. ಅಗಲೀಕರಣ ಮಾಡಿ ಅಭಿವೃದ್ದಿಪಡಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚುವರಿ ಸರ್ಕಾರಿ ಜಾಗ ಲಭ್ಯವಿದ್ದ ಕಾರಣ ಹೋರಾಟಗಾರರು, ಜನರು ಮತ್ತು ಜನಪ್ರತಿನಿಧಿಗಳು ಒತ್ತಡ ಹೇರಿ ಲಭ್ಯ ಇರುವ ಒಟ್ಟು ಜಾಗೆಯನ್ನು ರಸ್ತೆ ಮತ್ತು ಇತರೆ ಸೌಲಭ್ಯಗಳಿಗೆ ಬಳಸಿಕೊಳ್ಳಲು ಒತ್ತಡ ಹೇರಿದ್ದರು.

ಇದರ ಪರಿಣಾಮ ಸದ್ಯ ರಸ್ತೆ ಮಧ್ಯದಿಂದ ಒಟ್ಟು 14.5 ಮೀ.ವರೆಗೆ ಹಲವೆಡೆ ಅಗಲೀಕರಣ ಆಗಿದೆ. ಪಟ್ಟಣದಲ್ಲಿ 3.4 ಕಿ.ಮೀ. ಉದ್ದಕ್ಕೂ ಸುಂದರ ರಸ್ತೆ ನಿರ್ಮಾಣ, ವಿಭಜಕವನ್ನು ಗಿಡ ನೆಡಲು, ಬೀದಿ ದೀಪದ ಕಂಬ ಅಳವಡಿಸಲು, ಬೇಕಾಬಿಟ್ಟಿ ರಸ್ತೆ ದಾಟದಂತೆ ಗ್ರಿಲ್‌ ಹಾಕಲು ಬಳಸುವುದು, ಎರಡೂ ಬದಿ ಪಾದಚಾರಿ ರಸ್ತೆ, ಗ್ರಿಲ್‌ ಹಾಕುವುದು, ಚರಂಡಿ ನಿರ್ಮಿಸಿ ಭವಿಷ್ಯದ 20 ವರ್ಷಗಳಿಗೆ ಬೇಕಾಗುವ ಯುಟಿಲಿಟಿ ಸೌಲಭ್ಯ ಕಲ್ಪಿಸುವುದು, ಅಲ್ಲಲ್ಲಿ ಮಾರ್ಗಸೂಚಿ ನಾಮಫಲಕ ಹಾಕುವುದು ಹೀಗೆ ಸೌಂದರ್ಯೀಕರಣಕ್ಕೆ ಏನೋ ಅಗತ್ಯವೋ ಅದೆಲ್ಲವನ್ನೂ ಮಾಡಲೇಬೇಕು ಎನ್ನುವ ಸಂಘಟನೆಗಳ ಮತ್ತು ಶಾಸಕರ ಒತ್ತಡಕ್ಕೆ ಗುತ್ತಿಗೆದಾರರು ಒಪ್ಪಿ ನಡೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಎನ್ನಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next