Advertisement

ಹೊಲದಲ್ಲಿಯೇ ಕೊಳೆತ ಈರುಳ್ಳಿ

12:01 PM Oct 09, 2019 | Naveen |

„ದೇವಪ್ಪ ರಾಠೊಡ
ಮುದಗಲ್ಲ:
ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಒಂದೆಡೆಯಾದರೆ, ಇತ್ತೀಚೆಗೆ ಸುರಿದ ಮಳೆಗೆ ಕೆಲವೆಡೆ ಹೊಲದಲ್ಲಿಯೇ ಈರುಳ್ಳಿ ಕೊಳೆಯುತ್ತಿದೆ. ಪರಿಣಾಮ ಈರುಳ್ಳಿ ಬೆಳೆದ ರೈತರು ಕಣ್ಣೀರು ಸುರಿಸುವಂತಾಗಿದೆ.

Advertisement

ಬೇರೆ ಬೆಳೆಯತ್ತ ಚಿತ್ತ ಹರಿಸದ ಕೆಲ ರೈತರು ಇದ್ದ ಸ್ವಲ್ಪ ಬೋರ್‌ವೆಲ್‌ ನೀರು ಹಾಯಿಸಿ ಈರುಳ್ಳಿ ಬೆಳೆದಿದ್ದಾರೆ. ನಾಲ್ಕೈದು ತಿಂಗಳು ಕಷ್ಟಪಟ್ಟು ಬೆಳೆದ ಈರುಳ್ಳಿ ಕೈಗೆ ಬಂದಿದೆ. ಈರುಳ್ಳಿಯನ್ನು ಕಟಾವು ಮಾಡಿ ಹೊಲದಲ್ಲಿಯೇ ಆರಿಸಲು ಹಾಕಿದ್ದಾರೆ.  ಆದರೆ ಸತತ 15 ದಿನಗಳಿಂದ ಆಗಾಗ ಸುರಿಯುತ್ತಿರುವ ಬೆಳೆಗೆ ಒಣಹಾಕಿದ ಈರುಳ್ಳಿ ನೆನೆದು ಕೊಳೆತಿದ್ದು, ರೈತರು ಕಂಗಾಲಾಗುವಂತಾಗಿದೆ.

ಸಮೀಪದ ನಾಗಲಾಪುರ, ದೇಸಾಯಿ ಭೋಗಾಪುರ, ಹಡಗಲಿ ತಾಂಡಾ, ಕನ್ನಾಳ, ಆಮದಿಹಾಳ, ಖೈರವಾಡಗಿ, ಆಶಿಹಾಳ, ಆಮದಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮ, ತಾಂಡಾಗಳಲ್ಲಿ ಸುಮಾರು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಈರುಳ್ಳಿ ಸಸಿ ನಾಟಿ ಮಾಡಿದಾಗಿನಿಂದ ಹಿಡಿದು ಕೀಳುವವರೆಗೆ ರೈತರು 50ರಿಂದ 60 ಸಾವಿರ ರೂ. ಖರ್ಚು ಮಾಡಿದ್ದಾರೆ. ಆದರೆ ಈಗಿನ ಮಾರುಕಟ್ಟೆ ದರಕ್ಕೆ ಈರುಳ್ಳಿ ಮಾರಿದರೆ ಸಾಗಾಟದ ಖರ್ಚು ಕೂಡ ಮರಳದಂತಹ ಸ್ಥಿತಿ ಇದೆ.
ಇಂತಹ ಪರಿಸ್ಥಿತಿಯಲ್ಲೂ ಕೆಲ ರೈತರು ಧೈರ್ಯ ಮಾಡಿ ಈರುಳ್ಳಿಯನ್ನು ಲಾರಿಯಲ್ಲಿ ತುಂಬಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.

ಈ ಮುಂಚೆ ಕ್ವಿಂಟಲ್‌ಗೆ 2500 ರೂಪಾಯಿಯಿಂದ 3500ರೂ.ವರೆಗೆ
ಈರುಳ್ಳಿ ಮಾರಾಟವಾಗುತ್ತಿತ್ತು. ಆದರೆ ಕೇಂದ್ರ ಸರಕಾರ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಿದ್ದರಿಂದ ಈರುಳ್ಳಿ ದರ ಕುಸಿದಿದೆ. ಹೈದ್ರಾಬಾದ ಮಾರುಕಟ್ಟೆಗೆ 1 ಕ್ವಿಂಟಲ್‌ ಈರುಳ್ಳಿ ಸಾಗಿಸಿದರೆ 350 ರೂ. ಖರ್ಚು ತಗಲುತ್ತಿದೆ ಎಂದು ಈರುಳ್ಳಿ ವ್ಯಾಪಾರಿ ಕಲಿಂ ಸಾಬ್‌ ಗಂಗಾವತಿ ತಿಳಿಸಿದ್ದಾರೆ. ವಾಣಿಜ್ಯ ಬೆಳೆಯಾದ ಈರುಳ್ಳಿ ದರ ನಂಬಿ ಬೆಳೆದ ರೈತರು ಈಗ ನಷ್ಟ ಅನುಭವಿಸುವಂತಾಗಿದೆ ಎಂದು ರೈತರಾದ ಮಾನಪ್ಪ, ಬಾಲಚಂದ್ರ, ಗ್ಯಾನಪ್ಪ, ಕುಪ್ಪಣ್ಣ ಅಳಲು ತೋಡಿಕೊಂಡರು.

ರಾಜ್ಯ ಸರಕಾರ ತುರ್ತಾಗಿ ಈರುಳ್ಳಿ ಬೆಳೆಗಾರರ ನಿಯೋಗದೊಂದಿಗೆ ಹೋಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಮೂಲಕ ಈರುಳ್ಳಿ ರಫ್ತಿಗೆ ವಿಧಿ ಸಿದ ನಿರ್ಬಂಧ ತೆರವುಗೋಳಿಸಬೇಕೆಂದು ಹಾಗೂ ಖರೀದಿ ಕೇಂದ್ರ ಆರಂಭಿಸಿ ಸೂಕ್ತ ದರ ನೀಡಬೇಕೆಂದು ರೈತ ಹಿತರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ಶರಣಪ್ಪ ಹಳೆಪೇಟೆ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next